ಉತ್ತರ ಪ್ರದೇಶದ ವಿಶೇಷ ಸಂಸದ/ಶಾಸಕ ನ್ಯಾಯಾಲಯವು 2013ರ ಮುಜಾಫರ್ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ ಹನ್ನೊಂದು ಮಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿಕ್ರಮ್ ಸೈನಿ ಉತ್ತರ ಪ್ರದೇಶದ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ನ್ಯಾಯಾಲಯ ಶಿಕ್ಷೆ ಘೋಷಿಸಿದ ನಂತರ, ಎಲ್ಲಾ ಹನ್ನೊಂದು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅದರ ನಂತರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ತಲಾ ಇಬ್ಬರು ಶ್ಯೂರಿಟಿಗಳೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
12 ಮಂದಿಗೆ ಐಪಿಸಿ ಸೆಕ್ಷನ್ 336 (ಜೀವ ಅಥವಾ ಇತರರಿಗೆ ಅಪಾಯವನ್ನುಂಟುಮಾಡುವ ಕಾಯ್ದೆ), 353 (ಸಾರ್ವಜನಿಕ ಸೇವಕರನ್ನು ಕರ್ತವ್ಯದಿಂದ ತಡೆಯಲು ಹಲ್ಲೆ), 147 (ಗಲಭೆ), 148 (ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ ಗಲಭೆ) ಮತ್ತು 149 (ಕಾನೂನುಬಾಹಿರ ಸಭೆ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಶಾಸಕ ವಿಕ್ರಮ್ ಸೈನಿ ಕೂಡ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ಎದುರಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ 15 ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ: ಮುಜಾಫರ್ನಗರ: ಗ್ರಾ.ಪಂ ಅಧ್ಯಕ್ಷ ಕೊಲೆ ಪ್ರಕರಣ- 10 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ
ಆಗಸ್ಟ್ 2013ರಂದು ಕವಾಲ್ ಗ್ರಾಮದಲ್ಲಿ ಸೋದರ ಸಂಬಂಧಿಗಳಾದ ಸಚಿನ್ ಮತ್ತು ಗೌರವ್ ಎಂಬುವವರ ಹತ್ಯೆಯ ನಂತರ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ ಶಾಸಕ ಸೈನಿ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಬಿಜೆಪಿ ಶಾಸಕ ಸೇರಿದಂತೆ ಇತರ 26 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
2013 ರ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮುಜಫರ್ನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಕೋಮು ಗಲಭೆ ಉಂಟಾಗಿ 60 ಜನರು ಸಾವಿಗೀಡಾಗಿದ್ದರು ಮತ್ತು ಸುಮಾರು 40 ಸಾವಿರ ಜನರು ವಲಸೆ ಹೋಗುವಂತಾಗಿತ್ತು.