14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದ್ದು, ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪಾಲಾರ್ ಹಾಗೂ ಗಾಂಧಿ ಮತ್ತು ನೋಟು ಸಿನಿಮಾಗಳನ್ನು ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕನ್ನಡ ವಿಭಾಗದಲ್ಲಿ 19.20.21, ಗಂಧದಗುಡಿ, ಗುರುಶಿಷ್ಯರು, ಹದಿನೇಳೆಂಟು, ಕನಕ ಮಾರ್ಗ, ಕೊರಮ್ಮ (ತುಳು), ಕುಬುಸ, ಮೇಡ್ ಇನ್ ಬೆಂಗಳೂರು, ನಲ್ಕೆ, ನಾನು ಕುಸುಮ, ಆರ್ಕೆಸ್ಟ್ರಾ ಮೈಸೂರು, ಫೋಟೋ, ಸ್ವಚ್ಚ ಕರ್ನಾಟಕ ಮತ್ತು ವಿಜಯಾನಂದ ಸಿನಿಮಾಗಳು ಈ ಬಾರಿಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.
“ಕನ್ನಡದಲ್ಲೇ ಮೊದಲ ಬಾರಿ ನೇರ ದಲಿತರ ಕಥೆಯ ಪಾಲಾರ್ ಸಿನಿಮಾ ಬಂದಿದೆ. ಸಿನಿಮಾ ನೋಡಿದ ಪ್ರತಿ ಒಬ್ಬರಿಗೂ ಇಷ್ಟ ಆಗಿತ್ತು ಮತ್ತು ಎಲ್ಲಾ ಕಡೆ ಪಾಸಿಟಿವ್ ರಿವ್ಯೂ ಬಂದಿತ್ತು. ಮೀಡಿಯಾ ಮತ್ತು ಕ್ರಿಟಿಕ್ಸ್ ಸಹ ಪಾಲಾರ್ ಸಿನಿಮಾ ಚೆನ್ನಾಗಿದೆ ಅವಾರ್ಡ್ ಬರುತ್ತೆ ಅಂತಿದ್ರು..ಆದರೆ ಇಲ್ಲಿರುವ ಕರ್ನಾಟಕ ಸರ್ಕಾರದ ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ಅದರ ಸದಸ್ಯರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಲಿತರ ಬಗ್ಗೆ ಕಥೆ ಇರುವ, ದಲಿತರೇ ಸ್ವಂತವಾಗಿ ಸಿನಿಮಾ ನಿರ್ದೇಶನ ಮಾಡಿರುವ, ದಲಿತರೇ ನಿರ್ಮಾಣ ಮಾಡಿರುವ, ದಲಿತರೇ ಹೆಚ್ಚಾಗಿ ನಟಿಸಿರುವ ಪಾಲಾರ್ ಸಿನಿಮಾ ತಿರಸ್ಕರಿಸುವ ಮೂಲಕ ನಮ್ಮ ಪಾಲಾರ್ ಸಿನಿಮಾಗೆ ಇಲ್ಲಿಯೂ ಅಸ್ಪೃಶ್ಯತೆ ಆಚರಣೆಗೆ ಮುಂದಾಗಿದ್ದಾರೆ” ಎಂದು ಪಾಲಾರ್ ಚಿತ್ರದ ನಿರ್ದೇಶಕ ಜೀವಾ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸೆಲೆಕ್ಟ್ ಆದ ಸಿನಿಮಾಗಳಲ್ಲಿ ಎಷ್ಟು ಸಿನಿಮಾಗಳ ಹೆಸರು ನಿಮಗೆ ಗೊತ್ತು? Ok ಬಿಡಿ ನಾವು ಇನ್ನೂ ಮುಂದೆ ಕಮಲ, ಕರು, ಹಸು, ದೇವರ ಸಿನಿಮಾ ಮಾಡಿ ಅಂತ ಹೇಳ್ತೀವಿ. ಬಾಬಾ ಸಾಹೇಬರ ಫೋಟೋ ಸಿನಿಮಾಗಳಲ್ಲಿ ತೋರಿಸಿದರೆ ನಿಮಗೆ ಉರಿ ಅಂತ ಗೊತ್ತು. ಇನ್ನು ಮುಂದೆ ದಲಿತರು ಬೇರೆ ಅವರ ಸಿನಿಮಾಗಳು ನೋಡುವುದನ್ನು ನಿಲ್ಲಿಸುತ್ತೇವೆ. ದಲಿತರ ಬಗ್ಗೆ ಅದೆಷ್ಟೋ ವರ್ಷಗಳ ನಂತರ ಬಂದ ಪಾಲಾರ್ ಸಿನಿಮಾ ಸೆಲೆಕ್ಟ್ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ. ಈ ಸರ್ಕಾರಕ್ಕೆ ಕಾಶ್ಮೀರಿ ಫೈಲ್ಸ್ ಬೇಕು, ನಾಯಿ ಬಗ್ಗೆ ಕಾಲ್ಪನಿಕ ಕಥೆ ಚಾರ್ಲಿ ಬೇಕು. ಅದಕ್ಕೆಲ್ಲಾ ಟಾಕ್ಸ್ ಫ್ರೀ ಬೇರೆ ಮಾಡ್ತಾರೆ. ಜಾತಿ ಭೇದ ಭಾವ ಮಾಡೋದು ಈಗ ನೀವೇ ಅಂತ ಗೊತ್ತಾಯ್ತು ಬಿಡಿ” ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
‘ಗಾಂಧಿ ಮತ್ತು ನೋಟು’ ಇದು ಗಾಂಧಿಯ ಆದರ್ಶಗಳ ಬಗ್ಗೆ ಇರುವ ಚಿತ್ರ. ಮೊನ್ನೆ ಮಕ್ಕಳ ಚಲನಚಿತ್ರೋತ್ಸವದಲ್ಲಿ ನಾಲ್ಕು ಅವಾರ್ಡ್ಗಳನ್ನು ತೆಗೆದುಕೊಂಡ ಚಿತ್ರ.. ಆದರೆ ಈ #BIffs ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಭಾಗ್ಯವಿಲ್ಲ.. ಕಾರಣವೆಂದರೆ ಅಕಾಡಮಿಯ ಅಧ್ಯಕ್ಷರು, ತಂಡ ಮತ್ತು ಮಹಾನ್ ಜ್ಯೂರಿಗಳು ಹಣದ ಬೇಡಿಕೆಯ ಸದ್ದು ನನ್ನ ಕಿವಿಗೂ ಬಿದ್ದಿದೆ.. ಯಾಕ್ ಕೋಡಬೇಕು? ಎಂದು ಸಿನಿಮಾದ ನಿರ್ದೇಶಕರಾದ ಯೋಗಿ ದಾವಣಗೆರೆಯವರು ಕಿಡಿಕಾರಿದ್ದಾರೆ.
ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ್ ಕಶ್ಯಪ್ರವರನ್ನು ಪ್ರಶ್ನಿಸಿದಾಗ “ಒಂದು ಸಿನಿಮಾ ಆಯ್ಕೆಯಾಗಬೇಕಾದರೆ ಉಳಿದ ಸಿನಿಮಾಗಳ ಜೊತೆ ಸ್ಪರ್ಧಿಸಿ ಗೆಲ್ಲಬೇಕು. ಸ್ಪರ್ಧೆಯಲ್ಲಿ ಗೆಲ್ಲದೆ ನಮ್ಮ ಸಿನಿಮಾವನ್ನು ಆಯ್ಕೆ ಮಾಡಿಲ್ಲ ಎಂದು ಕೇಳುವುದು ಯಾವ ನ್ಯಾಯ? ಕಲೆಗೆ ಮೀಸಲಾತಿ ಕೊಡಿ ಎಂದು ಕೇಳುವುದು ಸರಿಯಲ್ಲ. ಜ್ಯೂರಿಗಳಿಗೆ ನಾವು ಮರ್ಯಾದೆ ಕೊಡಬೇಕು. ಅವರ ತೀರ್ಮಾನವೆ ಅಂತಿಮ ತೀರ್ಮಾನವಾದ್ದರಿಂದ, ಜ್ಯೂರಿ ಅಧ್ಯಕ್ಷರು ಸೆಲೆಕ್ಟ್ ಮಾಡಿರುವುದಕ್ಕೆ ನಾವೆಲ್ಲರೂ ತೆಲೆಬಾಗಿ ಸ್ವೀಕರಿಸಬೇಕು” ಎಂದರು.
ಕೆಲ ಕಳಪೆ ಸಿನಿಮಾಗಳನ್ನು ಸಹ ಸೆಲೆಕ್ಟ್ ಮಾಡಲಾಗಿದೆ. ಅದಕ್ಕಿಂತಲೂ ಉತ್ತಮ ಕನ್ನಡ ಚಿತ್ರಗಳು ಇದ್ದವಲ್ಲ ಎಂಬ ಪ್ರಶ್ನೆಗೆ “ನೀವಾಗಲಿ, ಪ್ರೇಕ್ಷಕರಾಗಲಿ ಇಂತಹ ಸಿನಿಮಾ ಇರಲಿ, ಬಿಡಲಿ ಎಂದು ಹೇಳಲು ಬರುವುದಿಲ್ಲ. ಜೇಮ್ಸ್ ಸಿನಿಮಾ ಬರಬೇಕೆಂದು ನಾನು ಬಯಸಿದ್ದೆ. ಆದರೆ ಬಂದಿಲ್ಲ ಏನು ಮಾಡುವುದು? ಹೊರಗಿನವರ ಮಾತಿಗೆ ನಾವು ಕಿವಿಗೊಡುವುದಿಲ್ಲ, ಜ್ಯೂರಿ ಅಧ್ಯಕ್ಷರಾದ ಎಂ.ಎಸ್ ರಮೇಶ್ ರವರೇ ತಮ್ಮ ವಿಟೋ ಪವರ್ ಬಳಸಿ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಮತ್ತು ನನಗೂ ಅದಕ್ಕೂ ಸಂಬಂಧವಿಲ್ಲ” ಎಂದರು.
ಬೆಂಗಳೂರು ಅಂತರಾಷ್ಟ್ರೀಯ ಚಲನಚತ್ರೋತ್ಸವಗಳಿಗೆ ಪ್ರತಿ ಬಾರಿಯೂ ಹಾಜರಾಗುವ ಸಿನಿಮಾಸಕ್ತ ವಿ.ಎಲ್ ಬಾಲುರವರು ನಾನುಗೌರಿಯೊಂದಿಗೆ ಮಾತನಾಡಿ, “ಪಾಲಾರ್ ಸಿನಿಮಾ ಇರಲಿ, ಮತ್ತೊಂದು ಸಿನಿಮಾ ಇರಲಿ- ಸಿನಿಮಾದ ಆಶಯದ ಮೇಲೆ ಜ್ಯೂರಿಗಳು ಸಿನಿಮಾಗಳನ್ನು ಆಯ್ಕೆ ಮಾಡಬೇಕು. ಅದು ಬಿಟ್ಟು ಮೆರಿಟ್ ಬಗ್ಗೆ ಮಾತನಾಡುವುದು ಎಲ್ಲಾ ಬೋಗಸ್ ಅಂತ ಸಿನಿಮಾ ಮಾತ್ರವಲ್ಲದೆ ಎಲ್ಲಾ ರಂಗದಲ್ಲಿಯೂ ಏನಾಗುತ್ತಿದೆ ಅಂತ ಎಲ್ಲರಿಗೂ ತಿಳಿದಿದೆ” ಎಂದರು.
Biffes ವಿಚಾರದಲ್ಲಿ ಕನ್ನಡ ಮತ್ತು ಇತರ ಸಿನಿಮಾಗಳ ಆಯ್ಕೆಯ ಮಾನದಂಡಗಳು ಏನು, ಜ್ಯೂರಿಗಳನ್ನು ಯಾರು ಆಯ್ಕೆ ಮಾಡುತ್ತಾರೆ? ಅದರ ಪ್ರಕ್ರಿಯೆಯೇನು ಎಂಬುದರ ಕುರಿತು ಎಲ್ಲಿಯೂ ಸರಿಯಾದ ಮಾಹಿತಿ ಇಲ್ಲ. ಈ ಕುರಿತು Biffes ವೆಬ್ಸೈಟ್ನಲ್ಲಿ ಪಾರದರ್ಶಕವಾಗಿ ಪ್ರಕಟಿಸಿದರೆ ಸಾಕಷ್ಟು ವಿವಾದಗಳನ್ನು ತಪ್ಪಿಸಬಹುದು. ಇಂತಹ ಕೆಲಸವನ್ನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮಾಡಬೇಕು ಎಂದು ಒತ್ತಾಯಿಸಿದರು.
ನಾವು Biffesಗೆ ಬರುವುದು ಪ್ರಪಂಚದ ಅಪರೂಪದ ಬೇರೆ ಬೇರೆ ದೇಶದ ಜನರ – ಸರ್ಕಾರದ ಬಗ್ಗೆ ಹೆಚ್ಚು ಹೇಳುವ ಸಿನಿಮಾಗಳನ್ನು ನೋಡುವುದಕ್ಕಾಗಿ. ಅಂತಹ ಸಿನಿಮಾಗಳು ಆಯ್ಕೆ ಆಗಬೇಕು. ಆದರೆ ಈ ಬಾರಿಯ ಸಿನಿಮಾದ ಪಟ್ಟಿ ನೋಡಿದರೆ ಕೆಲವೊಂದು ಸಿನಿಮಾಗಳನ್ನು ಹೊರತುಪಡಿಸಿ ನಿರಾಶೆ ಅನಿಸುತ್ತದೆ. ಆದರೂ Biffes ನೋಡಿದಮೆಲೆ ಸಿಗುವ ಅನುಭವಕ್ಕಾಗಿ ಕಾಯುತ್ತಿರುವ ಸಿನಿ ಅಭಿಮಾನಿಗಳಲ್ಲಿ ನಾನು ಒಬ್ಬ. ನನ್ನಂಥಹ ಬಹಳಷ್ಟು ಸಿನಿಪ್ರೇಮಿಗಳ ಆಶಯವನ್ನು ಅಧ್ಯಕ್ಷರು ಅರ್ಥಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ‘ಬಿಫೆಸ್’ನಲ್ಲಿ ಸಾವರ್ಕರ್ ಪ್ರತ್ಯಕ್ಷ; ಮಾದರಿ ವ್ಯಕ್ತಿಗಳ ಪೈಕಿ ‘ಅಂಬೇಡ್ಕರ್’ ನಾಪತ್ತೆ!