ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ದಾಳಿ ಪ್ರಕರಣ ವರದಿಯಾಗಿದೆ. ಮದುವೆಯಾಗಲು ನಿರಾಕರಿಸಿದ ಕಾರಣ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 32 ವರ್ಷದ ವಿಚ್ಛೇದಿತ ಮಹಿಳೆ ಮೇಲೆ 36 ವರ್ಷದ ವ್ಯಕ್ತಿ ಆಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.
36 ವರ್ಷದ ಆರೋಪಿ ಅಹ್ಮದ್ ಎಂಬಾತ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಬಳಿಯ ಜನನಿಬಿಡ ಸಾರಕ್ಕಿ ಜಂಕ್ಷನ್ನಲ್ಲಿ ಕೃತ್ಯ ಎಸಗಿದ್ದಾನೆ. ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು ನಿವಾಸಿ ಅಹ್ಮದ್ ಮತ್ತು ಇಲ್ಯಾಸ್ ನಗರದ ನಿವಾಸಿಯಾಗಿರುವ ಮಹಿಳೆ ಒಂದೇ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮೂರು ವರ್ಷಗಳಿಂದ ಪರಸ್ಪರ ಪರಿಚಯವಿದ್ದರು. ಮಹಿಳೆ ವಿಚ್ಛೇದಿತರಾಗಿದ್ದು, ಮೂರು ಮಕ್ಕಳನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆ್ಯಸಿಡ್ ದಾಳಿ: ಆರೋಪಿ ಬಂಧನಕ್ಕೆ ಆಗ್ರಹಿಸಿ ಎಎಪಿ ಪ್ರತಿಭಟನೆ
ಅಹ್ಮದ್ ಮತ್ತು ಮಹಿಳೆ ಒಂದೂವರೆ ವರ್ಷಗಳಿಂದ ಸಂಬಂಧ ಹೊಂದಿದ್ದರು. ಅಹ್ಮದ್ಗೂ ಮದುವೆಯಾಗಿ ಮಕ್ಕಳಿದ್ದಾರೆ. ಈತ ಎರಡನೇ ಮದುವೆಯಾಗಲು ಬಯಸಿ, ಮಹಿಳೆಯನ್ನು ಒತ್ತಾಯಿಸಿದ್ದಾರೆ. ಆಕೆ ಮದುವೆಗೆ ನಿರಾಕರಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಶುಕ್ರವಾರ ಬೆಳಿಗ್ಗೆ, ಇಬ್ಬರು ಇದೇ ವಿಷಯದ ಬಗ್ಗೆ ಜಗಳವಾಡಿದ್ದರು. ಆಕೆ ತನ್ನ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದಾಗ ಮಹಿಳೆಯ ಮುಖದ ಮೇಲೆ ಆಸಿಡ್ ಎಸೆದಿದ್ದಾನೆ. ಮಹಿಳೆ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಆಕೆಯ ಬಲಗಣ್ಣಿಗೆ ಗಾಯಗಳಾಗಿವೆ. ದಾರಿಹೋಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಕಣ್ಣುಗಳನ್ನು ಸ್ವಚ್ಛಗೊಳಿಸಲಾಗಿದ್ದು, ಆಕೆಯ ಕಣ್ಣಿನ ಮೇಲೆ ಯಾವುದೇ ಅಡ್ಡಪರಿಣಾಮ ಬೀರಲಿಲ್ಲ ಎಂದು ತಿಳಿದುಬಂದಿದೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು” ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಹರೀಶ್ ಪಾಂಡೆ ಹೇಳಿದ್ದಾರೆ.
ನಗರದಲ್ಲಿ ಏಪ್ರಿಲ್ 28 ರಂದು ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ 24 ವರ್ಷದ ಯುವತಿ ಮೇಲೆ ನಾಗೇಶ್ ಬಾಬು ಎಂಬಾತ ಆಸಿಡ್ ದಾಳಿ ನಡೆಸಿದ್ದ.
ಇದನ್ನೂ ಓದಿ: ಭಿಕ್ಷೆಗೆ ಬಂದ ಫಕೀರರ ಮೇಲೆ ಹಲ್ಲೆ ನಡೆಸಿ ‘ಜೈಶ್ರೀರಾಮ್’ ಹೇಳಿಸಿದ ದುಷ್ಕರ್ಮಿಗಳು