ಕಳೆದ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ ‘ರ್ಯಾಪಿಡ್ ರೋಡ್’ ಹಲವೆಡೆ ಬಿರುಕು ಬಿಟ್ಟಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ಬಿರುಕು ಶುಕ್ರವಾರ ಕಾಣಿಸಿಕೊಂಡಿದೆ ಎಂದು ಅದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇಂದಿರಾನಗರದ ಹಳೆಯ ಮದ್ರಾಸ್ ರಸ್ತೆಯ 375 ಮೀಟರ್ ಉದ್ದ ‘ರ್ಯಾಪಿಡ್ ರೋಡ್ ಕಾಮಗಾರಿ’ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದ್ದು, ಇದು 40 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಉದ್ಘಾಟನೆಯ ಸಮಯದಲ್ಲಿ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಾಯೋಗಿಕ ಆಧಾರದ ಮೇಲೆ ಕೈಗೆತ್ತಿಕೊಂಡ ‘ರ್ಯಾಪಿಡ್ ರೋಡ್ ಯೋಜನೆ’ಯು ಐದು ಅಡಿ ಅಗಲ, ಎರಡು ಅಡಿ ಉದ್ದ ಮತ್ತು ಏಳು ಇಂಚು ದಪ್ಪದ ಕಾಂಕ್ರೀಟ್ ಚಪ್ಪಡಿಗಳನ್ನು ರಚಿಸಿ ಮಾಡಲಾಗುತ್ತದೆ. ಇದನ್ನು ವೈಟ್-ಟಾಪ್ ಮಾಡುವ ವಿಧಾನಕ್ಕೆ ಪರ್ಯಾಯವಾಗಿ ಬಳಸಲಾಗುತ್ತದೆ.
‘ರಾಪಿಡ್ ರೋಡ್’ ತಂತ್ರಜ್ಞಾನದ ವೆಚ್ಚ ವೈಟ್ ಟಾಪಿಂಗ್ಗಿಂತ 20-25% ರಷ್ಟು ಹೆಚ್ಚಾಗಿದೆ. ಕಾರ್ಖಾನೆಯಿಂದ ಕಾಮಗಾರಿ ನಡೆಯುವಲ್ಲಿ ಚಪ್ಪಡಿಗಳ ಸಾಗಣೆ ಮಾಡಬೇಕಿರುವುದರಿಂದ ಸಾಗಣೆ ವೆಚ್ಚಕೂಡಾ ಇದರಲ್ಲಿ ಸೇರುತ್ತದೆ. ವೈಟ್ ಟಾಪ್ ಒಂದು ಕಿ.ಮೀ ರಸ್ತೆಗೆ 7.5 ಕೋಟಿ ವೆಚ್ಚವಾದರೆ, ಹೊಸ ವಿಧಾನವಾದ ಕ್ಷಿಪ್ರ ರಸ್ತೆ ವಿಧಾನದಲ್ಲಿ ಇದೇ ಉದ್ದಕ್ಕೆ 9.3 ಕೋಟಿ ವೆಚ್ಚವಾಗುತ್ತದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿರುಕುಗಳು ಹೆಚ್ಚಾಗುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
“ಇದು ಖಾಸಗಿ ಪಾಲುದಾರರಿಂದ ಕೈಗೊಂಡ ಪ್ರಾಯೋಗಿಕ ಯೋಜನೆಯಾಗಿದ್ದು, ಬಿಬಿಎಂಪಿ ಇದುವರೆಗೆ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿಲ್ಲ. ನಾವು ಈ ವಿಷಯವನ್ನು ಪರಿಶೀಲಿಸುತ್ತೇವೆ” ಎಂದು ಗಿರಿನಾಥ್ ಹೇಳಿದ್ದಾರೆ.
ವಾಹನಗಳ ಓಡಾಟದ ಒತ್ತಡದಿಂದ ಬಿರುಕು ಉಂಟಾಗಿದೆಯೇ ಅಥವಾ ಇನ್ನಾವುದೇ ಕಾರಣಕ್ಕಾಗಿ ಬಿರುಕು ಬಿಟ್ಟಿದೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.