Homeಮುಖಪುಟಮೌಲಾನಾ ಆಝಾದ್ ಎಜುಕೇಶನ್‌ ಫೌಂಡೇಶನ್‌ ಮುಚ್ಚಲು ಆದೇಶಿಸಿದ ಕೇಂದ್ರ?

ಮೌಲಾನಾ ಆಝಾದ್ ಎಜುಕೇಶನ್‌ ಫೌಂಡೇಶನ್‌ ಮುಚ್ಚಲು ಆದೇಶಿಸಿದ ಕೇಂದ್ರ?

- Advertisement -
- Advertisement -

ಮುಸ್ಲಿಮ್‌ ಸಮುದಾಯಕ್ಕೆ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿದ್ದ ಮೌಲಾನಾ ಆಝಾದ್ ಶಿಕ್ಷಣ ಪ್ರತಿಷ್ಠಾನವನ್ನು(MAEF)  ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮುಚ್ಚುವಂತೆ ಆದೇಶಿಸಿದೆ ಎಂದು hindustantimes.com ವರದಿ ಮಾಡಿದೆ.

ಫೆಬ್ರವರಿ 7 ರಂದು ಅಲ್ಪಸಂಖ್ಯಾತ ಸಚಿವಾಲಯದ ಅಧೀನ ಕಾರ್ಯದರ್ಶಿ ಧೀರಜ್ ಕುಮಾರ್ ಅವರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಸಚಿವಾಲಯದ ಹಿರಿಯ ಅಧಿಕಾರಿಗಳು ಇದನ್ನು ಸಧ್ಯ ಆಂತರಿಕ ವಿಷಯ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಸಾರ್ವಜನಿಕರಿಗೆ ಬಹಿರಂಗಪಡಿಸಲಾಗಿಲ್ಲ. ಪ್ರತಿಷ್ಠಾನದ ಸದಸ್ಯರೋರ್ವರ ಪ್ರಕಾರ, ಈ ಬಗ್ಗೆ ಆಂತರಿಕ ಚರ್ಚೆಗಳು ನಡೆಯುತ್ತಿವೆ ಮತ್ತು ಆದೇಶವನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ. ಮಾರ್ಚ್ 4ರಂದು ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಇನ್ನೋರ್ವ ಸದಸ್ಯರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಚಿವಾಲಯವನ್ನು ಮತ್ತು ಸೆಂಟ್ರಲ್ ವಕ್ಫ್ ಕೌನ್ಸಿಲ್‌ನ್ನು ಸಮೀಪಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹಿಂದೂಸ್ಥಾನ್‌ ಟೈಮ್ಸ್ ವರದಿ ತಿಳಿಸಿದೆ.

ಆದೇಶದ ಪ್ರಕಾರ, ನವೆಂಬರ್‌ 30, 2023ರಲ್ಲಿದ್ದಂತೆ ಫೌಂಡೇಶನ್‌ ಬಳಿ ರೂ.1,073.26 ಕೋಟಿ ನಿಧಿ ಇದ್ದು, ಬಾಧ್ಯತೆಗಳು ರೂ.40,355 ಕೋಟಿ ಆಗಿವೆ ಹಾಗೂ ಈ ಮೊತ್ತ ಕಳೆದರೆ ಉಳಿಯುವ ಮೊತ್ತ ರೂ 669.71 ಕೋಟಿ ಆಗಿದೆ. ಈ ನಿಧಿಯನ್ನು ಕನ್ಸಾಲಿಡೇಟೆಡ್‌ ಫಂಡ್ಸ್‌ ಆಫ್‌ ಇಂಡಿಯಾಗೆ ವರ್ಗಾಯಿಸುವ ಹಾಗೂ ಬಾಧ್ಯತೆಗಳನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಹಣಕಾಸು ಆಯೋಗಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ಆದೇಶದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೌಲಾನಾ ಅಬ್ಧುಲ್‌ ಕಲಾಂ ಆಝಾದ್‌ ಪೌಂಡೇಶನ್‌ ಮುಸ್ಲಿಂ ಸಮುದಾಯದ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಡುವೆ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರ್ಕಾರದಿಂದ ಅನುದಾನಿತ ಸಂಸ್ಥೆಯಾಗಿದೆ. ಇದನ್ನು ಮೊದಲ ಶಿಕ್ಷಣ ಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರ ಜನ್ಮ ಶತಮಾನೋತ್ಸವದಂದು 1989ರಲ್ಲಿ ಸ್ಥಾಪಿಸಲಾಗಿತ್ತು. ಇದರಡಿಯಲ್ಲಿ ಜೂನಿಯರ್ ಸಂಶೋಧನಾ ವಿದ್ಯಾರ್ಥಿಗಳಿಗೆ (ಜೆಆರ್‌ಎಫ್) ಮೊದಲ ಎರಡು ವರ್ಷಗಳವರೆಗೆ ಮಾಸಿಕ ರೂ.31,000 ನೀಡಿದರೆ, ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ (ಎಸ್‌ಆರ್‌ಎಫ್) ಉಳಿದ ಅವಧಿಗೆ ತಿಂಗಳಿಗೆ ರೂ.35,000 ನೀಡಲಾಗುತ್ತದೆ. 2021-22ರ ವರದಿಯಂತೆ ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್ 6,700 ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ, ಇದರ ಮೊತ್ತ 738.85 ಕೋಟಿ ರೂ.ಎಂದು ಹೇಳಲಾಗಿದೆ. ಆದರೆ ಈ ಯೋಜನೆಯನ್ನು 2022ರಲ್ಲಿ ನಿಲ್ಲಿಸಲಾಗಿತ್ತು. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

2006ರಲ್ಲಿ ಸಾಚಾರ್ ಸಮಿತಿಯ ವರದಿಯು ಮುಸ್ಲಿಮರ ಸ್ಥಿತಿಗತಿ ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟುಗಳಿಗಿಂತ ಸ್ವಲ್ಪ ಸುಧಾರಿತವಾಗಿದ್ದರೂ ಇತರೆ ಹಿಂದುಳಿದ ವರ್ಗ, ಇತರ ಅಲ್ಪಸಂಖ್ಯಾತರಿಗಿಂತ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಹೇಳಿದೆ. ಈ ಸಂಶೋಧನೆಗಳಿಗೆ ಪ್ರತಿಕ್ರಿಯೆಯಾಗಿ 2006ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಲಾಯಿತು, ನಂತರ MAEF ಸಚಿವಾಲಯದ ಅಧೀನಕ್ಕೆ ಬಂದಿದೆ. ಮೋದಿ ಆಡಳಿತದಲ್ಲಿ ಮೌಲಾನಾ ಅಬ್ಧುಲ್‌ ಕಲಾಂ ಆಝಾದ್‌ ಪೌಂಡೇಶನ್‌ ಗಮನಾರ್ಹ ಬಜೆಟ್ ಕಡಿತವನ್ನು ಅನುಭವಿಸಿದೆ. ಅನುದಾನದಲ್ಲಿ 2021-22 ರಲ್ಲಿ ರೂ.90 ಕೋಟಿಯಿಂದ 2022-23ರಲ್ಲಿ ರೂ.1 ಲಕ್ಷ ಕೋಟಿ ಮೀಸಲಿಟ್ಟಿದೆ, ಆದರೆ ತರುವಾಯ 2024-25ನೇ ಪ್ರಸಕ್ತ ವರ್ಷದಲ್ಲಿ ಸರಕಾರ ಯಾವುದೇ ಅನುದಾನ ಮೀಸಲಿಟ್ಟಿಲ್ಲ.

ಈ ಬೆಳವಣಿಗೆಯ ಕುರಿತು ಮಾತನಾಡಿದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರು, ಭಾರತದ ಮುಸ್ಲಿಂ ಸಮುದಾಯದ ನಡುವೆ ಶಿಕ್ಷಣವನ್ನು ಉತ್ತೇಜಿಸುವ MAEF ಮೇಲಿನ ಈ ಕ್ರಮವು ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ರತಿಷ್ಠಾನದ ಅಡಿಯಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದರು ಮತ್ತು ಪ್ರತಿಷ್ಠಾನವನ್ನು ಮುಚ್ಚುತ್ತಿರುವುದು ದುರದೃಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ವಕೀಲ್‌ ಹಸನ್‌ ನಿವಾಸವನ್ನು ಕೆಡವಿದ ಸ್ಥಳೀಯಾಡಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read