ವಿದೇಶಿ ದೇಣಿಗೆ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪದಡಿಯಲ್ಲಿ ಮಾನವ ಹಕ್ಕುಗಳ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬೆಂಗಳೂರು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ)ಯ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪದಡಿಯಲ್ಲಿ ಕೆಲವು ವರ್ಷಗಳಿಂದ ಹಲವು ತನಿಖಾ ಸಂಸ್ಥೆಗಳು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅನ್ನು ಪರಿಶೀಲಿಸುತ್ತಿವೆ. ಕಳೆದ ವರ್ಷ ಇಡಿ ಸಹ ದಾಳಿ ನಡೆಸಿತ್ತು.
ಗೃಹ ಸಚಿವಾಲಯ ಅನುಮತಿಯನ್ನು ನಿರಾಕರಿಸಿದ ನಂತರವೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಎಫ್ಸಿಆರ್ಎ ಕಾಯ್ದೆಯನ್ನು ಬೈಪಾಸ್ ಮಾಡಲು ಪ್ರಯತ್ನಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಲಾಭದ ಉದ್ದೇಶವಿಲ್ಲದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರೈ.ಲಿ.ನ ಹೆಸರಿನಲ್ಲಿ ವಾಣಿಜ್ಯ ವ್ಯವಹಾರ ನಡೆದಿದೆ ಎಂದಿರುವುದಲ್ಲದೇ 36 ಕೋಟಿ ರೂ ವಿದೇಶಿ ದೇಣಿಗೆ ಸಹ ಪಡೆದಿದೆ ಎಂಬ ಆರೋಪ ಅಮ್ನೆಸ್ಟಿ ಮೇಲಿದೆ.
ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡ ಸ್ಪೈವೇರ್ ಪೆಗಾಸಸ್ ಬಗ್ಗೆ ಇತ್ತೀಚೆಗೆ ಅಮ್ನೆಸ್ಟಿ ಇಂಡಿಯಾ ಬರೆದಿತ್ತು. “ಎನ್ಎಸ್ಒ ಗ್ರೂಪ್ ಇಸ್ರೇಲಿ ಸ್ಪೈವೇರ್ ತಯಾರಕರಾಗಿದ್ದು, ಅದರ ಕಣ್ಗಾವಲು ಸಾಧನಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ‘ಭಯೋತ್ಪಾದನೆ ಮತ್ತು ಅಪರಾಧಗಳನ್ನು ಎದುರಿಸಲು ಮಾರಾಟ ಮಾಡುವುದಾಗಿ ಹೇಳುತ್ತದೆ” ಎಂದು ಅಮ್ನೆಸ್ಟಿ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದೆ.
ಆ ಮೂಲಕ ರಾಜಕೀಯ ಕಾರಣಗಳಿಗಾಗಿಯೇ ನಮ್ಮ ಮೇಲೆ ಈ ರೀತಿ ಪದೇ ಪದೇ ದಾಳಿ ನಡೆಯುತ್ತಿದೆ ಎಂಬುದನ್ನು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸ್ಪಷ್ಟಪಡಿಸಿದೆ.