ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಬೋರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಮಾದಿಗ ಸಮುದಾಯದ ಮೇಲೆ ಪ್ರಬಲ ಕೋಮಿನ ಜನರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮೇ 30ರಂದು ಕಾರಟಗಿ ಬಂದ್ಗೆ ಕರೆ ನೀಡಲಾಗಿದೆ.
ಮಾದಿಗ ಸಮುದಾಯ ಕೇರಿಯ ಪಕ್ಕದಲ್ಲಿ ಸ್ಥಾಪಿಸಲಾಗಿದ್ದ ವಾಲ್ಮೀಕಿ ಸಂಘದ ನಾಮಫಲಕದ ಬದಿಯಲ್ಲಿ ಅಂಬೇಡ್ಕರ್ ಯುವಕ ಸಂಘದ ಬೋರ್ಡ್ ಹಾಕುವುದನ್ನು ವಿರೋಧಿಸಿ ಬೇಡ ಸಮುದಾಯದವರು ವಿರೋಧಿಸಿದ್ದರು. ಆದರೆ ನಮ್ಮ ಕಾಲೋನಿಯಲ್ಲಿ ಅಂಬೇಡ್ಕರ್ ಬೋರ್ಡ್ ಹಾಕುತ್ತೇವೆ ಎಂದು ಮಾದಿಗ ಸಮುದಾಯದ ಯುವಕರು ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದರು. ಬೋರ್ಡ್ ಹಾಕಲು ಮುಂದಾದಾಗ ಮೇ 22 ರ ರಾತ್ರಿ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮಾದಿಗ ಸಮುದಾಯ ಜನರ ಮೇಲೆ ವಾಲ್ಮೀಕಿ ಮತ್ತು ಇತರ ಸಮುದಾಯದ ಜನರು ಕಟ್ಟಿಗೆ ಮತ್ತು ಮಾರಾಕಾಸ್ತ್ರಗಳಿಂದ ಥಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ 10 ದಲಿತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಲವರಿಗೆ ಹೊಲಿಗೆ ಹಾಕುವಷ್ಟು ಗಾಯಗಳಾಗಿದ್ದು, ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರನು ಬಂಧಿಸಲಾಗಿದೆ. ನಂತರ ಪ್ರಭಾವಿ ಕೋಮಿನ ಮುಖಂಡರು ಪೆಟ್ಟು ತಿಂದ ದಲಿತರು ಸೇರಿ 66 ಜನರ ಮೇಲೆ ಪ್ರತಿ ದೂರು ನೀಡಿದ್ದಾರೆ.
ದಲಿತರ ಮೇಲಿನ ಹಲ್ಲೆ ಖಂಡಿಸಿ, ಪ್ರತಿ ದೂರು ಕೈಬಿಡಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ ಸಂಘಟನೆಯು ಮೇ 30 ರಂದು ಕಾರಟಗಿ ಬಂದ್ ಪ್ರತಿಭಟನೆಗೆ ಕರೆ ನೀಡಿದೆ. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿಯವರು ಮಾತನಾಡಿ, “ನೆರೆಯಿಂದಾಗ ಮನೆ ಕಳೆದುಕೊಂಡ ದಲಿತರಿಗೆ ಹಿಂದೆ ಸರ್ಕಾರ ಜಮೀನು ನೀಡಿತು. ಅಲ್ಲಿಯವರೆಗೂ ಜೀತ ಮಾಡುತ್ತಿದ್ದವರು ದುಡಿದು ಬದುಕಲು ಆರಂಭಿಸಿದರು. ತಮ್ಮ ಮಕ್ಕಳನ್ನು ಓದಿಸಿದರು. ಈಗ ಅಂಬೇಡ್ಕರ್ ಸಂಘ ಕಟ್ಟಿಕೊಂಡಿದ್ದಾರೆ. ಇದೆಲ್ಲವೂ ಊರಿನ ಪ್ರಬಲ ಜಾತಿಯವರಿಗೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಗ್ರಾಮದ ಹೋಟೆಲ್ ಮತ್ತು ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆಂದು ದಲಿತರು ಆಗ್ರಹಿಸಿದ್ದರು. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಈ ಕುರಿತು ಶಾಂತಿ ಸಭೆ ನಡೆಸಿದ್ದರು. ಇವೆಲ್ಲರಿಂದ ದ್ವೇಷ ಸಾಧಿಸಿ ಮಾದಿಗ ಸಮುದಾಯದ ಮೇಲೆ ಹಲ್ಲೆ ನಡೆಸಲಾಗಿದೆ” ಎಂದಿದ್ದಾರೆ.
#Koppala ಜಿಲ್ಲೆಯ #ಕಾರಟಗಿ ತಾಲ್ಲೂಕಿನ #ನಂದಿಹಳ್ಳಿ ಗ್ರಾಮದಲ್ಲಿ #ಅಂಬೇಡ್ಕರ್ ಹೆಸರಿನ ಬೋರ್ಡ್ ವಿಷಯಕ್ಕೆ ಸಂಬಂಧಿಸಿದಂತೆ #ಮಾದಿಗ(#ದಲಿತ) ಸಮುದಾಯದ ಮೇಲೆ ಪ್ರಬಲ ಕೋಮಿನ ಜನರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಲು ವಿದ್ಯುತ್ ಅನ್ನು ಕಟ್ ಮಾಡಲಾಗಿತ್ತು ಎಂದು ಆರೋಪ#NaanuGauri #Dalit #DalitLivesMatter #Karnataka pic.twitter.com/C1rR7NBVG4— Naanu Gauri (@naanugauri) May 26, 2022
ಅಟ್ರಾಸಿಟಿ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಊರಿನ ಪ್ರಬಲ ಜಾತಿಗಳು ವಾಲ್ಮೀಕಿ ಸಮುದಾಯದವರನ್ನು ಮುಂದೆ ಬಿಟ್ಟು ಈ ಕೃತ್ಯ ಎಸಗಿವೆ. ಇನ್ನು ಕ್ಷೇತ್ರದ ದಲಿತ ಶಾಸಕ ಬಸವರಾಜ ದಡೇಸಗೂರು ಕೃತ್ಯವನ್ನು ಖಂಡಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಗ್ರಾಮಕ್ಕೆ KMRV, CPI(ML), DSS ಮಾದಿಗ ದಂಡೋರ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ನೊಂದ ಕುಟುಂಬಗಳ ಕುಂದು ಕೊರತೆ ಆಲಿಸಿವೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಮಂಡಳಿಯ ಅಧ್ಯಕ್ಷ ಭೇಟಿ ನೀಡಿ ಸಾಂತ್ವನ ಸೌಲಭ್ಯಗಳನ್ನು ದೊರಕಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ; ಕರ್ನಾಟಕದಲ್ಲಿ ಅಸ್ಪೃಶ್ಯತೆ