ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಜಲಾವೃತವಾಗಿದೆ. ಇದರಿಂದ ರಾಜ್ಯದ ರಾಮನಗರ ಸಮೀಪ ಸರಣಿ ಅಪಘಾತ ಸಂಭವಿಸಿ, ಟ್ರಾಫಿಕ್ ಜಾಮ್ಗೆ ಕಾರಣವಾಯಿತು.
ರಾಮನಗರ ಜಿಲ್ಲೆ ಬಳಿ 8,480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ ಮಳೆಯಿಂದಾಗಿ ಜಲಾವೃತವಾಗಿದೆ. ಹೆದ್ದಾರಿಯಲ್ಲಿನ ಕೆಳಸೇತುವೆಯಲ್ಲಿ ನೀರು ನಿಂತಿದ್ದು, ಬಂಪರ್-ಟು-ಬಂಪರ್ ಸರಣಿ ಅಪಘಾತಗಳಿಗೆ ಕಾರಣವಾಯಿತು. ಇದರಿಂದಾಗಿ ವಾಹನಗಳು ನಿಧಾನವಾಗಿ ಚಲಿಸಿದ್ದರಿಂದ ಬಹಳ ಸಮಯದವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು.
ಕಳೆದ ವರ್ಷ ಕರ್ನಾಟಕದಲ್ಲಿ ಹಿಂದೆಂದೂ ಕಂಡಿರದ ಮಳೆ ಸುರಿದಾಗಲೂ ಇದೇ ರೀತಿ ಕೆಳಸೇತುವೆಯು ಜಲಾವೃತವಾಗಿತ್ತು.
”ತಮ್ಮ ವಾಹನಗಳಿಗೆ ಹಾನಿ ಮಾಡುವುದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್.ಬೊಮ್ಮಾಯಿ ಮತ್ತು ಪ್ರಧಾನಿ ಮೋದಿ ತರಾತುರಿಯಲ್ಲಿ ಈ ಹೆದ್ದಾರಿ ಉದ್ಘಾಟನೆಗೆ ಮಾಡಿದ್ದಾರೆಯೇ?” ಎಂದು ಅಲ್ಲಿ ಪರದಾಡಿದ ಕೆಲ ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರಯಾಣಿಕ ವಿಕಾಸ್ ಎನ್ನುವವರು ಎನ್ಡಿಟಿವಿ ಜೊತೆ ಮಾತನಾಡಿ, ”ನನ್ನ ಮಾರುತಿ ಸ್ವಿಫ್ಟ್ ಕಾರು ಜಲಾವೃತಗೊಂಡ ಕೆಳಸೇತುವೆಯಲ್ಲಿ ಅರ್ಧ ಮುಳುಗಿ ಅಲ್ಲಿಯೇ ನಿಂತುಬಿಟ್ಟಿತ್ತು. ಹಿಂದಿನಿಂದ ಬಂದ ಲಾರಿ ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ, ಇದಕ್ಕೆ ಯಾರು ಹೊಣೆ? ನನ್ನ ಕಾರನ್ನು ರಿಪೇರಿ ಮಾಡುವಂತೆ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತಿದ್ದೇನೆ ಎಂದರು.
”ಪ್ರಧಾನಿ ಮೋದಿ ಹೆದ್ದಾರಿಯನ್ನು ಉದ್ಘಾಟಿಸಿದರು, ಈ ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆಯೇ ಎಂದು ಅವರು ತಮ್ಮ ರಸ್ತೆ ಮತ್ತು ಸಾರಿಗೆ ಸಚಿವಾಲಯದಿಂದ ಪರಿಶೀಲಿಸಿದ್ದೀರಾ? ಅವರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಾವು ತೊಂದರೆ ಅನುಭವಿಸಬೇಕೇ? ಅವರು ಹೆಚ್ಚಿನ ಟೋಲ್ ಶುಲ್ಕವನ್ನು ವಿಧಿಸುತ್ತಾರೆ, ಆದರೆ ರಸ್ತೆ ಮಾತ್ರ ಈ ರೀತಿಯಲ್ಲಿದೆ. ನಾವು ಟೋಲ್ ಶುಲ್ಕ್ ಕಟ್ಟಿದರೂ ಏನು ಪ್ರಯೋಜನ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಂಪರ್ ಟು ಬಂಪರ್ ಅಪಘಾತಗಳಲ್ಲಿ ತಮ್ಮ ವಾಹನವೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದ ಮತ್ತೊಬ್ಬ ಪ್ರಯಾಣಿಕ ನಾಗರಾಜು, ”ಅಪಘಾತಗಳಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಬಂದಿದ್ದರೇ 10 ನಿಮಿಷದಲ್ಲಿ ಈ ಜಲಾವೃತವನ್ನು ರಾಜ್ಯ ಸರ್ಕಾರವು ತೆರವುಗೊಳಿಸುತ್ತಿತ್ತು” ಎಂದು ಅಸಮಾಧಾನ ಹೊರಹಾಕಿದರು.
Light rainfall which happened overnight on #BengaluruMysuruExpressway has resulted in flooding near Ramanagara on Saturday (18-3-23).
The expressway was inaugurated last week by PM Modi
Few days back there were reports of bad roads on the newly built expressway. pic.twitter.com/eYJ7B5Wu7l
— Kamran (@CitizenKamran) March 18, 2023
“ಕೆಳಸೇತುವೆಯಲ್ಲಿ ನೀರು ತುಂಬಲು ಪ್ರಾರಂಭಿಸಿದ ಕೆಲವೇ ಸಮಯದಲ್ಲಿ ಹಲವಾರು ಸರಣಿ ಅಪಘಾತಗಳು ಸಂಭವಿಸಿದ ಬಗ್ಗೆ ವರದಿಯಾದವು. ಅದರಲ್ಲಿ ಮೊದಲು ನನ್ನದು… ಮತ್ತು ನಂತರ ಏಳೆಂಟು ವಾಹನಗಳನ್ನು ಒಳಗೊಂಡ ಸರಣಿ ಅಪಘಾತಗಳು ಸಂಭವಿಸಿದವು” ಎಂದು ತಿಳಿಸಿದರು.
”ರಸ್ತೆ ಮೇಲಿನ ನೀರು ಹೊರ ಹೋಗಲು ಸ್ಥಳವಿಲ್ಲ. ಒಂದುವೇಳೆ ಪ್ರಧಾನಿ ಆಗಮನದ ಸುದ್ದಿ ಬಂದಿದ್ದರೆ, ಅವರು (ಬೊಮ್ಮಾಯಿ) 10 ನಿಮಿಷಗಳಲ್ಲಿ ಈ ಜಲಾವೃತವನ್ನು ತೆರವುಗೊಳಿಸುತ್ತಾರೆ. ನಾವು ಸಾಮಾನ್ಯ ಜನರು, ನಮ್ಮ ಕಷ್ಟ ಕೇಳುವವರು ಯಾರು? ಈ ತೊಂದರೆಗಳಿಗೆ ಯಾರು ಹೊಣೆ?” ಎಂದು ನಾಗರಾಜು ಅಳಲು ತೋಡಿಕೊಂಡಿದ್ದಾರೆ.
ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು 118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಅನ್ನು ಉದ್ಘಾಟಿಸಿದರು. ಉದ್ಘಾಟಿಸಿದ ದಿನದಿಂದ ದಿನನಿತ್ಯ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಒಂದು ಕಡೆ ಹೆಚ್ಚಿನ ಟೋಲ್ ಶುಲ್ಕ್ ವಸೂಲಿ, ಮತ್ತೊಂದಡೆ ರಸ್ತೆ ನಿರ್ಮಾಣದ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.
ರಸ್ತೆ ಉದ್ಘಾಟನೆಯಾದ ದಿನವೇ ಒಂದು ಅಪಘಾತ ಸಂಭವಿಸಿತ್ತು. ಮರುದಿನವೇ ರಸ್ತೆಯ ಟಾರು ಕಿತ್ತು ಬಂದಿತ್ತು. ಇನ್ನೂ ಟೋಲ್ ವಸೂಲಿ ವಿಚಾರಕ್ಕೆ ಪ್ರತಿನಿತ್ಯ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ವಿಚಾರಕ್ಕೆ ಈಗಾಗಲೇ ಕರ್ನಾಟಕ ಹೈಕೋರ್ಟ್ ಸುಮೋಟೋ ವಿಚಾರಣೆ ಆರಂಭಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದೆ.