ರಾಜ್ಯ ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಪತ್ರಿಕೆಗಳಿಗೆ ನೀಡಿರುವ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ಜಾಹೀರಾತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಶನಿವಾರ ನೋಟಿಸ್ ಜಾರಿ ಮಾಡಿದೆ.
“ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ, ಉದ್ಯೋಗ ನೇಮಕಾತಿ ಮತ್ತು ವರ್ಗಾವಣೆಗಳಿಗಾಗಿ ಜನರು ಲಂಚವನ್ನು ನೀಡಬೇಕಾಗಿದೆ” ಎಂದು ಆರೋಪಿಸಿರುವ ಕಾಂಗ್ರೆಸ್, “ಯಾವ ಯಾವ ಕೆಲಸಕ್ಕೆ ಎಷ್ಟು ಹಣ ಪಾವತಿಸಬೇಕಾಗಿದೆ” ಎಂಬ ವಿವರಗಳೊಂದಿಗೆ ಕಾಂಗ್ರೆಸ್ ಜಾಹೀರಾತು ನೀಡಿದೆ.
ಬಿಜೆಪಿ ದೂರಿನ ಮೇರೆಗೆ ಚುನಾವಣಾ ಆಯೋಗ ಕಾಂಗ್ರೆಸ್ಗೆ ನೋಟಿಸ್ ಜಾರಿ ಮಾಡಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಆಯೋಗ ಹೇಳಿದೆ.
“ಸಾಧನೆಯ ಕೊರತೆ, ದುಷ್ಕೃತ್ಯಗಳು, ರಾಜಕೀಯ ವಿರೋಧಿಗಳ ಭ್ರಷ್ಟಾಚಾರ, ಮುಕ್ತ ಆಡಳಿತವನ್ನು ಖಾತರಿಪಡಿಸದಿರುವ ಸಾಮಾನ್ಯ ಉಲ್ಲೇಖಗಳು ಮತ್ತು ಪ್ರಸ್ತಾಪಗಳು ರಾಜಕೀಯ ಪ್ರಚಾರಗಳಲ್ಲಿ ಇರುತ್ತವೆ. ನಿರ್ದಿಷ್ಟ ಆರೋಪಗಳನ್ನು ಪ್ರತ್ಯೇಕಿಸಬೇಕಾಗಿದೆ. ಏಕೆಂದರೆ ಅವುಗಳು ಪರಿಶೀಲಿಸಬೇಕಾದ ಸತ್ಯಗಳಿಂದ ಇರಬೇಕು” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ ನೋಟಿಸ್ನಲ್ಲಿ ತಿಳಿಸಲಾಗಿದೆ.
“ನೀವು ನೀಡಿದ ಜಾಹೀರಾತಿನಲ್ಲಿ ಉಲ್ಲೇಖಿಸಲಾದ ನೇಮಕಾತಿಗಳು, ವರ್ಗಾವಣೆಗಳು, ಉದ್ಯೋಗಗಳು ಮತ್ತು ಕಮಿಷನ್ ಪ್ರಕಾರಗಳ ದರಗಳಿಗೆ ಪುರಾವೆಗಳನ್ನು ಮೇ 7, 2023 ರಂದು ಸಂಜೆ 7 ಗಂಟೆಗಳ ಒಳಗೆ ಯಾವುದೇ ವಿವರಣೆಯೊಂದಿಗೆ ಮತ್ತು ಅದನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸುವ ಮೂಲಕ ಪಕ್ಷ ಮಾಡಿದ ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ನೀಡಬೇಕು” ಎಂದು ಸೂಚಿಸಿದೆ.
“ಪುರಾವೆಗಳನ್ನು ಸಲ್ಲಿಸಲು ವಿಫಲವಾದರೆ ನೀತಿ ಸಂಹಿತೆಗೆ ಸಂಬಂಧಿತ ಕಾನೂನು ನಿಬಂಧನೆಗಳನ್ನು ನಿಮ್ಮ ವಿರುದ್ಧ ಜರುಗಿಸಲಾಗುವುದು. ಜನಪ್ರತಿನಿಧಿ ಕಾಯ್ದೆ ಮತ್ತು ಐಪಿಸಿಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ.
ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಜಾಹೀರಾತಿನಲ್ಲಿ ಏನಿದೆ?
“ಈ ಟ್ರಬಲ್ ಇಂಜಿನ್ ಸರ್ಕಾರ- ಭ್ರಷ್ಟಾಚಾರದ ರೇಟ್ ಕಾರ್ಡ್ 2019-2023” ಎಂದ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಜಾಹೀರಾತು ಪ್ರಕಟಿಸಿದೆ.
“ಸಿಎಂ ಹುದ್ದೆಗೆ 2500 ಕೋಟಿ ರೂ., ಮಂತ್ರಿಗಳ ಹುದ್ದೆಗೆ 500 ಕೋಟಿ ರೂಗಳನ್ನು ಬಿಜೆಪಿ ಪಡೆಯುತ್ತದೆ” ಎಂದು ಆರೋಪಿಸಲಾಗಿದೆ.
ನೇಮಕಾತಿ ಮತ್ತು ವರ್ಗಾವಣೆ ದರ
ಕೆಎಸ್ಡಿಎಲ್: 5ರಿಂ 15 ಕೋಟಿ ರೂ.,
ಇಂಜಿನಿಯರ್: 1ರಿಂದ 5 ಕೋಟಿ ರೂ.
ಸಬ್ ರಿಜಿಸ್ಟ್ರಾರ್: 50 ಲಕ್ಷ ರೂ.ಗಳಿಂದ 5 ಕೋಟಿ ರೂ.
ಬೆಸ್ಕಾ: 1 ಕೋಟಿ ರೂ.
ಪಿಎಸ್ಐ: 80 ಲಕ್ಷ ರೂ.
ಸಹಾಯಕ ಪ್ರಾಧ್ಯಾಪಕ: 50 ಲಕ್ಷ – 70 ಲಕ್ಷ ರೂ.
ಉಪನ್ಯಾಸಕ: 30 ಲಕ್ಷ- 50 ಲಕ್ಷ ರೂ.
ಎಫ್ಡಿಎ:30 ಲಕ್ಷ ರೂ.
ಸಹಾಯಕ ಇಂಜಿನಿಯರ್: 30 ಲಕ್ಷ ರೂ.
ಬಮುಲ್- 25 ಲಕ್ಷ ರೂ.
ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ 10 ಲಕ್ಷ ರೂ.
ಪೊಲೀಸ್ ಪೇದೆ 10 ಲಕ್ಷ ರೂ.
***
ಹುದ್ದೆಗಳ ದರ
ಬಿಡಿಎ ಆಯುಕ್ತ : 10 ಕೋಟಿ – 15 ಕೋಟಿ ರೂ.
ಕೆಪಿಎಸ್ಸಿ ಅಧ್ಯಕ್ಷ: 5 ರಿಂದ 15 ಕೋಟಿ ರೂ.
ಡಿಸಿ ಮತ್ತು ಎಸ್ಪಿ: 5 ರಿಂದ 15 ಕೋಟಿ ರೂ.
ಉಪಕುಲಪತಿ: 5 ರಿಂದ 10 ಕೋಟಿ ರೂ.
ಎಸಿ ಮತ್ತು ತಹಸೀಲ್ದಾರ್ 50 ಲಕ್ಷ- 3 ಕೋಟಿ ರೂ.
***
ಸರ್ಕಾರದ ಡೀಲ್ಗಳು
ಕೋವಿಡ್ ಕಿಟ್ ಪೂರೈಕೆ: 75%
ಪಿಡಬ್ಲ್ಯುಡಿ ಗುತ್ತಿಗೆಗಳು: 40 %
ಮಠಕ್ಕೆ ಅನುದಾನ: 30%
ಉಪಕರಣಗಳ ಪೂರೈಕೆ: 40%
ಮೊಟ್ಟೆ ಪೂರೈಕೆ: 30%
ರಸ್ತೆ ಗುತ್ತಿಗೆಗಳು: 40%
-ಹೀಗೆ ಜಾಹೀರಾತಿನಲ್ಲಿ ಆರೋಪಗಳನ್ನು ಕಾಂಗ್ರೆಸ್ ಮಾಡಿದೆ. “ಕಳೆದ ನಾಲ್ಕೇ ವರ್ಷಗಳಲ್ಲಿ 40% ಸರ್ಕಾರ ಕನ್ನಡಿಗರಿಂದ 1,50,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಲೂಟಿ ಮಾಡಿದೆ. ಇದೇ ಗತಿಯಲ್ಲಿ ಸಾಗಿದರೆ ನಮ್ಮ ರಾಜ್ಯವೇ ನಾಶವಾಗುತ್ತದೆ. ಈ ಲೂಟಿಯನ್ನು ನಿಲ್ಲಿಸಿ. ಬದಲಾವಣೆ ಹಾಗೂ ಪ್ರಗತಿಗೆ ನಿಮ್ಮ ಮತ ನೀಡಿ. ಕಾಂಗ್ರೆಸ್ಗೆ ಮತ ನೀಡಿ” ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.