ಮೈಸೂರಿನ ಸೌಹಾರ್ದ ಪ್ರಿಯ ನಾಗರಿಕರು ತಮ್ಮ ಆಸುಪಾಸು ಕೆಲಸ ಮಾಡುತ್ತಿದ್ದ ಶ್ರಮಜೀವಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿ ಶುಕ್ರವಾರ ಸೌಹಾರ್ದತೆ ಮರೆದಿದ್ದಾರೆ. ಈ ವೇಳೆ ಇಫ್ತಾರಿಗೆ ಆಗಮಿಸಿದ್ದ ಅಥಿತಿಯೊಬ್ಬರು, ‘ಇದು ಹಿಂದೂ ಮುಸ್ಲಿಮರ ಇಫ್ತಾರ್ ಕೂಟವಲ್ಲ, ದ್ರಾವಿಡ ಮಕ್ಕಳ ಇಫ್ತಾರ್ ಕೂಟ’ ಎಂದು ಬಣ್ಣಿಸಿದ್ದಾರೆ.
ಸೌಹಾರ್ದ ಪ್ರಿಯ ನಾಗರಿಕರ ಈ ‘ದ್ರಾವಿಡ ಮಕ್ಕಳ ಸೌಹಾರ್ದ ಇಫ್ತಾರ್ ಕೂಟ’ ಮೈಸೂರು ಬಸ್ ನಿಲ್ದಾಣದ ಮುಂದೆ ಇರುವ ‘ಹೋಟೆಲ್ ಮಹಾರಾಜಾ’ದಲ್ಲಿ ಆಯೋಜಿಸಲಾಗಿತ್ತು. ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿ ಸುತ್ತಮುತ್ತ ಇರುವ ಶ್ರಮಜೀವಿ ಮುಸ್ಲಿಮರು ಈ ಇಪ್ತಾರ್ ಕೂಟದ ಅಥಿತಿಗಳಾಗಿದ್ದರು. ಗ್ಯಾರೇಜ್ಗಳಲ್ಲಿ ಕೆಲಸ ಮಾಡುವವರು, ಪಂಚರ್ ಅಂಗಡಿಗಳಲ್ಲಿ ಇರುವವರು ಹಾಗೂ ಹಣ್ಣಿನ ಅಂಗಡಿಗಳನ್ನು ನಡೆಸುವವರು ಸೇರಿದಂತೆ ಹಲವು ಶ್ರಮ ಜೀವಿ ಮುಸ್ಲಿಮರಿಗೆ ಆಹ್ವಾನ ನೀಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಯೋಜಕರು ಅಥಿಗಳಿಗೆ ಹೂವು ನೀಡಿ ಸ್ವಾಗತಿಸಿದರು. ಈ ವೇಳೆ ಆಯೋಜಕರಲ್ಲೊಬ್ಬರಾಗಿರುವ ಅಂಕಣಕಾರ ಕೆ.ಪಿ. ಸುರೇಶ್, ದೇಶದ ಪರಂಪರೆ, ಸ್ವಾತಂತ್ರ್ಯ ಹೋರಾಟದ ಕಷ್ಟ ಸುಖವನ್ನು ವಿವರಿಸಿದರು. ಸರಳವಾಗಿ ನಾವೆಲ್ಲರೂ ಜೊತೆಯಾಗಿ ಉಣ್ಣಬೇಕಾದ ಊಟವೆಂಬ ಸಾಮಾನ್ಯ ಸಂಗತಿಯೂ ಅಸೀಮ ಸಾಹಸದ ಸಂಗತಿಯಾಗಿರುವುದು ನಮ್ಮ ದುರಂತ ಎಂದು ಬೇಸರ ವ್ಯಕ್ತಪಡಿಸಿ, ಅಥಿತಿಗಳಿಗೆ ಶುಭ ಹಾರೈಸಿದರು.
ಇದನ್ನೂ ಓದಿ: ಸೌಹಾರ್ದ ಕಥನ: ಹಿಂದೂ ಯುವಕರಿಗೆ ಕೇಸರಿ ಶಾಲು ತೊಡಿಸಿದ ಮುಸ್ಲಿಮರು – ಹಣ್ಣು ತಿನ್ನಿಸಿ ಇಫ್ತಾರ್ ಆಚರಿಸಿದ ರಾಮ ಮಾಲಾ ಭಕ್ತರು
ಬಳಿಕ ಮಾತನಾಡಿದ ಮಹೇಶ್ ಅವರು, “ವ್ಯಾವಹಾರಿಕವಾಗಿ ನಾವೆಲ್ಲ ಪರಸ್ಪರ ಸ್ನೇಹದಲ್ಲಿದ್ದರೂ ನಮಗೆ ನೆರೆಮನೆಯ ಊಟ ಹಬ್ಬದ ಬಗ್ಗೆ ಗೊತ್ತಿಲ್ಲ. ಪರಸ್ಪರ ಊಟ, ಹಬ್ಬದ ಬಗ್ಗೆ ಕುತೂಹಲ, ಮೆಚ್ಚುಗೆ ಇದ್ದರಾಯಿತಲ್ಲ, ವ್ಯತ್ಯಾಸವೇ ಮುಖ್ಯವಾದರೆ ಹೇಗೆ? ಬಾಗಿಲು ಸರಿಸಿ ನಾವು ಒಳ ನುಗ್ಗಬೇಕಿದೆ, ಇದು ಅಂಥಾ ಒಂದು ವಿನೀತ ಪ್ರಯತ್ನ” ಎಂದು ಹೇಳಿದರು.
ಅಥಿತಿಗಳಲ್ಲೊಬ್ಬರಾದ ಮೈಸೂರಿನ ಕನ್ನಡ ಪ್ರೇಮಿ, ಮೆಡಿಕಲ್ ಅಂಗಡಿಯ ಮಾಲಿಕ ಮನ್ಸೂರ್ ಅಹ್ಮದ್ ಖಾನ್ ಅವರು ಮಾತನಾಡಿ, “ಇದು ಹಿಂದೂ-ಮುಸ್ಲಿಂ ಭೋಜನ ಕೂಟವಲ್ಲ. ನಾವೆಲ್ಲರೂ ದ್ರಾವಿಡ ಮಕ್ಕಳು, ಹಾಗಾಗಿ ಇದು ದ್ರಾವಿಡ ಮಕ್ಕಳ ಭೋಜನ ಕೂಟ. ಇದು ಹೆಚ್ಚಿದಷ್ಟೂ ನಮ್ಮ ಬಾಂಧವ್ಯ ಹೆಚ್ಚುತ್ತದೆ” ಎಂದರು.
ಕಾರ್ಯಕ್ರಮದಲ್ಲಿ, “ಕಟ್ಟುತ್ತೇವೆ ನಾವು, ಕಟ್ಟುತ್ತೇವೆ ನಾವು, ಕಟ್ಟೇ ಕಟ್ಟುತ್ತೇವಾ. ಒಡೆದ ಮನಸುಗಳ, ಕಂಡ ಕನಸುಗಳು ಮತ್ತೆ ಕಟ್ಟುತ್ತೇವೆ” ಹಾಡನ್ನು ಹಾಡಲಾಯಿತು. ಊಟವಾದ ಬಳಿಕ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯ ಭಾವಚಿತ್ರಕ್ಕೆ ಹೂ ಹಾಕಿ ಗೌರವಿಸಲಾಯಿತು.
ಇದನ್ನೂ ಓದಿ: ಬಿಹಾರ: ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಿಎಂ ನಿತೀಶ್ ಕುಮಾರ್ ಭಾಗಿ!; ಮತ್ತೊಮ್ಮೆ ‘ಮಹಾಘಟಬಂಧನ್’?
ಪ್ರಭು, ಗಣೇಶ, ಬೆಟ್ಟೇಗೌಡ, ಚಂದ್ರಶೇಖರ ಐಜೂರ್, ಉಮೇಶ್, ಕುಮಾರ್, ಲೆಕ್ಕ ಪರಿಶೋಧಕ ಆರಾಧ್ಯ ಮತ್ತು ಗೆಳೆಯರು ಸೌಹಾರ್ದ ಇಫ್ತಾರ್ ಕೂಟದ ಆಯೋಜನೆಗೆ ಕೈಜೋಡಿಸಿದ್ದರು.