370ನೇ ವಿಧಿ ರದ್ದತಿಯ ವಿರುದ್ಧ ವಾದ ಮಂಡಿಸಲು ನ್ಯಾಯಾಲಯಕ್ಕೆ ಹಾಜರಾದ ಎರಡೇ ದಿನಗಳಲ್ಲಿ ಜಮ್ಮು-ಕಾಶ್ಮೀರದ ಶಿಕ್ಷಣ ಇಲಾಖೆ ಉಪನ್ಯಾಸಕರನ್ನು ಏಕೆ ಅಮಾನತುಗೊಳಿಸಿದೆ ಎಂಬುವುದನ್ನು ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಮಾತನಾಡುವಂತೆ ಕೇಂದ್ರದ ಉನ್ನತ ಕಾನೂನು ಅಧಿಕಾರಿ(ಎಜಿ)ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ನ್ಯಾಯಾಲಯದ ಮುಂದೆ ಉಪನ್ಯಾಸಕರ ಹಾಜರಾಗಿದ್ಗಕ್ಕೆ ಅಮಾನತು ಮಾಡಲಾಗಿದೆಯಾ? ಇದು ಪ್ರತಿಕಾರದಂತೆ ಕಾಣುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಕಾನೂನು ಪದವಿ ಹೊಂದಿರುವ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕ ಜಹೂರ್ ಅಹ್ಮದ್ ಭಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಹಾಜರಾಗಿ 370ನೇ ವಿಧಿ ರದ್ಧತಿ ಬಗ್ಗೆ ವಾದ ಮಂಡಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಶುಕ್ರವಾರ, ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವಾ ನಿಯಮಗಳು, ಜಮ್ಮು ಮತ್ತು ಕಾಶ್ಮೀರ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು ಮತ್ತು ಜಮ್ಮು ಮತ್ತು ಕಾಶ್ಮೀರ ರಜೆ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಕ್ಷಣವೇ ಜಾರಿಗೆ ಬರುವಂತೆ ಜಹೂರ್ ಅಹ್ಮದ್ ಭಟ್ ಅವರನ್ನು ಅಮಾನತುಗೊಳಿಸಿ ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಅಮಾನತು ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಇಲ್ಲಿಗೆ ಬಂದು 5 ನಿಮಿಷಗಳ ಕಾಲ ವಾದ ಮಂಡಿಸಿದ ಉಪನ್ಯಾಸಕ ಅಮಾನತುಗೊಂಡಿದ್ದಾರೆ. ಅವರು ಎರಡು ದಿನ ರಜೆ ತೆಗೆದುಕೊಂಡಿದ್ದರು. ವಾಪಾಸ್ಸು ಹೋಗುವಾಗ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಅವರು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಸಮಸ್ಯೆ ಬಗ್ಗೆ ಪರಿಶೀಲಿಸುವಂತೆ ಹೇಳಿದ್ದಾರೆ. AG ಏನಾಯಿತು ಎಂದು ನೋಡಿ. ಈ ನ್ಯಾಯಾಲಯಕ್ಕೆ ಹಾಜರಾಗಿದ್ದ ಓರ್ವರು ಈಗ ಅಮಾನತುಗೊಂಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಜೊತೆ ಮಾತನಾಡಿ ಎಂದು ಹೇಳಿದ್ದಾರೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅಮಾನತು ಬೇರೆ ವಿಷಯಗಳಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಆಗಿದ್ದರೆ ಅಮಾನತು ಮೊದಲೇ ಆಗಬೇಕಿತ್ತು ಎಂದು ಕಪಿಲ್ ಸಿಬಲ್ ಕೋರ್ಟ್ ಗೆ ಹೇಳಿದ್ದಾರೆ.
ಈ ಬಗ್ಗೆ ಕ್ರಮವು ಪ್ರತೀಕಾರವಾಗಿರಬಹುದು ಎಂದ ನ್ಯಾಯಮೂರ್ತಿ ಬಿಆರ್ ಗವಾಯಿ, ಇಲ್ಲಿ ಕಾಣಿಸಿಕೊಂಡ ಕಾರಣ ಅದು ಸಂಭವಿಸಿದರೆ ಅದು ನಿಜವಾಗಿಯೂ ಪ್ರತೀಕಾರ ಎಂದು ಅವರು ಹೇಳಿದರು.
ಭಟ್ ಅವರು ಕೋರ್ಟ್ ಮುಂದೆ 5 ನಿಮಿಷಗಳ ಕಾಲ ಹಾಜರಾಗಿ, 2019ರಲ್ಲಿ 370 ವಿಧಿ ರದ್ಧತಿ ಬಳಿಕ ಜಮ್ಮು ಮತ್ತು ಕಾಶ್ಮೀರದ ಮಕ್ಕಳಿಗೆ ರಾಜಕೀಯ ಶಾಸ್ತ್ರ ವಿಷಯ ಬೋಧಿಸುವುದು ಕಷ್ಟವಾಗಿದೆ. ಮಕ್ಕಳು ಈಗ ಇಲ್ಲಿ ಪ್ರಜಾಪ್ರಭತ್ವ ಇದೆಯಾ ಎಂದು ಪಶ್ನಿಸುತ್ತಿದ್ದಾರೆ. ಭಟ್ ಅವರು ವಾದಿಸುತ್ತಾ 370ನೇ ವಿಧಿ ರದ್ಧತಿ ಸಂವಿಧಾನದ ತತ್ವಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಮುಂದೆ ವಾದಿಸಿದ್ದರು.
ಇದನ್ನು ಓದಿ: ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ವಿಚಿತ್ರ ಆಗ್ರಹ ಮುಂದಿಟ್ಟ ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ