ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ವ್ಯಕ್ತಿಯೊಬ್ಬನ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಉತ್ತರಖಾಂಡ್ ರಾಜ್ಯದಲ್ಲಿ ನಡೆದಿದೆ. ಇಲ್ಲಿನ ಉತ್ತರಕಾಶಿ ಜಿಲ್ಲೆಯ ಮೋರಿ ಪ್ರದೇಶದ ಸಾಲ್ರಾ ಗ್ರಾಮದಲ್ಲಿ ಘಟನೆಯಾಗಿದ್ದು, ಸುಡುವ ಕೋಲುಗಳಿಂದ ವ್ಯಕ್ತಿಗೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈನೋಲ್ ಗ್ರಾಮದ ನಿವಾಸಿಯಾಗಿರುವ 22 ವರ್ಷದ ಆಯುಷ್ ಜನವರಿ 9 ರಂದು ದೇವಸ್ಥಾನಕ್ಕೆ ತೆರಳಿದ್ದನು. ಈ ವೇಳೆ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಸವರ್ಣೀಯ ಜಾತಿಗೆ ಸೇರಿದ ಕೆಲವರು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ನನ್ನನ್ನು ಕಟ್ಟಿಹಾಕಿ ರಾತ್ರಿಯಿಡೀ ಸುಡುವ ಕೋಲುಗಳಿಂದ ಹೊಡೆದಿದ್ದಾರೆ ಎಂದು ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾನೆ.
ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, “ಹಲ್ಲೆಗೊಳಗಾದ ಆಯುಷ್ನನ್ನು ಜನವರಿ 10ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಮತ್ತೊಂದು ಆರೋಗ್ಯ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ” ಎಂದಿದ್ದಾರೆ.
ದಲಿತನೊಬ್ಬ ದೇವಸ್ಥಾನ ಪ್ರವೇಶಿಸಿದ್ದಾನೆ ಎನ್ನುವ ಕಾರಣಕ್ಕೆ ಸವರ್ಣೀಯ ಜಾತಿಯ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ, ಗ್ರಾಮದ ಐವರ ವಿರುದ್ಧ ಎಸ್ಸಿ/ಎಸ್ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸರ್ಕಲ್ ಆಫೀಸರ್ ಪ್ರಶಾಂತ್ ಕುಮಾರ್ ಅವರಿಗೆ ವಹಿಸಲಾಗಿದೆ.
ದಲಿತರು ದೇವಸ್ಥಾನ ಪ್ರವೇಶಿಸಿದರು ಎನ್ನುವ ಕಾರಣಕ್ಕೆ ಹಲ್ಲೆ ನಡೆಸಿರುವ ಪ್ರಕರಣ ಇದೇ ಮೊದಲೇನಲ್ಲ. ನಿರಂತರವಾಗಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಬೆಂಗಳೂರಿನಲ್ಲೂ ದಲಿತ ಮಹಿಳೆಯ ಮೇಲೆ ಇದೇ ವಿಚಾರವಾಗಿ ಹಲ್ಲೆ ನಡೆದಿತ್ತು.
ಈ ದಲಿತ ಮಹಿಳೆಯ ಮೇಲೆ ಅರ್ಚಕರೇ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಷ್ಟೇ ಅಲ್ಲದೇ ಹಲ್ಲೆ ನಡೆಸಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತು.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹುಳೇರಹಳ್ಳಿಯಲ್ಲಿ ಗ್ರಾಮದೇವತೆಯ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದ ಘಟನೆ 2022ರ ಸೆಪ್ಟೆಂಬರ್ನಲ್ಲಿ ನಡೆದಿತ್ತು.
ಗ್ರಾಮದ ದಲಿತ ಬಾಲಕ ದೇವರ ಮೆರವಣಿಗೆಯ ವೇಳೆ ದೇವರ ಕೋಲನ್ನು ಮುಟ್ಟಿ ಮೈಲಿಗೆ ಮಾಡಿದ್ದಾನೆ ಎಂದು ಆರೋಪಿಸಿ ಹೊಡೆಯಲು ಮುಂದಾಗಿದ್ದರು. ಜೊತೆಗೆ ಬಾಲಕನ ಕುಟುಂಬವನ್ನು ಕರೆಸಿ ಅರವತ್ತು ಸಾವಿರ ರೂ. ದಂಡ ವಿಧಿಸಿದ್ದರು.
“ನೀನು ಇಲ್ಲಿಗೆ ಬರಬಾರದು. ದೇವರನ್ನು ಮುಟ್ಟಿ ಮೈಲಿಗೆ ಮಾಡಿದ್ದೀಯ. ಅರವತ್ತು ಸಾವಿರ ದಂಡ ಕಟ್ಟಿದರೆ ಮಾತ್ರ ಊರಿನೊಳಗೆ ನಿಮ್ಮ ಕುಟುಂಬ ಪ್ರವೇಶಿಸಬಹುದು” ಎಂದು ತಿಳಿಸಿರುವುದಾಗಿ ಬಾಲಕ ಹೇಳಿಕೆ ನೀಡಿದ್ದನು.
ಇದನ್ನು ಓದಿ: ದೇವಸ್ಥಾನದಲ್ಲಿ ದಲಿತ ಮಹಿಳೆಗೆ ಹಲ್ಲೆ ನಡೆಸಿದ ಧರ್ಮದರ್ಶಿಯ ಬಂಧನ