Homeಕರ್ನಾಟಕಎ.ಕೆ ಸುಬ್ಬಯ್ಯನವರ ಹೋರಾಟದ ಹಾದಿ...

ಎ.ಕೆ ಸುಬ್ಬಯ್ಯನವರ ಹೋರಾಟದ ಹಾದಿ…

- Advertisement -
- Advertisement -

ಪತ್ರಿಕೆಯ ಹಿತೈಷಿಗಳೂ, ಗೌರಿ ಸ್ಮಾರಕ ಟ್ರಸ್ಟ್ ನ ಪೋಷಕರಲ್ಲೊಬ್ಬರಾಗಿದ್ದ ಎ.ಕೆ.ಸುಬ್ಬಯ್ಯನವರು ಕರ್ನಾಟಕದ ಅತ್ಯಂತ ವಿಶಿಷ್ಟ ಪ್ರಾಮಾಣಿಕ ರಾಜಕಾರಣಿಗಳಲ್ಲೊಬ್ಬರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ, ಸಾಮಾಜಿಕವಾಗಿ ಸಕ್ರಿಯರಾಗಿದ್ದರು. ಇಂದು ನಿಧನರಾದ ಅವರಿಗೆ ‘ಪತ್ರಿಕೆ’ಯು ತನ್ನ ಶ್ರದ್ಧಾಂಜಲಿ ಅರ್ಪಿಸಬಯಸುತ್ತದೆ. ಅವರ ದೀರ್ಘಕಾಲದ ಒಡನಾಡಿ ಮನುಶೆಣೈ ಅವರು ಎ.ಕೆ.ಸುಬ್ಬಯ್ಯನವರ ಕುರಿತು ಬರೆದಿದ್ದಾರೆ.

ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ಸಂಸದೀಯ ಪಟುಗಳಲ್ಲಿ ಒಬ್ಬರು ಎ.ಕೆ. ಸುಬ್ಬಯ್ಯ. ತನ್ನ ಜೀವಮಾನದುದ್ದಕ್ಕೂ ಹಲವಾರು ಜನಪರ ಹೋರಾಟಗಳನ್ನು ಸಂಘಟಿಸಿ, ಭಾಗವಹಿಸಿ ಯಶಸ್ಸನ್ನು ಕಂಡವರು. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಕಂಬದಕಡ ಹೋರಾಟ, ಬರಪೊಳೆ ಹೋರಾಟ, ಇವರ ಆರಂಭಿಕ ದಿನದ ಹೋರಾಟಗಳಾಗಿದ್ದವು. ಕೊಡಗಿನ ಜ್ವಲಂತ ಸಮಸ್ಯೆಯಾಗಿ ಇಂದಿಗೂ ಕಾಡುತ್ತಿರುವ ಬಾಣೆ ಜಮೀನಿಗೆ ಸಂಬಂಧಪಟ್ಟಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟವನ್ನು ನಡೆಸುವ ಮೂಲಕ ಕೊಡಗಿನ ಜನತೆಗೆ ಕಾಡುತ್ತಿದ್ದ ಜಮ್ಮಾ ಬಾಣೆ ಸಮಸ್ಯೆ ಒಂದು ಹಂತಕ್ಕೆ ನಿವಾರಿಸಿಕೊಟ್ಟಿದ್ದಾಗಿತ್ತು.

ಕೊಡಗು ಜಿಲ್ಲೆಯ ಹುದಿಕೇರಿಯ ಕೋಣಗೇರಿ ಗ್ರಾಮದಲ್ಲಿ 9-8-1934ರಲ್ಲಿ ಜನಿಸಿದ ಇವರು, ಸಣ್ಣ ಪ್ರಾಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಬೇರೊಂದು ವಿವಾಹ ಮಾಡಿಕೊಂಡಿದ್ದರಿಂದ ಹರಿಹರ ಗ್ರಾಮದ ತನ್ನ ಮಾವನ ಮನೆಯಲ್ಲಿ ಬೆಳೆದವರು ಎ.ಕೆ. ಸುಬ್ಬಯ್ಯ. ಅಲ್ಲಿ ದನ ಮೇಯಿಸಿಕೊಂಡು ಇದ್ದ ಬಾಲಕ ಸುಬ್ಬಯ್ಯರವರಿಗೆ ಯಾರೂ ಕೂಡ ಶಾಲೆಗೆ ಹೋಗಲು ಹೇಳಲಿಲ್ಲ. ತನ್ನ ಸ್ವಇಚ್ಛೆಯಿಂದ ಅವರು 1943ರ ವೇಳೆಯಲ್ಲಿ ಹರಿಹರ ಗ್ರಾಮದಲ್ಲಿ ಶಾಲೆಗೆ ಸೇರಿ, ಟಿ.ಶೆಟ್ಟಿಗೇರಿ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಹಾಗೂ ಆ ನಂತರ ಹುದಿಕೇರಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿದ್ದರು.

ಇಂಟರ್‍ಮೀಡಿಯೇಟ್‍ನ್ನು ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಮುಗಿಸಿದ ನಂತರ ಅವರು ಶಿಕ್ಷಕರಾಗಿ ಸೋಮವಾರಪೇಟೆ ತಾಲೂಕಿನ ಗೆಜ್ಜೆಹನಗೋಡಿನಲ್ಲಿ ಕೆಲವು ಸಮಯ ಕಾರ್ಯ ನಿರ್ವಹಿಸಿದ್ದರು. ಆ ನಂತರ ಮಡಿಕೇರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹುದ್ದೆಯಲ್ಲಿ ಸ್ವಲ್ಪ ಸಮಯ ಕಾರ್ಯ ನಿರ್ವಹಿಸಿದ್ದರು. ಆ ವೇಳೆಯಲ್ಲಿ ನಡೆದ ಒಂದು ಸಣ್ಣ ಘಟನೆ ಅವರ ಮನಸ್ಸಿಗೆ ನೋವು ತಂದಿತ್ತು. ಹಾಗಾಗಿ ಆ ನೌಕರಿಯನ್ನೂ ತ್ಯಜಿಸಿ, ಮಡಿಕೇರಿಯಲ್ಲಿ ಬಿ.ಎಸ್ಸಿಗೆ ಸೇರ್ಪಡೆಗೊಂಡರು. ಅಲ್ಲಿ ಹಾಸ್ಟೆಲ್‍ನ ಅವ್ಯವಸ್ಥೆಯ ಕುರಿತು ಹೋರಾಟಗಳನ್ನು ಅವರು ಸಂಘಟಿಸಿದ್ದರು. ಇದರ ಪರಿಣಾಮವಾಗಿ ಅವರಿಗೆ ಎರಡನೇ ವರ್ಷದ ಬಿ.ಎಸ್ಸಿಗೆ ಅವಕಾಶ ದೊರೆತಿರಲಿಲ್ಲ. ಇದರ ವಿರುದ್ಧ ಅವರು ಉಪಕುಲಪತಿಗಳನ್ನು ಭೇಟಿಯಾಗಿ ಮನವಿಯನ್ನು ನೀಡಿ, ಮತ್ತೆ ಅವಕಾಶವನ್ನು ಪಡೆದಿದ್ದರು. ಆದರೆ ಮುಂದೆ ಅವರು ಶಿಕ್ಷಣವನ್ನು ಶಾರದಾವಿಲಾಸ ಕಾಲೇಜು ಮೈಸೂರಿನಲ್ಲಿ ನಡೆಸಿದ್ದರು. ಅಲ್ಲಿಯೇ ಅವರು ಕಾನೂನು ಶಿಕ್ಷಣವನ್ನು ಕೂಡ ಪಡೆದು ವಕೀಲರಾದರು.

ವಿದ್ಯಾರ್ಥಿಯಾಗಿದ್ದ ವೇಳೆಯಲ್ಲಿಯೇ 1958ರಲ್ಲಿ ವಿಧಾನಸಭೆಗೆ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಎ.ಕೆ. ಸುಬ್ಬಯ್ಯ ಪಿ.ಎಸ್.ಪಿ. ಪಕ್ಷದ ಪ್ರಮುಖ ಪ್ರಚಾರಕರಾಗಿದ್ದರು. ಮತ್ತು ಪಿ.ಎಸ್.ಪಿ. ಅಭ್ಯರ್ಥಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಆಯ್ಕೆಯಾಗಲು ಪ್ರಮುಖ ಕಾರಣಕರ್ತರಾಗಿದ್ದರು.

1964ರಲ್ಲಿ ಅವರು ವಿರಾಜಪೇಟೆಯಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆಗಲೇ ಅವರು ಜನಸಂಘದತ್ತ ಆಕರ್ಷಿತರಾಗಿ, ಜನಸಂಘದ ಸಂಘಟನೆಗೆ ತೊಡಗಿದ್ದರು. ಅವರ ಸಂಘಟನಾ ಸಾಮಥ್ರ್ಯವನ್ನು ಕಂಡ ಜನಸಂಘದ ಹಾಗೂ ಸಂಘ ಪರಿವಾರದ ಪ್ರಮುಖರು ಅವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ 1968ರಲ್ಲಿ ಕೊಡಗು-ಮಂಗಳೂರು-ಮೈಸೂರು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು, ಅವರು ಆಯ್ಕೆಯಾಗಿದ್ದರು. ಆ ನಂತರ ಅವರು 1974, 1980ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಆ ನಂತರ ಒಂದು ಅವಧಿಗೆ ಅವರನ್ನು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್‍ನಿಂದ ಕಳುಹಿಸಲಾಗಿತ್ತು.

1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಮೊದಲು ಬಂಧಿತರಾದ ರಾಜಕೀಯ ವ್ಯಕ್ತಿ ಎ.ಕೆ.ಸುಬ್ಬಯ್ಯ ಆಗಿದ್ದರು. ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಲಾಗಿತ್ತು. 1977ರಲ್ಲಿ ತುರ್ತು ಪರಿಸ್ಥಿತಿ ರದ್ದಾಗಿದ್ದರೂ, ಕೆಲವು ದಿನಗಳ ಕಾಲ ಜೈಲಿನಲ್ಲಿ ಇದ್ದರು. ಕೊನೆಯಲ್ಲಿ ಬಿಡುಗಡೆಗೊಂಡ ವ್ಯಕ್ತಿಯಾಗಿದ್ದರು. ಆ ನಂತರ ಅವರು ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಜನತಾ ಪಕ್ಷದಿಂದ ಮಹಾಮೈತ್ರಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸಣ್ಣ ಅಂತರದಲ್ಲಿ ಜನಾರ್ದನ ಪೂಜಾರಿಯವರ ವಿರುದ್ಧ ಸೋಲು ಅನುಭವಿಸಿದ್ದರು. 1979ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ಸ್ಪರ್ಧಿಸಿ ಎಂ.ಸಿ.ನಾಣಯ್ಯನವರ ವಿರುದ್ಧ ಸೋಲನ್ನು ಅನುಭವಿಸಿದ್ದರು.

ಒಟ್ಟು ನಾಲ್ಕು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು, 1980ರ ವೇಳೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದ ಆ ಅವಧಿಯಲ್ಲಿ ಸುಬ್ಬಯ್ಯನವರು, ಅರಸುರವರಿಗೆ ಸಿಂಹಸ್ವಪ್ನವಾಗಿದ್ದರು. ಒಂದು ಹಂತದಲ್ಲಿ ವಿಧಾನ ಪರಿಷತ್ತನ್ನು ರದ್ದು ಮಾಡುವ ಆಲೋಚನೆಯೂ ಸರಕಾರಕ್ಕೆ ಬಂದಿತ್ತು. ಆ ವೇಳೆಗಾಗಲೇ ಸುದ್ಧಿ ಸುಬ್ಬಯ್ಯ ಎಂದು ಸುಬ್ಬಯ್ಯನವರು ತಮ್ಮ ಹರಿತ ನಾಲಿಗೆಯ ಮೂಲಕ ಚಿರಪರಿಚಿತರಾಗಿದ್ದರು.

ಕೊಡಗಿನವರೇ ಆದ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರ ಸರಕಾರದ ಇಬ್ಬರು ಸಚಿವರುಗಳಾದ ರೇಣುಕಾ ರಾಜೇಂದ್ರನ್ ಹಾಗೂ ಕೆ.ಎಂ.ಇಬ್ರಾಹಿಂರವರ ರಾಜಿನಾಮೆಗೆ ಕಾರಣರಾಗಿದ್ದರು. ರೇಣುಕಾ ರಾಜೇಂದ್ರನ್‍ರವರು ಉದ್ಯೋಗವೊಂದನ್ನು ಕೊಡಿಸಲು 25 ಸಾವಿರ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಕೆ.ಎಂ.ಇಬ್ರಾಹಿಂರವರ ರೊಲೆಕ್ಸ್ ವಾಚ್ ಹಗರಣ ಅವರನ್ನು ಸಚಿವ ಸ್ಥಾನದಿಂದ ರಾಜಿನಾಮೆ ನೀಡುವಂತೆ ಮಾಡಿತ್ತು.

1983-84ರಲ್ಲಿ ಎ.ಕೆ.ಸುಬ್ಬಯ್ಯನವರು ಭಾರತೀಯ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು. ಕ್ರಾಂತಿ ರಂಗ ಸಾಕಷ್ಟು ಸ್ಥಾನವನ್ನು ಗಳಿಸಿತ್ತು. ಅಂದು ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಬಿಜೆಪಿಯ ಬಾಹ್ಯ ಬೆಂಬಲವನ್ನು ನೀಡಿದ್ದರು. ಸರಕಾರ ರಚನೆಗೆ ಬಿಜೆಪಿಯ ಶಾಸಕರ ಬೆಂಬಲ ಅಗತ್ಯವಾಗಿತ್ತು ಮತ್ತು ಆಗ ತಮ್ಮ ಪಕ್ಷ ವಿರೋಧ ಪಕ್ಷವಾಗಿಯೇ ಇರುತ್ತದೆ. ಸರಕಾರದಲ್ಲಿ ಪಾಲುದಾರ ಆಗುವುದಿಲ್ಲ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ದರು. ಅಂದು ಅವರು ಬಯಸಿದ್ದರೆ ಉಪಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳೂ ಇತ್ತು.

ರಾಮಕೃಷ್ಣ ಹೆಗಡೆಯವರಿಗೆ ಎ.ಕೆ.ಸುಬ್ಬಯ್ಯ ನುಂಗಲಾರದ ತುತ್ತಾಗಿದ್ದರು. ಅವರ ಹಲವಾರು ಹಗರಣಗಳನ್ನು ಬಯಲಿಗೆಳೆದಿದ್ದರು. ಪ್ರಮುಖವಾಗಿ ಬಾಟ್ಲಿಂಗ್ ಹಗರಣ, ಭರತ್ ಹೆಗಡೆ ಪ್ರಕರಣ, ಫೋನ್ ಕದ್ದಾಲಿಕೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಬಯಲಿಗೆಳೆದದ್ದು ರಾಮಕೃಷ್ಣ ಹೆಗಡೆಯವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಅದೇ ಸಂದರ್ಭದಲ್ಲಿ ಎ.ಕೆ.ಸುಬ್ಬಯ್ಯನವರಿಗೂ, ಡಾ. ರಾಜ್‍ಕುಮಾರ್ ಅಭಿಮಾನಿಗಳಿಗೂ ಸಂಘರ್ಷ ಉಂಟಾಗಿ, ಎ.ಕೆ.ಸುಬ್ಬಯ್ಯನವರ ಮೇಲೆ ರಾಜ್‍ಕುಮಾರ್ ಅಭಿಮಾನಿಗಳು ಹಲ್ಲೆ ನಡೆಸುವ ಹಂತಕ್ಕೆ ತಲುಪಿದ್ದರು. ಇದನ್ನು ಯಶಸ್ವಿಯಾಗಿ ಸುಬ್ಬಯ್ಯನವರು ನಿಭಾಯಿಸಿದ್ದರು.
ಆರ್.ಎಸ್.ಎಸ್.ನ ಜೊತೆಯ ಸಂಘರ್ಷದಿಂದಾಗಿ ಸುಬ್ಬಯ್ಯನವರನ್ನು ಬಿಜೆಪಿಯಿಂದ ಹೊರ ಹಾಕಲಾಗಿತ್ತು. ಆರ್.ಎಸ್.ಎಸ್. ವಿರುದ್ಧ ಬಹಿರಂಗವಾಗಿ ಸಂಘರ್ಷವನ್ನು ಸುಬ್ಬಯ್ಯನವರು ಮಾಡುತ್ತಿದ್ದ ಕಾರಣ, ಆ ವೇಳೆಯಲ್ಲಿ ರಾಜ್‍ಕುಮಾರ್ ಅಭಿಮಾನಿಗಳು, ರಾಮಕೃಷ್ಣ ಹೆಗಡೆ ಸರಕಾರ ಹಾಗೂ ಆರ್.ಎಸ್.ಎಸ್. ಒಟ್ಟಾಗಿ ದಾಳಿ ನಡೆಸುತ್ತಿತ್ತು. ಇವೆಲ್ಲವನ್ನೂ ನಿಭಾಯಿಸಿಕೊಂಡು ಬಂದುದ್ದೇ ಅಲ್ಲದೆ, ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿದರು. ಆದರೆ ಆ ಪಕ್ಷ ಹೆಚ್ಚು ಕಾಲ ಬಾಳಲಿಲ್ಲ. ಆಗ ಸುಬ್ಬಯ್ಯನವರ ಜೊತೆಯಲ್ಲಿದ್ದವರು ಹಲವರು ಮತ್ತೆ ಬಿಜೆಪಿಗೆ ಸೇರಿಕೊಂಡರು.

ಆ ನಂತರ ಸುಬ್ಬಯ್ಯನವರು 1987ರ ವೇಳೆಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. 1993ರ ವೇಳೆಯಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದ ಸಂದರ್ಭದಲ್ಲಿ ಸುಬ್ಬಯ್ಯನವರು ಸಮಾನ ಮನಸ್ಕರೊಂದಿಗೆ ರಾಜ್ಯದಾದ್ಯಂತ ಸೌಹಾರ್ದ ಪ್ರವಾಸವನ್ನು ಕೈಗೊಂಡಿದ್ದರು.

ಕೊಡಗು ಮತ್ತು ಕರ್ನಾಟಕದಲ್ಲಿ ಹಲವಾರು ಹೋರಾಟಗಳನ್ನು ತೀರಾ ಇತ್ತೀಚಿನವರೆಗೂ ಅವರು ನಡೆಸುತ್ತಾ ಬಂದಿದ್ದಾರೆ. ಕೊಡಗು ಜಿಲ್ಲೆಯ ದಿಡ್ಡಳ್ಳಿಯ ಭೂಮಿ ವಸತಿ ವಂಚಿತರ ಹೋರಾಟದ ಪ್ರಮುಖ ರೂವಾರಿ ಸುಬ್ಬಯ್ಯನವರಾಗಿದ್ದರು. ಸಂವಿಧಾನ ಉಳಿಸಿ ಹೋರಾಟದಲ್ಲಿಯೂ ಅವರು ಭಾಗಿಯಾಗಿದ್ದರು. ತಮ್ಮ ಆರೋಗ್ಯ ತೀರಾ ಹದಗೆಟ್ಟಿದ್ದರೂ, ಹೋರಾಟದ ತುಡಿತ ಅವರಲ್ಲಿ ಕಡಿಮೆಯಾಗಿರಲಿಲ್ಲ. ಕೋಮು ಸೌಹಾರ್ದ ವೇದಿಕೆಯಿಂದ ಮೊದಲ್ಗೊಂಡು, ಸಂವಿಧಾನ ಉಳಿಸಿ ಹೋರಾಟ, ರಾಜ್ಯದ ಹಲವು ಹೋರಾಟಗಳಲ್ಲಿ ಹೆಚ್.ಎಸ್ ದೊರೆಸ್ವಾಮಿಯವರ ಜೊತೆಯಲ್ಲಿ ಕೂಡಿಕೊಂಡು ಭಾಗಿಯಾಗಿದ್ದರು. ಹಲವಾರು ಹೋರಾಟಗಾರರಿಗೆ ಆಳುವ ಸರಕಾರ ಕಿರುಕುಳ ನೀಡಿದಾಗ ಅವರ ಪರವಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೋರಾಟಗಳನ್ನು ಕೂಡ ನಡೆಸಿದ್ದರು. ಒಬ್ಬ ವಿಶಿಷ್ಟ ರಾಜಕಾರಣಿ, ಹೋರಾಟಗಾರರನ್ನು ಕನ್ನಡ ನಾಡು ಕಳೆದುಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...