ಸರ್ಕಾರಿ ಉದ್ಯೋಗಿಯಾಗಿದ್ದ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತನ ಕೊಲೆ ಖಂಡಿಸಿ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಶ್ರೀನಗರದ ವಿಮಾನ ನಿಲ್ದಾಣದ ಕಡೆ ಮೆರವಣಿಗೆ ಹೊರಟಿದ್ದ ಕಾಶ್ಮೀರಿ ಪಂಡಿತರನ್ನು ಚದುರಿಸಲು ಪೊಲೀಸರು ಅಶ್ರವಾಯು ಸಿಡಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಹಲವಾರು ನಗರಗಳಲ್ಲಿ ಸಾರಿಗೆ ಶಿಬಿರಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ರಸ್ತೆ ತಡೆ ನಡೆಸಿದ್ದಾರೆ. ಹಲವೆಡೆ ಮೊಂಬತ್ತಿ ಬೆಳಗಿ ಪ್ರತಿಭಟನೆ ದಾಖಲಿಸಲಾಗಿದೆ. ನಮಗೆ ರಕ್ಷಣೆ ಕೊಡಲು ವಿಫಲವಾಗಿವೆ ಎಂದು ಆರೋಪಿಸಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ವಿರುದ್ಧ ಘೋಷಣೆ ಕೂಗಿರುವ ಪ್ರತಿಭಟನಾಕಾರರು ನಮ್ಮನ್ನು ಕೊಲ್ಲುವುದಕ್ಕಾಗಿ ಕಣಿವೆಗೆ ವಾಪಸ್ ಕರೆತಂದಿರಾ ಎಂದು ಪ್ರಶ್ನಿಸಿದ್ದಾರೆ.
ಕಾಶ್ಮೀರಿ ಪಂಡಿತನ ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಇಲ್ಲಿ ನಮಗೆ ಯಾವುದೇ ರಕ್ಷಣೆ ಇಲ್ಲ. ಇದನ್ನು ಪುನರ್ವಸತಿ ಎಂದು ಕರೆಯಲಾಗುತ್ತದೆಯೇ? ನಮ್ಮನ್ನು ಕೊಲ್ಲುವುದಕ್ಕಾಗಿ ಇಲ್ಲಿಗೆ ಕರೆತರಲಾಗಿದೆಯೇ? ಎಂಬ ರಂಜನ್ ಝುತ್ಸಿ ಎಂಬ ಪ್ರತಿಭಟನಾಕಾರರ ಹೇಳಿಕೆಯನ್ನು ಎನ್ಡಿಟಿವ ಉಲ್ಲೇಖಿಸಿದೆ.
ನಾವಿಲ್ಲಿ ಕೆಲಸ ಮಾಡಲು ಬಂದಿದ್ದೇವೆ. ಅದನ್ನು ಬಿಟ್ಟು ಬೇರೆನನ್ನೂ ಮಾಡುತ್ತಿಲ್ಲ. ಆದರೂ ನಮ್ಮನ್ನು ಏಕೆ ಕೊಲ್ಲಲಾಗುತ್ತಿದೆ? ನಾವು ಮಾಡಿದ ಅಪರಾಧವಾದರೂ ಏನು? ಇಲ್ಲಿನ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಮತ್ತೊಬ್ಬ ಪ್ರತಿಭಟನಾಕಾರರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ ಮತ್ತೊಂದು ಕಡೆ ನಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಪರಿಸ್ಥಿತಿಯ ಗಂಭೀರವಾಗಿದೆ. ಸುರಕ್ಷಿತವಾದ ತಹಸೀಲ್ದಾರ್ ಕಚೇರಿಯಲ್ಲಿಯೇ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ ಅಂದರೆ ಇಲ್ಲಿನ ವ್ಯವಸ್ಥೆ ಕುಸಿದಿದೆ, ಭದ್ರತೆ ಕುಸಿದಿದೆ, ಸುರಕ್ಷತೆ ಕುಸಿದಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಬುಡ್ಗಾಮ್ ಜಿಲ್ಲೆಯ ಶೇಕಾಪೊರದಲ್ಲಿ ಪ್ರತಿಭಟನಾನಿರತ ಕಾಶ್ಮೀರಿ ಪಂಡಿತರಿಗೆ ಬೆಂಬಲ ವ್ಯಕ್ತಪಡಿಸಿ ಸ್ಥಳೀಯ ಮುಸ್ಲಿಮರು ಜೊತೆಗೂಡಿದ್ದಾರೆ. ನೀರು ಮತ್ತಿತರ ಆಹಾರ ಒದಗಿಸಿರುವ ಮುಸ್ಲಿಮರು, ಕಾಶ್ಮೀರಿ ಪಂಡಿತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲಿ ಮುಸ್ಲಿಂ ಸಹೋದರರು ನಮ್ಮ ಪರವಾಗಿ ನಿಂತಿದ್ದಾರೆ. ನಮ್ಮ ಸೇವೆ ಮಾಡುತ್ತಿದ್ದಾರೆ. ನಮಗೆ ಹೆಗಲು ಕೊಟ್ಟ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸಂಜಯ್ ಎಂಬ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದರುವ ಜಾವೇದ್ ಇಕ್ಬಾಲ್ ಮಾತನಾಡಿ ”ಕಾಶ್ಮೀರದಲ್ಲಿರುವ ಎಲ್ಲ ಮುಸ್ಲಿಮರು ಮುಂದೆ ಬಂದು ಪ್ರತಿಭಟಿಸಲು ನಾನು ಮನವಿ ಮಾಡುತ್ತೇನೆ. ಕಾಶ್ಮೀರಿ ಪಂಡಿತರನ್ನು ರಕ್ಷಿಸುವಲ್ಲಿ ಆಡಳಿತವು ಸಂಪೂರ್ಣವಾಗಿ ವಿಫಲವಾಗಿದೆ, ತಹಶೀಲ್ದಾರ್ ಕಚೇರಿಯಲ್ಲಿಯೇ ಒಬ್ಬ ವ್ಯಕ್ತಿಯನ್ನು ಕೊಂದರೆ, ಕಾಶ್ಮೀರಿ ಪಂಡಿತರು ಎಲ್ಲಿಗೆ ಹೋಗಬೇಕು” ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚಾದೂರ ಗ್ರಾಮದ ತಹಸೀಲ್ದಾರ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಎಂಬುವವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಬ್ಬರು ಭಯೋತ್ಪಾದಕರು ಸರ್ಕಾರಿ ಕಚೇರಿಗೆ ನುಗ್ಗಿ ಅಲ್ಲಿನ ಉದ್ಯೋಗಿ ರಾಹುಲ್ ಭಟ್ ಅವರ ಹಣೆಗೆ ಗುಂಡಿಟ್ಟು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಲಸೆ ಕಾರ್ಮಿಕರು ಮತ್ತು ಸ್ಥಳೀಯ ಅಲ್ಪಸಂಖ್ಯಾತರ ಮೇಲೆ ಕಳೆದ ಎಂಟು ತಿಂಗಳಿನಿಂದ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉದ್ದೇಶಿತ ದಾಳಿಗೆ ಇದು ಮತ್ತೊಂದು ಸೇರ್ಪಡೆಯಾಗಿದೆ. ಅಕ್ಟೋಬರ್ ತಿಂಗಳಿನಿಂದ ಹೆಚ್ಚಾಗಿ ಹೊರಗಿನಿಂದ ಉದ್ಯೋಗ ಅರಸಿ ಬಂದ ವಲಸಿಗರು ಮತ್ತು ಸ್ಥಳೀಯ ಕಾಶ್ಮೀರಿ ಪಂಡಿತರ ಮೇಲೆ ದಾಳಿಗಳಾಗುತ್ತಿವೆ ಎಂದು ವರದಿಯಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಕೊಲೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ತಹಶೀಲ್ದಾರ್ ಕಚೇರಿಯಲ್ಲಿ ಭಯೋತ್ಪಾದಕರಿಂದ ಕಾಶ್ಮೀರಿ ಪಂಡಿತನ ಹತ್ಯೆ: ವರದಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ಥಳೀಯರನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ. ಕಾಶ್ಮೀರ ಪಂಡಿತರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಪಂಡಿತರು ಬೀದಿಯಲ್ಲಿ ಕೊಲೆಯಾಗುತ್ತಿರುವಾಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದೆ.