ಯೋಗ, ಸನ್ಯಾಸ, ಧ್ಯಾನ ಅನ್ನೋ ಆಧ್ಯಾತ್ಮ ವಿಷಯಗಳಿಗೆ ಭರ್ಜರಿ ಮಾರ್ಕೆಟಿಂಗ್ ಬಣ್ಣ ಬಳಿದು ಪತಂಜಲಿ ಬ್ರಾಂಡಿನ ಕೇಶ್ ಕಾಂತಿ, ಟೂತ್ ಪೇಸ್ಟ್, ಬಟ್ಟೆ ಸೋಪು ಮಾರಾಟ ಶುರುಮಾಡಿರುವ `ಸೇಲ್ಸ್.ಬಾಬಾ’ ರಾಮ್ ದೇವ್ ಹೊಸ ಬಾಂಬ್ ಸಿಡಿಸಿದ್ದಾರೆ. ಲೋಕಸಭಾ ಚುನಾವಣಾ ರಿಸಲ್ಟ್ ಬಂದು ಸರ್ಕಾರ ರಚನೆಯಾಗಿ, ಖಾತೆಗಳೂ ಬಿಕರಿಯಾದ ನಂತರ ಬಾಬಾ ಈಗ ಅಂಥಾ ರಿಜಲ್ಟ್ ಯಾಕೆ ಬಂತು ಅನ್ನೋದಕ್ಕೆ ಕಾರಣವನ್ನು ಬಹಿರಂಗ ಮಾಡಿದ್ದಾರೆ.
ರಾಮದೇವ್ ಪ್ರಕಾರ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿನವರು ಯೋಗ ಮಾಡದೇ ಇರುವುದೇ ಕಾರಣವಂತೆ. ಮೊದಲೆಲ್ಲಾ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಎಲ್ಲರೂ ಯೋಗ ಮಾಡ್ತಿದ್ದರಂತೆ. ಹಾಗಾಗಿ ಅವರು ಭಯವೇ ಇಲ್ಲದಂತೆ ಗೆದ್ದು ಬರುತ್ತಿದ್ದರಂತೆ. ಆದರೆ ಈಗ ಅವರ ಉತ್ತರಾಧಿಕಾರಿಗಳು ಯಾರು ಯೋಗ ಮಾಡದೆ, ಯೋಗ ತಿರಸ್ಕರಿಸಿರುವುದು ಕಾಂಗ್ರೆಸ್ ಸೋಲಿಗೆ ಕಾರಣ ಅಂತ ಸುದ್ದಿಗಾರರ ಜೊತೆ ರಾಮದೇವ್ ಹೇಳಿದ್ದೇರೆ.
ಯೋಗ ಮಾಡಿದ್ರೆ ದೇವರು ನೇರವಾಗಿ ಆಶೀರ್ವದಿಸುತ್ತಾನೆ. ಮೋದಿಯವರು ಯೋಗಕ್ಕೆ ಸಿಗಬೇಕಾದ ಗೌರವವನ್ನು ಕೊಟ್ಟಿರುವ ಮೊದಲ ಪ್ರಧಾನಿ. ಅದಕ್ಕೆ ಅವರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಸೀಟುಗಳು ಬಂದು ಗೆದ್ದುಬಿಟ್ಟಿದ್ಧಾರಂತೆ. ರಾಮದೇವ್ ಹೇಳೋಹಾಗೆ ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡೋದುಬಿಟ್ಟು, ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡೋದು ಬಿಟ್ಟು ಯೋಗ ಮಾಡ್ಕೊಂಡು ಮನೆಲಿದ್ರೆ ದೇಶ ಅಭಿವೃದ್ಧಿ ಆಗತ್ತೆ, ಜನ ಓಟು ಹಾಕ್ತಾರೆ. ಹಾಗೆ ಉಳಿದ ಜನ ತಮ್ಮ ಕೆಲಸಕ್ಕೆ ರಿಸೈನ್ ಮಾಡಿ ಮನೆಲೆ ಇದ್ದು ಯೋಗ ಮಾಡಿ ಆರಾಮಗಿರಬೇಕು ಅಂತ ರಾಮದೇವ್ ಬಯಸಿದ್ದಾರೆ. ಎಲ್ಲರೂ ಯೋಗ ಮಾಢ್ಕೊಂಡ್ ಇದ್ದರೆ ಪತಂಜಲಿ ಫುಡ್ ಮನೆಗೆ ಬರುತ್ತೆ, ದುಡಿಯೋದು ಬೇಡ, ಕಷ್ಟ ಪಡೋದು ಬೇಡ. ದೇಶದ ಜಿಡಿಪಿಯೂ ಎವರೆಸ್ಟ್ ಪರ್ವತವನ್ನು ಹಿಂದಿಕ್ಕಿ ಮುಗಿಲಿನತ್ತ ಬೆಳೆದು ನಿಲ್ಲುತ್ತೆ.
ಸಧ್ಯಕ್ಕೆ ನಾಳೆ ಜೂನ್ 21 ಯೋಗ ದಿನವಿದೆ ಎಲ್ಲರೂ ಯೋಗ ಮಾಡಿ. ಜೈ ರಾಮದೇವ್ ಬಾಬಾ!!