ಇದೇ ಸೆಪ್ಟಂಬರ್ 30ಕ್ಕೆ ತ್ರೈಮಾಸಿಕ ಅವಧಿ ಮುಕ್ತಾಯಗೊಳ್ಳಲಿದ್ದು, ಟೆಲಿಕಾಂ ಕಂಪನಿಗಳು ಸುಂಕ ಹೆಚ್ಚಿಸಲು ನಿರ್ಧರಿಸಲಿವೆ. ತ್ರೈಮಾಸಿಕ ಅವಧಿಯಲ್ಲಿ ಕಂಪನಿಗಳು ದಾಖಲೆಯ ನಷ್ಟ ಅನುಭವಿಸಿದ್ದರಿಂದ ಸುಂಕ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕಂಪನಿಗಳು ತಿಳಿಸಿವೆ. ಡಿಸೆಂಬರ್ 1ರಿಂದ ಸುಂಕ ಹೆಚ್ಚಳ ಗ್ರಾಹಕರಿಗೆ ಅನ್ವಯವಾಗಲಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಸುಂಕ ಹೆಚ್ಚಳವಾಗಲಿದೆ ಎಂಬುದನ್ನು ಕಂಪನಿಗಳು ಉಲ್ಲೇಖಿಸಿಲ್ಲ.
ವೊಡಾಫೋನ್, ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಟೆಲಿಕಾಂ ಕಂಪನಿಗಳು ನಿರ್ಧಾರ ಪ್ರಕಟಿಸಿವೆ. ಡಿಸೆಂಬರ್ 1 ರಿಂದ ಮೊಬೈಲ್ ಫೋನ್ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಳವಾಗಲಿದೆ. ಇದು ವ್ಯವಹಾರದಲ್ಲಿ ಉಂಟಾಗಿರುವ ನಷ್ಟವನ್ನು ಭರಿಸಲು ಸಹಕಾರಿಯಾಗಲಿದೆ ಎಂದು ಕಂಪನಿಗಳು ತಿಳಿಸಿವೆ. ಕಳೆದ ಶುಕ್ರವಾರ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್, ಐಡಿಯಾ ದಾಖಲೆಯ ನಷ್ಟ ಅನುಭವಿಸಿರುವುದು ವರದಿಯಾಗಿದೆ. ವೊಡಾಫೋನ್, ಐಡಿಯಾದ ನಿವ್ವಳ ನಷ್ಟ ಮೂರು ತಿಂಗಳ ಅವಧಿಯಲ್ಲಿ 50,921.9 ಕೋಟಿ ರೂ. ಆಗಿದೆ. ಇದು ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ತ್ರೈಮಾಸಿಕ ನಷ್ಟವಾಗಿದೆ.
ಒಟ್ಟು ಆದಾಯ (ಎಜಿಆರ್)ದಲ್ಲಿ ಟೆಲಿಕಾಂ ಇಲಾಖೆಗೆ ನೀಡಬೇಕಿದ್ದ ಬಾಕಿಗಳನ್ನು ಸರಿಪಡಿಸಲು ಮತ್ತು ನಿಬಂಧನೆಗಳ ಪಾಲನೆ ಹಿನ್ನೆಲೆ ಸೆಪ್ಟಂಬರ್ 30ರಂದು ತ್ರೈಮಾಸಿಕ ಕೊನೆಗೊಂಡ ನಂತರ ಸುಂಕ ಹೆಚ್ಚಿಸುವುದಾಗಿ ತಿಳಿಸಿವೆ. ಅಲ್ಲದೇ ಸುಂಕ ಹೆಚ್ಚಳದಿಂದ ಟೆಲಿಕಾಂ ಉದ್ಯಮದಲ್ಲಿ ಲಾಭ ತರಬಹುದು. ಉದ್ಯಮದಲ್ಲಿ ಹೆಚ್ಚಿರುವ ಸ್ಪರ್ಧೆಯನ್ನು ಎದುರಿಸಲು ಮತ್ತು ಲಾಭದತ್ತ ಸಾಗಲು ಸುಂಕ ಹೆಚ್ಚಳ ಟೆಲಿಕಾಂ ಕಂಪನಿಗಳಿಗೆ ಪೂರಕವಾಗಿರಲಿವೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ ಆರ್ಥಿಕ ನಷ್ಟ ಹೆಚ್ಚಿದೆ. ಹೀಗಾಗಿ ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಕಾರ್ಯದರ್ಶಿಗಳ ಸಮಿತಿ ಸೂಕ್ತ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಕಂಪನಿಯು ತನ್ನ ವ್ಯಾಪ್ತಿ ಮತ್ತು ಸಾಮರ್ಥ್ಯ ಎರಡನ್ನೂ ಶೀಘ್ರದಲ್ಲೇ ವಿಸ್ತರಿಸಲಿದೆ. 2020 ಮಾರ್ಚ್ ವೇಳೆಗೆ 100 ಕೋಟಿ ಭಾರತೀಯ ನಾಗರಿಕರಿಗೆ 4 ಜಿ ಸೇವೆ ಒದಗಿಸುವ ಪ್ರಯತ್ನದಲ್ಲಿದೆ ಎಂದು ಕಂಪನಿಗಳು ಹೇಳಿವೆ.
ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ವಲಯಕ್ಕೆ ತಂತ್ರಜ್ಞಾನ, ಬಂಡವಾಳ ಮತ್ತು ಹೂಡಿಕೆಯು ಅತ್ಯಗತ್ಯವಾಗಿ ಬೇಕಿದೆ. ಆದ್ದರಿಂದ, ಡಿಜಿಟಲ್ ಇಂಡಿಯಾ ಕಾರ್ಯಸಾಧನೆಗೆ ಟೆಲಿಕಾಂ ಉದ್ಯಮದ ಅಭಿವೃದ್ಧಿ ಮತ್ತು ಲಾಭ ಅತಿಮುಖ್ಯವೆಂದು ಭಾರತಿ ಏರ್ಟೆಲ್ ಹೇಳಿದೆ.