ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಕನೌಜ್ನ ಬಿಜೆಪಿ ಸಂಸದ ಸುಬ್ರತ್ ಪಾಠಕ್ ಮತ್ತು ಇತರ 51 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ‘ಪಿಟಿಐ’ ಭಾನುವಾರ ವರದಿ ಮಾಡಿದೆ.
ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಐವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಪೊಂದು ದಾಳಿ ನಡೆಸಿದ ನಂತರ ಮೂವರು ಸಬ್ ಇನ್ಸ್ಪೆಕ್ಟರ್ಗಳು ಮತ್ತು ನಾಲ್ವರು ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದಾರೆ.
ಮಂಡಿ ಸಮಿತಿ ಪೊಲೀಸ್ ಔಟ್ಪೋಸ್ಟ್ನ ಪ್ರಭಾರಿ ಹಕೀಮ್ ಸಿಂಗ್ ಅವರು ನೀಡಿದ ದೂರಿನ ಆಧಾರದಲ್ಲಿ ಸಂಸದ ಪಾಠಕ್ ಮತ್ತು ಇತರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಕನೌಜ್ನಲ್ಲಿದ್ದ ಉನ್ನಾವೋ ಪೊಲೀಸರೊಂದಿಗೆ ಮಾತುಕತೆ ನಡೆಸಿ ಅಪಹರಣ ಪ್ರಕರಣವೊಂದರ ತನಿಖೆಗಾಗಿ ಪೊಲೀಸರು ಶುಕ್ರವಾರ ರಾತ್ರಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂದು ಹಕೀಮ್ ಸಿಂಗ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಐವರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡ ತಕ್ಷಣ, ಒಬ್ಬ ವ್ಯಕ್ತಿ ಪೊಲೀಸ್ ಔಟ್ಪೋಸ್ಟ್ಗೆ ತಲುಪಿ ತಮ್ಮವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದನು. ಸುಮಾರು 15 ನಿಮಿಷಗಳ ನಂತರ, ಸಂಸದ ಪಾಠಕ್ ಕೂಡ ಪೊಲೀಸ್ ಔಟ್ಪೋಸ್ಟ್ಗೆ ಬಂದರು.
ಬಿಜೆಪಿ ಸಂಸದ ಪಾಠಕ್ ಪೊಲೀಸ್ ಅಧಿಕಾರಿ ಹಕೀಮ್ ಸಿಂಗ್ ಅವರ ಕೊರಳಪಟ್ಟಿಯನ್ನು ಹಿಡಿದರು. ಹಕೀಮ್ ಅವರನ್ನು ರಕ್ಷಿಸಲು ಇತರ ಸಹೋದ್ಯೋಗಿಗಳು ಪ್ರಯತ್ನಿಸಿದಾಗ, 40 ಕ್ಕೂ ಹೆಚ್ಚು ಜನರ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ ಅವರ ಸಮವಸ್ತ್ರವನ್ನು ಹರಿದು ಹಾಕಿತು ಎಂದು ‘ಪಿಟಿಐ’ ವರದಿ ತಿಳಿಸಿದೆ.
ಇದನ್ನೂ ಓದಿರಿ: ‘ಅಂಬೇಡ್ಕರ್ ಜಯಂತಿ ಮಾಡ್ತೀಯಾ?’: ದಲಿತ ಯುವಕನ ಭೀಕರ ಹತ್ಯೆ
ಗಲಭೆ, ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅಪರಾಧಿಯನ್ನು ಪೊಲೀಸ್ ಕಸ್ಟಡಿಯಿಂದ ಬಲವಂತವಾಗಿ ಬಿಡುಗಡೆ ಮಾಡಲು ಪ್ರಯತ್ನಿಸುವುದು ಸೇರಿದಂತೆ ಹಲವು ಆರೋಪಗಳನ್ನು ಪಾಠಕ್ ಮತ್ತು ಇತರ ಆರೋಪಿಗಳ ವಿರುದ್ಧ ಹೊರಿಸಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪ್ರತಿಕ್ರಿಯಿಸಿದ್ದು ಸಂಸದ ಪಾಠಕ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
“ಕನೌಜ್ನ ಬಿಜೆಪಿ ಸಂಸದ ಸುಬ್ರತ್ ಪಾಠಕ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಾಠಕ್ ಅವರನ್ನು ಯಾವಾಗ ಬಂಧಿಸಲಾಗುವುದು ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಈ ಬಿಜೆಪಿಯವರಿಂದ ತಪ್ಪಿಸಿಕೊಳ್ಳಲು ಪೊಲೀಸರು ಬುಲ್ಡೋಜರ್ಗಳ ಹಿಂದೆ ಅಡಗಿಕೊಂಡು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕೇ?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
आज की ताज़ा ख़बर:
पुलिसवालों ने की कन्नौज के भाजपा सासंद सुब्रत पाठक के ऊपर एफ़आईआर… जनता पूछ रही है कब होंगे गिरफ़्तार?
इन भाजपाइयों से बचने के लिए पुलिस क्या बुलडोज़र के पीछे छुपकर अपनी जान बचाए।
— Akhilesh Yadav (@yadavakhilesh) June 3, 2023