ಕಪ್ಪು ಹಣ ನಿಯಂತ್ರಣ ಮಾಡುತ್ತೇವೆ ಎಂದು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ, 2016ರಲ್ಲಿ 2000 ನೋಟುಗಳನ್ನು ಚಲಾವಣೆಗೆ ತಂದಿತು. ಈ ಕ್ರಮವನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ‘ಮೂರ್ಖತನ’ ಎಂದು ಕರೆದಿದ್ದಾರೆ.
”ಕಪ್ಪುಹಣ ಹೊಂದಿರುವವರಿಗೆ ಸುಲಭವಾಗಿ ಹಣ ಕೂಡಿಡಲು ಈ 2000 ಮುಖಬೆಲೆಯು ನೋಟುಗಳು ಸಹಾಯ ಮಾಡಿವೆ. ಅಲ್ಲದೆ, ಈಗ ಮತ್ತೆ 2000 ಮುಖಬೆಲೆಯ ನೋಟು ಬ್ಯಾನ್ ಮಾಡಿ ಆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವರಿಗೆ ‘ರತ್ನಗಂಬಳಿ ಹಾಸಿ ಸ್ವಾಗತ ಮಾಡಲಾಗಿದೆ” ಎಂದು ಚಿದಂಬರಂ ಆರೋಪಿಸಿದ್ದಾರೆ.
ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2,000 ನೋಟುಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಅನಿರೀಕ್ಷಿತ ಘೋಷಣೆ ಮಾಡಿತು. ಈ 2000 ನೋಟುಗಳನ್ನು ಖಾತೆಗಳಿಗೆ ಜಮಾ ಮಾಡಲು ಮತ್ತು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಸೆಪ್ಟೆಂಬರ್ 30ರವರೆಗೆ ಸಮಯಾವಕಾಶ ನೀಡಿದೆ. 2000 ನೋಟುಗಳನ್ನು ವಿತರಿಸುವುದನ್ನು ನಿಲ್ಲಿಸುವಂತೆ ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶಿಸಿತ್ತು. ಇದನ್ನು ವಿರೋಧಿಸಿ ಮಾಜಿ ವಿತ್ತ ಸಚಿವರು ಟ್ವೀಟ್ ಮಾಡಿದ್ದಾರೆ.
Banks have clarified that no identity, no forms and no proof will be required to exchange the Rs 2000 notes
The BJP's spin that the Rs 2000 notes are being withdrawn to unearth black money stands demolished
Ordinary people do not have Rs 2000 notes. They shunned it soon after…
— P. Chidambaram (@PChidambaram_IN) May 22, 2023
”2000 ನೋಟುಗಳನ್ನು ಬದಲಾಯಿಸಲು ಯಾವುದೇ ಗುರುತಿನ ಚೀಟಿ, ಪುರಾವೆಗಳ ಅಗತ್ಯವಿಲ್ಲ ಎಂದು ಬ್ಯಾಂಕ್ಗಳು ಸ್ಪಷ್ಟಪಡಿಸಿವೆ. ಕಪ್ಪುಹಣವನ್ನು ಬಹಿರಂಗಪಡಿಸಲು 2000 ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಬಿಜೆಪಿಯ ವಾದ ಇಲ್ಲಿಗೆ ನೆಲಸಮವಾಗಿದೆ” ಎಂದು ಚಿದಂಬರಂ ಟೀಕಿಸಿದ್ದಾರೆ.
”ಸಾಮಾನ್ಯ ಜನರ ಬಳಿ 2000 ನೋಟುಗಳಿಲ್ಲ, ಏಕೆಂದರೆ, ದೈನಂದಿನ ಚಿಲ್ಲರೆ ವಿನಿಮಯಕ್ಕೆ ಅದು ನಿಷ್ಟ್ರಯೋಜಕ. 2016ರಲ್ಲಿ ಚಲಾವಣೆಗೆ ಬಂದಾಗಿನಿಂದ ಅವುಗಳನ್ನು ಜನಸಾಮಾನ್ಯರು ದೂರವಿಟ್ಟಿದ್ದಾರೆ” ಎಂದಿದ್ದಾರೆ.
”ಹಾಗಾದರೆ, 2000 ನೋಟುಗಳನ್ನು ಇಟ್ಟುಕೊಂಡು ಅವುಗಳನ್ನು ಯಾರು ಬಳಸಿದ್ದಾರೆ? ನಿಮಗೆ ಉತ್ತರ ತಿಳಿದಿದೆ. 2,000 ನೋಟು ಕಪ್ಪು ಹಣ ಉಳ್ಳವರಿಗೆ ತಮ್ಮ ಹಣವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಮಾಡಿದೆ” ಎಂದು ಚಿದಂಬರಂ ಹೇಳಿದ್ದಾರೆ.
”2,000 ನೋಟು ಹೊಂದಿರುವವರಿಗೆ ತಮ್ಮ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ‘ರತ್ನಗಂಬಳಿ ಹಾಸಿ ಸ್ವಾಗತಿಸಲಾಗುತ್ತಿದೆ. 2016ರಲ್ಲಿ 2000 ನೋಟು ಚಲಾವಣೆಗೆ ತಂದದ್ದು ಮೂರ್ಖತನದ ಕ್ರಮವಾಗಿತ್ತು, ಕನಿಷ್ಠ ಏಳು ವರ್ಷಗಳ ನಂತರವಾದರೂ ಈ ಮೂರ್ಖ ಕ್ರಮವನ್ನು ಹಿಂತೆಗೆದುಕೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ” ಎಂದು ಚಿದಂಬರಂ ಹೇಳಿದ್ದಾರೆ.