BBMP ವತಿಯಿಂದ ಅಕ್ರಮ ಮನೆ ಕೆಡವುದನ್ನು ವಿರೋಧಿಸಿ ಬುಲ್ಡೋಜರ್ ಎದುರು ದಂಪತಿಯೊಂದು ಪೆಟ್ರೋಲ್ ಸುರಿದುಕೊಂಡು ಸಾವಿಗೆ ಯತ್ನಿಸಿದಾಗ ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಬೆಂಗಳೂರಿನ ಕೆ.ಆರ್ ಪುರಂ ಬಳಿಯ ಎಸ್.ಆರ್ ಲೇಔಟ್ನಲ್ಲಿ ಬಿಬಿಎಂಪಿ ತೆರವು ಕಾರ್ಯಾಚರಣೆ ವಿರೋಧಿಸಿ ಸೋನು ಸೆನ್ ಮತ್ತು ಸುನಿಲ್ ಸಿಂಗ್ ಎಂಬ ದಂಪತಿ ಪ್ರತಿಭಟನೆ ನಡೆಸಿದ್ದಾರೆ. ಬುಲ್ಡೋಜರ್ ತಂದಾಗ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನೆರೆಹೊರೆಯವರು ಬಕೆಟ್ನಲ್ಲಿ ನೀರು ಸುರಿದರೆ ಅಗ್ನಿಶಾಮಕ ದಳ ನೀರು ಹಾರಿಸಿ ಇಬ್ಬರನ್ನು ರಕ್ಷಿಸಿದೆ.
ಈ ನಾಟಕೀಯ ಸಂದರ್ಭದಲ್ಲಿ ಸ್ಥಳೀಯರು ಮತ್ತು ಪತ್ರಕರ್ತರು ಸಾಕ್ಷಿಯಾಗಿದ್ದಾರೆ. ತಮ್ಮ ಮನೆಯ ಮುಂದಿನ ಕಾಂಪೌಂಡ್ನಲ್ಲಿ ನಿಂತು ದಂಪತಿ ಆತ್ಮಹತ್ಯೆ ಬೆದರಿಕೆ ಹಾಕಿದಾಗ ನೆರೆಹೊರೆಯವರು ಬೇಡ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಬಿಬಿಎಂಪಿ ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂತಲೂ ವಿನಂತಿಸಿದ್ದಾರೆ.
ನಮ್ಮ ಮನೆ ಅಕ್ರಮ ಕಟ್ಟಡವಲ್ಲ. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಬಿಬಿಎಂಪಿ ತಮ್ಮನ್ನು ನಿರಾಶ್ರಿತರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದಂಪತಿ ಆರೋಪಿಸಿದೆ. ಆದರೆ ಮಳೆ ನೀರಿನ ಚರಂಡಿಯ ಮೇಲೆ ಭಾಗಶಃ ನಿರ್ಮಿಸಲಾದ ಪ್ರದೇಶದಲ್ಲಿನ ಆರು ಮನೆಗಳಲ್ಲಿ ಈ ದಂಪತಿಗಳ ಮನೆಯೂ ಒಂದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ವಾಮಾಚಾರಕ್ಕೆ ಮಹಿಳೆಯರಿಬ್ಬರ ನರಬಲಿ: ಅಘಾತ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್