ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ನಾಯಕಿ ಮಾಯಾವತಿ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವವರೆಗೆ ಅವರೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ಹೇಳಿದ್ದಾರೆ.
ಮಂಗಳವಾರ ನಡೆಯಲಿರುವ ಇಂಡಿಯಾ ಒಕ್ಕೂಟದ ಸಭೆಗೂ ಮುನ್ನ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾದ ಯಾದವ್ ಈ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷವು ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿದೆ.
ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ, 2024 ರಲ್ಲಿ ಬಿಜೆಪಿಯನ್ನು ದೇಶದಿಂದ ತೊಡೆದು ಹಾಕುವ ಕೆಲಸವನ್ನು ಇಂಡಿಯಾ ಒಕ್ಕೂಟ ಒಗ್ಗಟ್ಟಿನಿಂದ ಮಾಡಲಿದೆ ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷ ಎನ್ಡಿಎ ಅಥವಾ ಇಂಡಿಯಾ ಈ ಎರಡು ಒಕ್ಕೂಟಗಳೊಂದಿಗೆ ಸೇರುವುದಿಲ್ಲ. ಅವೆರಡರಿಂದ ನಮ್ಮ ಪಕ್ಷ ಅಂತರ ಕಾಯ್ದುಕೊಳ್ಳಲಿದೆ ಎಂದು ಸ್ವತಃ ಮಾಯಾವತಿಯವರೇ ಹೇಳಿದ್ದಾರೆ. ಆದರೆ, ಅವರ ಒಲವು ಬಿಜೆಪಿ ಕಡೆಯಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.
ಏಕೆಂದರೆ, ಡಿಸೆಂಬರ್ 9 ರಂದು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಿಎಸ್ಪಿ ತನ್ನ ಲೋಕಸಭಾ ಸಂಸದ ಡ್ಯಾನಿಶ್ ಅಲಿಯನ್ನು ಅಮಾನತುಗೊಳಿಸಿತ್ತು. ಇಂಡಿಯಾ ಒಕ್ಕೂಟದ ಪಕ್ಷ ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ನಿಂದ ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಡ್ಯಾನಿಶ್ ಅಲಿ ಇಂಡಿಯಾ ಒಕ್ಕೂಟದ ನಾಯಕರ ಜೊತೆ ಪ್ರತಿಭಟಿಸಿದ್ದರು. ಈ ಬೆನ್ನಲ್ಲೇ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ಇದನ್ನೂ ಓದಿ: Explained: ರಾಜ್ಯಪಾಲ-ಸಿಎಂ ಜಗಳದಲ್ಲಿ ಕೇರಳ ಬಡವಾಯ್ತು