ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಷನ್ಗೆಂದು ತೆರಳಿದ್ದ 6ನೇ ತರಗತಿ ವಿದ್ಯಾರ್ಥಿನಿಯೊಬ್ಬರು ನಿರ್ಮಾಣ ಹಂತದ ಮನೆಯ ಮುಂಭಾಗದಲ್ಲಿದ್ದ ನೀರಿನ ಸಂಪ್ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆಗೆ ತಿರುವು ಲಭಿಸಿದ್ದು, ಟ್ಯೂಷನ್ ನೀಡುತ್ತಿದ್ದ ಶಿಕ್ಷಕ ಕಾಂತರಾಜು ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ‘ನುಡಿ ಕರ್ನಾಟಕ’ ಸುದ್ದಿ ಪೋರ್ಟಲ್ ಬುಧವಾರ ವರದಿ ಮಾಡಿದೆ.
ಆರೋಪಿ ಕಾಂತರಾಜು ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದವನಾಗಿದ್ದು, ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ. ಬಾಲಕಿಯನ್ನು ಆರೋಪಿಯು ಚಾಕೊಲೇಟ್ ನೀಡುವುದಾಗಿ ಪುಸಲಾಯಿಸಿ ಕರೆದೊಯ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ ಕಾಂತರಾಜು ನಿನ್ನೆ ಮಂಗಳವಾರ ಬಾಲಕಿಗೆ ಕರೆ ಮಾಡಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಟ್ಯೂಷನ್ ಗೆ ಬರುವಂತೆ ತಿಳಿಸಿದ್ದ. ಬಾಲಕಿ ಟ್ಯೂಷನ್ ಗೆ ಬಂದ ಸಂದರ್ಭದಲ್ಲಿ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಅಲ್ಲಿದ್ದ ಗಲ್ಲಿಯಲ್ಲಿ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಶವವನ್ನು ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿಗೆ ಹಾಕಿದ್ದ ಎನ್ನಲಾಗಿದೆ.
ಇದನ್ನೂ ಓದಿ: ವಾಮಾಚಾರಕ್ಕೆ ಮಹಿಳೆಯರಿಬ್ಬರ ನರಬಲಿ: ಅಘಾತ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್
ಬಾಲಕಿಯನ್ನು ಹುಡುಕಾಟ ನಡೆಸಿ ನಾಟಕವಾಡಿದ ಆರೋಪಿ
ತಮ್ಮ ಮಗಳು ಬೆಳಿಗ್ಗೆ 11 ಗಂಟೆಗೆ ಟ್ಯೂಷನ್ಗೆ ಎಂದು ಮನೆಯಿಂದ ಹೋದವಳು, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಯಾದ ಪೋಷಕರು ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದರೂ ಬಾಲಕಿ ಪತ್ತೆಯಾಗಿರಲಿಲ್ಲ.
ಟ್ಯೂಷನ್ ಸೆಂಟರ್ ನೋಡಿಕೊಂಡಿದ್ದ ಕಾಂತರಾಜು ಕೂಡ ನನಗೆ ಬಾಲಕಿ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿ, ಆತನೂ ಬಾಲಕಿಯ ಪಾಲಕರೊಂದಿಗೆ ಹುಡುಕಾಟ ನಡೆಸಿದ್ದ. ಕೊನೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ನೀರಿನ ಸಂಪ್ನಲ್ಲಿ ಬಿದ್ದಿರುವ ಮಾಹಿತಿ ಮೇರೆಗೆ ಪೋಲಿಸರು ನೀರಿನ ಸಂಪ್ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿತ್ತು.
ಈ ವೇಳೆಗಾಗಲೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು. ಸ್ಥಳಕ್ಕೆ ಡಿವೈಎಸ್ ಪಿ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಶ್ವಾನದಳದೊಂದಿಗೆ ಪರಿಶೀಲನೆ ಕೂಡ ನಡೆಸಿದ್ದರು.
ಇದನ್ನೂ ಓದಿ: ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಮುಂದಾದ ದಂಪತಿ ರಕ್ಷಿಸಿದ ಅಗ್ನಿಶಾಮಕ ದಳ
ಮಧ್ಯರಾತ್ರಿ ಸೆರೆಯಾದ ಆರೋಪಿ
ಎಸ್ಐಗಳಾದ ಶೇಷಾದ್ರಿ ಕುಮಾರ್, ಶ್ರೀಧರ್, ಅಶೋಕ್ ಅವರು ಟ್ಯೂಷನ್ ಸೆಂಟರ್ ನೋಡಿಕೊಳ್ಳುತ್ತಿದ್ದ ಕಾಂತರಾಜು ಹೇಳಿಕೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅವನನ್ನು ಕರೆತಂದು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆತನೇ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ, ನೀರಿನ ಸಂಪಿಗೆ ಹಾಕಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.