ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣವನ್ನು ಸಿಪಿಐಎಂ ಸಂಸದ ಪಿ ವಿ ಶಿವದಾಸನ್ ಅವರು ಸೋಮವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಕಂಪನಿಯು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ, ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಪ್ರವೇಶದ್ವಾರದಿಂದ 200 ಮೀಟರ್ ದೂರದಲ್ಲಿ ನ.12 ರಂದು ಕುಸಿದಿದ್ದು ಈ ವೇಳೆ 41 ಕಾರ್ಮಿಕರು ಸುರಂಗದ ಒಳಗೆ ಸಿಲುಕಿದ್ದರು. ಘಟನೆ ನಡೆದ 17 ದಿನಗಳ ಬಳಿಕ ಸಿಲ್ಕ್ಯಾರಾ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಲಾಗಿತ್ತು.
ಈ ಕುರಿತು ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿವದಾಸನ್, ಘಟನೆಯು ಅತ್ಯಂತ ನೋವಿನಿಂದ ಕೂಡಿದೆ ಮತ್ತು ಸುರಂಗ ಮಾರ್ಗ ನಿರ್ಮಾಣ ಕಂಪನಿಯು ಎಲ್ಲಾ ಭದ್ರತಾ ಕ್ರಮಗಳು, ನಿಯಮಗಳು ಮತ್ತು ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪಾರದರ್ಶಕ ಮತ್ತು ನ್ಯಾಯೋಚಿತ ತನಿಖೆ ಬಹಳ ಅವಶ್ಯಕ. ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣ ಇದು ಒಂದೇ ಘಟನೆಯಲ್ಲ. ಇಂತಹ ಹಲವು ಘಟನೆಗಳು ಈ ಪ್ರದೇಶದಲ್ಲಿ ನಡೆದಿದೆ ಎಂದು ಸಿಪಿಐಎಂ ಸಂಸದರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿಯ ಅಜಯ್ ಪ್ರತಾಪ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ಶಿವದಾಸನ್ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಡವರ ಯೋಗಕ್ಷೇಮಕ್ಕೆ ಬದ್ಧವಾಗಿದೆ. ಕಾರ್ಮಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ ಪ್ರಧಾನಿ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಧಾಮಿ, ಕೇಂದ್ರ ಸಚಿವ ವಿ ಕೆ ಸಿಂಗ್ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.
NHIDCL ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಮೂಲಕ ಸುರಂಗವನ್ನು ನಿರ್ಮಿಸುತ್ತಿದೆ. ಈ ವೇಳೆ AAP ಸಂಸದ ಸಂತ ಬಲ್ಬೀರ್ ಸಿಂಗ್ ವಾಯು ಮಾಲಿನ್ಯದ ವಿಷಯವನ್ನು ಪ್ರಸ್ತಾಪಿಸಿದ್ದು, ವಾಯು ಮಾಲಿನ್ಯದಿಂದ ಪ್ರತಿ ವರ್ಷ ಸುಮಾರು 21 ಲಕ್ಷ ಸಾವುಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ.
ಒಂದು ವರ್ಷದಲ್ಲಿ ದೆಹಲಿಯಲ್ಲಿ ಒಂದು ದಿನ, ಮುಂಬೈನಲ್ಲಿ 5 ದಿನ ಮತ್ತು ಚೆನ್ನೈನಲ್ಲಿ 15 ದಿನ ಮಾತ್ರ ಗಾಳಿಯು ಶುದ್ಧವಾಗಿತ್ತು. ವಾಯುಮಾಲಿನ್ಯದ ಬಗ್ಗೆ ಮಾತನಾಡುವಾಗಲೆಲ್ಲಾ ಪಂಜಾಬ್ನ ರೈತರು ಹುಲ್ಲು ಸುಡುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಪಂಜಾಬ್ನ ಯಾವುದೇ ರೈತರು ಹುಲ್ಲು ಸುಡಲು ಬಯಸುವುದಿಲ್ಲ ಮತ್ತು ಸರಕಾರ ಅವರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು ಸಂತ ಬಲ್ಬೀರ್ ಸಿಂಗ್ ಅವರು ಹೇಳಿದ್ದಾರೆ.
ಇದನ್ನು ಓದಿ: 3 ರಾಜ್ಯಗಳಲ್ಲಿ ಒಂದೇ ಒಂದು ಖಾತೆ ತೆರೆಯದ ಎಎಪಿ: ನೋಟಾಗಿಂತಲೂ ಅಲ್ಪ ಮತ