ಪರಿಶಿಷ್ಟ ಜಾತಿಗೆ (ಎಸ್.ಸಿ.) ಸೇರಿದ ಪ್ರತಿಮಾ ರಾಣೆ ಎಂಬವರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ರಮಿತಾ ಶೈಲೇಂದ್ರ ಎಂಬವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ಸಮುದಾಯಕ್ಕೆ ಸೇರಿದ ಪ್ರತಿಮಾ ಅವರು ಕಾರ್ಕಳ ಪುರಸಭೆಯ ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾಗಿದ್ದಾರೆ. ಪ್ರತಿಮಾ ಅವರು ದೇವಸ್ಥಾನದಲ್ಲಿ ಊಟ ಬಡಿಸದಂತೆ ಮತ್ತು ಒಳಗೆ ಬಾರದಂತೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಪ್ರತಿಮಾ ರಾಣೆ ಅವರು ಕಾರ್ಕಳ ಮಾರಿಗುಡಿಯ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಮಾ.12ರಂದು ಬೆಳಿಗ್ಗೆ ದೇವಸ್ಥಾನದ ಊಟದ ವಿಚಾರವಾಗಿ ವಾಟ್ಸಾಪ್ನಲ್ಲಿ ಬಂದ ಸಂದೇಶದ ಬಗ್ಗೆ ವಿವಾದ ಉಂಟಾಗಿದೆ.
ಕಾರ್ಕಳ ಎಸ್ಟಿ ಸರ್ಕಲ್ ನಿವಾಸ, ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಯುವ ನಾಯಕಿ ರಮಿತಾ ಶೈಲೇಂದ್ರ ಅವರು ಪ್ರತಿಮಾ ರಾಣೆ ಅವರನ್ನುದ್ದೇಶಿಸಿ ಜಾತಿ ನಿಂದನೆ ಮಾಡಿದ್ದಾರೆ. ಪುರಸಭಾ ಕಟ್ಟಡದ ಬಳಿ, ವಿಐಪಿಗಳು ಊಟ ಮಾಡುವಲ್ಲಿ ಎಸ್ಸಿ ಎಸ್ಟಿಯವರಿಗೆ ಊಟ ಬಡಿಸಲು ಬಿಡಬೇಡಿ, ಅವರನ್ನು ಒಳ ಬಿಟ್ಟಲ್ಲಿ ಮೈಲಿಗೆ ಆಗುತ್ತದೆ ಎಂದು ಹೇಳಿ ಸಾರ್ವಜನಿಕವಾಗಿ ನಿಂದಿಸಿದರೆಂದು ಆರೋಪಿಸಲಾಗಿದೆ.
ಇದೇ ವಿಚಾರ ವಾಟ್ಸಾಪ್ ಮೂಲಕ ಬಂದಿರುವ ಬಗ್ಗೆ ಆರೋಪಿ ರಮಿತಾ ಅವರು ಪ್ರತಿಮಾ ಅವರಲ್ಲಿ ಜಗಳ ಮಾಡಿದ್ದರು. “ಈ ವಾಟ್ಸಾಪ್ ಸಂದೇಶವನ್ನು ನೀವೇ ಕಳುಹಿಸಿ ಕೊಟ್ಟಿರುತ್ತೀರಾ” ಎಂದು ಮಾ.14ರಂದು ಮಧ್ಯಾಹ್ನ 1.45ಕ್ಕೆ ಪುರಸಭಾ ರಸ್ತೆಯಲ್ಲಿ ಪ್ರತಿಮಾ ಅವರನ್ನು ಅಡ್ಡಕಟ್ಟಿ ಗಲಾಟೆ ಮಾಡಿದ್ದರು. “ನೀನು (ಪ್ರತಿಮಾ) ಎಸ್ಸಿ, ದೇವಸ್ಥಾನದ ಒಳಗೆ ಬರಬಾರದು” ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ.
ದೂರಿನ ಅನ್ವಯ ರಮಿತಾ ಶೈಲೇಂದ್ರ ವಿರುದ್ಧ ಐಪಿಸಿ 1860(ಯು/ಎಸ್341, 504), ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1986(ಯು/ಎಸ್-3(1)(ಎಸ್), 3(2)(ವಿ-ಎ)ಅಡಿಯಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ‘ವಾರ್ತಾ ಭಾರತಿ’ ಹಾಗೂ ‘ನಿಖರ ನ್ಯೂಸ್’ ವರದಿ ಮಾಡಿವೆ.