ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ಬಿಟ್ಟರು. ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾದ ಕಾರಣ, ಸರ್ಕಾರ ಮಾಡಿರುವ ಈ ಕೆಲಸ ಮಹತ್ವದೆಂದು ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ದೇಶದಲ್ಲಿ ಚೀತಾಗಳನ್ನು ಬೆಳೆಸುವ ಉದ್ದೇಶದಿಂದ ‘ಚೀತಾ ಯೋಜನೆ’ ಜಾರಿಯಾಗಿದೆ.
ದಶಕಗಳ ಹಿಂದೆ ಈ ಯೋಜನೆ ಜಾರಿಯ ಕೆಲಸಗಳು ಆರಂಭವಾದವು. 2009ರಲ್ಲಿ ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತರುವ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. 2010ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಚೀತಾ ಯೋಜನೆಗೆ ಅನುಮತಿ ಕೊಟ್ಟಿತ್ತು. ಅದೇ ವರ್ಷ ಆಗಿನ ಪರಿಸರ ಮತ್ತು ಅರಣ್ಯ ಸಚಿವ ಜೈರಾಮ್ ರಮೇಶ್ ಅವರು ಚೀತಾಗಳನ್ನು ನೋಡಲು ಆಫ್ರಿಕಾಕ್ಕೆ ಹೋಗಿದ್ದರು. 2011ರಲ್ಲಿ 50 ಕೋಟಿ ರೂ. ಮಂಜೂರು ಮಾಡಿ ಪಾವತಿಸಲಾಯಿತು. 2013ರಲ್ಲಿ ಯೋಜನೆಗೆ ಸುಪ್ರೀಂಕೋರ್ಟ್ ತಡೆ ನೀಡಿತು. 2020ರಲ್ಲಿ ಸುಪ್ರೀಂಕೋರ್ಟ್ ತಡೆಯಾಜ್ಞೆಯನ್ನು ರದ್ದುಮಾಡಿತು. ಈಗ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವರ್ಷ ಚೀತಾಗಳನ್ನು ಭಾರತಕ್ಕೆ ಕರೆತಂದಿದೆ. ಚೀತಾವನ್ನು ತರಲು ಯಾರೂ ಪ್ರಯತ್ನಿಸಿರಲಿಲ್ಲ ಎಂದು ಮೋದಿ ಹೇಳಿದರೆ, ಕಾಂಗ್ರೆಸ್ ತಿರುಗೇಟು ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆತಂದ ಯೋಜನೆಯಿಂದ ಆಗಿರುವ ಪರಿಣಾಮಗಳೇನು? ಎಂದು ಯೋಚಿಸಬೇಕಿದೆ. ಕಳೆದ ಏಪ್ರಿಲ್ 25ರಂದು ಈ ಚೀತಾ ಯೋಜನೆಯ ಕುರಿತು ಗ್ರೌಂಡ್ ರಿಪೋರ್ಟ್ ಮಾಡಿದ್ದ ‘ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ’ (ಪರಿ) ಹಲವು ಆತಂಕಕಾರಿ ಸಂಗತಿಗಳನ್ನು ಬಿಚ್ಚಿಟ್ಟಿತ್ತು. “ಕೊನೊ: ಚೀತಾಗಳು ಒಳಗೆ, ಆದಿವಾಸಿಗಳು ಹೊರಗೆ” ಎಂಬ ವಿಸ್ತೃತ ಲೇಖನವನ್ನು ಪ್ರಕಟಿಸಿತ್ತು. ಇಲ್ಲಿನ ಆದಿವಾಸಿಗಳ ಪರಿಸ್ಥಿತಿಯ ಕುರಿತು ಬೆಳಕು ಚೆಲ್ಲಿತ್ತು.
ಹೆಚ್ಚಿನ ಬೆಲೆಯ ಸಫಾರಿ ಟಿಕೇಟುಗಳನ್ನು ಕೊಂಡು ಆಮದು ಮಾಡಲಾದ ಚೀತಾಗಳನ್ನು ನೋಡಲು ಬರುವ ಜನರಿಗಷ್ಟೇ ಇನ್ನು ಮುಂದೆ ಈ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶವಿರಲಿದೆ. ಇದು ಪೂರ್ವನಿಯೋಜಿತವಾಗಿದ್ದು, ಸ್ಥಳೀಯ ನಿವಾಸಿಗಳನ್ನು ಕಾಡಿನಿಂದ ಹೊರಗಟ್ಟಲಾಗುತ್ತದೆ. ಇಲ್ಲಿನ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವರದಿ ತಿಳಿಸಿತ್ತು.
“ಈ ವರ್ಷದ ಮಾರ್ಚ್ 6ರಂದು, ಅಲ್ಲಿನ ಅರಣ್ಯ ಚೌಕಿಯಲ್ಲಿ ಒಂದು ಸಭೆಯನ್ನು ಕರೆಯಲಾಯಿತು” ಎಂದು 40 ವರ್ಷದ ಬಲ್ಲು ಆದಿವಾಸಿ ತನ್ನ ಹಳ್ಳಿಯಾದ ಬಾಗ್ಚಾದ ಅಂಚಿನಲ್ಲಿರುವ ಕೂನೊ ಕಾಡಿನತ್ತ ಬೊಟ್ಟು ಮಾಡಿ ಹೇಳಿದ್ದರು. “ಈ ಪ್ರದೇಶವು ರಾಷ್ಟ್ರೀಯ ಉದ್ಯಾನವನವಾಗಿ ಮಾರ್ಪಟ್ಟಿದೆ ಮತ್ತು ನಾವು ಸ್ಥಳಾಂತರಗೊಳ್ಳಬೇಕು ಎಂದು ನಮಗೆ ತಿಳಿಸಲಾಯಿತು” ಎಂದು ತಿಳಿಸಿದ್ದರು.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಪಶ್ಚಿಮ ಅಂಚಿನಲ್ಲಿರುವ ಬಾಗ್ಚಾ ಸಹರಿಯಾ ಆದಿವಾಸಿ ಸಮುದಾಯದವರ ಗ್ರಾಮವಾಗಿದ್ದು, ಇಲ್ಲಿನ ಜನರನ್ನು ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ಗುರುತಿಸಲಾಗಿದೆ. ವಿಜಾಪುರ ಬ್ಲಾಕ್ನಲ್ಲಿರುವ ಈ ಗ್ರಾಮವು 2011ರ ಜನಗಣತಿಯ ಪ್ರಕಾರ 556 ಜನಸಂಖ್ಯೆಯನ್ನು ಹೊಂದಿದೆ. ಮಣ್ಣು ಮತ್ತು ಇಟ್ಟಿಗೆಯಿಂದ ನಿರ್ಮಿಸಿದ ಮನೆಗಳಲ್ಲಿ ಇಲ್ಲಿನ ಜನರು ವಾಸಿಸುತ್ತಾರೆ. ಕಲ್ಲಿನ ಚಪ್ಪಡಿಗಳನ್ನು ಛಾವಣಿಯಾಗಿ ಹೊದಿಸಲಾಗಿರುತ್ತದೆ, ಈ ಗ್ರಾಮ ರಾಷ್ಟ್ರೀಯ ಉದ್ಯಾನವನದಿಂದ ಸುತ್ತುವರೆದಿದೆ (ಇದನ್ನು ಕುನೊ ಪಲ್ಪುರ್ ಎಂದೂ ಕರೆಯಲಾಗುತ್ತದೆ), ಅಲ್ಲಿ ಕುನೊ ನದಿ ಹರಿಯುತ್ತದೆ.
ಅರವತ್ತು ವರ್ಷದ ಕಲ್ಲೋ ಆದಿವಾಸಿ ಎಂಬವರು ತಮ್ಮ ಬದುಕನ್ನೆಲ್ಲ ಬಾಗ್ಚಾದಲ್ಲಿಯೇ ಕಳೆದವರು. ‘ಪರಿ’ ತಂಡದೊಂದಿಗೆ ಮಾತನಾಡುತ್ತಾ, “ನಮ್ಮ ಭೂಮಿ ಇಲ್ಲೇ ಇದೆ. ನಮ್ಮ ಕಾಡು ಇಲ್ಲಿದೆ, ನಮ್ಮ ಮನೆ ಇಲ್ಲಿದೆ, ಇಲ್ಲಿ ಏನಿದೆಯೋ ಅದು ನಮ್ಮದು. ಈಗ ನಮ್ಮನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ” ಎಂದು ದುಃಖ ತೋಡಿಕೊಂಡಿದ್ದರು.
ಬಾಗ್ಚಾ ಸುತ್ತಲೂ ಕಾಡು. ಹೆಚ್ಚಿನ ಸಂಖ್ಯೆಯ ಬೀಡಾಡಿ ದನಗಳು. ಇಲ್ಲಿಗೆ ಆರೋಗ್ಯ ಕೇಂದ್ರವು 20 ಕಿಲೋಮೀಟರ್ ದೂರದಲ್ಲಿದೆ. 108ಕ್ಕೆ ಕರೆ ಮಾಡುವ ಮೂಲಕ ಸೌಲಭ್ಯ ಪಡೆಯಬಹುದು, ಆದರೆ ಫೋನ್ ಲೈನ್ ಗಳು ಮತ್ತು ನೆಟ್ವರ್ಕ್ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯ. ಬಾಗ್ಚಾದಲ್ಲಿ ಪ್ರಾಥಮಿಕ ಶಾಲೆ ಇದೆ, ಆದರೆ 5ನೇ ತರಗತಿಯ ನಂತರ ಓದಲು, ಮಕ್ಕಳು 20 ಕಿಲೋಮೀಟರ್ ದೂರದಲ್ಲಿರುವ ಓಚಾದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕು.
ಸಹರಿಯಾ ಜನರು ಸಣ್ಣ ತುಂಡು ಭೂಮಿಗಳಲ್ಲಿ ಮಳೆಯಾಶ್ರಿತ ಕೃಷಿಯನ್ನು ಮಾಡುತ್ತಾರೆ. ಕಾಡನ್ನು ನಂಬಿ ಬದುಕು ಕಂಡುಕೊಂಡ ಜನರಿವರು. ತೆಂಡು ಎಲೆಗಳು, ಹಣ್ಣುಗಳು, ಬೇರುಗಳು ಮತ್ತು ಗಿಡಮೂಲಿಕೆಗಳು, ಇತ್ಯಾದಿಗಳು ಇವರ ಸಂಪಾದನೆಯ ಮೂಲವಾಗಿದ್ದವು. ಕಾಡಿನಿಂದ ಹೊರಹೋಗುವುದೆಂದರೆ ಈ ಎಲ್ಲಾ ಆದಾಯ ಮೂಲಗಳನ್ನು ಕಳೆದುಕೊಳ್ಳುವುದೇ ಆಗಿದೆ.
“ನಮಗೆ ಕಾಡು ನೀಡುತ್ತಿದ್ದ ಸುರಕ್ಷಿತ ಭಾವನೆ ಇಲ್ಲವಾಗುತ್ತದೆ. ಇನ್ನು ಮುಂದೆ ಚಿರ್ ಮತ್ತು ಗೊಂಡ್ ಸಂಗ್ರಹಿಸಲು ಸಾಧ್ಯವಿಲ್ಲ. ನಮ್ಮ ಉಪ್ಪು ಮತ್ತು ಎಣ್ಣೆಯ ಖರ್ಚು ಇದರಿಂದಲೇ ಹುಟ್ಟುತ್ತಿತ್ತು. ನಮಗೆ ದಿನಗೂಲಿಯೊಂದೇ ಆಯ್ಕೆಯಾಗಿ ಉಳಿಯಲಿದೆ” ಎಂದು ಸಹಾರಿಯ ಸಮುದಾಯದ ಹರೇತ್ ಆದಿವಾಸಿ ನೋವು ತೋಡಿಕೊಂಡಿದ್ದಾರೆ.
ಚೀತಾ ಯೋಜನೆಯಿಂದ ಹೇಗೆ ಇಲ್ಲಿನ ಆದಿವಾಸಿಗಳು ತೊಂದರೆಗೀಡಾಗಿದ್ದಾರೆ ಎಂಬುದನ್ನು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ನೇತೃತ್ವದ ‘ಪರಿ’ ತಂಡ ವಿಸ್ತೃತವಾಗಿ ಹೊರಗೆಡವಿದೆ. (ವಿವರಗಳನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿ)
ಇದನ್ನೂ ಓದಿರಿ: ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ
ಪ್ರಕೃತಿ ವಿರೋಧಿ ಕೃತ್ಯ: ನವೀನ್ ಸೂರಿಂಜೆ
“ಆಫ್ರಿಕಾದಿಂದ ಭಾರತಕ್ಕೆ ಚೀತಾವನ್ನು ತಂದಿರೋದನ್ನು ವೈಭವಿಕರೀಸಲಾಗುತ್ತಿದೆ. ವಾಸ್ತವವಾಗಿ ಇದು ಪ್ರಕೃತಿ ವಿರೋಧಿ ಮತ್ತು ಮಾನವ ವಿರೋಧಿ ಕೃತ್ಯ” ಎನ್ನುತ್ತಾರೆ ಪತ್ರಕರ್ತ ನವೀನ್ ಸೂರಿಂಜೆ.
“ಆಫ್ರಿಕಾದಿಂದ ತಂದ ಚೀತಾವನ್ನು ಅದರದ್ದಲ್ಲದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಜಗತ್ತಿನ ಅತ್ಯಂತ ವೇಗದ ಮತ್ತು ಕ್ರೂರ ಪ್ರಾಣಿಯಾದ ಚೀತಾ ತನ್ನದಲ್ಲದ ಅಪರಿಚಿತ ಕಾಡಲ್ಲಿ ಬೇಟೆಯನ್ನು ಹುಡುಕಬೇಕು. ಅದು ಕಾಡಿನ ಸುತ್ತ ಇರುವ ಆದಿವಾಸಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಆಹಾರದ ಕೊರತೆಯಾದಾಗ, ಹೊಸ ಕಾಡಲ್ಲಿ ಬೇಟೆ ಸಿಗದೇ ಇದ್ದಾಗ ಕುನೋ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಆದಿವಾಸಿಗಳು ಮತ್ತು ಅವರ ಹಟ್ಟಿಯಲ್ಲಿರುವ ದನಗಳತ್ತಾ ಚೀತಾದ ಗಮನ ಸೆಳೆಯಬಹುದು. ಜೊತೆಗೆ ಕಾಡಿನ ಹೊಸ ಚೀತಾಗಳ ಆಗಮನದಿಂದ ಚಿರತೆಗಳು ಮತ್ತು ಹುಲಿಗಳು ಕಾಡಿನ ಹೊರ ಭಾಗದಲ್ಲಿ ಸುಲಭವಾಗಿ ಸಿಗುವ ಮನುಷ್ಯರು ಮತ್ತು ಮನುಷ್ಯರು ಸಾಕಿದ ಪ್ರಾಣಿಗಳ ಮೇಲೆ ಎರಗಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಇದು ಮೋದಿಯಿಂದಾದ ಸಮಸ್ಯೆ ಮಾತ್ರವಲ್ಲ. ನಮ್ಮದೇ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲೂ ಈ ಸಮಸ್ಯೆ ಇದೆ. ಯಾವುದಾದರೂ ಊರಲ್ಲಿ ಚಿರತೆ ಸಿಕ್ಕಿದರೆ ಅದನ್ನು ಹಿಡಿದು ಪಶ್ಚಿಮ ಘಟ್ಟದಲ್ಲಿ ಬಿಡುತ್ತಾರೆ. ಎಲ್ಲೇ ಕಾಳಿಂಗ ಸರ್ಪ, ಹುಲಿಯ ಪ್ರಭೇದಗಳು ಸಿಕ್ಕರೂ ಪಶ್ಚಿಮ ಘಟ್ಟದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಈ ರೀತಿ ಸಿಕ್ಕ ಪ್ರಾಣಿಗಳ ನಿಜವಾದ ವಾಸಸ್ಥಳ ಎಲ್ಲಿ? ಅವು ಯಾವ ಕಾಡಿನಿಂದ ತಪ್ಪಿಸಿಕೊಂಡು ಬಂದವು ಎಂಬ ಬಗ್ಗೆ ಅಧ್ಯಯನ ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ. ಯಾವುದೋ ಒಂದು ಕಾಡಾದರೆ ಆಯ್ತು. ಹೀಗೆ ಮಾಡಿದ್ದರಿಂದ ಕುತ್ಲೂರು ಸೇರಿದಂತೆ ಹಲವಾರು ಕಾಡಂಚಿನ ಗ್ರಾಮದ ಆದಿವಾಸಿಗಳು ತೊಂದರೆ ಅನುಭವಿಸಿದ್ದಿದೆ. ಈ ರೀತಿ ಎಲ್ಲೆಲ್ಲಿಂದಲೋ ಪ್ರಾಣಿಗಳ ತಂದು ನಮ್ಮ ಕಾಡಲ್ಲಿ ತಂದು ಬಿಡುವುದನ್ನು ಮಲೆಕುಡಿಯ ಸಮುದಾಯ ಪ್ರತಿಭಟನೆ ಕೂಡಾ ನಡೆಸಿತ್ತು” ಎಂದು ತಿಳಿಸಿದ್ದಾರೆ.
೫೫೬ ಜನ ಆದಿವಾಸಿಗಳ ಬದುಕನ್ನು ಹಾಳುಮಾಡಿ, ವಿದೇಶದಿಂದ ಚಿರತೆ ತಂದು ಸಾಕಬೇಕಾದ ಅನಿವಾರ್ಯತೆ ನಮಗೆ ಇದೆಯಾ? ಈ ಆದಿವಾಸಿಗಳ ಬದುಕಿಗೆ ಬೆಲೆಯೇ ಇಲ್ಲವಾ?