ಕೇಂದ್ರ ಸರ್ಕಾರವು ದೆಹಲಿಯ ಪೌರಕಾರ್ಮಿಕರ ಹುದ್ದೆಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದು ಇದರಿಂದ ದೆಹಲಿಯ ಚುನಾಯಿತ ಸರ್ಕಾರ ಕಾರ್ಯ ನಿರ್ವಹಿಸಲು ತೊಂದರೆಯಾಗುವುದಿಲ್ಲವೇ ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ. ಈ ಬಗ್ಗೆ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಕಾರ್ಯಕಾರಿ ಅಧಿಕಾರದ ವ್ಯಾಪ್ತಿ ಮತ್ತು ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣದ ಕುರಿತು ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವಿನ ವಿವಾದದ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ.
ದೆಹಲಿಯು ಕೇಂದ್ರಾಡಳಿತ ಪ್ರದೇಶವಾಗಿದೆ ಮತ್ತು ಅದು ಒಕ್ಕೂಟದ ವಿಸ್ತರಣೆಯಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು. “ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ಉದ್ದೇಶವೇ ಆ ಪ್ರದೇಶವನ್ನು ಕೇಂದ್ರ ನಿರ್ವಹಿಸುವುದಕ್ಕಾಗಿ” ಎಂದು ಅವರು ವಾದಿಸಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, “ಎಲ್ಲವೂ ಕೇಂದ್ರ ಸರ್ಕಾರ ಬಯಸುವಂತೆ ನಡೆಯಬೇಕು ಎಂದಾದರೆ ಈ ಚುನಾಯಿತ ಸರ್ಕಾರ ಇರುವುದು ಯಾಕೆ?” ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಮೆಹ್ತಾ, ಚುನಾಯಿತ ಸರ್ಕಾರವು ಅಧಿಕಾರಿಗಳ ಮೇಲೆ ಕ್ರಿಯಾತ್ಮಕ ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಹೇಳಿದರು. ಅಲ್ಲಿ ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ದೆಹಲಿ ಸರ್ಕಾರ ವರ್ಗಾಯಿಸಲು ಸಾಧ್ಯವಿಲ್ಲವೇ? ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಕೇಳಿದರು.
“ಶಿಕ್ಷಣ, ಪರಿಸರ ಮುಂತಾದ ಕ್ಷೇತ್ರದಲ್ಲಿನ ಪೋಸ್ಟಿಂಗ್ ವಿಚಾರಗಳಲ್ಲಿ ದೆಹಲಿ ಸರ್ಕಾರದ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ನೀವು ಹೇಳುತ್ತೀರಾ? ಹಾಗಿದ್ದರೆ ಅಲ್ಲಿ ಚುನಾಯಿತ ಸರ್ಕಾರ ಇದ್ದು ಏನು ಉಪಯೋಗ?” ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಸಂವಿಧಾನದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸೇವೆಗಳಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ಸೇವಾ ಆಯೋಗಗಳಿಲ್ಲ. ದೆಹಲಿಯು ಕಾಸ್ಮೋಪಾಲಿಟನ್ ನಗರವಾಗಿದೆ. ಇದು ರಾಷ್ಟ್ರರಾಜಧಾನಿಯಾಗಿದೆ ಇಲ್ಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ಕೇಂದ್ರದ ನಿಯಂತ್ರಣ ಇರಬೇಕು ಎಂದು ಸಾಲಿಸಿಟರ್ ಜನರಲ್ ಮೆಹ್ತಾ ವಾದಿಸಿದರು.
ದೆಹಲಿ ಸರ್ಕಾರ ಗುರುವಾರ, ಇಲ್ಲಿ ನಾವು ಹುದ್ದೆಗಳನ್ನು ಸೃಷ್ಟಿಸುವ, ಅಧಿಕಾರಿಗಳನ್ನು ನೇಮಿಸುವ ಮತ್ತು ಅಗತ್ಯಕ್ಕೆ ತಕ್ಕಂತೆ ಅವರನ್ನು ವರ್ಗಾವಣೆ ಮಾಡುವ ಅಧಿಕಾರವನ್ನು ನೀಡದಿದ್ದರೆ, ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ಪೀಠದ ಮುಂದೆ ವಾದಿಸಿತು.