ರಾಜಸ್ಥಾನದಲ್ಲಿ ಅಲ್ವಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೈಪಂಪ್ ಬಳಿ ಇರಿಸಲಾಗಿದ್ದ ಕುಡಿಯುವ ನೀರಿನ ಬಕೆಟ್ನ್ನು ಮುಟ್ಟಿದ್ದಕ್ಕಾಗಿ 8 ವರ್ಷದ ದಲಿತ ಬಾಲಕನಿಗೆ ಥಳಿಸಿರುವ ಅಮಾನವೀಯ ಘಟನೆ ನಡೆದಿದ್ದು, ಅಸ್ಪೃಶ್ಯತೆ, ಜಾತಿ ಆಧಾರಿತ ದೌರ್ಜನ್ಯ ನಮ್ಮ ಸಮಾಜದಲ್ಲಿ ಎಷ್ಟರವರೆಗೆ ಬೇರೂರಿದೆ ಎನ್ನುವುದನ್ನು ಬಹಿರಂಗಪಡಿಸುತ್ತದೆ.
4ನೇ ತರಗತಿಯಲ್ಲಿ ಕಲಿಯುತ್ತಿದ್ದ ಚಿರಾಗ್ ಎಂಬ ಬಾಲಕ ಬಾಯಾರಿಕೆಯಿಂದ ಶಾಲಾ ಆವರಣದಲ್ಲಿದ್ದ ಕೈಪಂಪಿನ ಬಳಿ ಹೋಗಿದ್ದಾನೆ. ಈ ವೇಳೆ ಆರೋಪಿ ರತಿರಾಮ್ ಠಾಕೂರ್ ಎಂಬಾತ ತನ್ನ ಬಕೆಟ್ನಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಈ ವಿಷಯದ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಬಾಲಕ ಶಾಲಾ ಆವರಣದಲ್ಲಿರುವ ಕೈಪಂಪ್ಗೆ ನೀರು ಕುಡಿಯಲು ಹೋಗಿದ್ದ. ಈ ವೇಳೆ ಬಕೆಟ್ಗೆ ನೀರು ತುಂಬಿಸುತ್ತಿದ್ದ ಸವರ್ಣೀಯ ವ್ಯಕ್ತಿಯೊಬ್ಬ ಬಾಲಕ ಬಕೆಟ್ ಮುಟ್ಟಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ಕಿರುಚಾಟವನ್ನು ಕೇಳಿ ಶಾಲೆಯ ಬಳಿ ಹೋಗುತ್ತಿದ್ದ ನನ್ನ ಸಂಬಂಧಿಕರು ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗ ಅಳುತ್ತಿದ್ದ. ಬಳಿಕ ಅವರು ಘಟನೆಯ ಬಗ್ಗೆ ನನಗೆ ಹೇಳಿದ್ದಾರೆ ಮತ್ತು ನಾವು ಅಪರಾಧಿಯ ಮನೆಗೆ ಹೋದೆವು. ಆತನಲ್ಲಿ ಘಟನೆ ಬಗ್ಗೆ ವಿಚಾರಿಸಿದಾಗ ಆತ ಕ್ಷಮೆ ಕೇಳಲು ನಿರಾಕರಿಸಿದ್ದಾನೆ ಮತ್ತು ಕುಟುಂಬದ ವಿರುದ್ಧ ಜಾತಿ ನಿಂದನೆಯನ್ನು ಮಾಡಿದ್ದಾನೆ. ನನ್ನನ್ನು ನಿಮಗೆ ಏನು ಮಾಡಲು ಕೂಡ ಸಾಧ್ಯವಿಲ್ಲ ಎಂದು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ನನ್ನ ಮಗ ಮತ್ತೆ ಶಾಲೆಗೆ ಹೋಗಲು ಭಯಪಡುತ್ತಾನೆ. ಈ ದೂರನ್ನು ಹಿಂತೆಗೆದುಕೊಳ್ಳುವಂತೆ ಅವರು ನನ್ನನ್ನು ಕೇಳಿದ್ದಾರೆ ಮತ್ತು ಆ ವ್ಯಕ್ತಿ ಮತ್ತೆ ತನಗೆ ಹೊಡೆಯುತ್ತಾನೆ ಎಂಬ ಭಯದಿಂದ ಬಾಲಕ ಶಾಲೆಗೆ ಮರಳಲು ಸಿದ್ಧವಾಗಿಲ್ಲ. ನನಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು ಎಂದು ನಾನು ಬಯಸುತ್ತೇನೆ ಎಂದು ಬಾಲಕನ ತಂದೆ ಹೇಳಿದ್ದಾರೆ.
ಈ ಕುರಿತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸವಾಯಿ ಸಿಂಗ್ ತಿಳಿಸಿದ್ದಾರೆ. ನಾವು ಆರೋಪಿಯನ್ನು ವಿಚಾರಣೆ ನಡೆಸಿದ್ದೇವೆ. ಅವರು ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಬಾಲಕ ಸುರಕ್ಷಿತವಾಗಿ ಶಾಲೆಗೆ ಹೋಗುತ್ತಿದ್ದಾನೆ ಮತ್ತು ಇನ್ನು ಮುಂದೆ ಅವನಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಾವು ಈ ಬಗ್ಗೆ ಬಾಲಕನಿಗೆ ಮತ್ತು ಆತನ ಕುಟುಂಬಕ್ಕೆ ಭರವಸೆ ನೀಡಿದ್ದೇವೆ ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ಇದನ್ನು ಓದಿ: ಟಿಎಂಸಿ ಇಂಡಿಯಾ ಬಣದ ಭಾಗವಾಗಿದೆ; ಮುಂದೆಯೂ ಇರುತ್ತದೆ: ಡೆರೆಕ್ ಒ’ಬ್ರಿಯಾನ್