“ನೀತಿಗೆಟ್ಟ ರಾಜಕಾರಣದ ಮೂಲಕ ಬಿಜೆಪಿ ಗುಜರಾತ್ನಲ್ಲಿ ಜಯ ಸಾಧಿಸಿದೆ” ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಆರೋಪಿಸಿದ್ದಾರೆ.
ಗುಜರಾತ್ ಚುನಾವಣಾ ಫಲಿತಾಂಶದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, “ಈ ಬಾರಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆಯಲಿದೆ ಎಂಬ ಸುಳಿವು ಸಿಕ್ಕ ಕೂಡಲೇ ಬಿಜೆಪಿಯವರು ಇನ್ನಿಲ್ಲದ ಕೀಳು ರಾಜಕೀಯವನ್ನು ಮಾಡಲು ಆರಂಭಿಸಿದರು” ಎಂದು ಆರೋಪಿಸಿದ್ದಾರೆ.
“ಗುಜರಾತ್ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದ ಅಲ್ಪೇಶ್ ಠಾಕೂರ್ ಅವರನ್ನು ತಮ್ಮ ಎಲ್ಲಾ ನೀತಿಗೆಟ್ಟ ಪ್ರಯತ್ನಗಳ ಮೂಲಕ ಬಿಜೆಪಿ ತನ್ನೊಳಗೆ ಸೇರಿಸಿಕೊಂಡಿತು. ನಂತರ ಪಾಟೀದಾರ್ ಹೋರಾಟದ ರುವಾರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ ಪಟೇಲ್ ಅವರನ್ನು ಇ.ಡಿ., ಐ.ಟಿ. ದಾಳಿಗಳ ಮೂಲಕ ಬಿಜೆಪಿ ಸೇರಿಸಿಕೊಂಡಿತು” ಎಂದು ದೂರಿದ್ದಾರೆ.
“ಇದಿಷ್ಟು ಸಾಲದು ಎಂಬಂತೆ ಈ ಬಾರಿ ಗುಜರಾತ್ನಲ್ಲಿ ಗೆಲುವು ಕಾಣಲಿದ್ದ ಸುಮಾರು 60ಕ್ಕೂ ಹೆಚ್ಚಿನ ಜನ ಕಾಂಗ್ರೆಸ್ ನಾಯಕರನ್ನು ಬಿಜೆಪಿ ತನ್ನೊಳಗೆ ಸೇರಿಸಿಕೊಳ್ಳುವ ಮೂಲಕ ಅಕ್ಷರಶಃ ನೀತಿಗೆಟ್ಟ ರಾಜಕೀಯವನ್ನು ಮಾಡಿತು” ಎಂದಿದ್ದಾರೆ.
“ಗುಜರಾತ್ನಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡಿದೆ. 2017ನೇ ಚುನಾವಣೆಯಲ್ಲಿ 82 ಸೀಟುಗಳನ್ನು ಕಾಂಗ್ರೆಸ್ ಪಡೆದಿತ್ತು. ಬಿಜೆಪಿ 100ರ ಒಳಗೆ ಕುಸಿದಿತ್ತು. ನಿಜಕ್ಕೂ ಹೇಳಬೇಕೆಂದರೆ ಈ ಬಾರಿ ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆದೇ ತೀರುತ್ತಿತ್ತು. ಆದರೆ ಬಿಜೆಪಿ ನೀತಿಗೆಟ್ಟ ರಾಜಕಾರಣ ಮಾಡಿತು” ಎಂದು ಟೀಕಿಸಿದ್ದಾರೆ.
“ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳುವಂತೆ ಚುನಾವಣೆಗಳನ್ನು ನೇರವಾಗಿ ಎದುರಿಸುವ ಧಮ್ಮು, ತಾಕತ್ತು ಇಲ್ಲದ ಬಿಜೆಪಿಗರು ಕಾಂಗ್ರೆಸಿಗರನ್ನೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ನಾವು ಕಾಂಗ್ರೆಸ್ ಸೋಲಿಸಿದೆವು ಎಂದರೆ ಎಲ್ಲಿಂದ ನಗಬೇಕು ಹೇಳಿ?” ಎಂದು ವ್ಯಂಗ್ಯವಾಡಿದ್ದಾರೆ.
“ಅದಕ್ಕಿಂತಲೂ ಮುಖ್ಯವಾಗಿ ರಾಜಕೀಯ ಪಕ್ಷವೊಂದನ್ನು ತೊರೆದು ಸಿದ್ಧಾಂತ ಇಲ್ಲದೇ ಅವಕಾಶವಾದಿತನದಿಂದ ವರ್ತಿಸಿದರೆ ಪಕ್ಷ ದುರ್ಬಲಗೊಳ್ಳುತ್ತದೆ. ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಉಂಟಾದ ಸೋಲು ಇಂತಹ ಸಿದ್ದಾಂತ ರಹಿತ ವ್ಯಕ್ತಿಗಳ ದ್ರೋಹದ ಫಲವೇ ಆಗಿದೆ” ಎಂದು ವಿಷಾದಿಸಿದ್ದಾರೆ.
“ಹೀಗೆ ಹೇಳಿದರೆ ನೀವು ಮತ್ತು ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಬರಲಿಲ್ಲವೇ ಎಂದು ಕೆಲವರು ಬಾಯಿ ಚಟಕ್ಕೆ ಮಾತನಾಡುತ್ತಾರೆ. ಆದರೆ ಜೆಡಿಎಸ್ನಿಂದ ನಾವು ಹೊರಗೆ ಬರಲಿಲ್ಲ, ಎಲ್ಲಿ ಹಿಂದುಳಿದವರಿಗೆ ದೊಡ್ಡ ಹುದ್ದೆ ಕೊಡಬೇಕಾಗುತ್ತದೋ ಎಂದು ಅವರೇ ನಮ್ಮನ್ನು ಪಕ್ಷದಿಂದ ಹೊರಹಾಕಿದರು. ಇದನ್ನು ತಿಳಿಯದೇ ಮಾತನಾಡುವವರು ಅರ್ಥ ಮಾಡಿಕೊಂಡರೆ ಒಳ್ಳೆಯದು” ಎಂದು ತಿಳಿಸಿದ್ದಾರೆ.