ರಿಪಬ್ಲಿಕ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು 2016ರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
2016ರಲ್ಲಿ ಅರ್ನಾಬ್ ಗೋಸ್ವಾಮಿ ವಿರುದ್ಧ ‘ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ’ (ಟಿಇಆರ್ಇ) ಮಾಜಿ ಅಧ್ಯಕ್ಷ ಆರ್.ಕೆ.ಪಚೌರಿ ಮತ್ತು ಇತರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಹೊರತಾಗಿಯೂ, ಮಾಧ್ಯಮಗಳಲ್ಲಿ ವರದಿ ಬಿತ್ತರಿಸಿದಕ್ಕಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. 2016ರಲ್ಲಿ ಪ್ರಕರಣ ದಾಖಲಾದಾಗ ಗೋಸ್ವಾಮಿ ಟೈಮ್ಸ್ ನೌ ವಾಹಿನಿಯಲ್ಲಿದ್ದರು.
“ನಾನು ಈ ಮೂಲಕ ಈ ಗೌರವಾನ್ವಿತ ನ್ಯಾಯಾಲಯಕ್ಕೆ ನನ್ನ ಕ್ಷಮೆಯಾಚನೆಯನ್ನು ಸಲ್ಲಿಸುತ್ತೇನೆ. ಈ ಗೌರವಾನ್ವಿತ ನ್ಯಾಯಾಲಯವು ಕ್ಷಮಾಪಣೆಯನ್ನು ಸ್ವೀಕರಿಸಿ, ಹೇಳಿಕೆದಾರರ ವಿರುದ್ಧದ ತ್ವರಿತ ವಿಚಾರಣೆಯನ್ನು ಮುಕ್ತಾಯಗೊಳಿಸಲು ದಯಪಾಲಿಸಬೇಕೆಂದು ವಿನಂತಿಸುತ್ತೇನೆ” ಎಂದು ಗೋಸ್ವಾಮಿ ಅವರು ಏಪ್ರಿಲ್ 28 ರಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.
“ಕಾನೂನು ಪಾಲಿಸುವ ಮತ್ತು ದೇಶದ ಗೌರವಾನ್ವಿತ ನಾಗರಿಕ ಗೋಸ್ವಾಮಿ ಆಗಿದ್ದಾರೆ. ಎಲ್ಲಾ ನ್ಯಾಯಾಲಯಗಳನ್ನು ಹೆಚ್ಚು ಗೌರವಿಸುತ್ತಾರೆ. ದೆಹಲಿ ಹೈಕೋರ್ಟ್ದೊಂದಿಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ” ಎಂದು ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಲಾಗಿದೆ.
“ಈ ನ್ಯಾಯಾಲಯದ ಆದೇಶಗಳ ಅವಿಧೇಯತೆ, ಉದ್ದೇಶಪೂರ್ವಕ ಅಸಹಕಾರದಂತಹ ಯಾವುದೇ ಲೋಪವನ್ನು ಮಾಡುವ ಉದ್ದೇಶವನ್ನು ನಾನು ಹೊಂದಿರಲಿಲ್ಲ. 18.02.2015 ರಂದು ಈ ಗೌರವಾನ್ವಿತ ನ್ಯಾಯಾಲಯವು ಅಂಗೀಕರಿಸಿದ ಆದೇಶದ ಪ್ರಕಾರ ಪ್ರಸಾರಕ್ಕೆ ನಿರ್ಬಂಧವಿರಲಿಲ್ಲ ಎಂಬ ಪ್ರಾಮಾಣಿಕ ನಂಬಿಕೆಯ ಅಡಿಯಲ್ಲಿ ಆಪಾದಿತ ಪ್ರಸಾರಗಳನ್ನು ಮಾಡಲಾಗಿದೆ. ಸದರಿ ಆದೇಶದಲ್ಲಿ ಈ ನ್ಯಾಯಾಲಯವು ಗುರುತಿಸಿದಂತೆ ಭಾರತದ ಸಂವಿಧಾನದ ವಿಧಿ 19 (1) (ಎ) ಅಡಿಯಲ್ಲಿ ನ್ಯಾಯಯುತ ವರದಿಯನ್ನು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ವಕೀಲ ಅಮನ್ ಅವಿನಾವ್ ಮೂಲಕ ಅಫಿಡವಿಟ್ ಸಲ್ಲಿಸಲಾಗಿದೆ. ಗೋಸ್ವಾಮಿ ಅವರ ವಕೀಲರಾದ ಮಾಳವಿಕಾ ತ್ರಿವೇದಿ ಅವರು, “ತಮ್ಮ ಕಕ್ಷಿದಾರರ ಪರವಾಗಿ ಒಂದು ವಾರದೊಳಗೆ ಬೇಷರತ್ ಕ್ಷಮೆಯಾಚಿಸುವ ಅಫಿಡವಿಟ್ ಅನ್ನು ಸಲ್ಲಿಸಲಾಗುವುದು” ಎಂದು ನ್ಯಾಯಾಲಯದ ಮುಂದೆ ಏಪ್ರಿಲ್ 17ರಂದು ತಿಳಿಸಿದ್ದರು. ಏಪ್ರಿಲ್ 29ರಂದು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಮುಂದೆ ನಡೆದ ವಿಚಾರಣೆಯಲ್ಲಿ, ತ್ರಿವೇದಿ ಅವರು ಅಫಿಡವಿಟ್ ಪ್ರತಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದರು.
ಮತ್ತೊಂದೆಡೆ, ರಾಘವ್ ಓಹ್ರಿ ಅವರನ್ನು ಪ್ರತಿನಿಧಿಸುವ ವಕೀಲರು ಪ್ರತಿಕ್ರಿಯಿಸಿದ್ದು, ಈ ವಿಷಯದಲ್ಲಿ ಎದ್ದಿರುವ ಆರೋಪಗಳ ಅರ್ಹತೆಯನ್ನು ನಮೂದಿಸದೆ, ವಿವಾದವನ್ನು ಶಮನಗೊಳಿಸುವ ಸಲುವಾಗಿ ಅವರು (ಅರ್ನಬ್) ಬೇಷರತ್ ಕ್ಷಮೆಯಾಚನೆಯ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ಮೋದಿಯ ಕೋಮುವಾದಿ ಒಬಿಸಿ ರಾಜಕಾರಣಕ್ಕೆ, ಸಿದ್ದರಾಮಯ್ಯ ಎಂಬ ವೈಚಾರಿಕ ಒಬಿಸಿಯ ಕೌಂಟರ್
ದಿ ಎಕನಾಮಿಕ್ ಟೈಮ್ಸ್ ಪರವಾಗಿಯೂ ಇದೇ ರೀತಿಯ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿ ಅರೋರಾ ಅವರಿಗೆ ತಿಳಿಸಲಾಯಿತು. ನಂತರ ನ್ಯಾಯಾಲಯವು ಪ್ರಕರಣವನ್ನು ಮೇ 22ರಂದು ವಿಚಾರಣೆಗೆ ಮುಂದೂಡಿತು.
ವಿಚಾರಣೆಯ ಆದೇಶವನ್ನು ನ್ಯಾಯಾಲಯದ ವೆಬ್ಸೈಟ್ನಲ್ಲಿ ಇನ್ನೂ ಅಪ್ಲೋಡ್ ಮಾಡಲಾಗಿಲ್ಲ. ಆದರೆ, ಪ್ರಕರಣದ ಸ್ಥಿತಿ ನೋಡಿದರೆ ಅದು ವಿಲೇವಾರಿಯಾಗಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
“ತನ್ನ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ ವರದಿ, ಲೇಖನ ಅಥವಾ ಅಭಿಪ್ರಾಯವನ್ನು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು” ಎಂದು ಆರ್ಕೆ ಪಚೌರಿ ಕೋರ್ಟ್ ಮೊರೆ ಹೋಗಿದ್ದರು.
Country is having many sold-out TV channels.