ಛತ್ತೀಸ್ಗಡಾದ ಸುರ್ಗುಜಾ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳು ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಮತ್ತು ಮುಸ್ಲಿಮರೊಂದಿಗೆ ವಾಣಿಜ್ಯ ವಹಿವಾಟುಗಳನ್ನು ನಿಲ್ಲಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳ ಪತ್ತೆಗೆ ಮತ್ತು ಘಟನೆಯ ಬಗ್ಗೆ ತನಿಖೆಗೆ ರಾಜ್ಯ ಪೊಲೀಸ್ ಶುಕ್ರವಾರ ಆದೇಶಿಸಿದೆ.
ಹಳ್ಳಿಗೆ ತೆರಳಿ ಅಲ್ಲಿನ ನಿವಾಸಿಗಳನ್ನು ಒಗ್ಗೂಡಿಸಿ ಪ್ರತಿಜ್ಞೆ ಮಾಡಿಸಿದವರನ್ನು ಹುಡುಕುತ್ತಿದ್ದೇವೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ನಿವಾಸಿಗಳೊಂದಿಗೆ ಮಾತನಾಡಿದ್ದಾರೆ ಎಂದು ಸರ್ಗುಜಾ ಜಿಲ್ಲಾಧಿಕಾರಿ ಸಂಜೀವ್ ಝಾ ತಿಳಿಸಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಟ್ಯ್ರಾಪ್ ಮಾಡುತ್ತಿದ್ದಾರೆ ಎಂದು ತಪ್ಪಾಗಿ ವಿಡಿಯೊ ಶೇರ್ ಮಾಡಲಾಗುತ್ತಿದೆ
ಈ ವಾರ ಇಲ್ಲಿ ಕೋಮು ಘರ್ಷಣೆ ನಡೆದ ನಂತರ ಈ ವೀಡಿಯೊ ಕಾಣಿಸಿಕೊಂಡಿದ್ದು, ಎರಡೂ ಕಡೆಯ ಆರೋಪಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. “ಘರ್ಷಣೆಯು ಸ್ಥಳೀಯವಾಗಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಪ್ರಾರಂಭವಾಯಿತು. ಘಟನೆಗೆ ಕೆಲವರು ಕೋಮು ಬಣ್ಣ ಬಳಿಯುತ್ತಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜನವರಿ 1 ರಂದು ಹೊಸ ವರ್ಷ ಆಚರಿಸಲು ಬಲರಾಂಪುರ ಜಿಲ್ಲೆಯ ಆರಾ ಗ್ರಾಮಸ್ಥರು ಕುಂದಿ ಕಲಾ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಘರ್ಷಣೆ ನಡೆದಿತ್ತು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಶುಕ್ಲಾ ತಿಳಿಸಿದ್ದಾರೆ.
“ಆರಾ ಗ್ರಾಮದ ಕೆಲವರು ಕುಂದಿ ಕಾಲ ಗ್ರಾಮದ ನಿವಾಸಿಗಳೊಂದಿಗೆ ಜಗಳವಾಡಿದರು. ಜಟಾಪಟಿ ಬಳಿಕ ಆರಾ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತೆರಳಿ ಮತ್ತೆ ವಾಪಸಾಗಿ ವಾಗ್ವಾದ ನಡೆಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗ್ರಾಮಸ್ಥರ ವಿರುದ್ಧ ಸೂಕ್ತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರುದಿನ, ಆರಾದಿಂದ ಆರು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು, ಆದರೆ ನಂತರ ಅದೇ ದಿನ ಜಾಮೀನು ಪಡೆದಿದ್ದರು. ಇದು ಕುಂದಿ ಕಲಾ ಗ್ರಾಮಸ್ಥರನ್ನು ಕೆರಳಿಸಿದೆ” ಎಂದು ವಿವೇಕ್ ಶುಕ್ಲಾ ಹೇಳಿದ್ದಾರೆ.
ಇದನ್ನೂ ಓದಿ:ಫ್ಯಾಕ್ಟ್ಚೆಕ್: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬುದು ಸುಳ್ಳು
ಇದರ ನಂತರ ಹೊರಗಿನ ಗುಂಪೊಂದು ಗ್ರಾಮಸ್ಥರನ್ನು ಪ್ರಚೋದಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಎರಡು ಸಮುದಾಯಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಹೊರಗಿನವರು ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಎತ್ತಿದ್ದಾರೆ. ನಮಗೆ ದೂರು ಬಂದ ತಕ್ಷಣ, ಹಿರಿಯ ಅಧಿಕಾರಿಗಳು ಮತ್ತು ನಾನು ಗ್ರಾಮಕ್ಕೆ ಧಾವಿಸಿ, ಸಮಸ್ಯೆಗೆ ಕೋಮು ಬಣ್ಣ ನೀಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ, ಗ್ರಾಮಸ್ಥರು ದಾರಿತಪ್ಪಿಸಬಾರದು ಎಂದು ವಿವರಿಸಿದ್ದೇವೆ” ಎಂದು ವಿವೇಕ್ ಶುಕ್ಲಾ ಹೇಳಿದ್ದಾರೆ.
ಪ್ರತಿಜ್ಞಾ ಸಭೆಯನ್ನು ಆಯೋಜಿಸಿದ ಮತ್ತು ಮುಸ್ಲಿಮರ ವಿರುದ್ಧ ಘೋಷಣೆ ಕೂಗಿದ ಆರೋಪಿಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ನಮಗೆ ದೂರು ಬಂದಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು. ಗ್ರಾಮಸ್ಥರು ತಾವು ಮಾಡಿದ್ದು ತಪ್ಪು ಎಂದು ಅರಿತುಕೊಂಡಿದ್ದಾರೆ, ಆದರೆ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ.
ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ: ಮುಸ್ಲಿಂ ಬಾಲಕಿಯರನ್ನು ಬೆದರಿಸಿದ ಯುವಕರಿಗೆ ಬಿಜೆಪಿ ಮುಖಂಡನ ಶ್ಲಾಘನೆ