Homeಬಹುಜನ ಭಾರತಬಹುಜನ ಭಾರತ: ಅರುಣಾಚಲದ ಮೇಲೆ ಚೀನಾ ಕಣ್ಣು?

ಬಹುಜನ ಭಾರತ: ಅರುಣಾಚಲದ ಮೇಲೆ ಚೀನಾ ಕಣ್ಣು?

ಮೋದಿ ಮತ್ತು ಝಿನ್ ಪಿಂಗ್ ಇಬ್ಬರೂ ಸದ್ಯಕ್ಕೆ ಯುದ್ಧವನ್ನು ಒಲ್ಲರು. ಇಬ್ಬರಿಗೂ ತಮ್ಮ ದೇಶಗಳ ಅಸಲಿ ಸಮಸ್ಯೆಗಳಿಂದ ಆಂತರಿಕ ಮತ್ತು ಬಾಹ್ಯ ಗಮನವನ್ನು ಬೇರೆಡೆಗೆ ಸೆಳೆಯುವ ಅನಿವಾರ್ಯವಿದೆ. ಗಾಲ್ವಾನ್ ಕಣಿವೆಯ ವಿವಾದ ಇನ್ನೂ ಕೆಲ ತಿಂಗಳುಗಳ ಕಾಲ ಕುದಿಯಲಿದೆ.

- Advertisement -
- Advertisement -

ಒಂದೊಮ್ಮೆ ಕಮ್ಯೂನಿಸ್ಟ್? ಸಿದ್ಧಾಂತದ ತವರಾಗಿದ್ದ ಈ ದೇಶ ಇಂದು ಬಂಡವಾಳಶಾಹಿ ಅಮೆರಿಕಕ್ಕೂ ಅಸೂಯೆ ಆಗುವಷ್ಟರ ಮಟ್ಟಿಗೆ ಬಂಡವಾಳಶಾಹಿ ಆಗಿದೆ. ಕಮ್ಯೂನಿಸ್ಟ್ ಸಿದ್ಧಾಂತ ಈಗ ಉಳಿದಿರುವುದು ಬರಿಯ ಕಾಗದದ ಮೇಲೆ. ಹೆಚ್ಚೆಂದರೆ ಏಕಪಕ್ಷ ಅಧಿಕಾರ ವ್ಯವಸ್ಥೆಯನ್ನು ಪ್ರಶ್ನಾತೀತವಾಗಿ ಮುಂದುವರೆಸಿಕೊಂಡು ಹೋಗಲು ಚೀನಾದ ಕೇಂದ್ರೀಯ ನಾಯಕತ್ವ ಉಳಿಸಿಕೊಂಡಿರುವ ಅನುಕೂಲಕರ ಸಾಧನ ಮಾತ್ರ.

ನೆಹರೂ ಚಾಚಿದ್ದ ಪಂಚಶೀಲ ತತ್ವದ ಸ್ನೇಹ ಹಸ್ತವನ್ನು ತಿರುಚಿ 1962ರಲ್ಲಿ ದಂಡೆತ್ತಿ ಬಂದು ಹೇರಿದ ಪರಾಭವದ ಅವಹೇಳನ ಭಾರತ ಸುಲಭವಾಗಿ ಮರೆಯುವಂತಹುದಲ್ಲ. ಶಾಂತಿ ಸಹಕಾರ ಹಾಗೂ ಪರಸ್ಪರ ವಿಶ್ವಾಸದ ನೆಹರೂ ಮಂತ್ರವನ್ನು ಮಾವೋ-ಝೌ ಜೋಡಿ ಮುದುಡಿ ಬಿಸುಟಿತ್ತು. ಏಷ್ಯಾದ ಅಧಿಕಾರ ಚದುರಂಗದಾಟದಲ್ಲಿ ಭಾರತವನ್ನು ತನ್ನ ಪ್ರಬಲ ಪ್ರತಿಸ್ಪರ್ಧಿ ಎಂಬುದು ಚೀನಾದ ಭಾವನೆ. ಭಾರತ ಮತ್ತು ಚೀನಾ ದೇಶ ಗಳೆರಡೂ ಎದ್ದು ನಿಲ್ಲಲು ಸಾಲುವಷ್ಟು ಎಡೆ ಇದ್ದೇ ಇದೆ ಎಂಬ ಭಾರತದ ಮಾತುಗಳಿಗೆ ಮಾನ್ಯತೆ ನೀಡಿಲ್ಲ.

ಅರುಣಾಚಲ ಪ್ರದೇಶದ ತವಾಂಗ್ ಮೇಲೆಯೂ ಚೀನಾ ಬಹುಕಾಲದಿಂದ ಕಣ್ಣು ಹಾಕಿದೆ. ಚೀನಾದ ಪಾಲಿಗೆ ತವಾಂಗ್ ಟಿಬೆಟ್‍ಗೆ ಸೇರಿದ ಭೂಭಾಗ. ಅರ್ಥಾತ್ ದಕ್ಷಿಣ ಟಿಬೆಟ್. ತವಾಂಗ್ ಅನ್ನು ತನ್ನ ಪಾಲಿನ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಚೀನಾ ಭಾವಿಸಿದೆ. ತಾನು ಆಕ್ರಮಿಸಿಕೊಂಡಿರುವ ಟಿಬೆಟ್ಟಿನಲ್ಲಿ ಅರವತ್ತರ ದಶಕದಲ್ಲಿ ಭುಗಿಲೆದ್ದ ಖಾಂಪಾ ಆಂದೋಲನದ ಬೇರುಗಳು ಇದ್ದದ್ದು ತವಾಂಗ್‍ನಲ್ಲೇ ಎಂಬುದು ಚೀನಾದ ದೃಢ ನಂಬಿಕೆ. ಹೀಗಾಗಿ ಟಿಬೆಟ್ಟಿನಲ್ಲಿ ಚೀನೀ ಆಕ್ರಮಣದ ವಿರುದ್ಧ ಭವಿಷ್ಯತ್ತಿನಲ್ಲಿ ಏಳಬಹುದಾದ ಬಂಡಾಯಗಳು ಅಥವಾ ದಂಗೆಗಳ ನೆಲೆ ತವಾಂಗ್ ಆಗುವ ಸಂಭವವನ್ನು ಬೀಜಿಂಗ್ ಕಂಡಿದೆ.

ಅತಿಕ್ರಮಣವಾದಿ ಚೀನಾದೊಂದಿಗೆ ಭಾರತದ ಗಡಿ ಸಂಕಟಗಳು ತೀವ್ರಗೊಂಡದ್ದು 1950ರ ನಂತರ. ಭಾರತದ ಗೆಳೆಯನಾಗಿದ್ದ ಟಿಬೆಟ್ ಅನ್ನು ಚೀನಾ ಆಕ್ರಮಿಸಿ ನುಂಗಿದ್ದು 1950ರಲ್ಲೇ. ಭಾರತ ಮತ್ತು ಚೀನಾ ನಡುವಣ ತಟಸ್ಥ ತಡೆಗೋಡೆಯಂತಿದ್ದ ಟಿಬೆಟ್ ಚೀನಾದ ಭೂಭಾಗವೇ ಆಗಿ ಹೋಗಿತ್ತು. ನೆಹರೂ ನೇತೃತ್ವದ ಭಾರತ ಸರ್ಕಾರ ಟಿಬೆಟ್ ನೆರವಿಗೆ ಧಾವಿಸಲಿಲ್ಲ. ಕೇವಲ ಪ್ರತಿಭಟನಾ ಪತ್ರ ಬರೆದು ಕುಳಿತಿತು. ಮೈತ್ರಿ ಮತ್ತು ಸದ್ಭಾವನೆಯ ಹೆಸರಿನಲ್ಲಿ ನಿಷ್ಕ್ರಿಯರಾದ ನೆಹರೂ, ಸರ್ದಾರ್ ಪಟೇಲ್ ಅವರ ಎಚ್ಚರಿಕೆಯನ್ನು ಲೆಕ್ಕಿಸಲಿಲ್ಲ. ವಿಸ್ತರಣಾವಾದಿ ಚೀನಾ ಭಾರತದ ಬಾಗಿಲು ತಲುಪಿದ್ದು ಉತ್ತರ ಮತ್ತು ಈಶಾನ್ಯದ ಗಡಿಗಳ ಭದ್ರತೆ ಅಪಾಯಕ್ಕೆ ಸಿಲುಕಿದ್ದು ಸಭೆ ಸೇರಬೇಕೆಂದು ನೆಹರೂ ಅವರಿಗೆ ಪಟೇಲ್ ಪತ್ರ ಬರೆದಿದ್ದರು. ಈ ಸಭೆ ನಡೆಯುವುದೇ ಇಲ್ಲ. ಅಸ್ಸಾಮಿನ ಮುಖ್ಯ ಭಾಗಗಳ ಮೇಲೂ ಚೀನೀಯರು ಕಣ್ಣು ಹಾಕಿರುವ ಪ್ರಸ್ತಾಪವೂ ಈ ಪತ್ರದಲ್ಲಿತ್ತು. ಚೀನಾದ ವಿಸ್ತರಣಾವಾದವನ್ನು ನೆಹರೂ ಮುಂದಾಗಿಯೇ ಅಂದಾಜು ಮಾಡುವಲ್ಲಿ ವಿಫಲರಾದರು. ಟಿಬೆಟ್ ಚೀನಾದ ಅವಿಭಾಜ್ಯ ಅಂಗ ಎಂದು ಭಾರತ ಒಪ್ಪಿಕೊಂಡಿತು. ಟಿಬೆಟ್ ಅಸ್ತಿತ್ವ ಕಳೆದಕೊಂಡು ಚೀನಾದ ಟಿಬೆಟನ್ ಸೀಮೆಯಾಗಿತ್ತು. ಟಿಬೆಟ್ ಮೇಲೆ ಚೀನಾದ ಸಾರ್ವಭೌಮತೆಯನ್ನು ಅಂಗೀಕರಿಸುವ ಒಪ್ಪಂದಕ್ಕೆ ಭಾರತ 1954ರಲ್ಲಿ ಸಹಿ ಹಾಕಿತು. ಹಿಂದೀ ಚೀನೀ ಭಾಯೀ ಭಾಯೀ ಎಂದರು ನೆಹರೂ. ಜಾಗತಿಕ ವೇದಿಕೆಗಳಲ್ಲಿ ಪೀಪಲ್ಸ್ ರಿಪಬ್ಲಿಕ್ ಅಫ್ ಚೀನಾವನ್ನು ಸಮರ್ಥಿಸಿ ಮಾತನಾಡಿದರು. ಭಾರತದ ಈ ಸಮರ್ಥನೆ ಮತ್ತು ಬೆಂಬಲಗಳಿಗೆ ಪ್ರತಿಯಾಗಿ ಭಾರತದೊಂದಿಗೆ ಕೈ ಜೋಡಿಸಿ ‘ಏಷ್ಯನ್ ಕೂಟ’ ರಚಿಸಲು ಚೀನಾ ಒಪ್ಪಿಕೊಳ್ಳುವುದೆಂಬ ನಿರೀಕ್ಷೆ ನೆಹರೂ ಅವರಿಗೆ ಇತ್ತು. 1956ರಲ್ಲಿ ಚೀನಾದ ಭೂಪಟಗಳು ಭಾರತಕ್ಕೆ ಸೇರಿದ್ದ 1.20 ಲಕ್ಷ ಚದರ ಕಿ.ಮೀ.ಗಳಷ್ಟು ವಿಸ್ತೀರ್ಣದ ಗಡಿ ಪ್ರದೇಶವನ್ನು ಚೀನಾಕ್ಕೆ ಸೇರಿದ್ದೆಂದು ತೋರಿಸಿದವು. ನೆಹರೂ ಅವರ ಆಕ್ಷೇಪಣೆಗೆ ಓಗೊಟ್ಟ ಚೀನಾ ಈ ನಕಾಶೆಗಳು ಲೆಕ್ಕಕ್ಕಿಲ್ಲ ಎಂದು ಆಶ್ವಾಸನೆ ನೀಡಿತು. ಆದರೆ ದಲಾಯಿಲಾಮಾ ಮತ್ತು ಟಿಬೆಟನ್ನರಿಗೆ ಭಾರತ ನೀಡಿದ ಆಶ್ರಯ ಕುರಿತು ತೀವ್ರ ತಪ್ಪು ತಿಳಿವಳಿಕೆಗಳು ಉದ್ಭವಿಸಿದವು. ಟಿಬೆಟ್ ಅನ್ನು ಭಾರತ ವಶಪಡಿಸಿಕೊಂಡು ಮಹಾಸಾಮ್ರಾಜ್ಯ ಕಟ್ಟುವ ಉದ್ದೇಶ ಭಾರತಕ್ಕಿದೆ ಎಂದು ಚೀನಾ ಅನುಮಾನಿಸಿತ್ತು.

ಚೀನಾ ವಶಪಡಿಸಿಕೊಳ್ಳುವ ಮುನ್ನ ಪೂರ್ವಕ್ಕೆ ಚೀನಾ, ದಕ್ಷಿಣಕ್ಕೆ ನೇಪಾಳ, ಭೂತಾನ ಹಾಗೂ ಭಾರತ ಮತ್ತು ಪಶ್ಚಿಮದಲ್ಲಿ ಭಾರತದ ಕಾಶ್ಮೀರ ರಾಜ್ಯಗಳಿಂದ ಸುತ್ತುವರೆಯಲ್ಪಟ್ಟಿತ್ತು ಟಿಬೆಟ್. ಭಾರತ ಉಪಖಂಡ ಮತ್ತು ಟಿಬೆಟನ್ನು ಬೇರ್ಪಡಿಸಿದ್ದು ಹಿಮಾಲಯ ಪರ್ವತಶ್ರೇಣಿಗಳು. ಭಾರತದ ಉತ್ತರ ಮತ್ತು ಈಶಾನ್ಯ ಗಡಿಗಳ ರಕ್ಷಣೋಪಾಯದಲ್ಲಿ ಟಿಬೆಟ್‍ಗೆ ಬಹುಮುಖ್ಯ ಪಾತ್ರವಿತ್ತು. ಹಿಮಾಲಯದ ಆಚೆಗೆ ಜಗತ್ತಿನ ಸಂಪರ್ಕದಿಂದ ಕಡಿದು ಹೋಗಿದ್ದ ಬಂಜರು ವಿಸ್ತಾರವಿತ್ತು. ಹೀಗಾಗಿ ಉತ್ತರದ ಎರಡು ಸಾವಿರ ಮೈಲಿಗಳಷ್ಟು ಗಡಿಯನ್ನು ಕಾಯುವ ಭಾರತದ ಭಾರವನ್ನು ಈ ಬಂಜರು ವಿಸ್ತಾರ ಹಗುರಾಗಿಸಿತ್ತು. ಚೀನೀಯರು ಟಿಬೆಟನ್ನು ಆಕ್ರಮಿಸಿಕೊಳ್ಳುವುದರೊಂದಿಗೆ ಈ ತಟಸ್ಥ ಬಂಜರು ವಿಸ್ತಾರ ಭಾರತದ ಪಾಲಿಗೆ ಕಳೆದು ಹೋಯಿತು. ಹಿಮಾಲಯದಂತಹ ಮಹಾನ್ ರಕ್ಷಣಾ ತಡೆಗೋಡೆಯ ಪ್ರಭಾವ ಕೂಡ ಕುಗ್ಗಿ ಹೋಯಿತು.

ಭಾರತ ಮತ್ತು ನೇಪಾಳದಿಂದ ಟಿಬೆಟ್ ಅನ್ನು ಮುಟ್ಟುವುದು ದುಸ್ಸಾಧ್ಯ. ವರ್ಷದಲ್ಲಿ ಆರರಿಂದ ಎಂಟು ತಿಂಗಳ ಕಾಲ ಹಿಮವನ್ನು ಹೊದ್ದು ನಿಂತ ಕಡಿದಾದ ಉನ್ನತ ಪರ್ವತಶ್ರೇಣಿಗಳನ್ನು ಹಾಯುವುದು ಹಿಮಾಲಯದಷ್ಟೇ ಎತ್ತರದ ಸವಾಲು. ಆದರೆ ಟಿಬೆಟಿನಿಂದ ಭಾರತವನ್ನು ತಲುಪುವುದು ಸುಲಭ. 14,000 ಅಡಿಗಳ ಎತ್ತರದಿಂದ 6000 ಅಡಿಗಳ ತನಕ ಕ್ರಮೇಣ ಇಳಿಜಾರು. ಟಿಬೆಟ್‍ನ ಪಶ್ಚಿಮ ಭೂಭಾಗದ ಮೂರು ವಿಭಾಗಗಳು ಭಾರತದ ಲದ್ದಾಖ್, ಹಿಮಾಚಲ ಪ್ರದೇಶ ಹಾಗೂ ಉತ್ತರಪ್ರದೇಶದ ವಾಯುವ್ಯ ಸರಹದ್ದುಗಳನ್ನು ಮುಟ್ಟುತ್ತವೆ. ಹಿಂದೂಗಳು ಮತ್ತು ಬೌದ್ಧರ ಪಾಲಿಗೆ ಪವಿತ್ರವೆನಿಸಿದ ಕೈಲಾಶ ಮಾನಸ ಸರೋವರ ಇರುವುದು ಈ ಮೂರು ವಿಭಾಗಗಳಲ್ಲಿ ಒಂದಾದ ಎಂಗಾರಿಯಲ್ಲಿ. ಇಂಡಸ್, ಸಟ್ಲೆಜ್, ಬ್ರಹ್ಮಪುತ್ರ ನದಿಗಳ ಉಗಮವೂ ಇದೇ ಮಾನಸ ಸರೋವರ ಸೀಮೆ.ಇತಿಹಾಸಕಾರ ಪ್ರೊ. ಜಾರ್ಜ್ ಜಿನ್ಸ್ ಬರ್ಗ್ ಅವರ ಪ್ರಕಾರ ಟಿಬೆಟ್‍ಅನ್ನು ನಿಯಂತ್ರಿಸುವವರು ಹಿಮಾಲಯದ ತಪ್ಪಲನ್ನು ನಿಯಂತ್ರಿಸುತ್ತಾರೆ, ಹಿಮಾಲಯದ ತಪ್ಪಲನ್ನು ನಿಯಂತ್ರಿಸುವವರು ಭಾರತ ಉಪಖಂಡದ ಭದ್ರತೆಗೆ ಬೆದರಿಕೆ ಒಡ್ಡಬಲ್ಲರು, ಭಾರತದ ಭದ್ರತೆಯನ್ನು ಬಾಧಿಸಬಲ್ಲವರು ಇಡೀ ಆಗ್ನೇಯ ಏಷ್ಯಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಲ್ಲರು, ಅದರೊಂದಿಗೆ ಅಖಂಡ ಏಷ್ಯಾದ ಮೇಲೆ ನಿಯಂತ್ರಣ ಸಾಧಿಸಬಲ್ಲರು.

ಮಧ್ಯ ಏಷ್ಯಾದ ಗಡಿಸೀಮೆಗಳನ್ನು ರಾಜಕೀಯ ಕ್ರಿಯೆಯ ಆಧಾರವನ್ನಾಗಿ ಮಾಡಿಕೊಳ್ಳಲು ಟಿಬೆಟ್ ಪ್ರಶಸ್ತ ನೆಲ. ಪರಮಾಣು ಯುಗದಲ್ಲಿ ಬಾಂಬರ್ ವಿಮಾನಗಳು ದಾಳಿಗೆ ಮುನ್ನ ಆಗಸಕ್ಕೆ ಚಿಮ್ಮಲು ಮತ್ತು ಕ್ಷಿಪಣಿಗಳನ್ನು ಹಾರಿಸುವ ಅಪಾಯಕಾರಿ ಸಾಮರ್ಥ್ಯ ಹೊಂದಿದ ನೆಲವಿದು ಎಂದು ಮತ್ತೊಬ್ಬ ತಜ್ಞ ಜಾನ್ ರೋಲ್ಯಾಂಡ್ ಹೇಳುತ್ತಾರೆ.

ಮೋದಿ ಮತ್ತು ಝಿನ್ ಪಿಂಗ್ ಇಬ್ಬರೂ ಸದ್ಯಕ್ಕೆ ಯುದ್ಧವನ್ನು ಒಲ್ಲರು. ಇಬ್ಬರಿಗೂ ತಮ್ಮ ದೇಶಗಳ ಅಸಲಿ ಸಮಸ್ಯೆಗಳಿಂದ ಆಂತರಿಕ ಮತ್ತು ಬಾಹ್ಯ ಗಮನವನ್ನು ಬೇರೆಡೆಗೆ ಸೆಳೆಯುವ ಅನಿವಾರ್ಯವಿದೆ. ಗಾಲ್ವಾನ್ ಕಣಿವೆಯ ವಿವಾದ ಇನ್ನೂ ಕೆಲ ತಿಂಗಳುಗಳ ಕಾಲ ಕುದಿಯಲಿದೆ.


ಇದನ್ನು ಓದಿ: ಮೋದಿಯ ಈ ಮೂರು ವೈಫಲ್ಯಗಳ ಕುರಿತು ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೆ: ರಾಹುಲ್ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...