“ಪ್ರಾಧ್ಯಾಪಕರು ಮಾಡಿರುವ ಯಡವಟ್ಟಿನಿಂದಾಗಿ ನಮಗೆ ತೊಂದರೆಯಾಗಿದೆ” ಎಂದು ಇಬ್ಬರು ವಿದ್ಯಾರ್ಥಿಗಳು ದೂರಿದ್ದಾರೆ. ಎಂ.ಕಾಂ. ವಿಭಾಗಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗೆ ಸೆಮಿಸ್ಟರ್ ಕಳೆದರೂ ವಿಭಾಗದ ಅಡ್ಮಿಷನ್ ಅಪ್ರೂವಲ್ ಕೊಡದೆ ವಂಚಿಸಲಾಗಿದ್ದು, ಇದನ್ನು ಪ್ರಶ್ನಿಸಿದ ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿಗೂ ತೊಂದರೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಥಮ ಸೆಮಿಸ್ಟರ್ ಎಂ.ಕಾಂ. (ಐಬಿ) ವಿದ್ಯಾರ್ಥಿ ಎಸ್.ಲಿಂಗೇಶ್, ನನಗೆ ಅನ್ಯಾಯವಾಗಿದೆ ಎಂದು ಕುಲಪತಿಯವರಿಗೆ ದೂರು ನೀಡಿದ್ದಾರೆ. ಅದಕ್ಕೆ ಕುಲಪತಿಯವರು ಸ್ಪಂದಿಸಿದರೂ ವಿಭಾಗದ ಮುಖ್ಯಸ್ಥರಾದ ಕೆ.ನಿರ್ಮಲಾ ಅವರು ಪರಿಗಣನೆಗೆ ತೆಗೆದುಕೊಂಡಿಲ್ಲ. ಲಿಂಗೇಶ್ ಪರವಾಗಿ ನಿಂತ ವಿದ್ಯಾನ್ಮಾನ ವಿಭಾಗದ ಎಸ್.ಮನೋಜ್ ಎಂಬ ವಿದ್ಯಾರ್ಥಿಗೂ ಪರೀಕ್ಷಾ ಪ್ರವೇಶಾತಿ ಪತ್ರವನ್ನು ತಡವಾಗಿ ನೀಡಲಾಗಿದೆ ಎಂಬ ದೂರು ಬಂದಿದೆ.
ಬೆಂ.ವಿ.ವಿ.ಯ ಎಂ.ಕಾಂ (ಐಬಿ) ವಿಭಾಗಕ್ಕೆ ಲಿಂಗೇಶ್ ಅನ್ನುವ ವಿದ್ಯಾರ್ಥಿ ಪ್ರಥಮ ವರ್ಷಕ್ಕೆ ಅಪ್ಲಿಕೇಶನ್ ಹಾಕಿದ್ದರು. ನಿಯಮಾನುಸಾರ ಮೂಲದಾಖಲಾತಿಗಳನ್ನು ವಿಭಾಗಕ್ಕೆ ನೀಡಿದ್ದರು. (ವಿದ್ಯಾರ್ಥಿಯ ದಾಖಲಾತಿಗಳು ಸರಿ ಇದಿಯಾ ಇಲ್ಲವಾ ಎಂದು ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಚೆಕ್ ಮಾಡಿ ಕೌನ್ಸಿಲಿಂಗ್ನಲ್ಲಿ ಸಹಿಯನ್ನು ಹಾಕಿದ್ದರು). ದಾಖಲಾತಿಗಳನ್ನು ಪರಿಶೀಲಿಸಿದ ನಂತರ ವಿಶ್ವವಿದ್ಯಾನಿಲಯವು ಫೀಸ್ ಪೇಮಂಟ್ ಲಿಂಕ್ ಜನರೇಟ್ ಮಾಡಿತ್ತು. ವಿದ್ಯಾರ್ಥಿ ಅದರಂತೆ ಫೀಸ್ ಕಟ್ಟಿದ್ದರು. ಆದರೆ ವಿಭಾಗದ ಮುಖ್ಯಸ್ಥರು ಮತ್ತು ವಿಭಾಗದ ಕಚೇರಿಯವರು ಅಡ್ಮಿಷನ್ ಅಪ್ರೂವಲ್ ಮಾಡಬೇಕಿತ್ತು. (ಅವರು ಇಲ್ಲಿಯವರೆಗೂ ಅಡ್ಮಿಷನ್ ಅಪ್ರೂವಲ್ ಮಾಡಿಲ್ಲ). ಪ್ರಥಮ ಸೆಮಿಸ್ಟಾರ್ ಪರೀಕ್ಷಾ ಶುಲ್ಕ ಪಾವತಿ ಮಾಡಲು ಹೋದಾಗ ವಿಷಯ ತಿಳಿಯಿತು ಎಂದು ಆರೋಪಿಸಲಾಗಿದೆ.
“ಅಡ್ಮಿಷನ್ ಅನುಮೋದನೆ ಕುರಿತು ಪ್ರಶ್ನಿಸಿದಾಗ ಈ ವಿದ್ಯಾರ್ಥಿ ಯಾರೋ ನಮಗೆ ಗೊತ್ತಿಲ್ಲ, ಇವರು ಸರಿಯಾಗಿ ತರಗತಿಗಳಿಗೆ ಹಾಜರಾತಿ ಆಗದೇ ಇರುವ ಕಾರಣ ಇವರದು ನಾವು ಅಡ್ಮಿಷನ್ ಅಪ್ರೂವಲ್ ಮಾಡಿಲ್ಲ, ಇವರಿಗೆ ನಾನು ಅಡ್ಮಿಷನ್ ಅಪ್ರೂವಲ್ ಮಾಡುವುದಿಲ್ಲ” ಎಂದು ನಿರ್ಮಲಾ ಅವರು ಪ್ರತಿಕ್ರಿಯೆ ನೀಡಿದರೆಂದು ವಿದ್ಯಾರ್ಥಿ ಲಿಂಗೇಶ್ ತಿಳಿಸಿದ್ದಾರೆ.
“ನಾನು ಆರಂಭದ ಕೆಲವು ದಿನ ಕಾಲೇಜಿಗೆ ಹೋಗಿದ್ದೆ. ನಂತರದಲ್ಲಿ ಕೆಲವು ವೈಯಕ್ತಿಕ ಕಾರಣಗಳಿಂದ ಕಾಲೇಜಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ದಾಖಲಾತಿಯ ಎಲ್ಲ ಪ್ರಕ್ರಿಯೆ ನಡೆದು, ಹಾಸ್ಟೆಲ್ಗೂ ಪ್ರವೇಶಾತಿ ದೊರೆತರೂ ವಿಭಾಗದಲ್ಲಿ ಪ್ರವೇಶಾತಿ ಅಪ್ರೂವಲ್ ಆಗದಿರುವುದು ಹೇಗೆ? ಪ್ರವೇಶಾತಿ ಅಪ್ರೂವಲ್ ಆಗಿದ್ದರೆ ಮುಂದಿನ ಸೆಮಿಸ್ಟರ್ಗಳಲ್ಲಾದರೂ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿತ್ತು” ಎಂದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ವಿಭಾಗದ ಮುಖ್ಯಸ್ಥರಾದ ನಿರ್ಮಲಾ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಘಟನೆಯ ಕುರಿತು ‘ನಾನುಗೌರಿ.ಕಾಂ’ ಜೊತೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಮುಖಂಡ, ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿ ಎಸ್.ಮನೋಜ್, “ಇಲ್ಲಿ ಆಗಿರುವ ಲೋಪದೋಷಗಳ ಕುರಿತು ಕುಲಪತಿಗಳ ಗಮನಕ್ಕೆ ತರಲಾಯಿತು. ತಕ್ಷಣ ವಿದ್ಯಾರ್ಥಿಗೆ ಅಡ್ಮಿಷನ್ ಅಪ್ರೂವಲ್ ಮಾಡಿ ಎಂದು ವಿಭಾಗದ ಮುಖ್ಯಸ್ಥರ ಗಮಕ್ಕೆ ತಂದರು. ವಿದ್ಯಾರ್ಥಿ ಕೊಟ್ಟ ಮನವಿ ಪತ್ರಕ್ಕೆ ಕುಲಪತಿಯವರು ಸಹಿಯನ್ನೂ ಹಾಕಿದರು. ಆದರೂ ವಿಭಾಗದ ಮುಖ್ಯಸ್ಥರು(ಕೆ.ನಿರ್ಮಲ) ವಿದ್ಯಾರ್ಥಿಯ ಅಡ್ಮಿಷನ್ ಅಪ್ರೂವಲ್ ಅನ್ನು ನಿರಾಕರಿಸಿದ್ದಾರೆ” ಎಂದರು.
ಇದನ್ನೂ ಓದಿರಿ: ಎನ್ಇಪಿ: ಫೈಥಾಗರಸ್ ಥಿಯರಿ ಸುಳ್ಳು, ಸಂಸ್ಕೃತ, ಮನುಸ್ಮೃತಿ ಕಲಿಕೆಗೆ ಪ್ರಸ್ತಾಪ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ
“ನಮ್ಮ ವಿಭಾಗದ ಮುಖ್ಯಸ್ಥರಾದ ಟಿ.ಶ್ರೀಪತಿ ಅವರಿಗೂ ದೂರು ನೀಡಿ ನನ್ನ ಹಾಲ್ ಟಿಕೆಟ್ ಕೂಡ ತಡೆ ಹಿಡಿಯಲು ಯತ್ನಿಸಲಾಯಿತು. ಎರಡು ವಿಷಯಗಳ ಪರೀಕ್ಷೆಗಳಾದ ಮೇಲೆ ನನಗೆ ಹಾಲ್ ಟಿಕೆಟ್ ನೀಡಲಾಯಿತು” ಎಂದು ಆರೋಪಿಸಿದ್ದಾರೆ.
ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಶ್ರೀಪತಿಯವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ನನ್ನ ಇಪ್ಪತ್ತು ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ವಿದ್ಯಾರ್ಥಿಗೆ ಅನ್ಯಾಯ ಮಾಡಿಲ್ಲ. ಪರೀಕ್ಷೆಯ ಮೊದಲ ದಿನ ವಿದ್ಯಾರ್ಥಿ ಬಂದಿರಲಿಲ್ಲ. ಎರಡನೇ ದಿನ ಕೆಲವು ಕಾರಣಗಳಿಂದ ವಿಳಂಬವಾಯಿತು. ಮೂರನೇ ದಿನ ಪರೀಕ್ಷೆ ಬರೆದಿದ್ದಾರೆ. ಇನ್ನೇನೂ ಆತಂಕ ಪಡುವ ವಿಷಯ ಇಲ್ಲ. ಬೇರೆ ಡಿಪಾರ್ಟ್ಮೆಂಟ್ ವಿಷಯಗಳಿಗೆ ನೀವ್ಯಾಕೆ ಹೋಗ್ತೀರಾ ಎಂದು ಬುದ್ಧಿ ಹೇಳಿದ್ದು ನಿಜ. ಕೋರ್ಸ್ ಮುಗಿಸಿಕೊಳ್ಳಿ, ಚೆನ್ನಾಗಿ ಓದಿ ಎಂದು ಸಲಹೆ ನೀಡಿದೆ. ಆದರೆ ನನ್ನ ಮೇಲೆಯೇ ಕೂಗಾಡಿದರು. ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ. ನಾವು ವಿದ್ಯಾರ್ಥಿಗಳ ಪರವಾಗಿಯೇ ಎಂದಿಗೂ ಇರುತ್ತೇವೆ” ಎಂದು ಸ್ಪಷ್ಟಪಡಿಸಿದರು.
Yes ready