Homeಸಾಹಿತ್ಯ-ಸಂಸ್ಕೃತಿಕವನಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

ಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

- Advertisement -
- Advertisement -

(“ಇತ್ತೀಚೆಗೆ ಭಾಷಾಧಿಪತ್ಯದ ಧೊರಣೆಯ ಬಗ್ಗೆ ರಹೀಂ ಪೊನ್ನಾಡ್ ಬರೆದ ಮಲೆಯಾಳಂ ಕವನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಹಿಂದೀ ಅನುವಾದವನ್ನು ನೋಡಿ ತೆಲುಗಿಗೆ ಅನುವಾದ ಮಾಡದೇ ಇರಲು ಸಾಧ್ಯವಾಗಲಿಲ್ಲ” ಎಂದು ಕವನವನ್ನು ತೆಲುಗಿಗೆ ಅನುವಾದ ಮಾಡಿದ ಮುಖಪುಟದ ಗೆಳೆಯ ಎನ್. ವೇಣುಗೋಪಾಲ್ ಬರೆದುಕೊಂಡಿದ್ದಾರೆ. ನನ್ನ ಸ್ಥಿತಿಯು ಸಹಾ ಅಂಥದ್ದೇ ಆಗಿರುವುದರಿಂದ ಕನ್ನಡಾನುವಾದ ನಮ್ಮೆಲ್ಲರಿಗಾಗಿ…)

ಒಂದು ದಿನ ಅರ್ಧ ರಾತ್ರಿ
ಆತ ಭಾಷೆಯ ಮೇಲೆ ನಿಷೇಧವೇರಿದ
‘ಇಂದಿನಿಂದ ಎಲ್ಲರದ್ದೂ ಒಂದೇ ಭಾಷೆ”
ಹಳೇ ಭಾಷಾ ಪದಗಳು ನಿಮ್ಮಲ್ಲಿದ್ದರೆ
ಅಂಚೆ ಕಚೇರಿಯಲ್ಲಿ ಬದಲಾಯಿಸಿ ಕೊಳ್ಳಬಹುದು’
ಎಂಬ ಗಂಭೀರ ಪ್ರಕಟಣೆ ಹೊರಡಿತು

ಅರ್ಧ ನಿದ್ರೆಯಲ್ಲಿದ್ದ ಜನರು
ಬೆಚ್ಚಿಬಿದ್ದು
ಓಟ ಶುರುಮಾಡಿದರು
ಪ್ರತಿಯೊಂದು ಜಾಗದಲ್ಲೂ ನಿಶ್ಶಬ್ಧ
ತಾಯಂದಿರು ಮಕ್ಕಳ ಬಾಯನ್ನು ಕೈಗಳಿಂದ ಮುಚ್ಚಿದ್ದಾರೆ
ಮುದುಕರ ಮುಖಗಳನ್ನು ಬಟ್ಟೆಯಿಂದ ಮರೆಮಾಚಿದ್ದಾರೆ
ದೇವಾಲಯಗಳಲ್ಲಿ ಹಾಡುಗಳು ನಿಂತುಹೋಗಿವೆ
ಮಸೀದಿಯಲ್ಲಿ ಅಜಾನ್ ಸಹಾ ಕೇಳಿಸುತ್ತಿಲ್ಲ
ರೇಡಿಯೋದಲ್ಲಿ ವೀಣಾ ವಾದನೆ ಬಿಟ್ಟರೆ ಮತ್ತೇನೂ ಕೇಳಿಸುತ್ತಿಲ್ಲ
ಟೀವಿ ಪರದೆಯ ಮೇಲೆ ಸನ್ನೆಯ ಭಾಷೆಯಲ್ಲೇ ವಾರ್ತೆಗಳು ಬರುತ್ತಿವೆ
ಪತ್ರಿಕೆಗಳ ಹೆಸರಲ್ಲಿ
ಸಂತೆಗೆ ಬಂದಿರುವುದು ಎಂಟು ಕಾಲಂಗಳು ಖಾಲಿ ಇರುವ ಬಿಳಿ ಕಾಗದಗಳು
ಎಲ್ಲಾ ಕೀಬೋರ್ಡ್‍ಗಳು ಮೌನತಾಳಿವೆ
ಮೊಬೈಲ್ ಸ್ಕ್ರೀನ್‍ಗಳ ಮೇಲೆ
ಗೊಂಬೆಗಳು ಮಾತ್ರ ಉಳಿದಿವೆ

ಅಂಚೆ ಕಚೇರಿಯ ಮುಂದೆ ನಿಶ್ಶಬ್ದವಾಗಿ ನಿಂತ ಉದ್ದನೆಯ ಕ್ಯೂ
ದಿನಕ್ಕೆರಡು ಪದಗಳನ್ನು ಮಾತ್ರ ಬದಲಾಯಿಸಿಕೊಳ್ಳಲು
ಅನುಮೋದನೆ ನೀಡಲಾಗಿದೆ
ಆದರೆ ಕೆಲವರು ಚೀಲಗಳ ತುಂಬಾ ಶಬ್ದಗಳನ್ನು ತುಂಬಿಕೊಂಡು ಬಂದಿದ್ದಾರೆ
ಟಿಫಿನ್ ಬಾಕ್ಸ್‌ಗಳಲ್ಲಿ ಬ್ಯಾಗುಗಳಲ್ಲಿ ಮಾತುಗಳನ್ನು
ತುಂಬಿಕೊಂಡು ಬಂದ ಪುಟಾಣಿ ಮಕ್ಕಳು ಕೂಡಾ ಕ್ಯೂನಲ್ಲಿ ನಿಂತಿದ್ದಾರೆ

‘ಅಮ್ಮ’ ಎಂಬ ಮಾತು ಕೊಟ್ಟವರಿಗೆ
‘ಮಾ’ ಎಂಬ ಮಾತು ಸಿಕ್ಕಿದೆ
‘ಅಪ್ಪ’ ಎಂಬ ಮಾತಿಗೆ
‘ಬಾಪ್‘ ಎಂಬ ಮಾತು ಸಿಕ್ಕಿತು
ಚಾಕೊಲೇಟ್, ಗೇಮ್ ಎಂಬ ಪದಗಳನ್ನು ಬದಲಾಯಿಸಿಕೊಳ್ಳಲು ಬಂದ ಮಕ್ಕಳನ್ನು
ಕೌಂಟರ್‌ನಿಂದ ಕಳುಹಿಸೇಬಿಟ್ಟರು
ಇಲ್ಲಿ ಭಾಷೆಯನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂದರು

ಬದಲಾಯಿಸಲು ಶಬ್ಧಗಳಿಲ್ಲ ಎಂಬ ಕಾರಣಕ್ಕಾಗಿ
‘ಅಸಂತೃಪ್ತಿ’ ಎಂಬ ಪದವನ್ನು
‘ಹೆಣದ ವಸ್ತ್ರ’ ಎಂಬ ಪದವನ್ನು ಹಿಂದಕ್ಕೆ ಕಳುಹಿಸಿದರು

‘ಚೂರಿ’ ಪದವನ್ನು ಬದಲಾಯಿಸಲು ಬಂದವರನ್ನು ಓಡಿಸಿಬಿಟ್ಟರು
‘ಮದ್ದುಗುಂಡು’ ಎಂಬ ಪದ ಬದಲಾಯಿಸಿ ಎಂದರೆ
ಪೊಲೀಸರು ಸೆರೆ ಹಿಡಿದರು
ಕ್ಯೂನಲ್ಲಿ ನಿಂತು ನಿಂತು ಸುಸ್ತಾದ ಮುದುಕರು
ಕುಡಿಯಲು ನೀರು ಕೇಳಿದರೆ
ತುಪಾಕಿ ತೋಟಾಗಳಿಂದ ಬಾಯಿ ಮುಚ್ಚಿಸಿದರು

ಇದೆಲ್ಲವನ್ನೂ ನೋಡಿ ನೋಡಿ
ಸಾಕಾಗಿ ಮನೆಗೆ ಬಂದರೆ
ಮನೆ ಅಂಗಳದಲ್ಲಿ ಮಾತುಗಳ ರಾಶಿ ಬಿದ್ದಿದೆ
ಹೊಸ ಪದಗಳು, ಹಳೆ ಪದಗಳು, ಲಿಪಿ ಇಲ್ಲದ ಪದಗಳು
ಬದಲಾಯಿಸಿಕೊಂಡು ತರಬೇಕಾದ ಪದಗಳು

ಮನೆಯವರು ಎಲ್ಲವನ್ನೂ ರಾಶಿರಾಶಿಯಾಗಿ ಸುರಿದಿದ್ದಾರೆ
ಅಪ್ಪ ತನ್ನ ತಲೆದಿಂಬು ಒಳಗಿಂದ ತೆಗೆದ ಪದಗಳು
ನನಗೆ ಅರ್ಥವೇ ಆಗಲಿಲ್ಲ
ಅಮ್ಮ ತನ್ನ ಮಡಿಲಲ್ಲಿ ತುಂಬಿಕೊಂಡಿರುವ ಪದಗಳನ್ನು ನಾನೆಂದೂ ಕೇಳಲೇ ಇಲ್ಲ
ನನ್ನ ಹೆಂಡತಿ ಅಡುಗೆ ಮನೆಯಿಂದ ಎಳೆದುತಂದ ಪದಗಳನ್ನು ನೋಡಿದರೆ
ಅಷ್ಟು ಮಾತುಗಳ ಮಧ್ಯದಲ್ಲೇ ಆಕೆ ಅಡುಗೆ ಮಾಡುತ್ತಿದ್ದಳು ಅನಿಸಿತು
ನನ್ನ ಮಗಳ ಶಾಲೆಯ ಬ್ಯಾಗಿನಲ್ಲಿ ಹೋಂವರ್ಕ್ ಪದಗಳು
ನನ್ನ ಮಗನ ಪೆಟ್ಟಿಗೆಯಲ್ಲಿ ಹರಡಿರುವ ಜೋಷಿನ ಮಾತುಗಳು
ಎಷ್ಟೇ ಪದಗಳಿದ್ದರೂ ಬದಲಾಗಿ ಎರಡೇ ಎರಡು ಮಾತುಗಳು
ಮಾತ್ರ ಸಿಗುತ್ತವೆ ಎಂದು ಹೇಗೆ ಹೇಳಲಿ?

ಆ ಮಾತುಗಳ ಗಂಟಿನಲ್ಲಿ ತುಂಬಾ ಹುಡುಕಿದೆ
ಬಹಳ ಕಷ್ಟಪಟ್ಟ ಮೇಲೆ
ನನ್ನ ಕೈಗೆ ಎರಡು ಪದಗಳು ಸಿಕ್ಕವು
ಇರೋ ಬರೋ ಶಕ್ತಿ ಎಲ್ಲಾ ಬಳಸಿ
ಆ ಮಾತುಗಳನ್ನು ಹೊರಗೆ ಎಳೆದಿದೆ
ಒಂದು “ಪ್ರಜಾತಂತ್ರ” ಮತ್ತೊಂದು “ಬಹುಳ”

ಬೇಗ ಬೇಗ ಓಡಿಹೋಗಿ ಅಂಚೆ ಕಚೇರಿಗೆ ತಲುಪುವ ವೇಳೆಗೆ
ಮುಸ್ಸಂಜೆ ಕತ್ತಲಾಗುತ್ತಿತ್ತು
ನನ್ನ ಕೈಯಲ್ಲಿರುವ ಮಾತುಗಳನ್ನು ನೋಡಿ
ಬೆಚ್ಚಿಬಿದ್ದು ಎದ್ದು ನಿಂತರು
ಕೌಂಟರಿನ ಉದ್ಯೋಗಿಗಳು
ನನ್ನ ಕೈಯಲ್ಲಿನ ಮಾತುಗಳು ಜಾರಿ ಕೆಳಗೆ ಬಿದ್ದವು
ತುಂಬಾ ಜನ ಓಡಿ ಬಂದು ಸುತ್ತುವರೆಯುತ್ತಿರುವಂತೆ ಬೂಟು ಹೆಜ್ಜೆಗಳ ಸದ್ದು ಕೇಳಿಸಿತು
ಪ್ರಜ್ಞೆ ತಪ್ಪಿ ಬೀಳುತ್ತಿರುವ ನನಗೆ
ಎರಡೇ ಎರಡು ‘ಮಾತು’ಗಳು ಕೇಳಿಸಿತು
“ಸಾಯಿಸಿಬಿಡಿ” – “ದೇಶದ್ರೋಹಿಯನ್ನ”

ಮಲೆಯಾಳಂ ಮೂಲ : ರಹೀಮ್ ಪೊನ್ನಾಡ್
ಹಿಂದಿ : ಎ. ಆರ್. ಸಿಂಧು, ವೀಣಾ ಗುಪ್ತ
ತೆಲುಗು : ಎನ್.ವೇಣುಗೋಪಾಲ್
ಕನ್ನಡಾನುವಾದ : ಪದ್ಮಾ ಕೆ ರಾಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈಶಾನ್ಯ ಭಾರತದಲ್ಲಿ ಕೇವಲ ನೂರು ವರ್ಷಗಳಲ್ಲಿ ಚರ್ಚ್ 60ಕ್ಕೂ ಅಧಿಕ ಭಾಷೆಗಳನ್ನು ಕೊಂದು ಇಂಗ್ಲಿಷ್ ಅನ್ನು ಸ್ಥಾಪಿಸಿದಾಗ, ಕೇರಳ ಸರಕಾರ ಕಾಸರಗೋಡಿನಲ್ಲಿ ಸಾವಿರಾರು ತುಳು, ಕನ್ನಡ, ಕೊಂಕಣಿ ಸಂಸಾರಗಳನ್ನು ಓಡಿಸಿದಾಗ ರಹೀಮರು ಕವನ ಬರೆಯಲಿಲ್ಲ!! ಮಂಗಳೂರು, ಚೆನ್ನೈ, ಮುಂಬಯಿ ಮುಂತಾದೆಡೆ ಕನ್ನಡ, ತುಳು, ತಮಿಳು, ಮರಾಠಿ ಭಾಷೆಗಳನ್ನು ಬಿಟ್ಟು ಹಿಡಿದದ್ದು ಹಿಂದಿಯನ್ನಲ್ಲ, ಇಂಗ್ಲಿಷನ್ನು!!! ಅವರ ಸಂಖ್ಯೆ ಈಗ ಶೇಕಡಾ 40 ದಾಟಿದೆ!!! ರಹೀಮರ ಪದ್ಯವನ್ನು ಅವರ ಮುಂದೆ ಓದಿದರೆ ಬಿದ್ದು ಬಿದ್ದು ನಗುತ್ತಾರೆ!!!

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...