ಇಸ್ರೇಲ್ ಗಾಝಾದಲ್ಲಿ ನಡೆಸಿದ್ದ ಹತ್ಯಾಕಾಂಡವನ್ನು ಇಡೀ ಜಗತ್ತಿಗೆ ತಿಳಿಸಿ ಕಣ್ಣು ತೆರೆಯುವಂತೆ ಮಾಡಿದ್ದ ಅಲ್ ಜಝೀರಾ ಮಾಧ್ಯಮವನ್ನು ಇಸ್ರೇಲ್ ಪ್ರಧಾನಿ ಬೆಂಜಮನ್ ನೆತನ್ಯಾಹು “ಭಯೋತ್ಪಾದನಾ ಚಾನಲ್” ಎಂದು ಕರೆದು ದೇಶದಲ್ಲಿ ನಿರ್ಬಂಧಿಸಿದ್ದಾರೆ ಮತ್ತು ಪ್ರಧಾನಿ ಬೆಂಜಮನ್ ನೆತನ್ಯಾಹು ನೇತೃತ್ವದಲ್ಲಿ ಅದಕ್ಕೆ ಬೇಕಾಗಿರುವ ಕಾನೂನನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ.
ನೆತನ್ಯಾಹು ಅವರ ಈ ನಿರ್ಧಾರವು ಅಲ್ ಜಝೀರಾ ವಿರುದ್ಧ ಇಸ್ರೇಲ್ನ ದೀರ್ಘಕಾಲದ ದ್ವೇಷವನ್ನು ಬಹಿರಂಗಪಡಿಸುತ್ತದೆ, ಚಾನಲ್ನ ಮಾಲಕತ್ವ ಹೊಂದಿರುವ ಕತಾರ್ನೊಂದಿಗೆ ಇಸ್ರೇಲ್ನ ಉದ್ವಿಗ್ನತೆಯ ಭೀತಿಯನ್ನು ಹೆಚ್ಚಿಸಿದೆ.
ಕತಾರ್ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇಸ್ರೇಲ್ ಅಲ್ ಜಝೀರಾದ ಸಂಬಂಧ ಮೊದಲಿನಿಂದಲೂ ಹಳಸಿತ್ತು. ಇಸ್ರೇಲ್ ಅಲ್ ಜಝೀರಾ ವಿರುದ್ಧ ಪಕ್ಷಪಾತದ ಆರೋಪವನ್ನು ಮಾಡಿತ್ತು.
ವೆಸ್ಟ್ಬ್ಯಾಂಕ್ನಲ್ಲಿ ಇಸ್ರೇಲ್ ಮಿಲಿಟರಿ ದಾಳಿಯ ಸಮಯದಲ್ಲಿ ಅಲ್ ಜಝೀರಾ ವರದಿಗಾರ ಶಿರೀನ್ ಅಬು ಅಕ್ಲೆಹ್ ಕೊಲ್ಲಲ್ಪಟ್ಟಾಗ ಇಸ್ರೇಲ್ ಮತ್ತು ಅಲ್ ಜಝೀರಾ ನಡುವಿನ ಸಂಬಂಧ ಕುಸಿದಿತ್ತು.
ಪ್ಯಾಲೆಸ್ತೀನ್-ಅಮೇರಿಕನ್ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಇಸ್ರೇಲ್ ಬಗ್ಗೆ ವಿಮರ್ಶಾತ್ಮಕ ವರದಿಗಾಗಿ ಅರಬ್ ಪ್ರಪಂಚದಾದ್ಯಂತ ಚಿರಪರಿಚಿತರಾಗಿದ್ದರು ಮತ್ತು ಇಸ್ರೇಲ್ ಉದ್ದೇಶಪೂರ್ವಕವಾಗಿ ಅವಳನ್ನು ಕೊಂದಿದೆ ಎಂದು ಚಾನಲ್ ಆರೋಪಿಸಿತ್ತು. ಇಸ್ರೇಲ್ ಈ ಆರೋಪವನ್ನು ತಳ್ಳಿ ಹಾಕಿತ್ತು. ಇದು ಆಕಸ್ಮಿಕ ಘಟನೆ ಎಂದು ಹೇಳಿತ್ತು.
ಅಕ್ಟೋಬರ್ 7, 2023ರಂದು ಹಮಾಸ್ ವಿರುದ್ಧ ಇಸ್ರೇಲ್ನ ಯುದ್ಧ ಘೋಷಿಸಿದ ಬಳಿಕ ಅಲ್ ಜಝೀರಾ ಮಾಧ್ಯಮ ಮತ್ತು ಇಸ್ರೇಲ್ ನಡುವಿನ ಸಂಬಂಧ ಮತ್ತಷ್ಟು ಹದೆಗೆಡಲು ಪ್ರಾರಂಭಿಸಿತು. ಇಸ್ರೇಲ್ ಗಾಝಾ ನೆಲದಲ್ಲಿ ನಡೆಸುತ್ತಿದ್ದ ಹತ್ಯಾಕಾಂಡವನ್ನು ಯಾವುದೇ ಭೀತಿಯಿಲ್ಲದೆ ಚಿತ್ರೀಕರಿಸಿ ಜಗತ್ತಿಗೆ ಅಲ್ ಜಝೀರಾ ಪ್ರಸಾರ ಮಾಡಿದೆ. ಗಾಝಾ ಯುದ್ಧ ಭೀಕರತೆಯ ಬಗ್ಗೆ ಬೇರೆ ಯಾವುದೇ ಮಾಧ್ಯಮಗಳಿಗಿಂತ ಹೆಚ್ಚಾಗಿ ನೆಲದ ವಾಸ್ತವತೆಯನ್ನು ಅಲ್ಜಝೀರಾ ವರದಿ ಮಾಡಿತ್ತು ಎನ್ನುವುದು ಗಮನಾರ್ಹ. ಕಳೆದ ಡಿಸೆಂಬರ್ನಲ್ಲಿ ದಕ್ಷಿಣ ಗಾಝಾದಲ್ಲಿ ವರದಿ ಮಾಡುತ್ತಿದ್ದ ಅಲ್ ಜಝೀರಾ ಕ್ಯಾಮೆರಾಮನ್ ಹತ್ಯೆ ನಡೆದಿದೆ. ಅದೇ ದಾಳಿಯಲ್ಲಿ ಗಾಝಾದಲ್ಲಿ ಚಾನೆಲ್ನ ಬ್ಯೂರೋ ಮುಖ್ಯಸ್ಥ ವೇಲ್ ದಹದೌಹ್ ಗಾಯಗೊಂಡಿದ್ದರು.
ಜನವರಿಯಲ್ಲಿ ದಹದೌಹ್ ಅವರ ಪುತ್ರನನ್ನು ಕೊಂದಿದ್ದಕ್ಕಾಗಿ ನೆಟ್ವರ್ಕ್ ಇಸ್ರೇಲ್ನ್ನು ದೂಷಿಸಿದೆ. ಹಮ್ಜಾ ದಹದೌಹ್ ಅಲ್ ಜಝೀರಾದಲ್ಲಿ ಕೆಲಸ ಮಾಡುತ್ತಿದ್ದಾಗ ಇಸ್ರೇಲ್ ದಾಳಿಗೆ ಬಲಿಯಾಗಿದ್ದರು. ಕಳೆದ ಅಕ್ಟೋಬರ್ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ವೇಲ್ ದಹದೌಹ್ ಅವರ ಪತ್ನಿ, ಮಗಳು ಮತ್ತು ಇನ್ನೊಬ್ಬ ಮಗ ಮತ್ತು ಮೊಮ್ಮಗ ಕೊಲ್ಲಲ್ಪಟ್ಟಿದ್ದರು.
ಯುದ್ಧದ ವೇಳೆ ಗಾಝಾದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಅಲ್ ಜಝೀರಾ ಒಂದಾಗಿದೆ, ವೈಮಾನಿಕ ದಾಳಿ ಮತ್ತು ಕಿಕ್ಕಿರಿದ ಆಸ್ಪತ್ರೆಗಳ ರಕ್ತಸಿಕ್ತ ದೃಶ್ಯಗಳನ್ನು ಪ್ರಸಾರ ಮಾಡಿದ್ದ ಅಲ್ ಜಝೀರಾ ಇಸ್ರೇಲ್ ವಿರುದ್ಧ ಹತ್ಯಾಕಾಂಡದ ಆರೋಪವನ್ನು ಮಾಡಿತ್ತು. ಇಸ್ರೇಲ್, ಅಲ್ ಜಝೀರಾ ಹಮಾಸ್ ಜೊತೆ ಸಹಕರಿಸುತ್ತಿದೆ ಎಂದು ಆರೋಪಿಸಿತ್ತು.
ಇದನ್ನು ಓದಿ: ಅರುಣ್ ಪುರಿ, ರಾಜ್ ದೀಪ್ ಸರ್ದೇಸಾಯಿ, ಶಿವ್ ಅರೂರ್ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತಡೆ