ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಒಂದು ವಾರದಿಂದ ದೆಹಲಿಯಲ್ಲಿ ದೇಶದ ರೈತರ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ದಬ್ಬಾಳಿಕೆಯಿಂದ ರೈತ ಹೋರಾಟ ದಮನ ಮಾಡಲು ಪ್ರಯತ್ನಿಸಿ ವಿಫಲವಾಗಿದೆ. ಈಗ ರೈತರ ಹೋರಾಟದಕ್ಕೆ ದೇಶ-ವಿದೇಶಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅದೇ ರೀತಿಯಲ್ಲಿ ಸರ್ಕಾರದ ರೈತರೊಂದಿಗಿನ ವರ್ತನೆ ತೀವ್ರ ಖಂಡನೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಭಾರತೀಯ ರೈತರ ಹೋರಾಟಕ್ಕೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯ ಕಿಡಿಕಾರಿದೆ.
“ರೈತರ ಪ್ರತಿಭಟನೆಯ ಕುರಿತು ಭಾರತದಿಂದ ಬರುತ್ತಿರುವ ಸುದ್ದಿಗಳನ್ನು ನಮ್ಮನ್ನು ಆತಂಕಕ್ಕೀಡುಮಾಡಿವೆ. ಅಲ್ಲಿನ ಪರಿಸ್ಥಿತಿಯಿಂದ ನಾವೆಲ್ಲರೂ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ. ನಿಮ್ಮಲ್ಲಿ ಅನೇಕರಿಗೆ ಇದು ನಿಜವೆಂದು ತಿಳಿದಿದೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕೆನಡಾ ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳು ಇಚ್ಛಿಸುತ್ತೇನೆ. ಸಂವಾದದಲ್ಲಿ ನಂಬಿಕೆಯುಳ್ಳವರು ನಾವು. ರೈತರ ಬಗೆಗಿನ ನಮ್ಮ ಕಾಳಜಿಯನ್ನು ನೇರವಾಗಿ ಎಲ್ಲಾ ಮಾರ್ಗಗಳಲ್ಲಿ ಭಾರತದ ಸರ್ಕಾರದ ಗಮನಕ್ಕೆ ತರುತ್ತೇವೆ. ಇದು ನಾವೆಲ್ಲರೂ ರೈತರೊಂದಿಗೆ ನಿಲ್ಲುವ ಸಮಯ” ಎಂದು ಗುರುನಾನಕ್ ಜಯಂತಿಯಂದು ಬಿಡುಗಡೆಗೊಳಿಸಿದ ವಿಡಿಯೋದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಮಾತಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯು “ಭಾರತದ ರೈತರ ಬಗೆಗೆನ ಕೆನಡಾದ ನಾಯಕರ ಅನಪೇಕ್ಷಿತ ಪ್ರತಿಕ್ರಿಯೆಗಳು ಗಮನಕ್ಕೆ ಬಂದಿವೆ. ವಿಶೇಷವಾಗಿ ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇವು ಅನಗತ್ಯ. ರಾಜಕೀಯ ಉದ್ದೇಶಗಳಿಗಾಗಿ ರಾಜತಾಂತ್ರಿಕ ಸಂಭಾಷಣೆಗಳನ್ನು ತಪ್ಪಾಗಿ ನಿರೂಪಿಸದಿರುವುದು ಉತ್ತಮ”ಎಂದು ವಿದೇಶಾಂಗ ಸಚಿವಾಲಯ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಶಿವಸೇನೆ ನಾಯಕಿ ಪ್ರಿಯಾಂಕ ಚರ್ತುವೇದಿ ಸಹ ಕೆನಡಾ ಪ್ರಧಾನಿ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ಇದು ಭಾರತದ ಆಂತರೀಕ ವಿಷಯ. ದಯವಿಟ್ಟು ರಾಜಕೀಯ ಮಾಡಬೇಡಿ. ಅಲ್ಲದೇ ಪ್ರಧಾನಿ ಮೋದಿಯವರು ಬೇರೆ ದೇಶಗಳು ಸಹ ಇದಕ್ಕೆ ಪ್ರತಿಕ್ರಿಯೆ ನೀಡುವ ಮೊದಲು ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ. ಬಹಳಷ್ಟು ಜನ ಭಾರತದ ಆಂತರೀಕ ವಿಷಯಗಳಲ್ಲಿ ಕೆನಡಾದ ಪ್ರಧಾನಿ ಮಧ್ಯಪ್ರವೇಶಿಸಬಾರದು ಎಂದು ತಾಕೀತು ಮಾಡಿದ್ದಾರೆ.
Dear @JustinTrudeau ,touched by your concern but India’s internal issue is not fodder for another nation’s politics.Pls respect the courtesies that we always extend to other nations.
Request PM @narendramodi ji to resolve this impasse before other countries find it okay to opine.— Priyanka Chaturvedi (@priyankac19) December 1, 2020
ಇದೇ ಸಂದರ್ಭದಲ್ಲಿ ಕನ್ನಡದ ಚಿಂತಕ ಪುರುಷೋತ್ತಮ ಬಿಳಿಮಲೆಯವರು “ಮಾನ್ಯ ಪ್ರಧಾನಿಗಳು ಅಮೇರಿಕಾಕ್ಕೆ ಹೋಗಿ ʼಅಬ್ಕಿ ಬಾರ್ ಟ್ರಂಪ್ ಸರ್ಕಾರ್ʼ ಎಂದು ಘೋಷಿಸುವಾಗ ಮಾಧ್ಯಮಗಳಲ್ಲಿದ್ದ ಹಲವರ ಕಿವಿಗೆ ಅದು ಬೀಳಲೇ ಇಲ್ಲ. ಈಗ ಕೆನಡಾದ ಪ್ರಧಾನ ಮಂತ್ರಿಗಳು ಭಾರತದ ರೈತರ ಪರ ಮಾತನ್ನಾಡಿದಾಗ ಮಾಧ್ಯಮದವರಿಗೆ ಅದು ‘ದೇಶದ ಆಂತರಿಕ ವಿಷಯದಲ್ಲಿ ಕೈ ಹಾಕಿದ ಹಾಗೆʼ ಭಾಸವಾಗಿದೆ. ಬೆತ್ತಲಾದದ್ದು ಪತ್ರಕರ್ತರೇ ವಿನಾ ಬೇರಾರೂ ಅಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆಗೆ ಹರಿದು ಬಂತು ವಿದೇಶಿ ರಾಜಕೀಯ ನಾಯಕರ ಬೆಂಬಲ