ಬಿಜೆಪಿ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುನರ್ ಪರಿಷ್ಕರಣೆ ಸಮಿತಿ ಮಾಡಿರುವ ಅವಾಂತರಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಶಾಲೆ ಶುರುವಾಗಿ 20 ದಿನಗಳಾಗುತ್ತಾ ಬಂದರೂ ಪಠ್ಯ ಪುಸ್ತಕಗಳು ಮಕ್ಕಳ ಕೈ ಸೇರಿಲ್ಲ. ಇನ್ನು ಸರ್ಕಾರದ ವೆಬ್ಸೈಟ್ನಲ್ಲಿನ ಪಿಡಿಎಫ್ಗಳು ಪದೇ ಪದೇ ಬದಲಾಗುತ್ತಾ ಗೊಂದಲ ಮೂಡಿಸಿವೆ. ಇಂತಹ ಸಂದರ್ಭದಲ್ಲಿ ನೂತನ ಪಠ್ಯದಲ್ಲಿ ಡಾ.ಎಚ್.ಎಸ್ ಅನುಪಮಾ, ಬೊಳುವಾರು ಮಹಮದ್ ಕುಂಞಿ ಸೇರಿದಂತೆ ಇತರ ಜನಪರ ಸಾಹಿತಿಗಳ ಪಠ್ಯ ಕೈಬಿಟ್ಟಿರುವುದು ಬೆಳಕಿಗೆ ಬಂದಿದೆ.
ಯಾವುದೇ ಅರ್ಹತೆಯಿಲ್ಲದ ರೋಹಿತ್ ಚಕ್ರತೀರ್ಥರನ್ನು ಪಠ್ಯ ಪರಿಷ್ಕರಣ ಸಮಿತಿಗೆ ಅಧ್ಯಕ್ಷರಾಗಿ ಮಾಡಿರುವುದು, ಸಮಿತಿಯಲ್ಲಿ ಬ್ರಾಹ್ಮಣರೇ ತುಂಬಿರುವುದು, ಭಗತ್ ಸಿಂಗ್, ಕುವೆಂಪು, ನಾರಾಯಣ ಗುರು ಸೇರಿದಂತೆ ಇತರ ಮಹಾನ್ ವ್ಯಕ್ತಿಗಳ ಪಠ್ಯ ಕೈಬಿಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಠ್ಯ ಬ್ರಾಹ್ಮಣೀಕರಣ ಮಾಡಲಾಗುತ್ತಿದೆ, ಬಸವಣ್ಣ, ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ದೇವನೂರ ಮಹಾದೇವರ ಆದಿಯಾಗಿ 10ಕ್ಕೂ ಹೆಚ್ಚು ಲೇಖಕರು ತಮ್ಮ ಪಠ್ಯ ಬಳಸಿಕೊಳ್ಳಲು ನೀಡಿದ್ದ ಅನುಮತಿಯನ್ನು ವಾಪಸ್ ಪಡೆದು ಪತ್ರ ಬರೆದಿದ್ದರು. ಇದು ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟುಮಾಡಿತ್ತು.
ಈ ಹಿಂದಿನ ಪಠ್ಯದಲ್ಲಿ ಲೇಖಕಿ, ಕವಯತ್ರಿ ಎಚ್.ಎಸ್ ಅನುಪಮಾರವರ 7ನೇ ತರಗತಿಯ ಕನ್ನಡ ಭಾಷಾ (ಪ್ರಥಮ) ಪಠ್ಯ ಪಸ್ತಕದಲ್ಲಿ ನನ್ನ ‘ಸಾವಿತ್ರಿಬಾಯಿ ಫುಲೆ’ (ಗದ್ಯ) ಬರಹ ಮತ್ತು 7ನೇ ತರಗತಿಯ ಕನ್ನಡ ಭಾಷಾ (ತೃತೀಯ) ಪಠ್ಯಪುಸ್ತಕದಲ್ಲಿ ‘ನೆನೆವುದೆನ್ನ ಮನ’ ಪಠ್ಯ ಇತ್ತು. ಆ ಎರಡು ಪಠ್ಯಗಳನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಕಿತ್ತು ಹಾಕಿದೆ. ಅದೇ ರೀತಿ 5ನೆಯ ತರಗತಿಯ ಕನ್ನಡ ಭಾಷಾ ಪಠ್ಯ ಪುಸ್ತಕದಿಂದ ಬೊಳುವಾರು ಮಹಮದ್ ಕುಂಞಿಯವರು ಸುಳ್ಳು ಹೇಳಬಾರದು ಎಂಬ ಪಾಠವನ್ನು ಸಹ ತೆಗೆಯಲಾಗಿದೆ. ಇದೇ ರೀತಿಯಾಗಿ ಪಠ್ಯ ವಾಪಸ್ ಪಡೆಯುವುದಾಗಿ ಪತ್ರ ಬರೆದಿದ್ದ ಪ್ರೊ.ಚಂದ್ರಶೇಖರ್ ತಾಳ್ಯ, ದು. ಸರಸ್ವತಿ ಸೇರಿದಂತೆ ಇನ್ನು ಹಲವರ ಪಠ್ಯವನ್ನು ಸದ್ದಿಲ್ಲದೆ ಕೈಬಿಡಲಾಗಿದೆ.
ಲೇಖಕರ ಪಠ್ಯ ಕೈಬಿಡುತ್ತಿದ್ದೇವೆ ಎಂದು ಚಕ್ರತೀರ್ಥ ನೇತೃತ್ವದ ಸಮಿತಿ ತಿಳಿಸಿಲ್ಲ. ಪಠ್ಯ ಪುಸ್ತಕಗಳನ್ನು ಮುದ್ರಿಸಿ ಹಂಚಿಲ್ಲ. ಸಮರ್ಪಕವಾಗಿ ಪಿಡಿಎಫ್ ಸಹ ಬಿಟ್ಟಿಲ್ಲ. ಇಷ್ಟೆಲ್ಲ ಗೊಂದಲಗಳ ನಡುವೆ ತಮ್ಮ ಮೂಲ ಪಠ್ಯ ಪ್ರಕಟಣೆಗೆ ಹಿಂದಿನ ಸಮಿತಿಗೆ ನೀಡಿದ್ದ ಅನುಮತಿ ವಾಪಸ್ ಪಡೆಯಲು ಪತ್ರ ಬರೆದ ಸಾಹಿತಿಗಳಿಗೆ ಪಠ್ಯದಲ್ಲಿ ನಿಮ್ಮ ಪಾಠ ಇಲ್ಲವೇ ಇಲ್ಲ ಎಂದು ದೂಷಿಸಲಾಗುತ್ತಿದೆ.
ಒಟ್ಟಿನಲ್ಲಿ ಪರಿಷ್ಕೃತಗೊಂಡಿರುವ ನೂತನ ಪಠ್ಯಗಳನ್ನು ಜಾರಿ ಮಾಡಿಯೇ ಸಿದ್ದ ಎಂದು ಸರ್ಕಾರ ಹೊರಟಿದೆ. ಮತ್ತೊಂದು ಕಡೆ ಲಿಂಗಾಯತ ಮತ್ತು ಒಕ್ಕಲಿಗ ಮಠಾಧೀಶರು, ಜನಪರ ಹೋರಾಟಗಾರರು, ವಿದ್ಯಾರ್ಥಿ ಮತ್ತು ಪೋಷಕ ಸಂಘಟನೆಗಳು ನೂತನ ಪರಿಷ್ಕರಣೆ ಕೈಬಿಟ್ಟು ಹಳೆಯ ಪಠ್ಯವನ್ನೆ ಬೋಧಿಸುವಂತೆ ಒತ್ತಡ ಹೇರುತ್ತಿವೆ. ಸಾಕಷ್ಟು ಗೊಂದಲ, ಗದ್ದಲಗಳಿಗೆ ಕಾರಣವಾಗಿರುವ ಈ ವಿವಾದ ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ; ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ