ಕನ್ನಡ ಚಲನಚಿತ್ರದ ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಪರವಾಗಿ ಅವರ ಮೇಲೆ ನಡೆಯುತ್ತಿರುವ ಮಾನಸಿಕ ದಾಳಿಗಳನ್ನು ಖಂಡಿಸಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಶುಕ್ರವಾರ ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ಪ್ರಾರಂಭವಾಗಿದೆ. ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ಯು ಈ ಜಾಥಾವನ್ನು ಆಯೋಜಿಸಿದ್ದು, ಸಂವಿಧಾನ ಸಮರ್ಪಣಾ ದಿನ ಮತ್ತು ಕಾನೂನು ದಿನದ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಜಾಥಾದಲ್ಲಿ ಹಲವಾರು ಸಾಹಿತಿಗಳು, ಹೋರಾಟಗಾರರು, ದಲಿತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದಾರೆ. ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಹೊರಟ ರ್ಯಾಲಿಯು ಫ್ರೀಡಂ ಪಾರ್ಕಿನವರೆಗೆ ಸಾಗಲಿದ್ದು, ಅಲ್ಲಿ ಪ್ರತಿಭಟನಾಕಾರರು ತಮ್ಮೊಂದಿಗೆ ತಂದಿರುವ ಬಾಡೂಟದ ಬುತ್ತಿಯನ್ನು ತೆರೆದು ಊಟ ಮಾಡಲಿದ್ದಾರೆ.
ಬಲಿತವರು ದಲಿತರನ್ನು ತಾವು ಮೇಲೆತ್ತುತ್ತಿದ್ದೇವೆ ಎಂದು ಹೇಳಿ ಅವರ ಮನೆಗೆ ಹೋಗಿ ಊಟ ಮಾಡಿದರೆ ದಲಿತರ ಉದ್ದಾರ ಆಗುವುದಿಲ್ಲ ಎಂಬ ಅರ್ಥದಲ್ಲಿ ಸಾಹಿತಿ ಹಂಸಲೇಖ ಇತ್ತೀಚೆಗೆ ಮೈಸೂರಿನಲ್ಲಿ ಹೇಳಿಕೆ ಕೊಟ್ಟಿದ್ದರು. ಈ ವೇಳೆ ಅವರು ಪೇಜಾವರ ಸ್ವಾಮಿ, ಕುಮಾರಸ್ವಾಮಿ ಸೇರಿದಂತೆ ಹಲವರ ಉದಾಹರಣೆ ನೀಡಿದ್ದರು. ಆದರೆ ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು ಅವರ ಮಾತಿನ ಕೆಲವೇ ವಾಕ್ಯಗಳನ್ನು ಹೆಕ್ಕಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹಂಸಲೇಖ ಅವರು ಬಹಿರಂಗವಾಗಿ ಕ್ಷಮೆ ಕೂಡಾ ಕೇಳಿದ್ದರು. ಇಷ್ಟಕ್ಕೆ ಸುಮ್ಮನಿರದ ಬಲಪಂಥೀಯರು ಅವರ ಮೇಲೆ ಪ್ರಕರಣ ಕೂಡಾ ದಾಖಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಮೇಲೆ ಕೆಟ್ಟದಾಗಿ ದಾಳಿ ಮುಂದುವರೆಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕನ್ನಡಪರ ಮತ್ತು ಜನಪರ ಸಂಘಟನೆಗಳು ಹಂಸಲೇಖ ಅವರ ಪರವಾಗಿ ನಿಂತಿದೆ. ಇದೀಗ ಬೃಹತ್ ಮಟ್ಟದಲ್ಲಿ ಬೆಂಗಳೂರಿನಲ್ಲಿ ಜಾಥಾ ನಡೆಯುತ್ತಿದೆ. ಪ್ರತಿಭಟನಾಕಾರರು ಬ್ರಾಹ್ಮಣ್ಯದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಉಳಿವಿನ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ಯ್ರದ ಬಗ್ಗೆ ಕೂಡಾ ಘೋಷಣೆಗಳನ್ನು ಮೊಳಗಿಸಿದ್ದಾರೆ.