Homeಮುಖಪುಟಇಂದು ಕರಾವಳಿಗೆ ಅಪ್ಪಳಿಸಲಿರುವ ಮೊಂಥಾ ಚಂಡಮಾರುತ : ಆಂಧ್ರ, ಒಡಿಶಾದಲ್ಲಿ ಹೈ ಅಲರ್ಟ್

ಇಂದು ಕರಾವಳಿಗೆ ಅಪ್ಪಳಿಸಲಿರುವ ಮೊಂಥಾ ಚಂಡಮಾರುತ : ಆಂಧ್ರ, ಒಡಿಶಾದಲ್ಲಿ ಹೈ ಅಲರ್ಟ್

- Advertisement -
- Advertisement -

ಬಂಗಾಳಕೊಲ್ಲಿಯಲ್ಲಿ ‘ಮೊಂಥಾ’ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಇಂದು (ಅ.28, ಮಂಗಳವಾರ) ಸಂಜೆ ಅಥವಾ ರಾತ್ರಿ ಆಂಧ್ರ ಪ್ರದೇಶದ ಕಾಕಿನಾಡ ಬಳಿ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಒಡಿಶಾ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುತ್ತಿವೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಿವೆ.

ಒಡಿಶಾ ಸರ್ಕಾರ ಸೋಮವಾರ ದಕ್ಷಿಣದ ಎಂಟು ಜಿಲ್ಲೆಗಳಾದ ಮಲ್ಕನ್‌ಗಿರಿ, ಕೊರಾಪುಟ್, ನಬರಂಗ್‌ಪುರ, ರಾಯಗಡ, ಗಜಪತಿ, ಗಂಜಾಂ, ಕಲಹಂಡಿ ಮತ್ತು ಕಂಧಮಲ್‌ಗಳ ತಗ್ಗು ಮತ್ತು ಗುಡ್ಡಗಾಡು ಪ್ರದೇಶಗಳಿಂದ 1,496 ಗರ್ಭಿಣಿಯರು ಸೇರಿದಂತೆ ಸುಮಾರು 3,000 ಜನರನ್ನು ಸ್ಥಳಾಂತರಿಸಿದೆ, ಅಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

“ಒಟ್ಟು 32,528 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗರ್ಭಿಣಿಯರು, ವೃದ್ಧರು ಮತ್ತು ಅಂಗವಿಕಲರ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗಿದೆ. 1,445 ಚಂಡಮಾರುತ ಆಶ್ರಯ ಕೇಂದ್ರಗಳನ್ನು ಅಥವಾ ಗಂಜಿ ಕೇಂದ್ರಗಳನ್ನು ತೆರೆದಿದ್ದೇವೆ. ಸಾಕು ಪ್ರಾಣಿಗಳಿಗೆ ಆಹಾರ, ಔಷಧ, ಬೆಳಕು ಮತ್ತು ಆರೈಕೆಯ ವ್ಯವಸ್ಥೆ ಮಾಡಿದ್ದೇವೆ” ಎಂದು ಸೋಮವಾರ ಸಂಜೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ಎನ್‌ಡಿಆರ್‌ಎಫ್‌, ಒಡಿಆರ್‌ಎಫ್‌ ಮತ್ತು ಅಗ್ನಿಶಾಮಕ ಸೇವೆಯಿಂದ ಒಟ್ಟು 140 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತ ಅಪ್ಪಳಿಸಿದ 24 ಗಂಟೆಗಳ ಒಳಗೆ ವಿದ್ಯುತ್ ಪುನಃಸ್ಥಾಪಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಆಸ್ಪತ್ರೆಗಳು ಮತ್ತು ಕುಡಿಯುವ ನೀರಿನ ಘಟಕಗಳಲ್ಲಿ ವಿದ್ಯುತ್ ಬ್ಯಾಕಪ್ ಸಿದ್ಧವಾಗಿದೆ” ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಡಿ.ಕೆ ಸಿಂಗ್ ತಿಳಿಸಿದ್ದಾರೆ.

ಭುವನೇಶ್ವರ ಸೇರಿದಂತೆ ದಕ್ಷಿಣ ಮತ್ತು ಕರಾವಳಿ ಒಡಿಶಾದ ಕೆಲವು ಭಾಗಗಳಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಅಕ್ಟೋಬರ್ 28 ಮತ್ತು 29 ರಂದು ಮಳೆ ತೀವ್ರಗೊಳ್ಳಲಿದೆ ಎಂದು ಸಚಿವ ಪೂಜಾರಿ ಮಾಹಿತಿ ನೀಡಿದ್ದಾರೆ.

ಗುಡ್ಡಗಾಡು ಗಜಪತಿ ಜಿಲ್ಲೆಯಲ್ಲಿ ಭೂಕುಸಿತ ಪ್ರಮುಖ ಆತಂಕವಾಗಿದೆ. ಅಲ್ಲಿ 139 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲಾಗಿದೆ. ಅಕ್ಟೋಬರ್ 30 ರವರೆಗೆ ಸರ್ಕಾರಿ ನೌಕರರ ರಜೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಅಲ್ಲಿಯವರೆಗೆ ಒಂಬತ್ತು ಜಿಲ್ಲೆಗಳಲ್ಲಿನ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಪೂಜಾರಿ ಹೇಳಿದ್ದಾರೆ.

“ಒಡಿಶಾದ ಎಲ್ಲಾ ಬಂದರುಗಳಲ್ಲಿ ದೂರದ ಎಚ್ಚರಿಕೆ ಸಿಗ್ನಲ್ ನಂ-ಐ ಅನ್ನು ತೋರಿಸಲಾಗಿದೆ. ಮೀನುಗಾರರು ಅಕ್ಟೋಬರ್ 29 ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಹೆಚ್ಚಿನ ಮೀನುಗಾರರು ಈಗಾಗಲೇ ಮರಳಿದ್ದಾರೆ. ಗಂಜಾಂ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಆಂಧ್ರದ ಮೀನುಗಾರರಿಗೆ ಆಶ್ರಯ ನೀಡಲಾಗಿದೆ. ಅವರು ಹವಾಮಾನ ಸಾಮಾನ್ಯಗೊಂಡ ನಂತರ ಮನೆಗೆ ಮರಳಲಿದ್ದಾರೆ” ಎಂದು ಎಸ್‌ಆರ್‌ಸಿ ತಿಳಿಸಿದೆ.

ಸೋಮವಾರ ರಾತ್ರಿ 8.30ಕ್ಕೆ ಬಿಡುಗಡೆಯಾದ ಇತ್ತೀಚಿನ ಐಎಂಡಿ ಬುಲೆಟಿನ್ ಪ್ರಕಾರ, “ಥಾಯ್ ಭಾಷೆಯಲ್ಲಿ ‘ಪರಿಮಳಯುಕ್ತ ಹೂವು’ ಎಂಬ ಅರ್ಥವನ್ನು ನೀಡುವ ಚಂಡಮಾರುತ ಮೊಂಥಾ, ಸಂಜೆ 5.30ಕ್ಕೆ ಪಶ್ಚಿಮ-ಮಧ್ಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಕೇಂದ್ರೀಕೃತವಾಗಿತ್ತು. ಕಾಕಿನಾಡದಿಂದ ಆಗ್ನೇಯಕ್ಕೆ ಸುಮಾರು 450 ಕಿ.ಮೀ, ವಿಶಾಖಪಟ್ಟಣದಿಂದ ದಕ್ಷಿಣಕ್ಕೆ 500 ಕಿ.ಮೀ ಮತ್ತು ಗೋಪಾಲಪುರದಿಂದ ದಕ್ಷಿಣಕ್ಕೆ 670 ಕಿ.ಮೀ ದೂರದಲ್ಲಿತ್ತು”.

“ಗಾಳಿಯು ಸುಮಾರು 15 ಕಿ.ಮೀ ವೇಗದಲ್ಲಿ ವಾಯುವ್ಯಕ್ಕೆ ಚಲಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ ವೇಳೆಗೆ ತೀವ್ರ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಅಕ್ಟೋಬರ್ 28ರ ಸಂಜೆ ಅಥವಾ ರಾತ್ರಿ, ಕಾಕಿನಾಡ ಬಳಿಯ ಮಚಲಿಪಟ್ನಂ ಮತ್ತು ಕಳಿಂಗಪಟ್ನಂ ನಡುವೆ ಆಂಧ್ರ ಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಗಂಟೆಗೆ 90-100 ಕಿ.ಮೀ ಅಥವಾ ಗಂಟೆಗೆ 110 ಕಿ.ಮೀ. ಗರಿಷ್ಠ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ”.

ಮಂಗಳವಾರ ಸಂಜೆಯಿಂದ ಒಡಿಶಾದ ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60–70 ಕಿ.ಮೀ. ತಲುಪಿ, ಗಂಟೆಗೆ 80 ಕಿ.ಮೀ. ವೇಗದಲ್ಲಿ ಬೀಸಬಹುದು. ಅಕ್ಟೋಬರ್ 28 ಮತ್ತು 29 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ನಂತರ ಈ ವಾತಾವರಣ ದುರ್ಬಲಗೊಂಡು ಚಂಡಮಾರುತವಾಗಿ ಛತ್ತೀಸ್‌ಗಢದ ಕಡೆಗೆ ಚಲಿಸುವ ನಿರೀಕ್ಷೆಯಿದೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರದರಿಂದ ಸಾಧ್ಯವಿರುವ ಎಲ್ಲಾ ಸಹಾಯ ಒದಗಿಸುವ ಭರವಸೆ ಕೊಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನಾಯ್ಡು ಅವರು ರಿಯಲ್ ಟೈಮ್ ಗವರ್ನೆನ್ಸ್ ಸಿಸ್ಟಮ್ (ಆರ್‌ಟಿಜಿಎಸ್) ಮೂಲಕ ಉನ್ನತ ಮಟ್ಟದ ಸಭೆ ನಡೆಸಿ, ಕಾಲುವೆ ದಂಡೆಗಳನ್ನು ಬಲಪಡಿಸಲು, ಪ್ರವಾಹಕ್ಕೆ ಸಿದ್ಧರಾಗಲು ಮತ್ತು ಪ್ರತಿ ಗಂಟೆಯೂ ಚಂಡಮಾರುತದ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿ ಹೇಳಿದೆ.

“ಎಲ್ಲಾ ಮೀನುಗಾರರನ್ನು ಮರಳಿ ದಡಕ್ಕೆ ಕರೆತರಲಾಗಿದೆ. ಚಂಡಮಾರುತದ ನಂತರದ ಪರಿಹಾರ ಕಾರ್ಯಾಚರಣೆಗಾಗಿ ವೈದ್ಯಕೀಯ ತಂಡಗಳು, ಎನ್‌ಡಿಆರ್‌ಎಫ್ ಘಟಕಗಳು ಮತ್ತು ಇಂಜಿನಿಯರಿಂಗ್ ವಿಭಾಗಗಳು ಸಿದ್ಧವಾಗಿವೆ” ಎಂದು ಅಧಿಕೃತ ಪ್ರಕಟಣೆಯನ್ನು ಉಲ್ಲೇಖಿಸಿ ಪಿಟಿಐ ತಿಳಿಸಿದೆ.

ಪರಿಹಾರ ಶಿಬಿರಗಳಲ್ಲಿರುವ ಪ್ರತಿ ಕುಟುಂಬಕ್ಕೆ 3,000 ರೂ. ನಗದು, 25 ಕೆಜಿ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಘೋಷಿಸಲಾಗಿದೆ. ಕೃಷ್ಣ ಜಿಲ್ಲೆಯಲ್ಲಿ ತೀವ್ರ ಮಳೆಯಾಗುವ ಮುನ್ಸೂಚನೆ ಇದ್ದು, ಮುಂದಿನ ಎರಡು ದಿನಗಳಲ್ಲಿ ಗುಂಟೂರು, ಬಾಪಟ್ಲಾ, ಎನ್‌ಟಿಆರ್, ಪಲ್ನಾಡು ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ವಾಲ್ಟೇರ್ ಪ್ರದೇಶ ಮತ್ತು ಪಕ್ಕದ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಕೆಲವು ರೈಲುಗಳನ್ನು ರದ್ದುಪಡಿಸುವುದು, ತಿರುಗಿಸುವುದು ಮತ್ತು ಅಲ್ಪಾವಧಿಗೆ ಸ್ಥಗಿತಗೊಳಿಸುವುದಾಗಿ ಪೂರ್ವ ಕರಾವಳಿ ರೈಲ್ವೆ ಘೋಷಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಆಂಧ್ರಪ್ರದೇಶದ ಕರಾವಳಿಯಲ್ಲಿ ನೆಲ್ಲೂರಿನಿಂದ ಶ್ರೀಕಾಕುಳಂವರೆಗೆ 2 ರಿಂದ 4.7 ಮೀಟರ್ ಎತ್ತರದ ಅಲೆಗಳು ಏಳಲಿವೆ ಎಂದು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮತ್ತು ಭಾರತ ಹವಾಮಾನ ಇಲಾಖೆ (IMD)ಸೋಮವಾರ ಮುನ್ಸೂಚನೆ ನೀಡಿವೆ.

ಅಕ್ಟೋಬರ್ 27 ರಂದು ಸಂಜೆ 5.30ರಿಂದ ರಾತ್ರಿ 11.30 ರವರೆಗೆ ಆರು ಗಂಟೆಗಳ ಕಾಲ ಎತ್ತರದ ಅಲೆಗಳು ಅಪ್ಪಳಿಸುವ ನಿರೀಕ್ಷೆಯಿದೆ. ಸಾಮಾನ್ಯ ಉಬ್ಬರವಿಳಿತಕ್ಕಿಂತ ಸುಮಾರು ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸಿ ಆಂಧ್ರ ಪ್ರದೇಶ ಮತ್ತು ಯಾನಂನ ತಗ್ಗು ಪ್ರದೇಶಗಳನ್ನು ಮುಳುಗಿಸಬಹುದು ಎಂದು ಜಂಟಿ ಹೇಳಿಕೆಯಲ್ಲಿ ಎರಡೂ ಸಂಸ್ಥೆಗಳು ಎಚ್ಚರಿಸಿದ್ದವು.

ಪ್ರತ್ಯೇಕ ಬೆಳವಣಿಗೆಯಲ್ಲಿ, ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದ್ದು, ಅಕ್ಷಾಂಶ 16.7°N ಮತ್ತು ರೇಖಾಂಶ 67.3°E ಬಳಿ ಸ್ಥಿರವಾಗಿದೆ – ವೆರಾವಲ್ (ಗುಜರಾತ್) ನಿಂದ ನೈಋತ್ಯಕ್ಕೆ ಸುಮಾರು 570 ಕಿ.ಮೀ ಮತ್ತು ಮುಂಬೈನಿಂದ ಪಶ್ಚಿಮ-ನೈಋತ್ಯಕ್ಕೆ 650 ಕಿ.ಮೀ ದೂರದಲ್ಲಿದೆ. ಮೊಂಥಾ ಚಂಡಮಾರುತದಿಂದ ಭಿನ್ನವಾಗಿರುವ ಈ ಹವಾಮಾನ ಪರಿಸ್ಥಿತಿಯು ಮುಂದಿನ 48 ಗಂಟೆಗಳಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಾದ್ಯಂತ ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ.

ಮೊಂಥಾ ಚಂಡಮಾರುತವು ಪ್ರಬಲವಾಗುತ್ತಿದ್ದರೂ, ತಮಿಳುನಾಡಿನ ಹೆಚ್ಚಿನ ಭಾಗಗಳಲ್ಲಿ ಸೋಮವಾರ ಒಣ ಹವೆಯಿತ್ತು. ಆದಾಗ್ಯೂ, ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್‌ಎಂಸಿ) ಮಂಗಳವಾರ ತಿರುವಲ್ಲೂರು ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಿದೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚಿಪುರಂ, ರಾಣಿಪೇಟೆ, ಥೇಣಿ, ತೆಂಕಾಸಿ ಮತ್ತು ಕನ್ಯಾಕುಮಾರಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ತಮಿಳುನಾಡು ಕರಾವಳಿಯಿಂದ ಚಂಡಮಾರುತ ದೂರ ಸರಿಯುವುದರಿಂದ, ಮಂಗಳವಾರ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಬುಧವಾರ ಚಂಡಮಾರುತ ಅಪ್ಪಳಿಸಿದ ನಂತರ ಗಣನೀಯವಾಗಿ ಕಡಿಮೆಯಾಗಬಹುದು ಎನ್ನಲಾಗಿದೆ.

ಚೆನ್ನೈನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾದ ವರದಿಯಾಗಿದ್ದರೆ, ಹೆಚ್ಚಿನ ಒಳನಾಡಿನ ಜಿಲ್ಲೆಗಳು ಒಣಹವೆಯಿಂದ ಕೂಡಿವೆ. ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಕರಾವಳಿಯ ಮೀನುಗಾರರಿಗೆ ಬಲವಾದ ಗಾಳಿ ಮತ್ತು ಸಮುದ್ರದ ಪ್ರಕ್ಷುಬ್ಧತೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಛತ್ ಪೂಜೆಗಾಗಿ ಪ್ರಧಾನಿಗೆ ಫಿಲ್ಟರ್ ನೀರಿನ ‘ನಕಲಿ’ ಯಮುನಾ ಘಾಟ್ ನಿರ್ಮಾಣ: ಎಎಪಿ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...