ರಷ್ಯಾವು ಉಕ್ರೇನ್ ಮೇಲೆ ಯುದ್ಧ ಸಾರಿದೆ. ದಾಳಿ ಪ್ರತಿದಾಳಿಗಳು ನಡೆಯುತ್ತಿವೆ. ಈಗಾಗಲೇ ಯುದ್ಧದಲ್ಲಿ 137 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಉಕ್ರೇನ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರು ಸೇರಿದಂತೆ ಹಲವು ವಿದೇಶಿಗರು ತಮ್ಮ ತಮ್ಮ ದೇಶಗಳಿಗೆ ಸುರಕ್ಷಿತವಾಗಿ ಮರಳಲು ಹಾತೊರೆಯುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ವಿಮಾನಯಾನ ಕಂಪನಿಗಳು ಬೇಕಾಬಿಟ್ಟಿ ಪ್ರಯಾಣ ದರ ಏರಿಕೆ ಮಾಡಿವೆ ಎಂಬ ಆರೋಪ ಕೇಳಿಬಂದಿದೆ.
ಯುದ್ಧದ ವಾತವಾರಣವಿದ್ದುದರಿಂದ ಕಳೆದ 10 ದಿನಗಳಿಂದ ವಿಮಾನ ಟಿಕೆಟ್ ಬೆಲೆ ಒಂದೇ ಸಮನೆ ಏರುತ್ತಿದೆ. ಒಂದು ಲಕ್ಷದಿಂದ 2 ಲಕ್ಷದವರೆಗೆ ಒಂದು ಟಿಕೆಟ್ ಬೆಲೆ ಏರಿಸಲಾಗಿದೆ. ಇದನ್ನು ತಡೆಯಲು ಯಾವ ಸರ್ಕಾರಗಳು ಕೂಡ ಕೆಲಸ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಮೆಹಬೂಬ್ನಗರದ ವಿದ್ಯಾರ್ಥಿನಿ ಯೋಗಿತಾ ಉಕ್ರೇನ್ನ ಜಾಪ್ರಜಿಯ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು, ದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ವಿಮಾನ ಟಿಕೆಟ್ ದರಗಳನ್ನು 1 ಲಕ್ಷ ರೂಗಳಿಗಿಂತ ಹೆಚ್ಚು ಮಾಡಿದ್ದಾರೆ. ಇಲ್ಲಿನ ಸ್ಥಿತಿ ಬಗ್ಗೆ ಏನು ಗೊತ್ತಿಲ್ಲ. ಭಾರತ ಸರ್ಕಾರ ನಾವು ಸುರಕ್ಷಿತವಾಗಿ ಮರಳಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
A student from Telangana’s Mahbubnagar Yogitha says students like her in Ukraine had thought of leaving but being “middle class” they could not afford the tickets which were above Rs 1 lakh. Hundreds of students from AP and TS are stranded in Ukraine. @TheQuint pic.twitter.com/zyB8hIobui
— Nikhila Henry (@NikhilaHenry) February 25, 2022
ಈ ಮೊದಲು ಉಕ್ರೇನ್ನಿಂದ ಭಾರತದ ಹಲವು ನಗರಗಳಿಗೆ 20,000 ದಿಂದ 30,000 ದವರೆಗೆ ವಿಮಾನ ಟಿಕೆಟ್ಗಳು ಲಭ್ಯವಿದ್ದವು. ಯುದ್ಧದ ವಾತವಾರಣ ಆರಂಭವಾದಂತೆ ಅದು 1 ಲಕ್ಷದಿಂದ 2 ಲಕ್ಷದವರೆಗೆ ಏರಿವೆ. ಇಷ್ಟು ಹಣವನ್ನು ಹೊಂದಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಉಕ್ರೇನ್ನ ಇವಾನೊ-ಫ್ರಾಂಕಿವ್ಸ್ಕ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ನಾಲ್ಕನೇ ವರ್ಷದ ವಿದ್ಯಾರ್ಥಿ ಸಯಾನ್ ಚೌಧರಿ ಈ ಕುರಿತು ಟ್ವೀಟ್ ಮಾಡಿದ್ದು, “ಉಕ್ರೇನ್ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ. ಇಂತಹ ಕಷ್ಟಕರ ಸಂದರ್ಭದಲ್ಲಿ ಏರ್ಇಂಡಿಯಾ ಸೇರಿದಂತೆ ಎಲ್ಲಾ ಏರ್ಲೈನ್ಗಳು ದರ ಏರಿಸಿದ್ದು ಟಿಕೆಟ್ಗೆ ₹1-1.5 ಲಕ್ಷ ತೆರಬೇಕಾಗಿದೆ. ನಾವು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ನಮಗೆ ಸಹಾಯ ಬೇಕು, ದಯವಿಟ್ಟು ವಿಮಾನ ಟಿಕೆಟ್ ಕೈಗೆಟುಕುವಂತೆ ಮಾಡಿ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಮತ್ತು ಪ್ರಧಾನಮಂತ್ರಿಗಳ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.
Sir I am Medical Student OF 4th Year, UKRAINE.Ukraine Is Imposing National Emergency As per report.
All Air lines including AirIndia providing tickets ₹1-1.5lakhs.We are From Middle & Lower Middle Class Famlily.We Need Imitate Help, Make it Affordable Please @PMOIndia @MEAIndia— Sayan Chowdhury (@sayanxd8) February 23, 2022
ಮುಂದುವರೆದು ಸಾಧ್ಯವಾದಷ್ಟು ಬೇಗ ನಮಗೆ ಸಹಾಯ ಮಾಡಿ, ವಿದ್ಯಾರ್ಥಿಗಳು ಭಯದಲ್ಲಿದ್ದಾರೆ. ನಮ್ಮ ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಯ ಮೇಲೆ ನಮಗೆ ಬಲವಾದ ನಂಬಿಕೆ ಇದೆ, ಅವರು ಭಾರತೀಯ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ನಂಬಿದ್ದೇವೆ. ವಿಮಾನ ಟಿಕೆಟ್ಗಳ ಬೆಲೆ ಕೈಗೆಟುಕುವ ರೀತಿಯಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಮಾಡಿ ಎಂದು ಸಯಾನ್ ಚೌಧರಿ ಮನವಿ ಮಾಡಿದ್ದಾರೆ.
ಆದರೆ ಈ ವಿಷಯದ ಕುರಿತು ಭಾರತದ ಯಾವ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಮತ್ತು ಮಾತನಾಡುತ್ತಿಲ್ಲ. ಇದು ಅಲ್ಲಿನ ವಿದ್ಯಾರ್ಥಿಗಳ ಆತಂಕವನ್ನು ಹೆಚ್ಚು ಮಾಡಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರವೇ ಮುಂದೆ ನಿಂತು ಉಕ್ರೇನ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಬೇಕಿದೆ.
ಉಕ್ರೇನ್ನಲ್ಲಿ ಕರ್ನಾಟಕ ರಾಜ್ಯದ 346 ಜನರು ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಕ್ರೇನ್ನಿಂದ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ರಷ್ಯಾದೊಂದಿಗಿನ ಯುದ್ಧದಿಂದಾಗಿ ವಿಮಾನ ಸೇವೆಗಳಿಗೆ ಹೊಡೆತ ಬಿದ್ದಿರುವುದರಿಂದ ರಸ್ತೆ ಮಾರ್ಗದ ಮೂಲಕ ಅವರನ್ನು ಸುರಕ್ಷಿತವಾಗಿ ಮರಳಿ ತರುವ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ. ಉಕ್ರೇನ್ನ ಪಶ್ಚಿಮ ಭಾಗದ ಕಡೆಗೆ ಸುರಕ್ಷಿತ ಚಲನೆಯ ಸಾಧ್ಯತೆಗಳ ಬಗ್ಗೆ ಮಾಹಿತಿ ಇದೆ ಮತ್ತು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ; ಉಕ್ರೇನ್ ಮೇಲೆ ರಷ್ಯಾ ದಾಳಿ: 137 ಸಾವುಗಳಾಗಿವೆ ಎಂದು ಉಕ್ರೇನ್