ನೀವು ಅವರ ಭುಜಗಳನ್ನು ಮುರಿಯಲಾಗದಿದ್ದರೆ ಕನಿಷ್ಟ ಕಾಲು ಮುರಿಯಿರಿ. ಅದರ ಮಾರನೇ ದಿನ ನಾನು ಬಂದು ಜಾಮೀನು ಕೊಡಿಸುತ್ತೇನೆ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿರುವ ಸಿಎಂ ಶಿಂಧೆ ಬಣದ ಶಿವಸೇನೆ ಶಾಸಕನ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿದೆ.
ಮಗಠಾಣೆ ಕ್ಷೇತ್ರದ ಶಾಸಕ ಪ್ರಕಾಶ್ ಸರ್ವೆ ಸದ್ಯ ಸಿಎಂ ಶಿಂಧೆ ಬಣದಲ್ಲಿದ್ದಾರೆ. ಅವರು ಆಗಸ್ಟ್ 14ರಂದು ಕೊಕಾಣಿ ಬುದ್ದ ವಿಹಾರ್ನಲ್ಲಿ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ನಿಜವಾದ ಶಿವಸೇನೆ ಪಕ್ಷ ಯಾರಿಗೆ ಸೇರಬೇಕು ಎಂಬುದರ ಕುರಿತು ಮಾತನಾಡುವಾಗಿ ಮೇಲಿನ ಹೇಳಿಕೆ ನೀಡಿದ್ದಾರೆ. ಆ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
“ಯಾರಾದರೂ ಏನಾದರೂ ಹೇಳಿದರೆ ಅವರಿಗೆ ಪ್ರತಿಕ್ರಿಯೆ ನೀಡಿ. ಯಾರ ದಾದಾಗಿರಿಯನ್ನು ನಾವು ಸಹಿಸಲು ಸಾಧ್ಯವಿಲ್ಲ. ನೀವು ಅವರಿಗೆ ಹೊಡೆಯಿರಿ. ನಾನು ಪ್ರಕಾಶ್ ಸರ್ವೆ ನಿಮ್ಮೊಂದಿಗೆ ಇರುತ್ತೇನೆ. ನೀವು ಅವರ ಭುಜಗಳನ್ನು ಮುರಿಯಲಾಗದಿದ್ದರೆ ಕನಿಷ್ಟ ಕಾಲು ಮುರಿಯಿರಿ. ಅದರ ಮಾರನೇ ದಿನ ನಾನು ಬಂದು ಜಾಮೀನು ಕೊಡಿಸುತ್ತೇನೆ. ಯೋಚಿಸಬೇಡಿ. ನಾವು ಯಾರೊಂದಿಗೂ ಜಗಳ ಮಾಡುವುದಿಲ್ಲ. ಆದರೆ ಯಾರಾದರೂ ನಮ್ಮ ಬಳಿ ಜಗಳಕ್ಕೆ ಬಂದರೆ ಅವರನ್ನು ಉಳಿಸುವುದಿಲ್ಲ” ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ಹೇಳಿಕೆಯನ್ನು ಖಂಡಿಸಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣವು ದಹಿಸಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಲು ಉದ್ಧವ್ ಠಾಕ್ರೆ ನಿರ್ಧರಿಸಿದ್ದಾರೆ. ಅದಾದ ನಂತರ ಸಿಎಂ ಶಿಂಧೆಯವರು ಸಹ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಬಾಲಕನ ಸಾವಿನ ಹೊಣೆಹೊತ್ತು ಕಾಂಗ್ರೆಸ್ ಶಾಸಕನ ರಾಜೀನಾಮೆ
ಸದ್ಯಕ್ಕೆ ತಾಂತ್ರಿಕವಾಗಿ ಉದ್ಧವ್ ಠಾಕ್ರೆಯವರು ಶಿವಸೇನೆಯ ಮುಖ್ಯಸ್ಥರಾಗಿದ್ದಾರೆ. ಆದರೆ ಜೂನ್ ತಿಂಗಳಿನಿಂದ ಶಿವಸೇನೆಯ ಅತೃಪ್ತ ಬಣವೊಂದು ಏಕನಾಥ್ ಶಿಂಧೆಯವರ ನೇತೃತ್ವದಲ್ಲಿ ಬಂಡಾಯವೆದ್ದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ಹಾಗಾಗಿ ಮೂಲ ಶಿವಸೇನೆ ಪಕ್ಷ ಯಾರಿಗೆ ಸೇರಬೇಕೆಂಬ ವಾದ-ವಿವಾದ ನಡೆಯುತ್ತಿದೆ. ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ.