ಅವೈಜ್ಞಾನಿಕ ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿದ ಆರೋಪಕ್ಕೆ ಗುರಿಯಾಗಿ ವಿವಾದದ ಕೇಂದ್ರವಾಗಿರುವ ರೋಹಿತ್ ಚಕ್ರತೀರ್ಥ ಬರೆದ ಲೇಖನವೊಂದನ್ನು ಪಠ್ಯಪುಸ್ತಕ ಸಮಿತಿಯಲ್ಲಿ ಚರ್ಚೆಯನ್ನೇ ನಡೆಸದೇ ಕುವೆಂಪು ವಿಶ್ವವಿದ್ಯಾಲಯದ ಬಿಸಿಎ ಪದವಿಯ ಪಠ್ಯಕ್ಕೆ ಸೇರಿಸಿರುವುದು ಚರ್ಚೆಗೆ ಕಾರಣವಾಗಿದೆ.
ಈ ಕುರಿತು ‘ಪ್ರಜಾವಾಣಿ’ ದಿನಪತ್ರಿಕೆ ವಿಶೇಷ ವರದಿ ಮಾಡಿದ್ದು, “ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಪಠ್ಯಗಳನ್ನು ಎನ್ಇಪಿ ಪಠ್ಯಕ್ರಮದಂತೆ ಪರಿಷ್ಕರಿಸಲಾಗುತ್ತಿದೆ. ಕನ್ನಡ ಭಾಷಾ ವಿಷಯದ ಪಠ್ಯದ ತಂತ್ರಜ್ಞಾನ ವಿಭಾಗದಲ್ಲಿನ ‘ಕೃತಕ ಬುದ್ದಿವಂತಿಕೆ; ಭವಿಷ್ಯ ತಂತ್ರಜ್ಞಾನದ ಹೆಬ್ಬಾಗಿಲು’ ಲೇಖನದ ಲೇಖಕರ ಹೆಸರು ರೋಹಿತ್ ಬೆಂಗಳೂರು ಎಂದು ಸೇರಿಸಲಾಗಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ” ಎಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಠ್ಯಪುಸ್ತಕ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ, “ಇದು ರೋಹಿತ್ ಚಕ್ರತೀರ್ಥ ಅವರ ಲೇಖನ. ಅವರ ಪೂರ್ಣ ಹೆಸರನ್ನು ಮರೆಮಾಚಿ ಮೋಸ ಮಾಡಲಾಗಿದೆ” ಎಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಮಾತಿಗೆ ಮಾತು ಬೆಳೆದು, ಸದಸ್ಯರು ಪರಸ್ಪರ ಎಳೆದಾಡಿಕೊಂಡರು ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ರೋಹಿತ್ ಚಕ್ರತೀರ್ಥ ಸಂಪಾದಕತ್ವದ ‘ಸೂತ್ರ’ ಪತ್ರಿಕೆಯ 2021ರ ಆಗಸ್ಟ್ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ. ಮುದ್ರಿತ ಪ್ರತಿಯಲ್ಲಿ ಲೇಖಕರ ಹೆಸರು ‘ತತ್ವಬೋಧ’ ಎಂದಿದೆ. ಆದರೆ, ಕುವೆಂಪು ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲಿ ರೋಹಿತ್ ಬೆಂಗಳೂರು ಹೆಸರು ನಮೂದಿಸಲಾಗಿದೆ. ಲೇಖನ ಬಳಸಿಕೊಳ್ಳಲು ಅನುಮತಿ ನೀಡಿದ ಪತ್ರಿಕೆಯ ಸಂಪಾದಕೀಯ ಬಳಗ, ಲೇಖಕರ ಹೆಸರನ್ನು ‘ರೋಹಿತ್ ಬೆಂಗಳೂರು’ ಎಂದು ಹಾಕುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.
ವಿದ್ಯಾರ್ಥಿಗಳಿಗೆ ಲೇಖಕರ ಪರಿಚಯ ಮಾಡಿಕೊಡಬೇಕಲ್ಲವೇ?
ಒಂದು ಲೇಖನವನ್ನು ಪಠ್ಯದಲ್ಲಿ ಅಳವಡಿಸಿದರೆ ಅದನ್ನು ಬರೆದವರ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕಾಗುತ್ತದೆ. ಆದರೆ ಈ ರೀತಿಯಲ್ಲಿ ಪಠ್ಯವನ್ನು ಅಳವಡಿಸಿದರೆ ಲೇಖಕರ ಪರಿಚಯವನ್ನು ಮಾಡಿಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಇದನ್ನೂ ಓದಿರಿ: ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..
ಈ ಕುರಿತು ಪ್ರಶ್ನಿಸಿರುವ ಕನ್ನಡ ಪ್ರಾಧ್ಯಾಪಕರು ಹಾಗೂ ಭಾಷಾ ತಜ್ಞರೂ ಆದ ಡಾ.ರಂಗನಾಥ ಕಂಟನಕುಂಟೆ, “ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಆಗುವ ಬರೆಹಗಳ ಕುರಿತು ಪಾಠ ಮಾಡುವಾಗ ಲೇಖಕರ ಪರಿಚಯ ಮಾಡುವುದು ಒಂದು ಕ್ರಮ. ವಿದ್ಯಾರ್ಥಿಗಳಿಗೆ ಆ ಮೂಲಕ ಬರೆಹಗಾರರ ಕುರಿತು ತಿಳಿವು ನೀಡಲಾಗುವುದು. ಅದಕ್ಕೆ ಲೇಖಕರ ಬಗೆಗೆ ಸರಿಯಾದ ಮಾಹಿತಿಯನ್ನು ಟಿಪ್ಪಣಿಯಾಗಿ ಕೊಡಲಾಗುವುದು. ಆದರೆ ಇಲ್ಲಿ ಲೇಖಕನ ಹೆಸರನ್ನೇ ಸರಿಯಾಗಿ ನೀಡದೆ ಇರುವುದು ಎದ್ದು ಕಾಣುತ್ತದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಲೇಖಕನ ಹೆಸರನ್ನು ಏಕೆ ಬಚ್ಚಿಡಲಾಗುತ್ತಿದೆ? ಹೀಗೆ ಮಾಡುವುದರಿಂದ ಪಠ್ಯದ ಅಧಿಕೃತತೆಯ ಪ್ರಶ್ನೆ ಮೂಡುವುದಿಲ್ಲವೇ? ಪಠ್ಯ ಪುಸ್ತಕ ಗುಪ್ತ ಸಾಹಿತ್ಯವೇ? ಯಾಕೆ ಇಂತಹ ಕಳ್ಳಾಟ? ಇದು ಕೊನೆಗೆ ವಿವಿಗಳ ಘನತೆಯನ್ನು ಪ್ರಶ್ನೆ ಮಾಡುವ ಸನ್ನಿವೇಶ ಸೃಷ್ಟಿಸುತ್ತದೆ” ಎಂದು ಎಚ್ಚರಿಸಿದ್ದಾರೆ.
ಜಿ.ಎನ್.ಧನಂಜಯಮೂರ್ತಿ ಎಂಬವರು ಪ್ರತಿಕ್ರಿಯೆ ನೀಡಿದ್ದು, “ಕುವೆಂಪು ವಿಶ್ವವಿದ್ಯಾಲಯದ ವಾಟ್ಸಾಪ್ ಗ್ರೂಪಿನಲ್ಲಿ ಚರ್ಚೆ ನಡೆಯುತ್ತಿದೆ. ತಮ್ಮ ಆತ್ಮರತಿಯ ಬಗ್ಗೆ ಪರಸ್ಪರ ಭಜನೆ ಮಾಡಿಕೊಳ್ಳುವವರೆಲ್ಲ ಈಗ ಮೌನಕ್ಕೆ ಶರಣಾಗಿದ್ದಾರೆ. ಕೆಲವರಿಗೆ ತಿಳಿ ಹೇಳಿದರೆ ಅಸಂಬದ್ಧವಾಗಿ ವರ್ತಿಸುತ್ತಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆಯೊ ನೋಡಬೇಕು. ಕುವೆಂಪು ಬಗ್ಗೆ ಟ್ರೋಲ್ ಮಾಡುವ ವ್ಯಕ್ತಿಯನ್ನು ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದಬೇಕಾದದ್ದು ದುರಂತ” ಎಂದಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಹರ್ಷಕುಮಾರ್ ಕುಗ್ವೆಯವರು ಈ ಕುರಿತು ಪೋಸ್ಟ್ ಮಾಡಿದ್ದು, “ಇದರ ನೇರ ಹೊಣೆಗಾರಿಕೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಶಾಂತ್ ನಾಯಕ್ ಅವರು ಹೊರುವರೆ? ಯಾಕೆಂದರೆ ಪಠ್ಯ ಪುಸ್ತಕ ಸಮಿತಿಯ ಪ್ರಧಾನ ಸಂಪಾದಕರೂ ಅವರೇ” ಎಂದು ಟೀಕಿಸಿದ್ದಾರೆ.
ಕಳ್ಳ ಗಾಂಧಿಟೋಪಿ ಹಾಕಿಕೊಂಡ ಹಾಗೆ