Homeಕರ್ನಾಟಕ2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ದಸಂಸ ‘ಭೀಮ ಸಂಕಲ್ಪ’; ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಭಾಗಿ

2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ದಸಂಸ ‘ಭೀಮ ಸಂಕಲ್ಪ’; ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಭಾಗಿ

ಸಂವಿಧಾನ ಬದಲಿಸುತ್ತೇವೆ ಎಂದವರನ್ನು ನಾವು- ನೀವು ಬದಲಿಸಿದ್ದೇವೆ: ಸಿದ್ದರಾಮಯ್ಯ

- Advertisement -
- Advertisement -

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ‘ಭೀಮಸಂಕಲ್ಪ’ವನ್ನು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ತೆಗೆದುಕೊಂಡಿತು.

ಐಕ್ಯತಾ ಸಮಿತಿಯು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜನಮನ ನಮನ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಭೀಮ ಸಂಕಲ್ಪ’ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಿದ್ದವರನ್ನು ನಾವು-ನೀವು ಬದಲಿಸಿದ್ದೇವೆ” ಎಂದು ತಿಳಿಸಿದರು.

ಹೀಗೆ ಹೇಳಿಕೆ ನೀಡಿದ್ದ ಸಂಸದ (ಮಾಜಿ ಕೇಂದ್ರ ಸಚಿವ) ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ನಾಯಕರಾದ ಅಮಿತ್ ಶಾ ಅವರಾಗಲಿ, ನರೇಂದ್ರ ಮೋದಿ ಅವರಾಗಲಿ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ. ಇದು 2024ರ ಲೋಕಸಭಾ ಚುನಾವಣೆಯಲ್ಲಿಯೂ ಪ್ರತಿಧ್ವನಿಸಬೇಕು, ಮರುಕಳಿಸಬೇಕು” ಎಂದು ಸಿಎಂ ಆಶಿಸಿದರು.

“ವಿಗ್ರಹ ಇಟ್ಟುಕೊಂಡು ವಿಚಾರಗಳನ್ನು ಕೊಲ್ಲುವುದು ಬಿಜೆಪಿ, ಆರ್‌ಎಸ್‌ಎಸ್‌ನವರ ಚಾಳಿ. ಸಂವಿಧಾನ ವಿರೋಧಿಸುವ ಬಿಜೆಪಿ ಚುನಾವಣೆಗಾಗಿ ಅಂಬೇಡ್ಕರ್ ಪ್ರತಿಮೆಯನ್ನು ಇಟ್ಟುಕೊಂಡು ನಾಟಕ ಮಾಡುತ್ತಿದೆ” ಎಂದು ಟೀಕಿಸಿದರು.

“ಮನುಸ್ಮೃತಿಯ ಆರಾಧಕರಾದ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗರು ಸಂವಿಧಾನದ ವಿರೋಧಿಗಳಾಗಿದ್ದಾರೆ. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಅಹಂಕಾರ ಮೆರೆದವರನ್ನು ನೀವು ಬದಲಾಯಿಸಿದ್ದೀರಿ, ಅಧಿಕಾರಕ್ಕಾಗಿ ಅಲ್ಲಿಗೆ ಹೋದ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಮನುಸ್ಮೃತಿಯ ಆರಾಧಕರಾಗಿ ಸಂವಿಧಾನ ವಿರೋಧಿಗಳಾಗುತ್ತಿದ್ದಾರೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಜಿಲ್ಲಾ ಉಸ್ತುವಾರಿಗಳ ಪಟ್ಟಿ ಇಲ್ಲಿದೆ..

“ಅಂಬೇಡ್ಕರ್ ಅವರು ಸಂವಿಧಾನ ಜಾರಿಗೊಳ್ಳುವ ಹಿಂದಿನ ದಿನ ಐತಿಹಾಸಿಕ ಭಾಷಣ ಮಾಡುತ್ತಾ, `ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕದಿದ್ದರೆ ಈ ಸ್ವಾತಂತ್ರ್ಯ ಸೌಧವನ್ನು ದೇಶದ ಜನರೇ ಧ್ವಂಸ ಮಾಡುತ್ತಾರೆ’ ಎಂದು ಎಚ್ಚರಿಸಿದ್ದರು. ಜಾತಿ ಸಮಾಜಕ್ಕೆ ಚಲನೆ ಇರುವುದಿಲ್ಲ. ಚಾಲನೆ ಬರಬೇಕಾದರೆ ಸಂವಿಧಾನ ಬದ್ದವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ನನ್ನ ರಾಜಕೀಯ ಬದ್ಧತೆ” ಎಂದರು.

“ಐಕ್ಯ ಹೋರಾಟ ಚಾಲನಾ ಸಮಿತಿ ಸಲ್ಲಿಸಿದ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಉಳಿದವುಗಳನ್ನೂ ಈಡೇರಿಸುತ್ತೇವೆ” ಎಂದು ಭರವಸೆ ನೀಡಿದರು.

May be an image of 3 people, temple and dais

“ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ವಂಚಿಸಿದ ಬಿಜೆಪಿ, ನುಡಿದಂತೆ ನಡೆದ ನಮ್ಮನ್ನು ಟೀಕಿಸುತ್ತಿದ್ದಾರೆ. ಬಡವರ- ಮಧ್ಯಮ ವರ್ಗದವರ ಕಲ್ಯಾಣಕ್ಕೆ ನಾವು ನೀಡಿರುವ ಗ್ಯಾರಂಟಿಗಳನ್ನು ವಿಫಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಸುಳ್ಳುಗಳನ್ನು ಹೊಸೆದು, ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ನಾಡಿನ ಶೇ.85ಕ್ಕೂ ಹೆಚ್ಚು ಜನರಿಗೆ ತಲುಪುತ್ತದೆ. ಉಳಿದವು ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪುತ್ತದೆ” ಎಂದು ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, “ಕಾಂಗ್ರೆಸ್‌‌ಗೂ ಸಂವಿಧಾನಕ್ಕೂ ಒಂದು ಅವಿನಾಭಾವ ಸಂಬಂಧ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳಿಗೆ ಬದ್ದವಾಗಿ ಸದಾ ಹೋರಾಡುತ್ತದೆ. ಆ ಕಾರಣದಿಂದ ಸಂವಿಧಾನವೇ ನಮ್ಮ ಬೈಬಲ್, ಸಂವಿಧಾನವೇ ನಮ್ಮ ಕುರಾನ್, ಸಂವಿಧಾನವೇ ನಮ್ಮ ಭಗವದ್ಗೀತೆ” ಎಂದು ಮಾರ್ಮಿಕವಾಗಿ ನುಡಿದರು.

“ನನ್ನ ವಿದ್ಯಾರ್ಥಿ ಜೀವನದಿಂದಲೂ ನಾನು ದಸಂಸ ಹೋರಾಟವನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನೀವೆಲ್ಲ ಬೀದಿಯಲ್ಲಿ ಹೋರಾಡುತ್ತಾ ಇದ್ದೀರಿ. ದಸಂಸ ನಾಯಕರು ಸಮಾಜದ ಬದಲಾವಣೆಗೆ ನಿರಂತರವಾಗಿ ಹೋರಾಟ ನಡೆಸುತ್ತಿರುವವರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ದೀಕ್ಷೆ ಉಳಿಸಿಕೊಳ್ಳುವ ನಿಮ್ಮ ಹೋರಾಟ ಯಶಸ್ವಿಯಾಗಲಿ” ಎಂದು ಆಶಿಸಿದರು.

“ನಾವು ಒಂದು ಕಾಲದಲ್ಲಿ ಸಂವಿಧಾನ ಪೀಠಿಕೆಯನ್ನು 11 ಸಾವಿರ ಪಂಚಾಯಿತಿಗಳಲ್ಲಿ ಬೋಧಿಸುವ ಪ್ರತಿಜ್ಞೆ ಕೈಗೊಂಡಿದ್ದೆವು. ಬಾಬಾ ಸಾಹೇಬರು ನಮಗೆ ಸಂವಿಧಾನದ ಮೂಲಕ ಗೌರವದ ಬದುಕನ್ನು ತಂದುಕೊಟ್ಟಿದ್ದಾರೆ. ಆ ಮೂಲಕ ನಾವು ಬಾಬಾಸಾಹೇಬರನ್ನು ದೇವರಂತೆ ಕಾಣುತ್ತೇವೆ. ಅಂಬೇಡ್ಕರ್ ಅಂದರೆ ಜ್ಞಾನ, ಅಂಬೇಡ್ಕರ್ ಅಂದರೆ ಸಮಾನತೆ, ಅಂಬೇಡ್ಕರ್ ಎಂದರೆ ಧೈರ್ಯ” ಎಂದು ಬಣ್ಣಿಸಿದರು.

“ಇತಿಹಾಸ ಮರೆತವರು ಇತಿಹಾಸ ಸೃಷ್ಡಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ಇಂದು ಕಾಂಗ್ರೆಸ್ ಅದ್ಯಕ್ಷ ಸ್ಥಾನದಲ್ಲಿ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆಯವರು ಕುಳಿತಿದ್ದಾರೆ. ಅವರಿಗೆ ನೀವು ಗೌರವಿಸಿದ್ದೀರಿ. ಅವರ ನಾಯಕತ್ವದಲ್ಲಿ ಇಡೀ ದೇಶದಲ್ಲಿ ಬದಲಾವಣೆಗೆ ನಾಂದಿ ಹಾಡಿದೆ” ಎಂದರು.

May be an image of 5 people, dais and text
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು. (PC: Facebook)

“ಸಿದ್ದರಾಮಯ್ಯವರು ಈ ಹಿಂದೆಯೂ ಅಧಿಕಾರದಲ್ಲಿದ್ದಾಗ ದಲಿತರಿಗಾಗಿ ಎಸ್‌ಸಿಎಸ್‌ಪಿ/ಟಿಎಎಸ್‌ಪಿ ಕಾಯ್ದೆ ಜಾರಿ ಮಾಡಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ಹಾಲಿ ಸರ್ಕಾರದಲ್ಲಿಯೂ ದಲಿತ ಸಮಯದಾಯದ ಜನಪ್ರತಿನಿಧಿಗಳು ಮಂತ್ರಿಗಳಾಗಿದ್ದಾರೆ. ನಮ್ಮ ಸರ್ಕಾರ ಒಂದು ಜಾತಿ ಒಂದು ಧರ್ಮ ಎಂದಲ್ಲ, ಮಾನವೀಯತೆಯ ಸಿದ್ದಾಂತದ ಆದಾರದಲ್ಲಿ ಇಡೀ ಸಮಾಜವನ್ನು ಒಂದುಗೂಡಿಸಿಕೊಂಡು ಹೋಗುತ್ತದೆ. ಹಾಗೆಯೇ ಈ ಸಂದರ್ಭದಲ್ಲಿ ದಸಂಸ ಮುಂದಿಟ್ಟಿರುವ ಹಕ್ಕೊತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ” ಎಂದು ಘೋಷಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, “ಕಾಂಗ್ರೆಸ್ ಬಹುಮತ ಸಾಧಿಸುವಲ್ಲಿ ಈ ರಾಜ್ಯದ ದಲಿತ ಸಮುದಾಯಗಳ ಸಮಸ್ಯೆ, ಸಂಕಷ್ಟ ಹಾಗೂ ಸಮುದಾಯದ ಸ್ಪಷ್ಟ ನಿಲುವು ಕೂಡ ಕಾರಣವಾಗಿದೆ. ಸಂವಿಧಾನದ ಆಶಯ-ಉದ್ದೇಶಗಳನ್ನು ಉಳಿಸುವ ಸಲುವಾಗಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕಿಂತ ಒಂದು ಹೆಜ್ಜೆ ಮುಂದೆ ದಸಂಸ ಹೋಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಈಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೇವೆ. ಆದರೆ ಕೋಮುವಾದಿ ಶಕ್ತಿಗಳ
ವ್ಯಕ್ತಿ ಪೂಜೆಯನ್ನು ದೇಶದೆಲ್ಲೆಡೆ ಅಳಿಸಿ ಹಾಕಬೇಕು” ಎಂದ ಅವರು, “ಸಿದ್ದರಾಮಯ್ಯ ಅವರನ್ನು ಕುರುಬರ ಪಕ್ಷಪಾತಿ ಅಂತ‌ ಬಿಂಬಿಸುತ್ತಾರೆ. ಕಾಂಗ್ರೆಸ್ ಯಾವುದೇ ಜಾತಿ-ಧರ್ಮಕ್ಕೆ‌ ಸೀಮಿತವಾಗಿಲ್ಲ, ಜನರ ಸ್ವಾಭಿಮಾನದ ಬದುಕಿಗೆ ಪೂರಕವಾಗಿ, ಸಾಮಾಜಿಕ ನ್ಯಾಯವನ್ನು ಉಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುನ್ನಡೆಯಲಿದೆ” ಎಂದು ತಿಳಿಸಿದರು.

“ಬಿಜೆಪಿಯವರು ಜನರ ವಾಕ್‌ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗಳ ಪತಿ (ಆನಂದ್‌ ತೇಲ್ತುಂಬ್ಡೆ) ಅವರನ್ನೇ ಕ್ಷುಲ್ಲಕ ಕಾರಣಕ್ಕೆ ಜೈಲಿನಲ್ಲಿಟ್ಟಿದ್ದರು. ಹಾಗಾಗಿ ಸಾಮಾಜಿಕ ಚಳವಳಿಗಳು ಮೊನಚಾಗಬೇಕು, ಸಂಘಟನೆಗಳು ಒಗ್ಗಟ್ಟಾಗಬೇಕು, ಪ್ರಜಾಪ್ರಭುತ್ವದ ಬಲವರ್ಧನೆಯಾಗಬೇಕು. ಆ ಮೂಲಕ ಆಳುವ ಸರ್ಕಾರಗಳ ತಪ್ಪುಗಳನ್ನು ತಿದ್ದಿ ನಿರ್ದೇಶನ ನೀಡಬೇಕು. ಸಂವಿಧಾನಬದ್ಧವಾಗಿ ಉತ್ತಮ ಆಡಳಿತ ನೀಡಲು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕು” ಎಂದು ಮನವಿ ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ನಮ್ಮ ಸರ್ಕಾರ ದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯನವರು ಕೊಟ್ಟಿರುವ ಮಾತುಗಳನ್ನು ಈಗಾಗಲೇ ಉಳಿಸಿಕೊಂಡಿದ್ದಾರೆ” ಎಂದು ಶ್ಲಾಘಿಸಿದರು.

ದಸಂಸ ಹೋರಾಟಗಾರ, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, “ಕೋಮುವಾದಿಗಳನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಿದ್ದೇವೆ. ಕಳೆದ ಎರಡು ವರ್ಷಗಳಿಂದ ದಲಿತರು ಅಸ್ತಿತ್ವಕ್ಕಾಗಿ ಹೋರಾಟ ಮಾಡಿದ್ದೇವೆ. ಭಾರತವನ್ನು ಸಮಗ್ರವಾಗಿ ಮತ್ತು ಸಮೃದ್ಧವಾಗಿ ಉಳಿಸಿಕೊಳ್ಳುವ ಸಲುವಾಗಿ ಹೋರಾಡಿದ್ದೇವೆ. ಕಾಂಗ್ರೆಸ್‌ನವರು ನಮ್ಮನ್ನ ಬೆಂಬಲ ಕೇಳಿರಲಿಲ್ಲ. ಆದಾಗ್ಯೂ ಸಂವಿಧಾನದ ಉಳಿವಿಗಾಗಿ 19 ಷರತ್ತುಗಳನ್ನು ಹಾಕಿ ಬೆಂಬಲ ವ್ಯಕ್ತಪಡಿಸಲಾಗಿತ್ತು. ಅದನ್ನು ಹಿಂದಿನ ವಿರೋಧ ಪಕ್ಷದ ನಾಯಕ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿದ್ದರು” ಎಂದು ಸ್ಮರಿಸಿದರು.

“ಜನ ಒಂಭತ್ತು ವರ್ಷಗಳಿಂದ ನರಕ ಕಂಡಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿಯ ಗುಜರಾತ್ ಮಾದರಿ ಕೋಮುದ್ವೇಷವನ್ನು ರಾಜ್ಯದಲ್ಲೂ ಕೃತಕವಾಗಿ ಸ್ಥಾಪಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಎಲ್ಲೆ ಮೀರಿದ ಮತೀಯ ಗೂಂಡಾಗಿರಿ, ಸಂವಿಧಾನ ಬದಲಾವಣೆಯ ಮಾತು, ಪಠ್ಯಪುಸ್ತಕಗಳಲ್ಲಿ ಪುರಾಣ, ಕೋಮುವಾದಿ ವಿಚಾರಗಳನ್ನು ಒಪ್ಪಲಾಗಲಿಲ್ಲ. ಆ ಅಸಮಾಧಾನವನ್ನು ರಾಜ್ಯದ ದಲಿತರು, ಜನಸಾಮಾನ್ಯರು ಚುನಾವಣಾ ಫಲಿತಾಂಶದ ಮೂಲಕ ತೋರಿಸಿದ್ದಾರೆ” ಎಂದು ಅಭಿಪ್ರಾಯಪಟ್ಟರು.

2024ರ ಲೋಕಸಭಾ ಚುನಾವಣೆಯಲ್ಲಿ ನೀತಿಗೆಟ್ಟ ಕೋಮುವಾದಿ ಬಿಜೆಪಿಯನ್ನು ಒದ್ದೋಡಿಸುವುದಕ್ಕಾಗಿ ಇಂದಿನ ‘ಭೀಮ ಸಂಕಲ್ಪ’ ಮಾಡಿದ್ದೇವೆ. ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿಂದ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದು ಆರ್‌ಎಸ್‌ಎಸ್ ಕೂಡ ಹೇಳಿದೆ. ಹಾಗಾಗಿ ಸಂವಿಧಾನ ಉಳಿವಿಗಾಗಿ ಬೀದಿಯಲ್ಲಿ ನಿಂತು ದಲಿತ ಮುಖಂಡರು ಹೋರಾಡಬೇಕಿದೆ ಎಂದು ಆಶಿಸಿದರು.

ಇದನ್ನೂ ಓದಿರಿ: ಹಳತು-ವಿವೇಕ: ಚಳುವಳಿ ಮಾಡಿದ್ರೆ ಮಾತ್ರ ಸಾಲಲ್ಲ, ಪೊಲಿಟಿಕಲ್ ಪವರ್ ನಿಮ್ಮ ಕೈಲಿ ಹಿಡ್ಕೊಬೇಕು

ದಸಂಸ ಹಿರಿಯ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಸಂವಿಧಾನವನ್ನು ಬದಲಾಯಿಸುತ್ತೇವೆ, ಪ್ರಜಾಪ್ರಭುತ್ವವ ವ್ಯವಸ್ಥೆಯನ್ನು ಧಿಕ್ಕರಿಸುತ್ತೇವೆ ಎಂದವರ ವಿರುದ್ಧ ಹೋರಾಟ ಮುಂದುವರಿಯಲಿದೆ. ಇದು ಈ ದೇಶದ ದಲಿತರು, ಅಲ್ಪಸಂಖ್ಯಾತರು ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ, ಸರ್ವಾಧಿಕಾರಿ ಬಿಜೆಪಿಯನ್ನು ಸೋಲಿಸಬೇಕಿದೆ. ಆ ಮೂಲಕ ಈ ದೇಶದಲ್ಲಿ ಸಂವಿಧಾನ-ಪ್ರಜಾಪ್ರಭುತ್ವವನ್ನು ಉಳಿಸಬಹುದು. ಈ ಕುರಿತು ಸಮಾವೇಶದಲ್ಲಿ‌ ಭೀಮ ಸಂಕಲ್ಪ ಮಾಡೋಣ” ಎಂದು ಹೇಳಿದರು.

ದಲಿತ ಮುಖಂಡ ಮುನಿಸ್ವಾಮಿ ಹಕ್ಕೋತ್ತಾಯ ಮಂಡನೆ ಮಾಡಿದರು. “ಕರ್ನಾಕಟದ ಉದ್ದಕ್ಕೂ ಕೆಲಸ ಮಾಡಿ 2022, ಡಿ.6ರಂದು ದ.ಸಂ.ಸ ಮಾಡಿದ ಶಪಥ ಈಡೇರಿದೆ. ಅದರ ಫಲವಾಗಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿದೆ. ಹಸಿವು ಮುಕ್ತ ಕರ್ನಾಟಕ ಮಾಡುವ ಯೋಜನೆಗಳನ್ನು ತಂದಿದೆ. ರಾಜ್ಯದ ಜನರ ನೆಮ್ಮದಿ ಕೆಡಿಸಿರುವ, ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬೇಕು. ಎಸ್‌ಸಿ, ಎಸ್‌ಟಿಗಳ ಅಭಿವೃದ್ಧಿಗೆ ಮೀಸಲಾಗುವ ಅನುದಾನ ಸದ್ಬಳಕೆಯಾಗಬೇಕು. ಮೀಸಲು ಹುದ್ದೆ ಭರ್ತಿ, ಖಾಲಿ ಹುದ್ದೆ ಭರ್ತಿಯಾಗಬೇಕು. ಮತಾಂತರ ನಿಷೇಧ ಕಾಯ್ದೆ, ಜಾನುವಾರು ಸಾಗಾಣಿಕೆ ಹಾಗೂ ಹತ್ಯೆ ನಿಷೇಧ ಕಾಯ್ದೆ ರದ್ದಾಗಬೇಕು. ವಿದ್ಯುತ್ ಖಾಸಗೀಕರ ನಿಲ್ಲಬೇಕು. ಎನ್‌ಇಪಿ ರದ್ದುಪಡಿಸಬೇಕು” ಸೇರಿದಂತೆ ಮೊದಲಾದ ಹಕ್ಕೋತ್ತಾಯಗಳನ್ನು ಮಂಡಿಸಲಾಯಿತು.

ದಲಿತ ಹೋರಾಟಗಾರರಾದ ಎಸ್.ಮರಿಸ್ವಾಮಿ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಜಿಗಣಿ ಶಂಕರ್, ವಿ.ನಾಗರಾಜ್, ಎನ್.ವೆಂಕಟೇಶ್ ಸೇರಿದಂತೆ  ದಸಂಸ ಚಾಲನಾ ಸಮಿತಿಯ 50ಕ್ಕೂ ಹೆಚ್ಚು ಮುಖಂಡರು ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...