ಬೆಳ್ತಂಗಡಿ: ಆದಿವಾಸಿ ಮಹಿಳೆಯನ್ನು ಅರೆಬೆತ್ತಲುಗೊಳಿಸಿ, ಹಲ್ಲೆ ನಡೆಸಿ ಅವಮಾನ ಮಾಡಿರುವ ಘಟನೆ ತಾಲ್ಲೂಕಿನ ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ.
ಈ ಕುರಿತು ದಲಿತ ಮುಖಂಡರಾದ ಈಶ್ವರಿ ಪದ್ಮುಂಜ ಅವರು ವಿವರಣೆ ನೀಡಿದ್ದು, ‘ವಾರ್ತಾ ಭಾರತಿ’ ವರದಿ ಮಾಡಿದೆ.
“ಸರಕಾರಿ ಜಮೀನಿನಲ್ಲಿ ನಿವೇಶನದ ವಿಚಾರವನ್ನು ಮುಂದಿಟ್ಟುಕೊಂಡು ದುಷ್ಕರ್ಮಿಗಳ ತಂಡವೊಂದು ಆದಿವಾಸಿ ಸಮುದಾಯದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕ ರಸ್ತೆಯಲ್ಲಿ ಆಕೆಯ ಉಟ್ಟ ಬಟ್ಟೆಗಳನ್ನು ಹರಿದು ಹಾಕಿ ಅರೆಬೆತ್ತಲೆಗೊಳಿಸಿ ಕೇಕೆ ಹಾಕಿ ಅದನ್ನು ವೀಡಿಯೊ ಚಿತ್ರೀಕರಣವನ್ನೂ ಮಾಡಿದ ಅಮಾನವೀಯ ಘಟನೆ ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ” ಎಂದು ಅವರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಳಕೆ ನಿವಾಸಿ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರು ಈ ಕೃತ್ಯವನ್ನು ಎಸಗಿದವರು. ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏ.19 ರಂದು ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭ ಜಾಗದ ಬಗ್ಗೆ ಇನ್ನೊಂದು ತಂಡ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದವರು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ಮಹಿಳೆಯರ ಮೇಲೆ ಈ ತಂಡ ಎರಗಿದೆ ಎಂದು ಅವರು ವಿವರಿಸಿದ್ದಾರೆ.
ಮಹಿಳೆಯರೂ ಇದ್ದ ತಂಡ ಮೊದಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ನೋಡಿ ಅಕ್ಕನ ರಕ್ಷಣೆಗೆ ತೆರಳಿದ ತಂಗಿಯ ಮೇಲೆ ಇವರು ಮುಗಿಬಿದ್ದು ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದುಹಾಕಿದ್ದಾರೆ. ಅಲ್ಲದೆ ಅನಾಗರಿಕರಂತೆ ಕೇಕೆ ಹಾಕಿ ಅರೆಬೆತ್ತಲೆಯಾಗಿದ್ದ ಮಹಿಳೆಯ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಮನೆಯ ಕಡೆಗೆ ಹೋಗಲೂ ಬಿಡದೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ನೋಡಿ ಬಂದ ಆಕೆಯ ತಾಯಿಯ ಮೇಲೂ ಇವರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ತಂಡ ಅಲ್ಲಿಂದ ತೆರಳಿದ ಬಳಿಕವಷ್ಟೇ ಈ ಮಹಿಳೆಯರಿಗೆ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿ ಗ್ರಾಪಂ ಸದಸ್ಯ ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ಜನರಿದ್ದರು. ಆದರೆ ಯಾರೂ ಅದನ್ನು ತಡೆಯಲು ಮುಂದಾಗಿಲ್ಲ ಎಂದು ವಿಷಾದಿಸಿದ್ದಾರೆ.
ಉಜಿರೆ ಗುರಿಪಳ್ಳ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಹತ್ತಾರು ವಾಹನಗಳಲ್ಲಿ ಹೋದವರೂ ಇದೆಲ್ಲ ನೋಡಿಕೊಂಡು ಹೋಗಿದ್ದಾರೆ. ಆದರೆ ಯಾರೂ ನಮ್ಮ ನೆರವಿಗೆ ಬರಲಿಲ್ಲ ಎಂದು ತಮ್ಮ ನೋವನ್ನು ದೌರ್ಜನ್ಯಕ್ಕೀಡಾದ ಮಹಿಳೆಯರು ತೋಡಿಕೊಳ್ಳುತ್ತಾರೆ ಎಂದು ಈಶ್ವರಿ ತಿಳಿಸಿದ್ದಾರೆ.
ಉತ್ತರ ಪ್ರದೇಶವನ್ನೂ ನಾಚಿಸುವ ರೀತಿಯಲ್ಲಿ ಉಜಿರೆಯಲ್ಲಿ ಆದಿವಾಸಿ ಸಮುದಾಯದ ಮಹಿಳೆಯೊಬ್ಬರನ್ನು ನಡುರಸ್ತೆಯಲ್ಲಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಪ್ರವೃತ್ತಿಯಾಗಿದೆ. ಬಿಜೆಪಿ ಮುಖಂಡನ ನೇತೃತ್ವದ ತಂಡ ಈ ಕೃತ್ಯವನ್ನು ಎಸಗಿದ್ದು, ಆರಂಭದಲ್ಲಿ ಹಲವು ಒತ್ತಡಗಳಿಂದ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಯತ್ನಿಸಿದ್ದರು. ನಾವು ಹೋದ ಬಳಿಕವಷ್ಟೇ ಪ್ರಕರಣ ದಾಖಲಿಸಿದ್ದಾರೆ. ಕೃತ್ಯ ನಡೆಸಿದ ದುಷ್ಕರ್ಮಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆ ಚಲೋ ನಡೆಸಲಾಗುವುದು: ಶೇಖರ್ ಲಾಯಿಲ ಎಚ್ಚರಿಕೆ
ಸರ್ಕಾರಿ ಜಮೀನಿನ ನಿವೇಶನಕ್ಕೆ ಸಂಬಂಧಿಸಿದಂತೆ ಆದಿವಾಸಿ ಮಹಿಳೆಯರ ಮೇಲೆ ದಾಳಿ ನಡೆಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿದ ಕೃತ್ಯ ಅತ್ಯಂತ ಅಮಾನವೀಯವಾದುದು. ಇದರ ನೇತೃತ್ವವನ್ನು ಬಿಜೆಪಿ ಎಸ್ಟಿ ಮೋರ್ಛಾದ ಅಧ್ಯಕ್ಷ ವಹಿಸಿರುವುದು ಮಹಿಳೆಯರನ್ನು ಮಾತೆ , ದೇವತೆ ಎನ್ನುವವರ ನಿಜ ಬಣ್ಣ ಬಯಲಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ದೇವಾಲಯದ ಹಿಂದೆ ಮಹಿಳೆಯ ಮೃತದೇಹ ಪತ್ತೆ; ಅರ್ಚಕನೇ ಕೊಲೆಗಾರ!
ಉಜಿರೆ ಗ್ರಾಮದಲ್ಲಿ ನಡೆದ ಈ ಅಮಾನವೀಯ ಕೃತ್ಯ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಹಿಳೆಯರನ್ನು ಮಾತೆ , ದೇವತೆ ಎನ್ನುವ ಬಿಜೆಪಿ ಪಕ್ಷದ ಎಸ್ಟಿ ಮೋರ್ಛಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಎಂಬಾತನ ನೇತೃತ್ವದಲ್ಲಿ ಮಹಿಳೆಯನ್ನು ನಡು ರಸ್ತೆಯಲ್ಲಿ ಅರಬೆತ್ತಲೆಗೊಳಿಸಿರುವುದು ರಾಮರಾಜ್ಯದ ಪರಿಕಲ್ಪನೆಯೇ? ಮಹಿಳೆಯರನ್ನು ಮಹಿಳೆಯರನ್ನು ಮಾತೆ , ದೇವತೆ ಎಂದು ಹೇಳುವುದು ನಿಮ್ಮ ಕಪಟ ನಾಟಕವೇ? ಎಂದು ಪ್ರಶ್ನಿಸಿದ್ದಾರೆ.
ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಶಾಸಕ ಹರೀಶ್ ಪೂಂಜಾರ ಮೌನ ಮಹಿಳೆಯನ್ನು ನಡು ಬೀದಿಯಲ್ಲಿ ಅರಬೆತ್ತಲೆಗೊಳಿಸಿರುವುದಕ್ಕೆ ಮೌನ ಸಮ್ಮತಿಯೇ ? ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಸಂಘಪರಿವಾರದ ಸಂಘಟನೆಗಳ ಹೋರಾಟ ಏಕಿಲ್ಲ? ಎಂದು ಕೇಳಿದ್ದಾರೆ.
ಈ ಘಟನೆ ಉತ್ತರ ಪ್ರದೇಶ, ಗುಜರಾತ್ ಮಾದರಿಯಂತಿದೆ. ಇಂತಹ ಘಟನೆಯ ಹಿಂದೆ ಶಾಸಕ ಹರೀಶ್ ಪೂಂಜಾರ ಮುಂದಿನ ಚುನಾವಣಾ ರಾಜಕೀಯದ ಹಿಡನ್ ಅಜೆಂಡಾ ಅಡಗಿದೆ. ತಪ್ಪಿತಸ್ಥ ಆರೋಪಿಗಳನ್ನು 36 ಘಂಟೆಗಳಲ್ಲಿ ಬಂಧಿಸದಿದ್ದರೆ ಪೋಲಿಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Who is having social justice and broad minded people every one has to condumn such cases try to take action against culprits