ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಕಾನ್ಪುರ ಬಳಿ ಇಬ್ಬರು ಬಾಲಕಿಯರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯರ ಸಾವಿಗೂ ಮುನ್ನ ಅವರ ಮೇಲೆ ಅತ್ಯಾಚಾರ ನಡೆದ ಆರೋಪ ಕೇಳಿ ಬಂದಿತ್ತು. ಇದೀಗ ಇಬ್ಬರು ಬಾಲಕಿಯರ ಪೈಕಿ ಒಬ್ಬಳ ತಂದೆಯ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
“ಸುಮಾರು 50 ವರ್ಷದ ವ್ಯಕ್ತಿಯ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ನಮಗೆ ಯಾವುದೇ ಡೆತ್ ನೋಟ್ ದೊರೆತಿಲ್ಲ. ಮೃತ ವ್ಯಕ್ತಿ ಇತ್ತೀಚೆಗೆ ಕಾನ್ಪುರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿಯೊಬ್ಬಳ ತಂದೆ ಎಂಬುವುದು ಗೊತ್ತಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಹಮೀರ್ಪುರ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಾ ಶರ್ಮಾ ತಿಳಿಸಿದ್ದಾರೆ.
ಫೆ.29ರಂದು ಕಾನ್ಪುರ ಬಳಿಯ ಘಟಮ್ಪುರದಲ್ಲಿ ಇಬ್ಬರು ಬಾಲಕಿಯರ ಮೃತದೇಹಗಳು ಮರವೊಂದರಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಕಾರ್ಖಾನೆ ಸಮೀಪದ ಹೊಲದಲ್ಲಿರುವ ಮರದಲ್ಲಿ ಮೃತದೇಹಗಳು ಕಂಡು ಬಂದಿತ್ತು. ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಆರೋಪ ಕೇಳಿ ಬಂದ ಬೆನ್ನಲ್ಲೇ ಅವರ ಮೃತದೇಹ ಕಾಣಿಸಿಕೊಂಡಿತ್ತು.
ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ 14 ಮತ್ತು 16 ವರ್ಷದ ಬಾಲಕಿಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇವರ ಮೇಲೆ ಇಟ್ಟಿಗೆ ಕಾರ್ಖಾನೆಯ ಗುತ್ತಿಗೆದಾರ ರಾಮರೂಪ್ ನಿಶಾದ್ (48), ಆತನ ಮಗ ರಾಜು (18) ಮತ್ತು ಸೋದರಳಿಯ ಸಂಜಯ್ (19) ಅತ್ಯಾಚಾರವೆಸಗಿದ್ದಾರೆ ಕುಟುಂಬಸ್ಥರು ಆರೋಪಿಸಿದ್ದರು. ಪೊಲೀಸರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.
ಈ ಘಟನೆ ನಡೆದು 10 ದಿನಗಳ ಬಳಿಕ, ಒಬ್ಬಳು ಬಾಲಕಿಯ ತಂದೆಯ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹಮೀರ್ಪುರ ಬಳಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಂಸದ ಸಾಕೇತ್ ಗೋಖಲೆ ಪತ್ರ:
ಘಟನೆ ಸಂಬಂಧ ಕಾನ್ಪುರ ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶ್ ಚಂದರ್ ಅವರಿಗೆ ಪತ್ರ ಬರೆದಿರುವ ಟಿಎಂಸಿಯ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ, ಬಾಲಕಿಯರ ಕುಟುಂಬಕ್ಕೆ ತಕ್ಷಣ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.
“ಬಾಲಕಿಯರ ಅತ್ಯಾಚಾರ ಮತ್ತು ಸಾವಿನ ಕುರಿತು ಮೌನ ತಾಳಿರುವ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗದ ವಿರುದ್ದ ಸಾಕೇತ್ ಗೋಖಲೆ ಕಿಡಿಕಾರಿದ್ದು, ಅತ್ಯಾಚಾರದ ಬಳಿಕ ಇಬ್ಬರು ಬಾಲಕಿಯರ ಸಾವು, ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವು ನಡೆದರೂ ನೀವು ಮೌನ ತಾಳಿರುವುದು ಯಾಕೆ? ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತ ಇದೆ ಎಂದು ಸುಮ್ಮನ್ನಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
It is VERY shocking why the TV media isn't covering this dreadful matter from UP 👇
Last week, bodies of 2 minor girls were found hanging from a tree in Kanpur, UP. The girls had allegedly been gangraped and then died by suicide.
And now, just yesterday, the dead body of the… pic.twitter.com/vkmhYD2D4J
— Saket Gokhale (@SaketGokhale) March 8, 2024
“ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರಿಗೆ ಪ್ರಶ್ನೆಗಳನ್ನು ಎತ್ತಿರುವ ಸಾಕೇತ್ ಗೋಖಲೆ, “ಪ್ರಕರಣ ಸಂಬಂಧ ನೀವು ಮೌನ ತಾಳಿರುವುದು ಯಾಕೆ? ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದೆ ಎಂದು ಸುಮ್ಮನಿದ್ದೀರಾ? ಇದರಿಂದ ಭಾರತಕ್ಕೆ ಮಾನ ಹಾನಿಯಾಗುವುದಿಲ್ಲವೇ?” ಎಂದು ಕೇಳಿದ್ದಾರೆ.
“ಇದೇನಾ ಮೋದಿಯವರ ನಾರಿಶಕ್ತಿ? ಸತ್ಯಶೋಧನಾ ತಂಡ ಇನ್ನೂ ಯಾಕೆ ಕಾನ್ಪುರಕ್ಕೆ ಹೋಗಿಲ್ಲ? ಸತ್ಯ ಶೋಧನಾ ತಂಡ ಪಶ್ಚಿಮ ಬಂಗಾಳಕ್ಕೆ ಮಾತ್ರನಾ? ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.
“ಇವತ್ತು ಅಂತಾರಾಷ್ಟ್ರೀಯ ಮಹಿಳಾ ದಿನ. ಇಂತಹ ಘಟನೆ (ಅತ್ಯಾಚಾರ, ಸಾವು) ನಡೆದಿರುವುದು ಮಾತ್ರವಲ್ಲದೆ, ಅದನ್ನು ಬುಡಮೇಲು ಮಾಡಿ ಹೂತು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ; ಸಾಮೂಹಿಕ ಅತ್ಯಾಚಾರ ಆರೋಪ