ಕಾಂಗ್ರೆಸ್ ಎಂಬುದು ಕೇವಲ ಒಂದು ಪಕ್ಷವಲ್ಲ, ಅದೊಂದು ಆದರ್ಶ. ಈ ದೇಶದ ಅತಿ ಪ್ರಾಚೀನ ಮತ್ತು ಪ್ರಜಾತಾಂತ್ರಿಕ ಪಕ್ಷವಾದ ಕಾಂಗ್ರೆಸ್ ಉಳಿಯದಿದ್ದರೆ, ಈ ದೇಶ ಉಳಿಯುವುದಿಲ್ಲ. ದೊಡ್ಡ ವಿಪಕ್ಷವನ್ನು ಉಳಿಸದಿದ್ದರೇ, ಚಿಕ್ಕ ಚಿಕ್ಕ ಪಕ್ಷಗಳು ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಸೇರಿದ ನಂತರ ಕನ್ಹಯ್ಯ ಕುಮಾರ್ ತಿಳಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ನಮ್ಮ ದೇಶಕ್ಕೆ ಭಗತ್ ಸಿಂಗ್ ರವರ ಸಾಹಸ, ಅಂಬೇಡ್ಕರ್ರವರ ಸಮಾನತೆ ಮತ್ತು ಗಾಂಧೀಜಿಯವರ ಐಕ್ಯತೆ ಬೇಕಾಗಿದೆ ಎಂದರು.
ನಾನು ಹಿಂದೆ ಇದ್ದ ಪಕ್ಷಕ್ಕೆ ಅಭಾರಿಯಾಗಿದ್ದೇನೆ. ಅದು ನನಗೆ ಓದು-ಬರಹ ಕಲಿಸಿ ಬೆಳೆಸಿದೆ. ಹೋರಾಡುವುದನ್ನು ಕಲಿಸಿದೆ. ಅದರೊಟ್ಟಿಗೆ ನನ್ನ ಜೊತೆ ನಿಂತ ಲಕ್ಷಾಂತರ ಕಾರ್ಯಕರ್ತರಿಗೂ ಅಭಾರಿಯಾಗಿದ್ದೇನೆ ಎಂದು ಕನ್ಹಯ್ಯ ತಿಳಿಸಿದರು.
ದೇಶದಲ್ಲಿ ಇಂದು ವೈಚಾರಿಕ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕತ್ವ ನೀಡುತ್ತದೆ. ಆರಾಮ ಖುರ್ಚಿಯಲ್ಲಿ ಕೂತು ಮಾತಾಡುವ ಸಮಯ ಇದಲ್ಲ. ಇದು ತುರ್ತು ಸಂದರ್ಭವಾಗಿದೆ. ಹಾಗಾಗಿ ಈ ದೇಶದ ಕೋಟ್ಯಾಂತರ ಯುವಕರ ಭವಿಷ್ಯವನ್ನು ರಕ್ಷಿಸುವುದಕ್ಕಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದಿದ್ದಾರೆ.
ನಮ್ಮ ಪರಿವಾರವನ್ನು ಬಿಟ್ಟು ದೇಶವನ್ನು ಉಳಿಸಲು ಸಾಧ್ಯವಿಲ್ಲ. ಮನೆ, ಮಠದ ಜೊತೆಗೆ ಇದ್ದು ಇಂದು ಪರಿವಾರ ಕಟ್ಟಬೇಕಿದೆ. ಪರಿವಾರವನ್ನು ಬಿಟ್ಟು ಕಟ್ಟುವ ಪರಿವಾರ ಹೇಗಾಗುತ್ತದೇ…? ಕಸ್ತೂರ ಬಾ ಬಿಟ್ಟು ಹೇಗೆ ಗಾಂಧಿ ಹೋರಾಡಲಿಲ್ಲವೋ ಹಾಗೆ. ಅಂಬೇಡ್ಕರ್ ಪರಿವಾರ ಬಿಟ್ಟು ಬರಲಿಲ್ಲ. ದೇಶದ ಮಹನೀಯರೆಲ್ಲ ಪರಿವಾರದೊಟ್ಟಿಗೆ ಇದ್ದು ಹೋರಾಡಿದ್ದಾರೆ ಎಂದರು.
ನಾನು ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್ರವರ ಧೈರ್ಯ ಮತ್ತು ತ್ಯಾಗವನ್ನು ಇಲ್ಲಿ ಸ್ಮರಿಸುತ್ತೇನೆ. ಅದೇ ಸಂದರ್ಭದಲ್ಲಿ ಇಂದು ನಮ್ಮ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ನಾನು ಈ ದುರ್ಘಟನೆಗೆ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಕನ್ಹಯ್ಯ ಕುಮಾರ್ ತಿಳಿಸಿದ್ದಾರೆ.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿ, ಇದು ಗುಜರಾತ್ನಿಂದ ಶುರುವಾದ ಕಥೆ. ನಮ್ಮ ಸಂವಿಧಾನದ ಮೇಲೆ ಹಲ್ಲೆಯಾಗಿದೆ. ರಸ್ತೆಗಳಲ್ಲಿ ಸಂವಿಧಾನ ಸುಡಲಾಗಿದೆ. ನಮ್ಮ ವಿಚಾರಗಳ ಮೇಲೆ, ನಮ್ಮ ಪ್ರಜಾಪ್ರಭುತ್ವದ ಮೇಲೆ ಹಲ್ಲೆಯಾಗುತ್ತಿದೆ. ಒಬ್ಬ ಶಾಸಕನಾಗಿ ಅಲ್ಲ, ಒಬ್ಬ ನಾಗರಿಕನಾಗಿ ಕೇಳುತ್ತೇನೆ ಈ ಸಮಯದಲ್ಲಿ ನಾನು ಏನು ಮಾಡಬೇಕು..? ಅದಕ್ಕೆ ನಾನು ನಮ್ಮ ಸಂವಿಧಾನ ಉಳಿಸುವವರ ಜೊತೆಗೆ ಬೆರೆಯಬೇಕು. ಇದಕ್ಕಾಗಿ ನಾವು ಸ್ವಾತಂತ್ರಕ್ಕಾಗಿ ಹೋರಾಡಿದ ದೇಶದ ಹಳೆಯ ಪಕ್ಷವನ್ನು ಸೇರಬೇಕು ಎಂದರು.
ಹೀಗಾಗಿ ನಾನು ನನ್ನ ಕ್ಷೇತ್ರದ ಜನ, ನನ್ನ ಪಕ್ಷದ ಹಿರಿಯ ನಾಯಕರು ಮತ್ತು ನನ್ನ ಜೊತೆಗೆ ನಾನು ಮಾತನಾಡಿದೆ. ನಾನು ಅಧಿಕೃತವಾಗಿ ಅಲ್ಲ. ನೈತಿಕವಾಗಿ ಕಾಂಗ್ರೆಸ್ ಸೇರಿದ್ದೇನೆ. ಸದಸ್ಯತ್ವವನ್ನು ನಾಳೆಯೂ ಪಡಯಬಹುದು. ಆದರೆ, ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಎದುರಿಸುತ್ತೇನೆ. ಇನ್ನು ಹಾರ್ದಿಕ್ ಪಾಟೇಲ್ ಬಗ್ಗೆ ಹೇಳಬೇಕು. ನಾವು ಗುಜರಾತ್ನಲ್ಲಿ ಎಲ್ಲವನ್ನು ನೋಡಿದ್ದೇವೆ. 30 ಸಾವಿರ ಕೋಟಿಯ ಡ್ರಗ್ಸ್ ಬಂದ ಬಗ್ಗೆ ಯಾರು ಮಾತಾಡಿಲ್ಲ. ಗುಜರಾತ್ನಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದೆ ನಶೆಯಲ್ಲಿ ಮುಳುಗಿಸಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಅಂಬೇಡ್ಕರ್ ಸಂವಿಧಾನ ಉಳಿಸಬೇಕಿದೆ. ರೈತ, ಕಾರ್ಮಿಕ, ಮಹಿಳೆ, ದಲಿತ, ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕಿದೆ. ಹೊಸ ಆಂದೋಲನ ನಡೆಯಬೇಕಿದೆ. ಅಂತಹ ಒಂದು ಸ್ಥಿತಿಯನ್ನು ನಾವು ಅದನ್ನು ಸೃಷ್ಟಿಸಬೇಕಿದೆ. ಎಲ್ಲರೂ ಈ ಮಿಷನ್ನಲ್ಲಿ ಸೇರಿ ಪ್ರಜಾಪ್ರಭುತ್ವ ಉಳಿಸಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಯುವಜನರು ಸೇರಬೇಕಿದೆ. ಯುವಕರನ್ನು ಸೇರಿಸಲು ನಾವು ಮೂವರು ಕಣಕ್ಕೆ ಇಳಿಯುತ್ತೇವೆ ಎಂದರು.
ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಾರ್ದಿಕ್ ಪಟೇಲ್ ಸಮ್ಮುಖದಲ್ಲಿ ದೆಹಲಿಯ ಶಹೀದ್ ಅಜಮ್ ಭಗತ್ ಸಿಂಗ್ ಪಾರ್ಕ್ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಯುವ ನಾಯಕರು ಕೈಗೆ ಕೈ ಜೋಡಿಸಿ ಹೊಸ ರಾಜಕಾರಣಕ್ಕೆ ಮುಂದಾಗಿದ್ದಾರೆ.
ಕೆಂಪು ಧಿರಿಸಿನಲ್ಲಿ ಕನ್ಹಯ್ಯ ಕುಮಾರ್, ನೀಲಿ ಧಿರಿಸಿನಲ್ಲಿ ಜಿಗ್ನೇಶ್ ಮತ್ತು ಬಳಿ ಧಿರಿಸಿನಲ್ಲಿ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಸಿದ್ದಾಂತಗಳನ್ನು ರೂಪಕಗಳ ಮೂಲಕ ಮುಂದಿಟ್ಟಿದ್ದಾರೆ. ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿಯವರಿಗೆ ಅಂಬೇಡ್ಕರ್, ಗಾಂಧಿ ಮತ್ತು ಭಗತ್ ಸಿಂಗ್ ಚಿತ್ರಗಳಿರುವ ಫೋಟೊ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್, ಗುಜರಾತ್ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಭಗತ್ ಸಿಂಗ್ ಜನ್ಮದಿನದಂದು ಕಾಂಗ್ರೆಸ್ ಸೇರಿದ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ