‘ನಿರ್ಭಯ ನಿಧಿಯಡಿ’ ನಿರ್ಮಿಸಲಾಗಿರುವ ದೇಶದ ಮೊದಲ ‘ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು.
ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹೆಚ್ಚಿಸಲು ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ. ಸುಮಾರು 661.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಮಾಂಡ್ ಸೆಂಟರ್ಗೆ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ಹಣ ಒದಗಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಮಾಂಡ್ ಸೆಂಟರ್ ಬೆಂಗಳೂರಿನ ಜನತೆಗೆ ಸುರಕ್ಷತೆ ಒದಗಿಸಲಿದೆ. ಮಹಿಳೆಯರು ಮಕ್ಕಳಿಗೆ ಇದರಿಂದ ಸಹಾಯವಾಗಲಿದೆ. ದೌರ್ಜನ್ಯ, ಅಪಘಾತ ಆದಾಗ ಜನರು ನೇರವಾಗಿ ಕರೆ ಮಾಡಬಹುದು. ತಕ್ಷಣ ಕಾರ್ಯ ಪ್ರವೃತರಾಗಲಿರುವ ಪೊಲೀಸರು ಏಳು ನಿಮಿಷಗಳ ಒಳಗೆ ಘಟನಾ ಸ್ಥಳಕ್ಕೆ ತಲುಪಲಿದ್ದಾರೆ ಎಂದರು.
ಮಹಾ ನಗರಗಳಾದ ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಖನೌ ಹಾಗೂ ಮುಂಬೈನಲ್ಲಿ ನಿರ್ಭಯ ನಿಧಿಯಡಿ ಸೇಫ್ ಸಿಟಿ ಯೋಜನೆ ಜಾರಿಯಾಗುತ್ತಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಯೋಜನೆ ಉದ್ಘಾಟನೆಗೊಂಡಿದೆ. ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಸೇರಿದಂತೆ ಇತರ ದೌರ್ಜನ್ಯಗಳನ್ನು ತಡೆಗಟ್ಟುವುದು ಈ ಯೋಜನೆಯ ಆದ್ಯತೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ : 11,170 ಗ್ರಾಮ ಪಂಚಾಯತ್ ಸಿಬ್ಬಂದಿಗೆ ಸೇವಾ ಭದ್ರತೆ: ಪ್ರಿಯಾಂಕ್ ಖರ್ಗೆ