Homeಕರ್ನಾಟಕಕೊರೋನಾ ಹೆಸರಿನಲ್ಲಿ ಕಾರ್ಮಿಕರ ಹಣಕ್ಕೆ ಕೈ ಹಾಕಿದ ಬಿಎಸ್‍ವೈ ಸರ್ಕಾರ

ಕೊರೋನಾ ಹೆಸರಿನಲ್ಲಿ ಕಾರ್ಮಿಕರ ಹಣಕ್ಕೆ ಕೈ ಹಾಕಿದ ಬಿಎಸ್‍ವೈ ಸರ್ಕಾರ

- Advertisement -
- Advertisement -

ಕಟ್ಟಡ ಕಾರ್ಮಿಕರ ನಿಧಿಯನ್ನು ಕಾರ್ಮಿಕರ ಯೋಗಕ್ಷೇಮವಲ್ಲದೆ ಬೇರೆ ಯಾವುದೇ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಆದರೂ ಕರ್ನಾಟಕದಲ್ಲಿ ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅನರ್ಹ ಶಾಸಕರಿಂದ ಅಸ್ಥಿತ್ವಕ್ಕೆ ಬಂದ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ಅನ್ಯಾಯವೆಸಗುತ್ತಿದೆ. ಸ್ವತಃ ಸಿಎಂ ಯಡಿಯೂರಪ್ಪನವರೇ ಇಂತಹ ಅಮಾನವೀಯ ಭ್ರಷ್ಟಾಚಾರಕ್ಕೆ ಅಂಕಿತ ಹಾಕಿರುವುದು ದುರಾದೃಷ್ಟಕರ.
ಟಿ ಉಮೇಶ್, ಸಿಐಟಿಯು

ಭಾರತ ಮತ್ತು ಕರ್ನಾಟಕದಲ್ಲಿ ಕೊರೋನಾ ಕೈಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಪರಿಣಾಮ ನೆರೆಯ ಕೇರಳದಿಂದ ಹರಿಯಾಣದವರೆಗೆ ಎಲ್ಲಾ ಸರ್ಕಾರಗಳೂ ಜನಪರ ಯೋಜನೆಗಳ ಕಡೆಗೆ ಗಮನ ನೀಡುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಸ್ವತಃ ರಾಜ್ಯ ಸರ್ಕಾರವೇ ಕಾರ್ಮಿಕರ ನಿಧಿಗೆ ಸದ್ದಿಲ್ಲದೆ ಕನ್ನ ಹಾಕುವ ಕೆಲಸಕ್ಕೆ ಮುಂದಾಗಿದೆ. ಪರಿಣಾಮ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ವಲಯ ಕೊರೋನಾಗಿಂತ ಮುಂಚಿತವಾಗಿಯೇ ಹಸಿವಿಗೆ ಬಲಿಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಕಳೆದ ತಿಂಗಳು ಪತ್ರಿಕಾಗೋಷ್ಠಿ ನಡೆಸಿ ವಿಶೇಷ ಕೊರೋನಾ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಲ್ಲಾ ರಾಜ್ಯಗಳಲ್ಲೂ ಕಟ್ಟಡ ಕಾರ್ಮಿಕರ ನಿಧಿಯಲ್ಲಿ ಅಪಾರ ಪ್ರಮಾಣದ ಹಣ ಇದ್ದು ಈ ಹಣವನ್ನು ಕಾರ್ಮಿಕರ ಯೋಗಕ್ಷೇಮಕ್ಕೆ ಬಳಸಬೇಕು ಎಂದು ಸೂಚನೆ ನೀಡಿದ್ದರು. ಆದರೆ ಕರ್ನಾಟಕದಲ್ಲಿ ಮಾತ್ರ ಈ ಹಣ ಕೆಲವು ರಾಜಕಾರಣಿಗಳ ಯೋಗಕ್ಷೇಮಕ್ಕೆ ಬಳಕೆಯಾಗುತ್ತಿರುವುದು ವಿಷಾಧಕರ ಸಂಗತಿ. ಅಸಲಿಗೆ ಕರ್ನಾಟಕದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಸಂಗ್ರಹವಾಗಿರುವ ಹಣದ ಪ್ರಮಾಣ ಎಷ್ಟು? ರಾಜ್ಯದಲ್ಲಿರುವ ಕಾರ್ಮಿಕರ ಸಂಖ್ಯೆ ಎಷ್ಟು? ಕಾರ್ಮಿಕರ ಹಣವನ್ನು ಹೇಗೆಲ್ಲಾ ಲೂಟಿ ಮಾಡಲಾಗುತ್ತಿದೆ? ಲೂಟಿ ಮಾಡಲು ಸ್ವತಃ ಸಿಎಂ ಅನುವು ಮಾಡಿಕೊಟ್ಟರೇ? ಹೀಗೆ ಎಲ್ಲಾ ಪ್ರಶ್ನೆಗಳಿಗೂ ಇಲ್ಲದೆ ಉತ್ತರ!

ಕಟ್ಟಡ ಕಾರ್ಮಿಕರ ಸಂಖ್ಯೆ-ಸಂಗ್ರಹವಾಗಿರುವ ನಿಧಿ ಎಷ್ಟು?

2017ರ ವರೆಗೆ ಕಳೆದ 13 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಕಟ್ಟಡ ಕಾರ್ಮಿಕರ ಸಂಖ್ಯೆ ಬರೋಬ್ಬರಿ 21 ಲಕ್ಷ. ಆದರೆ, 2018ರಲ್ಲಿ ನವೀಕರಿಸಿಕೊಂಡ ಕಾರ್ಮಿಕರ ಸಂಖ್ಯೆ ಕೇವಲ 1.3 ಲಕ್ಷ ಮಾತ್ರ. ಇನ್ನೂ ಬೆಂಗಳೂರಿನಲ್ಲೇ 3 ರಿಂದ 5 ಲಕ್ಷದ ವರೆಗೆ ಕಟ್ಟಡ ಕಾರ್ಮಿಕರಿದ್ದು ಈ ಪೈಕಿ ಬಹುಪಾಲು ಜನ ತಮ್ಮ ಹೆಸರನ್ನು ಸಂಘಟನೆಯಲ್ಲಿ ನೋಂದಾಯಿಸಿಕೊಂಡಿಲ್ಲ. ಕಾರಣ 2018ರಲ್ಲಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಗುರುತನ್ನು ನೋಂದಾಯಿಸಲು ಆನ್ಲೈನ್ ವ್ಯವಸ್ಥೆಯನ್ನು ಪರಿಚಯಿಸಿತ್ತು. ಹೀಗಾಗಿ ಆನ್ಲೈನ್ ಬಳಸಲು ಬಾರದ ಅನೇಕರು ತಮ್ಮ ಹೆಸರನ್ನು ನೋಂದಾಯಿಸಲು ಸಾಧ್ಯವಾಗಿಲ್ಲ.

ಈ 21 ಲಕ್ಷ ಅಲ್ಲದೆ, ವಲಸೆ ಕಟ್ಟಡ ಕಾರ್ಮಿಕರೂ ಸೇರಿದಂತೆ ರಾಜ್ಯದಲ್ಲಿ ಈವರೆಗೆ ನೋಂದಾವಣೆಯಾಗದ ಕಾರ್ಮಿಕರ ಸಂಖ್ಯೆಯೇ ಸುಮಾರು ಅಂದಾಜು 12 ಲಕ್ಷ ಇದೆ. ಹೇಗೆ ನೋಡಿದರೂ ರಾಜ್ಯದಲ್ಲಿ ಒಟ್ಟು 33 ರಿಂದ 35 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ ಎಂದು ಲೆಕ್ಕ ನೀಡುತ್ತಾರೆ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಮಹಾಂತೇಶ್.

ಕಾರ್ಮಿಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಸಲುವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಈ ಮಂಡಳಿಯ ಅಧ್ಯಕ್ಷರು. ಇನ್ನೂ ಕಟ್ಟಡ ಮಾಲೀಕರು ಕಟ್ಟುವ ಶೇ.1 ರಷ್ಟು ಸೆಸ್ ಹಣ ಈ ಮಂಡಳಿಗೆ ಸಂದಾಯವಾಗುತ್ತದೆ. ಹೀಗೆ ಕಟ್ಟಡ ಕಾರ್ಮಿಕರ ನಿಧಿಯಲ್ಲಿ ಸಂಗ್ರಹವಾಗಿರುವ ಹಣವೇ ರಾಜ್ಯದಲ್ಲಿ ಬರೋಬ್ಬರಿ 8,500 ಕೋಟಿ ಇದೆ.

ಕೊರೋನಾ ಹೆಸರಲ್ಲಿ ಕಾರ್ಮಿಕರ ನಿಧಿಗೂ ಕನ್ನ!

ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡುತ್ತಿದ್ದಂತೆ ಊಟಕ್ಕಿಲ್ಲದೆ ಸಾವಿರಾರು ಜನ ಬೆಂಗಳೂರು, ಮಂಗಳೂರಿನಂತಹ ಮಹಾ ನಗರಗಳಿಂದ ತಮ್ಮ ಊರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಈ ವೇಳೆ ನೂರಾರು ಕಿಮೀ ನಡೆದಿದ್ದ ಗಂಗಮ್ಮ ಎಂಬ ಮಹಿಳೆ ಬಳ್ಳಾರಿ ಬಳಿ ಮೃತರಾಗಿದ್ದ ದುರಂತವನ್ನು ಭಾಗಶಃ ಕನ್ನಡಿಗರು ಮರೆತಿರಲಿಕ್ಕಿಲ್ಲ.

ಉತ್ತರ ಕರ್ನಾಟಕ ಮಾತ್ರವಲ್ಲ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಿಂದ ಅಪಾರ ಸಂಖ್ಯೆಯ ಕಟ್ಟಡ ಕಾರ್ಮಿಕರು ಕೆಲಸಕ್ಕೆಂದು ವಲಸೆ ಬಂದು ಬೆಂಗಳೂರಿನಂತಹ ಮಹಾನಗರದ ಗೂಡು ಸೇರಿದ್ದಾರೆ. ಇನ್ನೂ ರಾಜ್ಯದ ನಾನಾ ಮೂಲೆಗಳಲ್ಲಿ ನೆಲೆಸಿರುವ ಕಟ್ಟಡ ಕಾರ್ಮಿಕರ ಸಂಖ್ಯೆಯೂ ಅಪಾರ. ಈ ಎಲ್ಲರೂ ದಿನನಿತ್ಯ ಕೂಲಿ ಮಾಡಿ ಬದುಕುವವರು. ಹೀಗಾಗಿ ಸರ್ಕಾರದ ಲಾಕ್‍ಡೌನ್ ನಿರ್ಧಾರ ಮೊದಲ ಪರಿಣಾಮ ಬೀರುವುದೇ ಇಂತಹ ಜನರ ಮೇಲೆ. ಇದೇ ಕಾರಣಕ್ಕೆ ಕಾರ್ಮಿಕರ ಸಂಘಟನೆಗಳು ಒಂದಾಗಿ ಕಲ್ಯಾಣ ಮಂಡಳಿ ಹಣ ಬಳಸಿ ಆರಂಭದ ದಿನದಲ್ಲೇ ಎಲ್ಲಾ ಕಾರ್ಮಿಕರಿಗೂ ಮನೆ ಮನೆಗೆ ಊಟ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದವು.

ನಂತರ ಊಟದ ಬದಲು ಕಾರ್ಮಿಕರ ಮನೆಗಳಿಗೆ ಆಹಾರ ಧಾನ್ಯಗಳ ಕಿಟ್ ನೀಡಿದರೆ ಅವರೇ ಅಡುಗೆ ಮಾಡಿ ಊಟ ಮಾಡುತ್ತಾರೆ ಎಂದು ಉದ್ದೇಶಿಸಲಾಗಿತ್ತು. ಇಸ್ಕಾನ್ ಅವರ ಅಕ್ಷಯ ಪಾತ್ರೆ ಸಂಸ್ಥೆಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಎಲ್ಲಾ ಅವಶ್ಯಕ ವಸ್ತುಗಳನ್ನೂ ಹೊಂದಿರುವ 750 ರೂ. ಮುಖ ಬೆಲೆಯ 1 ಲಕ್ಷ ಆಹಾರ ಕಿಟ್ ತಯಾರಿಸಿ ನೀಡಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಆದೇಶಿಸಿತ್ತು.
ಇದೊಂದು ಆದೇಶ ಸರಿಯಾಗಿ ಪಾಲನೆಯಾಗಿದ್ದರೆ ಭಾಗಶಃ ಇಂದು ಕಾರ್ಮಿಕರು ಹಸಿದ ರಾತ್ರಿಗಳನ್ನು ಕಾಣುತ್ತಿರಲಿಲ್ಲವೇನೋ? ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರಡಿಸಿದ ಆ ಒಂದು ಆದೇಶ ಇಂದು ಕಾರ್ಮಿಕರ ಅನ್ನವನ್ನು ಕಸಿದುಬಿಟ್ಟಿದೆ.

ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟರಾ ಬಿಎಸ್‍ವೈ?

ಅಸಲಿಗೆ ಕಾರ್ಮಿಕರಿಗೆ ಬೇಕಾದ ಸವಲತ್ತುಗಳನ್ನು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಸಲುವಾಗಿಯೇ ಕಾರ್ಮಿಕ ಸಂಘಟನೆಗಳು ಇವೆ. ಇನ್ನೂ ಸರ್ಕಾರದ ಅಧೀನದಲ್ಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇದೆ. ಯಾವುದೇ ಕಾರ್ಯಕ್ರಮವನ್ನು ಈ ಮಂಡಳಿ ಅಥವಾ ಕಾರ್ಮಿಕರ ಸಂಘಟನೆಯಿಂದ ಕಾರ್ಮಿಕರಿಗೆ ಯಶಸ್ವಿಯಾಗಿ ತಲುಪಿಸಲು ಸಾಧ್ಯ. ಹೀಗಾಗಿ ಆಹಾರದ ಕಿಟ್‍ಗಳನ್ನು ಮಂಡಳಿಯೇ ಕಾರ್ಮಿಕರಿಗೆ ನೀಡಲು ಮುಂದಾಗಿತ್ತು. ಆದರೆ, ಏಪ್ರಿಲ್ 06 ರಂದು ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲಾ ಆಹಾರದ ಕಿಟ್‍ಗಳನ್ನು ಪಾಲಿಕೆ ಸದಸ್ಯರು ಮತ್ತು ಶಾಸಕರಿಂದಲೇ ಕಾರ್ಮಿಕರಿಗೆ ತಲುಪಿಸಬೇಕು ಎಂದು ಸುತ್ತೋಲೆಯೊಂದನ್ನು ಹೊರಡಿಸಿಬಿಟ್ಟಿದ್ದರು.

ಈ ಸುತ್ತೋಲೆ ಹೊರಡಿಸಿದ್ದೇ ತಡ ಎಲ್ಲಾ ಆಹಾರದ ಕಿಟ್‍ಗಳನ್ನು ಪ್ರತಿ ವಾರ್ಡ್‍ಗೆ ಇಷ್ಟು ಎಂದು ಲೆಕ್ಕ ಹಾಕಿ ಈಗಾಗಲೇ ಪಾಲಿಕೆ ಸದಸ್ಯರು ಮತ್ತು ಶಾಸಕರಿಗೆ ನೀಡಲಾಗಿದೆ. ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಖರೀದಿಸಲಾಗಿರುವ ಈ ಆಹಾರದ ಕಿಟ್‍ಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಆದರೆ, ಶಾಸಕರು ಹಾಗೂ ಪಾಲಿಕೆ ಸದಸ್ಯರು ಮಾತ್ರ ಈ ಆಹಾರದ ಕಿಟ್‍ಗಳನ್ನು ಕಾರ್ಮಿಕರಿಗೆ ನೀಡುತ್ತಿಲ್ಲ, ಬದಲಾಗಿ ತಮ್ಮ ಕ್ಷೇತ್ರದ ಮತದಾರರಿಗೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಬಹುಪಾಲು ಕಟ್ಟಡ ಕಾರ್ಮಿಕರು ಇಲ್ಲಿನ ಮೂಲದವರಲ್ಲ. ಕೆಲಸಕ್ಕಾಗಿ ಹಳ್ಳಿಗಳಿಂದ ಇಲ್ಲಿಗೆ ವಲಸೆ ಬಂದವರು. ಹೀಗಾಗಿ ಇವರಿಗೆ ಸಾಮಾನ್ಯವಾಗಿ ಇಲ್ಲಿ ಮತದಾರ ಚೀಟಿ ಹಾಗೂ ಯಾವುದೇ ಗುರುತು ಇರುವುದಿಲ್ಲ. ಇಂತವರಿಗೆ ಕಿಟ್ ನೀಡುವ ಮೂಲಕ ರಾಜಕಾರಣಿಗಳಿಗೆ ಆಗುವ ಲಾಭವಾದರೂ ಏನು? ಹೀಗಾಗಿಯೇ ಅವರು ಆಹಾರದ ಕಿಟ್‍ಗಳನ್ನು ಕಾರ್ಮಿಕರಿಗೆ ನೀಡುವ ಮೂಲಕ ತಮ್ಮ ಕ್ಷೇತ್ರದ ಮತದಾರರಿಗೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಬೆಂಗಳೂರಿನಲ್ಲಿ ಈವರೆಗೆ ಅಂದಾಜು 60,000 ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಕಾಪೆರ್Çೀಟರ್‍ಗಳು ಹಾಗೂ ಶಾಸಕರು ಹೇಳುತ್ತಿದ್ದಾರೆ. ಆದರೆ, ಯಾವ ವಾರ್ಡ್‍ನಲ್ಲಿ ಎಷ್ಟು? ಮತ್ತು ಯಾರಿಗೆ ವಿತರಿಸಲಾಗಿದೆ ಎಂಬ ಕುರಿತು ಯಾವುದೇ ಲೆಕ್ಕಾಚಾರ ಇಲ್ಲದಂತಾಗಿದೆ. ಪರಿಣಾಮ ಅತ್ತ ಕೆಲಸವೂ ಇಲ್ಲದೆ, ಕೂಲಿಯೂ ಇಲ್ಲದೆ ಇತ್ತ ಊಟವೂ ಇಲ್ಲದೆ ಬಡ ಕಾರ್ಮಿಕರು ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಹಾಕಿಕೊಂಡು ಮಲಗುವಂತಾಗಿದೆ.

ಕಾರ್ಮಿಕರ ನಿಧಿಯಲ್ಲಿ ಶಾಸಕರ ಶೋಕಿ ಪ್ರಚಾರ

ರಾಜ್ಯ ಕಟ್ಟಡ ಕಾರ್ಮಿಕರ ಹಣವನ್ನು ಕೊರೋನಾ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಕಾರ್ಮಿಕರ ಕಲ್ಯಾಣ ನಿಧಿಯಲ್ಲೇ ಖರೀದಿಸಿದ ಆಹಾರದ ಕಿಟ್‍ಗಳಿಗೆ ರಾಜಕಾರಣಿಗಳು ತಮ್ಮ ಫೋಟೋಗಳನ್ನು ಹಾಕಿಕೊಂಡು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಇತ್ತೀಚೆಗೆ ಜನರಿಗೆ ವಿತರಿಸಲು ತಂದಿದ್ದ ಆಹಾರದ ಕಿಟ್‍ಗಳ ಮೇಲೆ ತಮ್ಮ ಭಾವಚಿತ್ರವನ್ನು ಮುದ್ರಿಸಿ ವಿತರಣೆ ಮಾಡುವ ಮೂಲಕ ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಅಲ್ಲದೆ, ಇತ್ತೀಚೆಗೆ ಚಿತ್ರನಟಿ ಬಿಜೆಪಿ ನಾಯಕಿ ಮಾಳವಿಕ ಆರ್‍ಎಸ್‍ಎಸ್ ಮುಖಂಡರ ಜೊತೆಗೂಡಿ ಬಡವರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ರಮದ ಫೋಟೊವನ್ನು ಹಂಚಿಕೊಂಡಿದ್ದರು. ಆದರೆ, ಶಾಸಕ ಲಿಂಬಾವಳಿ ಮತ್ತು ಚಿತ್ರನಟಿ ಮಾಳವಿಕ ವಿತರಣೆ ಮಾಡಿದ್ದ ಎಲ್ಲಾ ಆಹಾರದ ಕಿಟ್‍ಗಳನ್ನೂ ಕಾರ್ಮಿಕರ ನಿಧಿಯಿಂದಲೇ ಖರೀದಿಸಲಾಗಿತ್ತು ಎಂಬುದು ಉಲ್ಲೇಖಾರ್ಹ. ಆದರೆ, ಕಾರ್ಮಿಕರ ನಿಧಿ ಹೀಗೆಲ್ಲಾ ದುರುಪಯೋಗವಾಗುತ್ತಿದ್ದರೂ, ಕಾರ್ಮಿಕರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದರೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರದ್ದು ಮಾತ್ರ ಜಾಣ ಮೌನ.

ಇನ್ನಾದರೂ ಕಾರ್ಮಿಕರಿಗೆ ನ್ಯಾಯ ಒದಗಿಸಿ:

ರಾಜ್ಯದಲ್ಲಿ ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಕಟ್ಟಡ ಕಾರ್ಮಿಕರಿಗೆ ಒಟ್ಟಾರೆ 2,000 ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಮಂಡಳಿಯಲ್ಲಿ ತಮ್ಮ ಹೆಸರನ್ನು ನವೀಕರಿಸಿರುವ 1.3 ಲಕ್ಷ ಜನರಿಗೆ ಮಾತ್ರ ಸರ್ಕಾರ ಈ ಹಣವನ್ನು ನೀಡಲಿದೆ. ಆದರೆ, ಕೇವಲ 2000 ರೂಪಾಯಿಯಲ್ಲಿ ಬಡ ಕಾರ್ಮಿಕರ ಬದುಕು ನಡೆಯುವುದಾದರೂ ಹೇಗೆ? ಹೀಗಾಗಿ ಹರಿಯಾಣ ಸರ್ಕಾರದ ಮಾದರಿಯಲ್ಲಿ ಎಲ್ಲಾ ಕುಟುಂಬಕ್ಕೂ ವಾರಕ್ಕೆ ಒಂದು ಸಾವಿರದಂತೆ ರಾಜ್ಯ ಸರ್ಕಾರ ಪರಿಹಾರ ನೀಡಲಿ.

ಅಲ್ಲದೆ, ರಾಜ್ಯದಲ್ಲಿ ಕೇವಲ ಶೇ.5 ರಷ್ಟು ಜನ ಮಾತ್ರ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಕಾನೂನನ್ನೂ ಮೀರಿ ಎಲ್ಲರಿಗೂ ಸಹಾಯ ಹಸ್ತ ಚಾಚಬೇಕು ಎಂಬುದು ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಮಹಾಂತೇಶ್ ಅವರ ಅಭಿಮತ. ಆದರೆ, ರಾಜ್ಯ ಸರ್ಕಾರ ಈ ಕುರಿತು ಯಾವ ನಿರ್ಧಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕಾರ್ಮಿಕರ ನಿದಿಯ ಹಣವನ್ನು ಕಾರ್ಮಿಕರ ಏಳಿಗೆಗೆ ಮಾತ್ರ ಕರ್ಚು ಮಾಡಬೇಕು.

  2. ಕಾರ್ಮಿಕರ ಹಣ ಕಾರ್ಮಿಕರಿಗಾಗಿ ಖರ್ಚು ಮಾಡಲಾಗಿದೆ, ಇದು ಏನು ಆಧಾರ್ ಇಲ್ಲದೆ ಆರೋಪ ಮಾಡಿದ್ದಾರೆ ಕಾರ್ಮಿಕ ಹಣ ಯಾವ ಅದ್ಯಾದೆಶ ಯಾವ ಜಿ ಓ ಮೂಲಕ ತಗೆದಿದ್ದರೆ ಈ ಬಂಡಲ್ ಬಡಾಯಿ ಗಳು ಆಧಾರ್ ಇಲ್ಲದೆ ಆರೋಪಅಡುವುಫು ಒಂದು ಫ್ಯಾಶನ್

LEAVE A REPLY

Please enter your comment!
Please enter your name here

- Advertisment -

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...

ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲ ಪತ್ತೆ; 10 ಜನರ ಬಂಧನ, 23.6 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೃಹತ್ ಮಾದಕ ವಸ್ತು ಜಾಲ ಪತ್ತೆಯಾಗಿದ್ದು, ಬೆಂಗಳೂರು ನಗರ ಪೊಲೀಸರು 10 ಜನ ಶಂಕಿತರನ್ನು ಬಂಧಿಸಿದ್ದಾರೆ ಮತ್ತು ಅಂದಾಜು 23.63 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು...

‘ಮತ ಚಲಾಯಿಸದವರನ್ನು ಶಿಕ್ಷಿಸಲು ಸಾಧ್ಯವಿಲ್ಲ’: ಮತದಾನ ಕಡ್ಡಾಯಗೊಳಿಸಲು ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಮತ ಚಲಾಯಿಸುವುದನ್ನು ಕಡ್ಡಾಯಗೊಳಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಗುರುವಾರ (ಏ. 16) ವಜಾಗೊಳಿಸಿದೆ ಮತ್ತು ಉದ್ದೇಶಪೂರ್ವಕವಾಗಿ ಮತದಾನದಿಂದ ದೂರ ಉಳಿಯುವ ನಾಗರಿಕರಿಗೆ ದಂಡ ವಿಧಿಸಲು...