ಬಿಜೆಪಿಯ ಪ್ರಣಾಳಿಕೆಯಲ್ಲಿ ಹೊಸದೇನೂ ಇಲ್ಲ, ಅದು 2014ರ ಮುಂದುವರಿಕೆಯಾಗಿ ಕಾಣುತ್ತದೆ ಇತ್ಯಾದಿ ಮಾತುಗಳನ್ನು ಹಲವರು ಆಡುತ್ತಿದ್ದಾರೆ. ಇದು ಸಂಪೂರ್ಣ ನಿಜವಲ್ಲ. 2014ರ ಪ್ರಣಾಳಿಕೆಯನ್ನು ಬೆಲೆ ಏರಿಕೆ, ಅಭಿವೃದ್ಧಿ, ಭ್ರಷ್ಟಾಚಾರ ನಿಯಂತ್ರಣ ಇತ್ಯಾದಿಗಳ ಮುಖಾಂತರ ಶುರು ಮಾಡಲಾಗಿದ್ದರೆ, 2019ರಲ್ಲಿ ಅವಕ್ಕೆಲ್ಲಾ ಕಡೆಯ ಆದ್ಯತೆ. ಆಗ ಭಾವನಾತ್ಮಕ ವಿಚಾರಗಳಿಗೆ ಕಡೆಯ ಸ್ಥಾನ ಕಲ್ಪಿಸಿದ್ದರೆ, ಈ ಸಾರಿ ಪ್ರಣಾಳಿಕೆ ಶುರುವಾಗುವುದೇ ಅವುಗಳಿಂದ. ಅಂದರೆ, ತಾವು ಅಭಿವೃದ್ಧಿ ಸಾಧಿಸಲಾಗಲಿಲ್ಲ ಎಂದು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಆದರೆ, ಈ ಪ್ರಣಾಳಿಕೆಯಲ್ಲಿ ಎರಡು ಹಾಸ್ಯಾಸ್ಪದ ಸಂಗತಿಗಳು ಇವೆ.
ಅವೆಂದರೆ, ಭಾರತವನ್ನು ಪ್ರಪಂಚದ 3ನೇ ದೊಡ್ಡ ಆರ್ಥಿಕತೆ ಮಾಡುವ ನಿಟ್ಟಿನಲ್ಲಿ ಏನೇನು ಮಾಡುತ್ತೇವೆಂಬ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ 5ನೇ ಪಾಯಿಂಟ್, ಯೋಗವನ್ನು ಪ್ರಪಂಚದಾದ್ಯಂತ ಉತ್ತೇಜಿಸುವುದರ ಕುರಿತು ಹೇಳಲಾಗುತ್ತದೆ. ಅದರ ಮೂಲಕ ಭಾರತ 3ನೇ ದೊಡ್ಡ ಆರ್ಥಿಕತೆ ಮಾಡಲು ಹೇಗೆ ಸಾಧ್ಯ ಎಂಬುದನ್ನು, ಪ್ರಣಾಳಿಕೆ ಬಿಡುಗಡೆಯಾದ ನಂತರ ಅರುಣ್ ಜೇಟ್ಲಿಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಏನನ್ನೂ ಹೇಳಿಲ್ಲ. ಬಹುಶಃ ಅವರು ಚಕ್ರವರ್ತಿ ಸೂಲಿಬೆಲೆ, ಅರ್ಥತಜ್ಞ ಗುರುಮೂರ್ತಿ ಥರದವರಿಂದ ಇದನ್ನೂ ಹೇಗೆ ಸಮರ್ಥಿಸಿಕೊಳ್ಳಬಹುದೆಂದು ಕಲಿತುಕೊಂಡು ತಮ್ಮ ಬ್ಲಾಗ್ನಲ್ಲಿ ಬರೆಯಬಹುದು.
ಹಾಗೆಯೇ ಒಳ್ಳೆಯ ಆಡಳಿತದ 20ನೇ ಅಂಶದಲ್ಲಿ ಹೀಗೆ ಹೇಳಲಾಗುತ್ತದೆ. ಅರಣ್ಯ ಮತ್ತು ಪರಿಸರ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಬೇಗ ಬೇಗನೇ ಮಂಜೂರಾತಿ ನೀಡುವಲ್ಲಿ ವೇಗವನ್ನು ಸಾಧಿಸಿದ್ದೇವೆ ಮತ್ತು ಅದರಿಂದ 9000 ಚ.ಕಿ.ಮೀಗಳಷ್ಟು ಅರಣ್ಯವನ್ನು ಹೆಚ್ಚಿಸಿದ್ದೇವೆ ಎನ್ನುತ್ತಾರೆ. ಯೋಜನೆಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಬೇಗ ಬೇಗನೇ ಮಂಜೂರಾತಿ ಕೊಟ್ಟರೆ ಅರಣ್ಯ ಬೇಗ ಬೇಗನೇ ಖಾಲಿಯಾಗುತ್ತದೆ. ಒಂದು ವೇಳೆ, ಅರಣ್ಯ ಕಡಿಯುವ ಯೋಜನೆಗಳಿಗೆ ಪರ್ಯಾಯವಾಗಿ ಅರಣ್ಯ ಬೆಳೆಸುವ ಯೋಜನೆಗಳಿಗೇ ಅನುಮತಿ ಕೊಟ್ಟಿದ್ದಾರೆಂದು ಭಾವಿಸೋಣ (ಇಲ್ಲದಿದ್ದರೆ ಅದನ್ನು ಗುರುಮೂರ್ತಿಗಳಂತಹ ತಜ್ಞರು ಹೇಳುವ ಅಪಾಯವಿದೆ). ಆಗಲೂ 3-5 ವರ್ಷಗಳಲ್ಲಿ 9,000 ಚ.ಕಿ.ಮೀ ‘ಅರಣ್ಯ’ ಬೆಳೆದುಬಿಡುತ್ತದಾ?
ಅಪಾಯ ನಂತರದ ವಾಕ್ಯದಲ್ಲಿದೆ. ನಾವು ಈ ವೇಗವನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆಂದು ಹೇಳುತ್ತಾರೆ!
ಇದನ್ನು ಓದಿ: ಕೆಟ್ಟ ಪ್ರಣಾಳಿಕೆ ಕೊಟ್ಟ ಕೀರ್ತಿ ಬಿಜೆಪಿಯದು