Homeಕರ್ನಾಟಕರಂಗಾಯಣ ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣ ಸಮಾರೋಪಕ್ಕೆ ಚಕ್ರವರ್ತಿ ಸೂಲಿಬೆಲೆ!

ರಂಗಾಯಣ ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣ ಸಮಾರೋಪಕ್ಕೆ ಚಕ್ರವರ್ತಿ ಸೂಲಿಬೆಲೆ!

ಚಕ್ರವರ್ತಿ ಸೂಲಿಬೆಲೆಯವರನ್ನು ‘ಸಮಾಜ ಸೇವಕ’ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುವುದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಉಡಾಫೆಯಾಗಿ ಉತ್ತರಿಸಿದ್ದಾರೆ.

- Advertisement -
- Advertisement -

ಬಹುರೂಪಿ ಮೈಸೂರು ರಂಗಾಯಣದ ಪ್ರತಿಷ್ಟಿತ ರಾಷ್ಟ್ರೀಯ ನಾಟಕೋತ್ಸವ. ಪ್ರತಿವರ್ಷ ಯಾವುದಾದರೂ ಒಂದು ವಿಷಯವಸ್ತು ಇಟ್ಟುಕೊಂಡು ರಾಷ್ಟ್ರೀಯ ನಾಟಕೋತ್ಸವ ಹಾಗೂ ರಾಷ್ಟ್ರೀಯ ವಿಚಾರಸಂಕಿರಣವನ್ನು ರಂಗಾಯಣ ಇಲ್ಲಿಯವರೆಗೆ ನಡೆಸಿಕೊಂಡು ಬಂದಿದೆ. ಸಾಕಷ್ಟು ಏಳುಬೀಳುಗಳನ್ನು ಬಹುರೂಪಿ ನಾಟಕೋತ್ಸವ ಕಂಡಿದೆ. ಬಹುತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹುರೂಪಿಯ ಮೂಲಕ ರಂಗಾಯಣ ಸವೆಸಿರುವ ಹಾದಿ ದೊಡ್ಡದು. ಅಂತಹ ರಂಗಾಯಣ ಇತ್ತೀಚಿನ ದಿನಗಳಲ್ಲಿ ವಿವಾದಗಳ ಕೇಂದ್ರವಾಗುತ್ತಿದೆ.

ಅಡ್ಡಂಡ ಸಿ.ಕಾರ್ಯಪ್ಪ ಅವರು ಮೈಸೂರು ರಂಗಾಯಣದ ನಿರ್ದೇಶಕರಾದ ಬಳಿಕ ಒಂದಿಲ್ಲೊಂದು ವಿವಾದಗಳಲ್ಲಿ ರಂಗಾಯಣ ಸಿಲುಕುತ್ತಲೇ ಇದ್ದು, ಪ್ರಸಕ್ತ ಬಹುರೂಪಿ ಕಾರ್ಯಕ್ರಮವೂ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಲಪಂಥೀಯ ವಿಚಾರಧಾರೆಯ ಅಡ್ಡಂಡ ಸಿ.ಕಾರ್ಯಪ್ಪ ಅವರು ಅದೇ ವಿಚಾರಧಾರೆಯುಳ್ಳವರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಯಣಕ್ಕೆ ಕರೆಸಿಕೊಳ್ಳುವುದು ಮತ್ತು ಹೆಚ್ಚಿನ ಅವಕಾಶ ನೀಡುವುದು ಈಗ ಗುಟ್ಟಿನ ವಿಷಯವೇನಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾ, ಸುಳ್ಳು ಸುದ್ದಿಗಳನ್ನು ಹರಡುತ್ತಾ, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ಚಕ್ರವರ್ತಿ ಸೂಲಿಬೆಲೆ ಅಂಥವರನ್ನು ಬಹುರೂಪಿ ನಾಟಕೋತ್ಸವ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಕರೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

‘ತಾಯಿ’ ಎಂಬುದು ಈ ಬಾರಿಯ ಬಹುರೂಪಿಯ ವಿಷಯವಸ್ತುವಾಗಿದೆ. ಪದ್ಮಶ್ರೀ ಪುರಸ್ಕೃತ ತುಳಸೀಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಬಿಜೆಪಿ ನಾಯಕಿ, ನಟಿ ಮಾಳವಿಕಾ ಅವಿನಾಶ್ ಅವರಿಂದ ಉದ್ಘಾಟನಾ ಭಾಷಣ ಮಾಡಿಸಲು ರಂಗಾಯಣ ಹೊರಟಿದೆ. ಉದ್ಘಾಟನೆಗೆ ಒಬ್ಬರು, ಉದ್ಘಾಟನಾ ಭಾಷಣಕ್ಕೆ ಒಬ್ಬರು ಭಾಷಣ ಮಾಡುವುದು ಹೊಸ ಸಂಪ್ರದಾಯ ಎನ್ನಲಾಗುತ್ತಿದೆ. ಆದರೆ ಈ ಕುರಿತು ರಂಗಾಯಣ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಮಾಳವಿಕ ಅವರನ್ನು ವಿಶೇಷ ಅತಿಥಿಯಾಗಿ ಕರೆಸುವ ಚಿಂತನೆ ನಡೆಸಲಾಗುತ್ತಿದೆ. ಆದರೆ ಈಗಾಗಲೇ ವಿಚಾರಸಂಕಿರಣಕ್ಕೆ ಸಂಬಂಧಿಸಿದ ಅತಿಥಿಗಳ ಪಟ್ಟಿ ಸಿದ್ಧವಾಗಿದೆ. ಡಿಸೆಂಬರ್‌ 10ರಿಂದ ಡಿ.19ರವರೆಗೆ ಬಹುರೂಪಿ ನಡೆಯಲಿದ್ದು, ಉದ್ಘಾಟನಾ ಸಮಾರಂಭ ಡಿಸೆಂಬರ್‌‌ 11ರಂದು ಜರುಗಲಿದೆ.


ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?


ಡಿಸೆಂಬರ್‌ 12 ಮತ್ತು 13ರಂದು ಬಹುರೂಪಿ ವಿಚಾರಸಂಕಿರಣ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ನಾ.ಡಿಸೋಜ, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಚೂಡಾರತ್ನಮ್ಮ, ದಕ್ಷಿಣ ಮೂರ್ತಿ, ಕೃಷ್ಣಕುಮಾರ್‌, ಅಭಿರುಚಿ ಚಂದ್ರು, ಭುವನೇಶ್ವರಿ ಹೆಗಡೆ, ಎಚ್.ಎಸ್.ವೆಂಕಟೇಶ್‌ ಮೂರ್ತಿಯವರು ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.13ರಂದು ನಡೆಯುವ ಭಾಷಣ ಸ್ಪರ್ಧೆಯ ಬಳಿಕ, ಅಂದು ಸಂಜೆ 4 ಗಂಟೆಗೆ ಬಿಜೆಪಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯವರು ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡಲಿದ್ದಾರೆ. ಅಲ್ಲದೆ ಆಮಂತ್ರಣ ಪತ್ರಿಕೆಯಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಗೆ ‘ಸಮಾಜಸೇವಕ’ ಎಂಬ ವಿಶೇಷಣ ನೀಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಪ್ಪ ಉಡಾಫೆ ಪ್ರತಿಕ್ರಿಯೆ

ಮೈಸೂರಿನಲ್ಲಿ ಬುಧವಾರ ಅಡ್ಡಂಡ ಕಾರ್ಯಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿದ್ದು, ಪತ್ರಕರ್ತರ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳನ್ನು ನೀಡಿಲ್ಲ. ‘ಸಮಾಜ ಸೇವಕ’ ಎಂದು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿರುವುದನ್ನು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಅಡ್ಡಂಡ ಕಾರ್ಯಪ್ಪ ಅವರು ಉಡಾಫೆಯಿಂದ ಉತ್ತರಿಸಿದ್ದಾರೆ.

“ಚಕ್ರವರ್ತಿ ಸೂಲಿಬೆಲೆಯವರು ಸಮಾರೋಪ ಭಾಷಣಕ್ಕೆ ಸೂಕ್ತವ್ಯಕ್ತಿ ಎನಿಸಿದ್ದರಿಂದ ನಾವು ಕರೆದಿದ್ದೇವೆ. ಚಕ್ರವರ್ತಿ ಸೂಲಿಬೆಲೆಯವರ ವಿಚಾರವನ್ನು ಬಿಟ್ಟುಬಿಡಿ. ಅವರನ್ನು ಕರೆದಿದ್ದೇವೆ. ಬರ್ತಾರೆ, ಸಮಾರೋಪ ಭಾಷಣ ಮಾಡ್ತಾರೆ. ಆ ಭಾಷಣದಲ್ಲಿ ದೋಷಗಳನ್ನು ಕಂಡು ಹಿಡಿದು ಅದನ್ನು ಪ್ರಕಟಿಸಿ, ಅದು ನಿಮ್ಮ ಸ್ವಾತಂತ್ರ್ಯ” ಎಂದು ಪತ್ರತರ್ಕರಿಗೆ ಬೋಧನೆ ಮಾಡಿದ್ದಾರೆ.

“ಜನರಿಗೆ ಇವರಿಂದ ಏನು ಸಂದೇಶ ಕೊಡುತ್ತೀರಿ?” ಎಂದು ಕೇಳಿದರೆ, “ಯುವಕರಿಗೆ ಸಂದೇಶವನ್ನು ಕೊಡುತ್ತೀವಿ” ಎಂದಿದ್ದಾರೆ. “ನಾವು ಚರ್ಚೆ ಮಾಡಿ ಒಂದಿಷ್ಟು ಜನರನ್ನು ಕರೆದಿದ್ದೇವೆ” ಎಂದು ಕಾರ್ಯಪ್ಪ ಪ್ರತಿಕ್ರಿಯೆ ನೀಡುತ್ತಾರೆ. “ಚಕ್ರವರ್ತಿ ಸೂಲಿಬೆಲೆಯವರು ರೈತರ ಬಗ್ಗೆ, ರಂಗಭೂಮಿ ಬಗ್ಗೆ ಯಾವತ್ತೂ ಮಾತನಾಡಲ್ಲ. ಯಾರೋ ಒಬ್ಬರನ್ನು ಒಲೈಸುತ್ತಾರೆ” ಎಂದು ಪತ್ರಕರ್ತರು ಕೇಳಿದರೆ, “ಮಾಧ್ಯಮದ ಕೆಲವರಿಗೆ ಹಾಗೆ ಅನ್ನಿಸಿರಬಹುದು, ಎಲ್ಲರಿಗೂ ಅಲ್ಲ” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿರಿ: ಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್‌ ಬರಹಕ್ಕೆ ಮಿಡಿದ ಕನ್ನಡಿಗರು


ಅಡ್ಡಂಡ ಕಾರ್ಯಪ್ಪ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದಾಗಲೂ ಹೀಗೆಯೇ ಉಡಾಫೆ ಉತ್ತರಗಳನ್ನೇ ನೀಡಿದರು. “ಚಕ್ರವರ್ತಿ ಸೂಲಿಬೆಲೆಯವರು ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ. ಅವರನ್ನು ಕರೆಸುವುದು ಎಷ್ಟು ಸರಿ? ಸಂಘಪರಿವಾರದ ವಿಚಾರಧಾರೆಗಳ ವ್ಯಕ್ತಿಗಳಾದರೂ ಎಲ್ಲ ಜನವರ್ಗವನ್ನು ಗೌರವಿಸುವ ಬಲಪಂಥೀಯರನ್ನು ಕರೆಸಬಹುದಲ್ಲ?” ಎಂದು ಕೇಳಿದೆವು. ನಮ್ಮ ಮಾಧ್ಯಮದ ಕುರಿತು ಲಘುವಾಗಿ ಮಾತನಾಡುತ್ತಲೇ ಉತ್ತರಿಸಿದ ಅವರು, “ನಿಮಗೆ ಅವರು ಸುಳ್ಳು ಹೇಳಿದ್ದಾರೆಂದು ಅನಿಸಬಹುದು. ಆದರೆ ನಮಗೆ ಅವರು ಸತ್ಯಗಳನ್ನು ಹೇಳುತ್ತಿದ್ದಾರೆ ಅನಿಸುತ್ತದೆ. ಅವರನ್ನು ಕಂಡರೆ ನಿಮಗೆ ಆಗಲ್ಲ, ನಮಗೆ ಅವರನ್ನು ಕಂಡರೆ ಆಗುತ್ತದೆ” ಎಂದರು.

“ಬಹುರೂಪಿಯು ಬಹುತ್ವವನ್ನು ಪ್ರತಿನಿಧಿಸುವ ಒಂದು ಕಾರ್ಯಕ್ರಮ. ಬಹುತ್ವದ ಬಗ್ಗೆ ನಂಬಿಕೆ ಇರದವರನ್ನು ವೇದಿಕೆಗೆ ಕರೆಸುವುದು ಎಷ್ಟು ಸರಿ?” ಎಂದು ಕೇಳಿದರೆ, “ಈ ಸಿದ್ಧಾಂತವನ್ನೆಲ್ಲ ನಿಮಗೆ ಇಟ್ಟುಕೊಳ್ಳಿ. ನಮಗಲ್ಲ. ಇನ್ನೊಬ್ಬರನ್ನು ಓಲೈಸಲು ಆಗಲ್ಲ. ಸೂಲಿಬೆಲೆ ನಿಮಗೆ ಸುಳ್ಳುಗಾರರಾಗಿರಬಹುದು. ನಮಗೆ ಸುಳ್ಳುಗಾರನಲ್ಲ. ಒಂದು ವರ್ಷ ಅಧಿಕಾರದಲ್ಲಿರುತ್ತೇನೆ, ಏನು ಬರೆದುಕೊಳ್ಳುತ್ತೀರೋ ಬರೆದುಕೊಳ್ಳಿ. ಯಾವುದಕ್ಕೂ ಧೃತಿಗೆಡುವುದಿಲ್ಲ” ಎಂದ ಅವರು ಬಹುತ್ವದ ವಿಷಯವನ್ನೇ ನಿರಾಕರಿಸಿದರು.

“ಸ್ವತಃ ಚಕ್ರವರ್ತಿ ಸೂಲಿಬೆಲೆಯವರೇ ತಾವು ಹೇಳಿರುವ ಮಾತುಗಳನ್ನು ಸತ್ಯವೆಂದು ಸಾಬೀತು ಮಾಡಲು ಸಾಧ್ಯವಾಗದಿರುವಾಗ, ನೀವು ಹೇಗೆ ಅವರು ಹೇಳುತ್ತಿರುವುದು ಸತ್ಯ ಎಂದು ಸಾಬೀತು ಮಾಡುತ್ತೀರಿ?” ಎಂದು ಕೇಳಿದೆವು. “ನಾನು ಅಷ್ಟು ಆಳಕ್ಕೆ ಇಳಿದಿಲ್ಲರ್‍ರೀ, ನೀವು ಆಳಕ್ಕೆ ಇಳಿದು ಏಕಮುಖ ವಿಚಾರಗಳನ್ನು ಬಿತ್ತುವ ಜನ್ಮದಲ್ಲಿ ಹುಟ್ಟಿದ್ದೀರಿ, ವಿವಾದ ಮಾಡಿಕೊಳ್ಳಿ” ಎಂದು ಹೇಳುತ್ತಾ ಮಾತುಮುಗಿಸಿದರು.


ಇದನ್ನೂ ಓದಿರಿ: ಹೋರಾಟಗಾರ್ತಿ ‘ಸುಧಾ ಭಾರದ್ವಾಜ್‌’ ಅವರಿಗೆ ಜಾಮೀನು


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...