ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ನವೆಂಬರ್ 06 ರಂದು ಮಹಾರಾಷ್ಟ್ರಕ್ಕೆ ಪ್ರವೇಶಿಸಲಿದ್ದು ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಯಾತ್ರೆಯು 4 ರಾಜ್ಯಗಳನ್ನು ಕ್ರಮಿಸಿ 1000 ಕಿ.ಮೀ ಗಳನ್ನು ಪೂರೈಸಿದೆ. ಸದ್ಯ ಆಂಧ್ರಪ್ರದೇಶದಲ್ಲಿರುವ ಯಾತ್ರೆಯು ನಾಳೆ ಮತ್ತೆ ಕರ್ನಾಟಕ ಪ್ರವೇಶಿಸಲಿದ್ದು ಆನಂತರ ತೆಲಂಗಾಣಕ್ಕೆ ಕಾಲಿಡಲಿದೆ. ಆನಂತರ 6ನೇ ರಾಜ್ಯವಾಗಿ ಮಹಾರಾಷ್ಟ್ರದ ನಾಂದೇಡ್ಗೆ ಪ್ರವೇಶಿಸಲಿದೆ ಎನ್ನಲಾಗಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ ಪಾಟೀಲ್, ಹಿರಿಯ ನಾಯಕರಾದ ಬಾಳಾಸಾಹೇಬ್ ಥೋರಟ್, ಅಶೋಕ್ ಚವ್ಹಾಣ್ರವರು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಭಾರತ್ ಜೋಡೋ ಯಾತ್ರೆಗೆ ಆಹ್ವಾನಿಸಿದ್ದಾರೆ. ಉದ್ಧವ್ ಠಾಕ್ರೆ ಅಥವಾ ಅವರ ಪುತ್ರ ಮಾಜಿ ಸಚಿವ ಆದಿತ್ಯ ಠಾಕ್ರೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಯಾತ್ರೆಯನ್ನು ಸ್ವಾಗತಿಸುವ ನಿರೀಕ್ಷೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ರಾಹುಲ್ ಮತ್ತು ರಾಮ ವಿವಾದ
ರಾಜಸ್ಥಾನದ ಸಚಿವ ಪರ್ಸಾದಿ ಲಾಲ್ ಮೀನಾ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ರಾಮನಿಗೆ ಹೋಲಿಸಿದ್ದಾರೆ. ರಾಹುಲ್ ಗಾಂಧಿಯವರ ಯಾತ್ರೆಯು ಅಯೋಧ್ಯೆಯಿಂದ ಶ್ರೀಲಂಕಾಕ್ಕೆ ನಡೆದ ರಾಮನ ಪ್ರಯಾಣಕ್ಕಿಂತಲೂ ಉದ್ದವಾಗಿದೆ ಎಂದು ಹೇಳಿದ್ದಾರೆ. ಈ ಹೋಲಿಕೆ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆ, ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಸ್ಪಷ್ಟೀಕರಣ ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಭಗವಾನ್ ರಾಮರ ಹೆಸರುಗಳು ‘ಆರ್’ ನೊಂದಿಗೆ ಪ್ರಾರಂಭವಾಗುವುದು ಕೇವಲ ಕಾಕತಾಳೀಯವಾಗಿದೆ. ಆದರೆ ಯಾವುದೇ ಹೋಲಿಕೆ ಇಲ್ಲ ಎಂದು ಹೇಳಿದ್ದಾರೆ. “ದೇವರು ದೇವರು, ಮತ್ತು ನಾವು ಮನುಷ್ಯರು. ರಾಹುಲ್ ಗಾಂಧಿ ಕೇವಲ ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯು ತ್ರಿವರ್ಣ ಮತ್ತು ಮಾನವೀಯತೆಯನ್ನು ಉಳಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಭಾರತ್ ಜೋಡೋ ಬೆಂಬಲಿಸುವುದಕ್ಕೆ ಬಿಜೆಪಿ ನಾಯಕ ಉಪಾಧ್ಯೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉದ್ಧವ್ ತಮ್ಮ ಪಕ್ಷದ ಸಲುವಾಗಿಯೂ ಎಂದೂ ಮನೆ ಬಿಟ್ಟು ಬಂದಿಲ್ಲ. ಯಾವುದೇ ಹಿಂದುತ್ವದ ಮೆರವಣಿಗೆ, ಅಡ್ವಾಣಿಯವರ ರಥಯಾತ್ರೆಗೆ ಬೆಂಬಲ ನೀಡಿಲ್ಲ. ಆದರೆ ಈಗ ಅವರು ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಹೊರಟಿದ್ದಾರೆ. ‘ಮುಹ್ ಮೆ ರಾಮ್, ಬಗಲ್ ಮೆ ಚುರಿ’ ಎಂದು ಹಳೆಯ ಹಿಂದಿ ಗಾದೆಯಂತೆ ಉದ್ಧವ್ ಠಾಕ್ರೆಗೆ ಇದು ‘ಮುಹ್ ಮೆ ರಾಮ್, ಬಗಲ್ ಮಿ ರಾಹುಲ್’ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯಕ್ಕೆ ಯಾರೇ ಬಂದರೂ ಅವರು ಬಾಳ್ ಠಾಕ್ರೆಯವರ ಮನೆಗೆ ಹೋಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದರು. ಆದರೆ ಉದ್ಧವ್ ಅದಕ್ಕೆ ವಿರುದ್ಧವಾಗಿ ರಾಹುಲ್ ಸ್ವಾಗತಿಸಲು ನಾಂದೇಡ್ಗೆ ಹೋಗುತ್ತಿದ್ದಾರೆ ಎಂದು ಉಪಾಧ್ಯೆ ಹೇಳಿದ್ದಾರೆ.
ಇದನ್ನೂ ಓದಿ : ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್ ?