Homeಮುಖಪುಟರಾಜ್ಯಸಭಾ ಕಡತದಿಂದ ಮೋದಿ ವಿರುದ್ಧದ ತಮ್ಮ ಹೇಳಿಕೆ ತಗೆದಿದ್ದಕ್ಕೆ ಖರ್ಗೆ ಆಕ್ಷೇಪ

ರಾಜ್ಯಸಭಾ ಕಡತದಿಂದ ಮೋದಿ ವಿರುದ್ಧದ ತಮ್ಮ ಹೇಳಿಕೆ ತಗೆದಿದ್ದಕ್ಕೆ ಖರ್ಗೆ ಆಕ್ಷೇಪ

- Advertisement -
- Advertisement -

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಸದನವನ್ನುದ್ದೇಶಿಸಿ ಮಾತನಾಡುವಾಗ ತಮ್ಮ ಕೆಲವು ಹೇಳಿಕೆಗಳನ್ನು ಕಡತದಿಂದ ತಗೆದುಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬುಧವಾರ ಸದನದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು, “ಕಳೆದ ಎರಡೂವರೆ ವರ್ಷಗಳಲ್ಲಿ” ಅದಾನಿ ಸಮೂಹದ ಸಂಪತ್ತಿನ ಏರಿಕೆಯನ್ನು ಪ್ರಶ್ನಿಸಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಸಿ ಟೀಕಿಸಿದ್ದರು. ಆದರೆ ಆ ನಂತರ ಸದನದ ದಾಖಲೆಗಳಿಂದ ಖರ್ಗೆಯವರ ಕೆಲವು ಟೀಕೆಗಳನ್ನು ತೆಗೆದುಹಾಕಲಾಗಿದೆ.

ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಅದಾನಿ ಸಂಸ್ಥೆಯ ವಂಚನೆ ಬಗ್ಗೆ ಮಾತನಾಡುತ್ತ ಪ್ರಧಾನಿಯನ್ನು ಟೀಕಿಸಿದ್ದಾರೆ. ಆದರೆ ಅದನ್ನು ರಾಜ್ಯಸಭಾ ಕಡತದಿಂದ ತಗೆದುಹಾಕಲಾಗಿದೆ. ಇದನ್ನು ನಾವು ‘ಸೆನ್ಸಾರ್‍‌ಶಿಪ್’ ಎಂದು ಹೇಳುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

”ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 2.5 (ಎರಡೂವರೆ) ವರ್ಷಗಳಲ್ಲಿ 13 ಪಟ್ಟು ಹೆಚ್ಚಾಗಿದೆ. 2014ರಲ್ಲಿ 50,000 ಕೋಟಿಯಷ್ಟಿದ್ದ ಅವರ ಸಂಪತ್ತು 2019ರಲ್ಲಿ 1 ಲಕ್ಷ ಕೋಟಿ ಆಯಿತು. ಕೇವಲ ಎರಡು ವರ್ಷಗಳಲ್ಲಿ ಅವರ ಆಸ್ತಿ 12 ಲಕ್ಷ ಕೋಟಿ ರೂ.ಗೆ ತಲುಪಲು ಏನೆಲ್ಲಾ ಮ್ಯಾಜಿಕ್ ನಡೆದಿದೆ ಎಂದು ನನಗೆ ಗೊತ್ತಿಲ್ಲ” ಎಂದು ಖರ್ಗೆ ಕುಟುಕಿದ್ದಾರೆ. ಇದರ ನಡುವೆ ಬಿಜೆಪಿ ಸಂಸದರು ಪ್ರತಿಭಟನೆಯನ್ನೂ ನಡೆಸಿದ್ದಾರೆ ಎಂದರು.

ಇದನ್ನೂ ಓದಿ: ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ಬಿಜೆಪಿಗರನ್ನೇ ಪಪ್ಪು ಮಾಡಿದ್ದಾರೆ: ಆದಿರ್ ಚೌಧರಿ

”ನಾನು ಸತ್ಯವನ್ನು ಮಾತನಾಡಿದರೆ ಅದು ದೇಶವಿರೋಧಿಯಾಗುತ್ತದೆಯೇ? ನಾನು ದೇಶವಿರೋಧಿ ಅಲ್ಲ, ನಾನು ಇಲ್ಲಿ ಎಲ್ಲರಿಗಿಂತಲೂ ಹೆಚ್ಚು ದೇಶಭಕ್ತನಾಗಿದ್ದೇನೆ. ನಾನು ‘ಭೂಮಿ-ಪುತ್ರ’. ನೀವು ದೇಶವನ್ನು ಲೂಟಿ ಮಾಡುತ್ತಿದ್ದೀರಿ, ಆದರೆ ನನ್ನನ್ನು ದೇಶವಿರೋಧಿ ಎನ್ನುತ್ತಿದ್ದೀರಿ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಯಾವುದಕ್ಕೂ ಹೆದರುವುದಿಲ್ಲ ಎನ್ನುವುದಾದರೆ, ಅದಾನಿ-ಹಿಂಡನ್‌ಬರ್ಗ್ ವಿವಾದದ ಕುರಿತು ಜಂಟಿ ಸಂಸದೀಯ ತನಿಖೆ ನಡೆಸಲು ಯಾಕೆ ಹೆದರುತ್ತಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು. ಖರ್ಗೆಯವರ ಈ ಹೇಳಿಕೆಗಳಲ್ಲಿ ಕೆಲವನ್ನು ಕಡತದಿಂದ ತಗೆದುಹಾಕಲಾಗಿದೆ.

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚರ್ಚೆಗಳು ಜೋರಾಗಿ ನಡೆದವು. ಇಂದು ಉಭಯ ಸದನಗಳು ಕೇಂದ್ರ ಬಜೆಟ್ 2023 ಅನ್ನು ಚರ್ಚಿಸಲು ಸಿದ್ಧವಾಗಿವೆ.

ಇಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, 140 ಕೋಟಿ ಜನರು ತಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟಿರುವ “ರಕ್ಷಣಾತ್ಮಕ ಗುರಾಣಿ” ಎಂದು ಪ್ರಧಾನಿ ಮೋದಿ ಹೇಳಿದರು. ವಿಪಕ್ಷಗಳ ಆರೋಪಗಳಿಂದ ಅಥವಾ ಸುಳ್ಳು ಆರೋಪಗಳಿಂದ ಜನರ ನಂಬಿಕೆಯನ್ನು ಸುಳ್ಳು ಮಾಡಲು ಸಾಧ್ಯವಿಲ್ಲ ಎಂದರು.

ಈ ನಡುವೆ ಪ್ರತಿಪಕ್ಷಗಳು “ಅದಾನಿ, ಅದಾನಿ,” ಮತ್ತು “ಜೆಪಿಸಿ, ಜೆಪಿಸಿ” ಎಂದು ಕೂಗಿದರು. ಆಗ ಮೋದಿ ಸ್ವಲ್ಪ ಹೊತ್ತು ಭಾಷಣ ನಿಲ್ಲಿಸಿ, ನಂತರ ಭಾಷಣ ಮುಂದುವರೆಸಿದರು. ಅದಾನಿ ಗುಂಪಿನ ಬಗ್ಗೆ ರಾಹುಲ್ ಗಾಂಧಿಯವರು ಮಾಡಿದ ಆರೋಪಗಳ ಬಗ್ಗೆ ಮೋದಿ ಎಲ್ಲೂ ಉಲ್ಲೇಖಿಸಲಿಲ್ಲ.

ಈ ಬಗ್ಗೆ ರಾಹುಲ್ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿಯವರು ಅದಾನಿಗೆ ರಕ್ಷಣೆ ನೀಡುತ್ತಿದ್ದಾರೆ ಮತ್ತು ಅದಾನಿ ಬಗ್ಗೆ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿಲ್ಲ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read